ETV Bharat / state

ಬೆಳಗಾವಿ : ಹೊರಗುತ್ತಿಗೆ, ಸಿಡಿಸಿ, ಅನ್‌ಸ್ಕಿಲ್ಡ್‌ ಡಿ ಗ್ರೂಪ್‌ ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳ ಪ್ರತಿಭಟನೆ

author img

By ETV Bharat Karnataka Team

Published : Dec 7, 2023, 10:52 PM IST

Updated : Dec 7, 2023, 11:00 PM IST

protest-of-collge-staffs-at-belagavi
ಬೆಳಗಾವಿ : ಹೊರಗುತ್ತಿಗೆ, ಸಿಡಿಸಿ, ಅನ್‌ಸ್ಕಿಲ್ಡ್‌ ಡಿ ಗ್ರೂಪ್‌ ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳ ಪ್ರತಿಭಟನೆ

ಸೇವಾಭದ್ರತೆ ಮತ್ತು ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಹೊರಗುತ್ತಿಗೆ ಮತ್ತು ಸಿಡಿಸಿ ನೌಕರರ ಸಂಘದ ನೇತೃತ್ವದಲ್ಲಿ ಸುವರ್ಣ ಗಾರ್ಡನ್​ ಬಳಿ ಪ್ರತಿಭಟನೆ ನಡೆಸಲಾಯಿತು.

ಬೆಳಗಾವಿ : ಹೊರಗುತ್ತಿಗೆ, ಸಿಡಿಸಿ, ಅನ್‌ಸ್ಕಿಲ್ಡ್‌ ಡಿ ಗ್ರೂಪ್‌ ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳ ಪ್ರತಿಭಟನೆ

ಬೆಳಗಾವಿ: ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ, ಸಿಡಿಸಿ, ಅನ್‌ಸ್ಕಿಲ್ಡ್‌ ಡಿ ಗ್ರೂಪ್‌ ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಸೇವಾ ಭದ್ರತೆ ಜತೆಗೆ ಇಲಾಖೆಯ ನೇಮಕಾತಿಯಲ್ಲಿ ಪ್ರಥಮ ಆದ್ಯತೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ಸುವರ್ಣ ಗಾರ್ಡನ್ ಬಳಿಯ ಟೆಂಟ್‌ನಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಹೊರಗುತ್ತಿಗೆ ಮತ್ತು ಸಿಡಿಸಿ ನೌಕರರ ಸಂಘದ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.

ಉನ್ನತ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನ್ ಸ್ಕಿಲ್ಡ್‌ ಡಿ ದರ್ಜೆ ನೌಕರರಾಗಿ ಕೇವಲ 2 ಸಾವಿರ ರೂ. ವೇತನಕ್ಕೆ ದುಡಿಯುತ್ತಿದ್ದೇವೆ. ಜೊತೆಗೆ ಕಾಲೇಜು ಆಡಳಿತ ಸಮಿತಿ (ಸಿಡಿಸಿ) ಮೂಲಕ ನೇಮಕವಾಗಿ ಕಾಲೇಜಿನ ತರಗತಿ ಕೊಠಡಿಗಳ ಸ್ವಚ್ಚತೆ, ಶೌಚಾಲಯ ಸ್ವಚ್ಛತೆ, ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವವವರು ಕನಿಷ್ಠ ವೇತನವಿಲ್ಲದೇ ದುಡಿಯುತ್ತಿದ್ದೇವೆ. ನಾವು ಡಿ ಗ್ರೂಪ್‌ ಹಾಗೂ ಡೇಟಾ ಎಂಟ್ರಿ ಆಪರೇಟರ್​ಗಳಾಗಿ ಸುಮಾರು 20 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಆದರೂ ನಮಗೆ ಸೇವಾ ಭದ್ರತೆ ಇಲ್ಲ. ಇದೀಗ ಕಾಲೇಜಿನ ಪ್ರಾಂಶುಪಾಲರು ಕೆಲಸದಿಂದ ಬಿಡುಗಡೆ ಮಾಡುವ ಭೀತಿ ಎದುರಾಗಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ನೌಕರರ ಸಂಘದ ರಾಜ್ಯಾಧ್ಯಕ್ಷ ಶಿವಶಂಕರ ಅಂಗಡಿ, ಹಲವು ವರ್ಷಗಳಿಂದ ಕಾಲೇಜಿನಲ್ಲಿ ಸ್ವಚ್ಛತೆ ಮತ್ತು ವಿವಿಧ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವ ನಮಗೆ ಹೊರಗುತ್ತಿಗೆಯಲ್ಲಿ ಪ್ರಥಮ ಆದ್ಯತೆ ಹಾಗೂ 10ನೇ ತರಗತಿ ಉತ್ತೀರ್ಣವಾಗಿರಬೇಕೆಂಬ ಮಾನದಂಡ ಕೈ ಬಿಟ್ಟು ನೇಮಕಾತಿಯಲ್ಲಿ ಮಾಡಬೇಕು. ಪಿಎಫ್‌ ಮತ್ತು ಇಎಸ್‌ಐ ನೀಡದೇ ಗುತ್ತಿಗೆ ಕಂಪನಿ ಅನ್ಯಾಯ ಮಾಡಿದ್ದು, ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮೀನಾಕ್ಷಿ ಎಸ್‌., ಚನ್ನಮೂರ್ತಿ ಎಚ್‌, ಶೇಖರನಾಯ್ಕ ಲಂಬಾಣಿ, ಸುರೇಶ ಮುದೆನೂರ, ಲಕ್ಷ್ಮೀ ಎಸ್‌. ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

ಆಸ್ಪತ್ರೆ ನೀಡಿ ಬಡವರ ಜೀವ ಉಳಿಸಿ: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವ ಹಿನ್ನೆಲೆ ಆಕ್ರೋಶಗೊಂಡಿರುವ ಇಲ್ಲಿನ ಜನ ಅಧಿವೇಶನದ ನಾಲ್ಕನೇ ದಿನ ಬೆಳಗಾವಿಯ ಸುವರ್ಣ ಗಾರ್ಡನ್ ಬಳಿಯ ಟೆಂಟ್‌ನಲ್ಲಿ ಧರಣಿ ನಡೆಸಿದರು.

ಉತ್ತರ ಕನ್ನಡ ಜಿಲ್ಲೆಯ ಜನರ ಜೀವ ಉಳಿಸಲು ನಮ್ಮ ಒಂದು ಹೆಜ್ಜೆ ಎಂಬ ಘೋಷ ವಾಕ್ಯದೊಂದಿಗೆ ಪ್ರತಿಭಟನೆ ಆರಂಭಿಸಿದ ಅವರು, ಆಸ್ಪತ್ರೆ ನೀಡಿ ಬಡವರ ಜೀವ ಉಳಿಸಿ ಸಂದೇಶ ಸಾರುವ ಫಲಕಗಳನ್ನು ಪ್ರದರ್ಶಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಆಸ್ಪತ್ರೆ ನೀಡಿ ಬಡವರ ಜೀವ ಉಳಿಸಿ: ಬೆಳಗಾವಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಜನರ ಪ್ರತಿಭಟನೆ

ಈ ವೇಳೆ 'ಈಟಿವಿ ಭಾರತ' ಜೊತೆಗೆ ಮಾತನಾಡಿದ ಅನಂತಮೂರ್ತಿ ಹೆಗಡೆ, ಪಕ್ಕದ ಮಂಗಳೂರು ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜು, 15ಕ್ಕೂ ಹೆಚ್ಚು ಸುಸಜ್ಜಿತ ಆಸ್ಪತ್ರೆಗಳಿವೆ. ನಮ್ಮಲ್ಲಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಶಂಕು ಸ್ಥಾಪನೆ ಆಗೋವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ. ವಾರದಲ್ಲಿ ಐದಾರು ಜನ ಅಪಘಾತದಲ್ಲಿ ಮೃತರಾಗುತ್ತಿದ್ದಾರೆ. ನಮ್ಮಲ್ಲಿ ಒಬ್ಬೆ ಒಬ್ಬ ನ್ಯೂರೋ ಸರ್ಜನ್ ಇಲ್ಲ. ಯಾವುದೇ ಆರೋಗ್ಯ ಸಮಸ್ಯೆ ಆದರೂ ನಾವು ಮಂಗಳೂರು ಮತ್ತು ಹುಬ್ಬಳ್ಳಿಗೆ ಹೋಗುವ ಪರಿಸ್ಥಿತಿಯಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಹೋರಾಟಗಾರರ ಸಮಸ್ಯೆ ಆಲಿಸಿದರು. ಸರ್ಕಾರದ ಗಮನ ಸೆಳೆದು ಉತ್ತರ ಕನ್ನಡದಲ್ಲಿ ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

protest--at-belagavi
ಆಸ್ಪತ್ರೆ ನೀಡಿ ಬಡವರ ಜೀವ ಉಳಿಸಿ..ಬೆಳಗಾವಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಜನರ ಪ್ರತಿಭಟನೆ

ಪ್ರತಿಭಟನೆಯಲ್ಲಿ ಚಿದಾನಂದ ಹರಿಜನ, ಎಸ್.ಎನ್.ಹೆಗಡೆ, ಪರಮಾನಂದ ಹೆಗಡೆ, ಉಮೇಶ ಹರಿಕಾಂತ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ವಿಧಾನಸಭೆಯಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಚೂರಿ ಇರಿತ ಪ್ರಕರಣದ ಗದ್ದಲ: ಗೃಹ ಸಚಿವರ ಉತ್ತರಕ್ಕೆ ಬಿಜೆಪಿ ಆಕ್ಷೇಪ, ಸಭಾತ್ಯಾಗ

Last Updated :Dec 7, 2023, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.