ETV Bharat / state

ಸಣ್ಣ ವಯಸ್ಸಿನಲ್ಲೇ ಆನಂದ ಮಾಮನಿಯವರನ್ನ ಕಳೆದುಕೊಂಡಿದ್ದೇವೆ: ಸಚಿವ ಸಿ ಸಿ‌ ಪಾಟೀಲ್

author img

By

Published : Oct 23, 2022, 3:09 PM IST

Updated : Oct 23, 2022, 3:32 PM IST

ಆನಂದ ಮಾಮನಿ ಮೃತದೇಹ
ಆನಂದ ಮಾಮನಿ ಮೃತದೇಹ

ಸವದತ್ತಿ ಕ್ಷೇತ್ರದ ಬಿಜೆಪಿ ಶಾಸಕ, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅವರ ನಿಧನ ಹಿನ್ನೆಲೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸವದತ್ತಿ ಪಟ್ಟಣದಲ್ಲಿ ಅಂತಿಮ ದರ್ಶನ ಪಡೆದರು. ಸಚಿವ ಸಿ ಸಿ ಪಾಟೀಲ್ ಅವರು ಮಾಮನಿ ಅವರ ಅಂತಿಮ ದರ್ಶನ ಪಡೆದರು.

ಬೆಳಗಾವಿ: ಸಣ್ಣ ವಯಸ್ಸಿನಲ್ಲಿಯೇ ರಾಜಕೀಯ ರಂಗ ಪ್ರವೇಶಿಸಿ ಸವದತ್ತಿ ಇತಿಹಾಸದಲ್ಲಿ ಮೂರು ಬಾರಿ ಆನಂದ ಮಾಮನಿ ಆಯ್ಕೆಯಾಗಿದ್ದರು. ತಮ್ಮ ವ್ಯಕ್ತಿತ್ವದ ಮುಖಾಂತರ ಸಮಾಜಮುಖಿ ಕೆಲಸ ಮಾಡಿ ಸತತ ಮೂರು ಬಾರಿ ವಿಧಾನಸಭೆ ಪ್ರವೇಶಿಸಿದರು. ಆದರೆ, ಅತೀ ಸಣ್ಣ ವಯಸ್ಸಿನಲ್ಲೇ ಆನಂದ ಮಾಮನಿಯವರನ್ನ ಕಳೆದುಕೊಂಡಿದ್ದೇವೆ ಎಂದು ಸಚಿವ ಸಿ. ಸಿ‌ ಪಾಟೀಲ್ ಕಂಬನಿ ಮಿಡಿದರು.

ಸಚಿವ ಸಿ ಸಿ‌ ಪಾಟೀಲ್ ಅವರು ಮಾತನಾಡಿದರು

ಸವದತ್ತಿ ಪಟ್ಟಣದಲ್ಲಿ ಆನಂದ ಮಾಮನಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಮನಿ ಸವದತ್ತಿ ರಾಜಕೀಯ ಇತಿಹಾಸದಲ್ಲಿ ಮೂರು ಬಾರಿ ಆಯ್ಕೆಯಾದರು. ತಮ್ಮ ವ್ಯಕ್ತಿತ್ವದ ಮುಖಾಂತರ ಸಮಾಜಮುಖಿ ಕೆಲಸ ಮಾಡಿದರು. ಸತತ ಮೂರು ಬಾರಿ ವಿಧಾನಸಭೆ ಪ್ರವೇಶಿಸಿದರು ಎಂದು ನೆನೆದರು.

ಅವರ ತಂದೆ ನನ್ನ ರಾಜಕೀಯ ಗುರು. ಅವರ ಸ್ಥಾನವನ್ನು ಅಲಂಕರಿಸಿ ಅನ್ಯೋನ್ಯವಾಗಿದ್ದರು. ಸಭಾ ಉಪಸಭಾಪತಿಗಳು ಅಂತಾ ಕರೆದ್ರೆ ಹಾಗೇ ಅನ್ನಬೇಡಿ ಆನಂದ ಅಂತಲೇ ಕರೀರಿ ಅಂತಿದ್ದರು. ಯಾಕೋ ಏನೋ ನಮ್ಮ ಬೆಳಗಾವಿಯ ದುರಾದೃಷ್ಟ ಇತ್ತೀಚೆಗೆ ಸಚಿವ ಉಮೇಶ್ ಕತ್ತಿ ಅವರನ್ನು ಕಳೆದುಕೊಂಡಿದ್ದೇವೆ‌. ಅತೀ ಸಣ್ಣ ವಯಸ್ಸಿನ ಆನಂದ ಮಾಮನಿಯವರು ನಮ್ಮನ್ನೆಲ್ಲಾ ಅಗಲಿದ್ದಾರೆ ಎಂದರು.

ನನ್ನ ದುರಾದೃಷ್ಟ ಅವರ ತಂದೆ ಹಾಗೂ ಆನಂದ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತಾಗಿದೆ. ಬಹಳ ನೋವಾಗುತ್ತಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ. ಎರಡು ತಿಂಗಳ ಹಿಂದೆ ನನ್ನ ಹುಟ್ಟೂರಿಗೆ ಬಂದಿದ್ದರು. ರಸ್ತೆ ಕಾಮಗಾರಿ ಉದ್ಘಾಟನೆಗೆ ಅವರನ್ನು ಕರೆಯಿಸಿದಾಗ ಮಾತನಾಡಿದ್ದೆವು. ಆಸ್ಪತ್ರೆಯಲ್ಲಿ ಅವರನ್ನು ಭೇಟಿಯಾಗಿ ಬಂದಿದ್ದೆ ಎಂದು ಹೇಳಿದರು.

ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿಯವರ ಅಂತಿಮ‌ ದರ್ಶನ ಪಡೆದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಬಿಜೆಪಿ ಶಾಸಕ, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ನಿಧನ ಹಿನ್ನೆಲೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸವದತ್ತಿ ಪಟ್ಟಣದಲ್ಲಿ ಅಂತಿಮ ದರ್ಶನ ಪಡೆದರು. ಈ ವೇಳೆ ಸಹೋದರ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಜತೆಗೆ ಆಗಮಿಸಿ ಅಂತಿಮ ದರ್ಶನ ಪಡೆದ ಹೆಬ್ಬಾಳ್ಕರ್, ಆನಂದ ಮಾಮನಿ ಪತ್ನಿ, ಮಗಳು ಹಾಗೂ ತಾಯಿಗೆ ಸಾಂತ್ವನ ಹೇಳಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿದರು

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕಿ ಹೆಬ್ಬಾಳ್ಕರ್​, ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಎಷ್ಟು ಕ್ರೂರಿ ಎಂದು ನಮಗೆ ಅನಿಸುತ್ತಿದೆ. ಆನಂದ ಮಾಮನಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಉಮೇಶ್ ಕತ್ತಿಯವರನ್ನು ಕಳೆದುಕೊಂಡೆವು. ಸುರೇಶ್ ಅಂಗಡಿ ಅವರನ್ನು ಕಳೆದುಕೊಂಡೆವು‌ ಎಂದು ಕಂಬನಿ ಮಿಡಿದರು.

ಅಧಿವೇಶನದಲ್ಲಿ ಆನಂದ ಮಾಮನಿ ಅವರನ್ನು ಭೇಟಿಯಾಗಿದ್ದೆ. ಯಾಕೋ ತಮ್ಮ ವೇಟ್ ಕಡಿಮೆ ಆಗ್ತಿದೆಯಲ್ಲ ಅಂತಾ ಕೇಳಿದ್ದೆ. ಶುಗರ್ ಲೆವಲ್ ಬಹಳ ಹೆಚ್ಚೂ ಕಡಿಮೆ ಆಗಿದೆ. ಹೀಗಾಗಿ ಡೈಟಿಂಗ್ ಮಾಡ್ತಿದೀನಿ ಅಕ್ಕ ಅಂದಿದ್ದರು.

ಕೆಡಿಪಿ ಮೀಟಿಂಗ್‌ನಲ್ಲೂ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ. ಹೀಗೆ ಆಗುತ್ತೆ ಅಂತ ಕಲ್ಪನೆ ಇರಲಿಲ್ಲ. ಅವರ ತಾಯಿಯವರು ಸಹ ಮಗ ಆಸ್ಪತ್ರೆಯಿಂದ ಹುಷಾರಾಗಿ ಬರ್ತಾನೆ ಅಂದುಕೊಂಡಿದ್ದರು. ಅವರ ತಾಯಿ ಬಹಳ ನೋವಿನಲ್ಲಿದ್ದಾರೆ ಎಂದು ತಿಳಿಸಿದರು.

ಓದಿ: ಸವದತ್ತಿ ಯಲ್ಲಮ್ಮ ಶಾಸಕ, ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ‌ ಮಾಮನಿ ವಿಧಿವಶ

Last Updated :Oct 23, 2022, 3:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.