ETV Bharat / state

ಗೋಕಾಕ್ ಕ್ಷೇತ್ರದಿಂದ ಏಳನೇ ಬಾರಿ ಗೆದ್ದು ಬೀಗಿದ ಸಾಹುಕಾರ

author img

By

Published : May 13, 2023, 4:55 PM IST

ramesh-jarkiholi-won-in-gokak-constituency
ಗೋಕಾಕ್ ಕ್ಷೇತ್ರದಿಂದ ಏಳನೇ ಬಾರಿ ಗೆದ್ದು ಬೀಗಿದ ಸಾಹುಕಾರ

ಗೋಕಾಕ್​ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಮಹಾಂತೇಶ್​ ಕಡಾಡಿ ವಿರುದ್ಧ ಬಿಜೆಪಿ ಅಭ್ಯರ್ಥಿ ರಮೇಶ್​ ಜಾರಕಿಹೊಳಿ ಭರ್ಜರಿ ಗೆಲುವು ಸಾಧಿಸಿದರು.

ಬೆಳಗಾವಿ : ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಮೇಶ್​ ಜಾರಕಿಹೊಳಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಮಹಾಂತೇಶ್​ ಕಡಾಡಿ ವಿರುದ್ಧ ಸುಮಾರು 25,000 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ರಮೇಶ್​ ಜಾರಕಿಹೊಳಿ 1,05,313 ಮತಗಳನ್ನು ಪಡೆದಿದ್ದು, ಕಾಂಗ್ರೆಸ್​ ಅಭ್ಯರ್ಥಿ ಮಹಾಂತೇಶ್​ ಕಡಾಡಿ ಅವರು 79,901 ಮತಗಳನ್ನು ಪಡೆದಿದ್ದಾರೆ.

ಒಂದು ಸರ್ಕಾರ ಪತನಗೊಳಿಸಿ ಮತ್ತೊಂದು ಸರ್ಕಾರ ರಚಿಸುವಷ್ಟು ಸಾಮರ್ಥ್ಯ ಹೊಂದಿರುವ ರಮೇಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕಾರಣಿಯಾಗಿದ್ದಾರೆ. ಹಠಕ್ಕೆ ಬಿದ್ದರೆ ಛಲದಂಕ ಮಲ್ಲನಂತೆ ವಿರೋಧಿಗಳ‌ ವಿರುದ್ಧ ಜಿದ್ದು ಸಾಧಿಸುವ ವ್ಯಕ್ತಿತ್ವ ಇವರದ್ದು. ಜಾರಕಿಹೊಳಿ ಕುಟುಂಬದ ಹಿರಿಯ ಸಹೋದರ, ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಮೊದಲು ಕಾಂಗ್ರೆಸ್​ ಪಕ್ಷದಲ್ಲಿ ಯಾವ ರೀತಿಯ ಪ್ರಭಾವ ಹೊಂದಿದ್ದರೋ ಅದೇ ರೀತಿ ಬಿಜೆಪಿಯಲ್ಲೂ ತಮ್ಮ ಪ್ರಭಾವ ಹೊಂದಿದ್ದಾರೆ. ಗೋಕಾಕ್ ಕ್ಷೇತ್ರದಿಂದ ಸತತ ಆರು ಬಾರಿ ಗೆದ್ದಿರುವ ರಮೇಶ್​ ಜಾರಕಿಹೊಳಿ ಸೋಲಿಲ್ಲದ ಸರದಾರನಾಗಿದ್ದಾರೆ.

1960ರ ಮೇ 1ರಂದು ಗೋಕಾಕ್ ಪಟ್ಟಣದಲ್ಲಿ ಲಕ್ಷ್ಮಣರಾವ್ ಮತ್ತು ಭೀಮವ್ವ ದಂಪತಿಗಳ ಮಗನಾಗಿ ರಮೇಶ ಜಾರಕಿಹೊಳಿ ಜನಿಸಿದರು. ಗೋಕಾಕ್ ನಲ್ಲಿಯೇ ಪ್ರಾಥಮಿಕ, ಮಾಧ್ಯಮಿಕ, ಪದವಿ ಪೂರ್ವ ಶಿಕ್ಷಣ ಪಡೆದರು. ಅಲ್ಲದೇ ಬಿಎ ಮೊದಲ ವರ್ಷದವರೆಗೂ ಕಾಲೇಜಿಗೆ ಹೋದ ರಮೇಶ್​ ಬಳಿಕ ಶಿಕ್ಷಣಕ್ಕೆ ಗುಡ್ ಬೈ ಹೇಳಿ ಉದ್ಯಮಕ್ಕೆ ಕಾಲಿಟ್ಟರು. ಬಳಿಕ ರಾಜಕಾರಣದ ಕಡೆ ಮುಖ ಮಾಡಿದರು.

ರಮೇಶ್​ ಜಾರಕಿಹೊಳಿ ಮತ್ತು ಜಯಶ್ರೀ ದಂಪತಿಗೆ ಸಂತೋಷ್​, ಅಮರನಾಥ ಎಂಬ ಪುತ್ರರಿದ್ದು, ಓರ್ವ ಪುತ್ರಿ ಇದ್ದಾರೆ. ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ರಮೇಶ್​ ಜಾರಕಿಹೊಳಿ, ಸಮ್ಮಿಶ್ರ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ರಚನೆಗೆ ಕಾರಣವಾದ ಬಳಿಕ ರಾಜ್ಯದಲ್ಲಿ ಮತ್ತಷ್ಟು ಪ್ರಭಾವಿಯಾಗಿ ಬೆಳೆದರು.

1985ರಲ್ಲಿ ಗೋಕಾಕ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಮೇಶ್​ ಜಾರಕಿಹೊಳಿ ಮೊದಲ ಚುನಾವಣೆಯಲ್ಲೇ ಪರಾಭವಗೊಂಡಿದ್ದರು. ಬಳಿಕ 15 ವರ್ಷಗಳ ನಂತರ 1999ರಲ್ಲಿ ಮತ್ತೆ ಗೋಕಾಕ್​ನಿಂದಲೇ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದಾದ ಬಳಿಕ ರಮೇಶ್​ ತಿರುಗಿ ನೋಡಿದ್ದೇ ಇಲ್ಲ. ಬಳಿಕ 2004, 2008, 2013, 2018 ಮತ್ತು 2019ರ ಉಪ ಚುನಾವಣೆಯಲ್ಲಿಯೂ ಸತತವಾಗಿ ಗೆಲ್ಲುವ ಮೂಲಕ ಏಳು ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದಾರೆ.

2015-18ರವರೆಗೆ ಸಿದ್ದರಾಮಯ್ಯ ಸಂಪುಟದಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದ ರಮೇಶ್​ ಜಾರಕಿಹೊಳಿ, ಬಳಿಕ ಹೆಚ್.ಡಿ ಕುಮಾರಸ್ವಾಮಿ ಸಂಪುಟದಲ್ಲಿ ಪೌರಾಡಳಿತ ಖಾತೆ ಸಚಿವರಾಗಿದ್ದರು. ನಂತರ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ರಮೇಶ್​ ಜಾರಕಿಹೊಳಿ ಜಲಸಂಪನ್ಮೂಲ‌ ಸಚಿವರಾಗಿದ್ದರು. ಈ ವೇಳೆ ಸಿಡಿ‌‌ ಪ್ರಕರಣದಿಂದಾಗಿ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು.

ಸಿಡಿ ಪ್ರಕರಣ ಕಪ್ಪು ಚುಕ್ಕೆ : ಸಿಡಿ ಪ್ರಕರಣ ರಮೇಶ್​ ಜಾರಕಿಹೊಳಿ ರಾಜಕೀಯ ಜೀವನಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ. ಅಲ್ಲದೇ ಈ ಪ್ರಕರಣದಿಂದ ಸಚಿವ ಸ್ಥಾನವನ್ನೂ ಕಳೆದುಕೊಳ್ಳಬೇಕಾಯಿತು. ಬಳಿಕ ಸಿಡಿ ಪ್ರಕರಣದಲ್ಲಿ ರಮೇಶ್​ ಜಾರಕಿಹೊಳಿ ಖುಲಾಸೆಗೊಂಡಿದ್ದಾರೆ.

ಇದನ್ನೂ ಓದಿ : ಬಿಜೆಪಿ ಸೋಲಿಗೆ ರಾಜ್ಯಾಧ್ಯಕ್ಷನಾಗಿ ಹೊಣೆ ಹೊರುತ್ತೇನೆ: ಕಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.