ಬೆಳಗಾವಿ: ನಾಡದ್ರೋಹಿ ಎಂಇಎಸ್ ಮನವಿಯ ಮೇರೆಗೆ ಡಿ.3ಕ್ಕೆ ನಿಗದಿಯಾಗಿದ್ದ ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ಮುಂದೂಡಿಕೆಯಾಗಿದೆ. ಡಿಸೆಂಬರ್ 3ಕ್ಕೆ ಸಚಿವರ ಬೆಳಗಾವಿ ಪ್ರವಾಸ ನಿಗದಿ ಆಗಿತ್ತು. ಇದೀಗ ಡಿಸೆಂಬರ್ 6ಕ್ಕೆ ಸಚಿವರು ಗಡಿ ಜಿಲ್ಲೆಗೆ ಬರಲಿದ್ದಾರೆ. ಪ್ರವಾಸ ಪಟ್ಟಿ ಪರಿಷ್ಕರಣೆ ಸಂಬಂಧ ಸಚಿವ ಚಂದ್ರಕಾಂತ ಪಾಟೀಲ್ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಎಂಇಎಸ್ ಮನವಿ ಮೇರೆಗೆ ಬೆಳಗಾವಿಗೆ ಬರಲು ಮಹಾರಾಷ್ಟ್ರ ಸಚಿವರು ನಿರ್ಧರಿಸಿದ್ದರು. ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ್, ಶಂಭುರಾಜ ದೇಸಾಯಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಡಿಸಿಗೆ ಕರವೇ ಮನವಿ: ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿಗೆ ಅವಕಾಶ ನೀಡದಂತೆ ಬೆಳಗಾವಿ ಡಿಸಿ ನಿತೇಶ ಪಾಟೀಲ್ ಅವರಿಗೆ ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದ ನಿಯೋಗ ಮನವಿ ಮಾಡಿದೆ. ಬೆಳಗಾವಿಯಲ್ಲಿ ಮಹಾಸಚಿವರು ಪ್ರಚೋದನಾತ್ಮಕ ಭಾಷಣ ಮಾಡಿ ಕನ್ನಡಿಗರ ಎದುರು ಮುಗ್ಧ ಮರಾಠಿ ಭಾಷಿಕರನ್ನು ಎತ್ತಿ ಕಟ್ಟುವ ಕುತಂತ್ರ ಮಾಡುತ್ತಾರೆೆ. ಭಾಷಾ ವೈಷಮ್ಯದ ಬೀಜ ಬಿತ್ತಿ ಅಶಾಂತಿ ಸೃಷ್ಟಿಯ ಹುನ್ನಾರಕ್ಕೆ ಎಂಇಎಸ್ ಮುಂದಾಗಿದೆ. ಈ ಕಾರಣಕ್ಕೆ ಮಹಾರಾಷ್ಟ್ರ ಸಚಿವರ ಬೆಳಗಾವಿ ಪ್ರವೇಶಕ್ಕೆ ಅವಕಾಶ ನೀಡದಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಸಚಿವರನ್ನು ಬೆಳಗಾವಿಗೆ ಪ್ರವೇಶಿಸದಂತೆ ತಡೆಯಬೇಕು: ಕರವೇ ಆಗ್ರಹ