ಬೆಳಗಾವಿ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು, ಕರ್ನಾಟಕದ ಬಿಜೆಪಿ ಸರ್ಕಾರ 40% ಸರ್ಕಾರ ಅಂತಾ ಸಾಬೀತಾಗಿದೆ ಎಂದು ಆರೋಪಿಸಿದರು.
ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಕಮೀಷನ್ ಬಗ್ಗೆ ಗುತ್ತಿಗೆದಾರ ಅಸೋಸಿಯೇಷನ್ ಸೇರಿ ಹಲವಾರು ಜನರಿಂದ ಆರೋಪ ಮಾಡಲಾಗಿತ್ತು. ಇದೀಗ ಅದು ಸಾಬೀತಾಗಿದೆ. ಇದೇ ರೀತಿ ಯಾರಿಗಾದರೂ ಅನ್ಯಾಯವಾಗಿದ್ದರೆ ಅವರು ಕೂಡ ಮುಂದೆ ಬಂದು ದೂರು ನೀಡಬೇಕು ಎಂದರು.
ಸಚಿವ ಕೆ. ಎಸ್ ಈಶ್ವರಪ್ಪ ವಿರುದ್ಧ ಎಫ್ಐಆರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರಿಯಾದ ತನಿಖೆ ಆಗಬೇಕು. ವರ್ಕ್ ಆರ್ಡರ್ ಇಲ್ದೇ ಕೆಲಸ ಮಾಡೋದು ಎಲ್ಲಾ ಕಡೆ ಇದೆ. ತನಿಖೆಯಲ್ಲಿ ಎಲ್ಲಾ ಸತ್ಯ ಹೊರ ಬರಬೇಕು. ಸಿಸ್ಟಂನಲ್ಲಿ ಇದೆ. ಎಲ್ಲ ಮತಕ್ಷೇತ್ರದಲ್ಲೂ ನಡೆಯುತ್ತದೆ.
ಸ್ವಲ್ಪ ವರ್ಕ್ ಉಳಿದಿರುತ್ತೆ. ಅದನ್ನ ಮಾಡಿ ಮುಂದೆ ಅಡ್ಜಸ್ಟ್ ಮಾಡಲು ಅವಕಾಶ ಇರುತ್ತದೆ. ಹೀಗಾಗಿ, ಯಾರಾದರೂ ಸಂತೋಷ್ಗೆ ಹೇಳಿ ಕೆಲಸ ಮಾಡಿಸಿರಬೇಕು. ಈ ಬಗ್ಗೆ ಸಮಗ್ರವಾಗಿ ನಡೆಯುವ ತನಿಖೆ ನಂತರವಷ್ಟೇ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಓದಿ: ರಾಜೀನಾಮೆಗೆ ಒತ್ತಾಯಿಸೋದು ಸ್ವಾಭಾವಿಕ, ನಾವು ವಿಪಕ್ಷದಲ್ಲಿದ್ದರೂ ಅದನ್ನೇ ಮಾಡುತ್ತಿದ್ದೆವು: ಸಿ. ಟಿ ರವಿ