ETV Bharat / state

ಎಲ್ಲ ಸರ್ಕಾರಗಳಿಂದಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯ: ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ

author img

By

Published : Jun 25, 2023, 12:26 PM IST

MLA Laxman Savadi expressed displeasure against   govt
ಶಾಸಕ ಲಕ್ಷ್ಮಣ ಸವದಿ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ದಿ.ಉಮೇಶ್ ಕತ್ತಿ ಆಗಾಗ ಧ್ವನಿ ಎತ್ತುತ್ತಿದ್ದರು. ಕತ್ತಿ ಅವರು ಕೂಗನ್ನು ಇದೀಗ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮುನ್ನೆಲೆಗೆ ತಂದಿದ್ದಾರೆ.

ಉತ್ತರ ಕರ್ನಾಟಕದ ಬಗ್ಗೆ ಧ್ವನಿ ಎತ್ತಿದ ಶಾಸಕ ಲಕ್ಷ್ಮಣ ಸವದಿ

ಚಿಕ್ಕೋಡಿ: "ಎಲ್ಲ ಸರ್ಕಾರಗಳು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿವೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ದಿ. ಉಮೇಶ್ ಕತ್ತಿ ಆಗಾಗ ಧ್ವನಿ ಎತ್ತುತ್ತಿದ್ದರು. ಆದರೆ ಅವರ ನಿಧನದ ನಂತರ ಆ ಕೂಗು ಮರೆಯಾಗಿತ್ತು" ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೇಳಿಕೆ: ಬಿಜೆಪಿ ಕಾನೂನು ತರುತ್ತಿದೆ ಎಂದ ಜಾರಕಿಹೊಳಿ‌

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಶನಿವಾರ ಗ್ರಾಮಸ್ಥರು ಲಕ್ಷ್ಮಣ ಸವದಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿದ್ದರು. ಸಮಾರಂಭದಲ್ಲಿ ಮಾತನಾಡಿದ ಸವದಿ, "ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗದ ಅಭಿವೃದ್ಧಿಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಹಲವು ನೀರಾವರಿ ಯೋಜನೆಗಳನ್ನು ಆ ಭಾಗದಲ್ಲಿ ರೂಪಿಸಲಾಗಿದೆ. ಉತ್ತರ ಕರ್ನಾಟಕ ಭಾಗಕ್ಕೆ ಯಾವುದೇ ಸರ್ಕಾರ ಬಂದರೂ ಮಲತಾಯಿ ಧೋರಣೆ ಮುಂದುವರೆದಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಹಣದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಭಾಗಕ್ಕೆ ನಿರಂತರವಾಗಿ ಅನ್ಯಾಯವಾಗಿದೆ" ಎಂದರು.

ಇದನ್ನೂ ಓದಿ: 2024ರ ಲೋಕಸಭೆ ಎಲೆಕ್ಷನ್​ ನಂತರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ; ಸಚಿವ ಕತ್ತಿ

"ಆಲಮಟ್ಟಿ ಅಣೆಕಟ್ಟೆಯ ಎತ್ತರ ಈಗಾಗಲೇ 524 ಅಡಿ ಎಂದು ತೀರ್ಮಾನ ಮಾಡಲಾಗಿದೆ. ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅಣೆಕಟ್ಟೆಯಲ್ಲಿ ಆದಷ್ಟು ಬೇಗ 524 ಅಡಿ ನೀರನ್ನು ಸಂಗ್ರಹಿಸಿ, ಈ ಭಾಗಕ್ಕೆ ನೀರಾವರಿ ಕಲ್ಪಿಸುವ ಜತೆಗೆ ಬೇಸಿಗೆ ಸಂದರ್ಭದಲ್ಲಿ ಪ್ರತಿ ವರ್ಷ ನದಿ ಬತ್ತುವುದನ್ನು ತಪ್ಪಿಸಬಹುದು. ಆಲಮಟ್ಟಿ ಅಣೆಕಟ್ಟೆಯ ಹೆಚ್ಚುವರಿ ನೀರು ಸಂಗ್ರಹಿಸುವುದಕ್ಕೆ ಭೂ ಪರಿಹಾರ ನೀಡಬೇಕು. ನಾವು ಐದು ವರ್ಷದ ಹಿಂದೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದಾಗ 55 ಸಾವಿರ ಕೋಟಿ ರೂ. ಪರಿಹಾರವನ್ನು ರೈತರಿಗೆ ನೀಡಬೇಕು ಎಂದು ಅಂದಿನ ಅಧಿಕಾರಿಗಳು ತಿಳಿಸಿದ್ದರು. ಸದ್ಯ ಇಗ ಅಂದಾಜು 65 ಸಾವಿರ ಕೋಟಿ ಆಗಬಹುದು. ಮುಳುಗಡೆ ಆಗುವ ಜಮೀನುಗಳಿಗೆ ಪರಿಹಾರ ಕೊಟ್ಟು ಆದಷ್ಟು ಶೀಘ್ರ ಈ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಳ್ಳುವಂತೆ ಒತ್ತಾಯ ಮಾಡಲಾಗುವುದು" ಎಂದು ಹೇಳಿದರು.

"ಈ ಭಾಗದ ಶಾಸಕರು ಈಗಾಗಲೇ ಒಂದು ಹಂತದ ಮಾತುಕತೆ ಮಾಡಿದ್ದಾರೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ ಶಾಸಕರು ಪಕ್ಷಾತೀತವಾಗಿ ಒಂದಾಗಿ ಬರುವ ಬಜೆಟ್​​ನಲ್ಲಿ ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹಾಕಿ ಯೋಜನೆ ಮಂಜೂರಾತಿಗೆ ಆಗ್ರಹಿಸಲಾಗುವುದು" ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಇದನ್ನೂ ಓದಿ: ಪ್ರತ್ಯೇಕ ರಾಜ್ಯದ ಹೇಳಿಕೆ: ಸಂಪುಟದಿಂದ ಕತ್ತಿ ಕೈಬಿಡುವಂತೆ ಸಿದ್ದರಾಮಯ್ಯ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.