ETV Bharat / state

ನಾಲ್ಕು ಲಕ್ಷ ರೈತರ ಕೃಷಿ ಪಂಪ್ ಸೆಟ್‍ಗಳಿಗೆ ಮೂಲ ಸೌಕರ್ಯ: ಸಚಿವ ಕೆ ಜೆ ಜಾರ್ಜ್

author img

By ETV Bharat Karnataka Team

Published : Dec 14, 2023, 4:58 PM IST

Updated : Dec 14, 2023, 5:25 PM IST

ನೊಂದಾಯಿಸ್ಪಟ್ಟ 500 ಮೀಟರ್ ವ್ಯಾಪ್ತಿಯೊಳಗಡೆ ಇರುವ ಪಂಪ್​ಸೆಟ್​ಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳಿಂದ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಸಚಿವ ಕೆ ಜೆ ಜಾರ್ಜ್​ ತಿಳಿಸಿದ್ದಾರೆ.

ಇಂಧನ ಸಚಿವ ಕೆ ಜೆ ಜಾರ್ಜ್
ಇಂಧನ ಸಚಿವ ಕೆ ಜೆ ಜಾರ್ಜ್

ಇಂಧನ ಸಚಿವ ಕೆ ಜೆ ಜಾರ್ಜ್

ಬೆಂಗಳೂರು/ ಬೆಳಗಾವಿ : ರಾಜ್ಯದ ನಾಲ್ಕು ಲಕ್ಷ ರೈತರ ಕೃಷಿ ಪಂಪ್​ಸೆಟ್‍ಗಳಿಗೆ ಸರ್ಕಾರದಿಂದ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಅವರು ವಿಧಾನಸಭೆಯಲ್ಲಿ ಹೇಳಿದರು. ಪ್ರಶ್ನೋತ್ತರ ಕಲಾಪದಲ್ಲಿ ಶಾಸಕರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ನೋಂದಾಯಿಸಲ್ಪಟ್ಟ 500 ಮೀಟರ್ ವ್ಯಾಪ್ತಿಯೊಳಗಡೆ ಇರುವ ಪಂಪ್ ಸೆಟ್‍ಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳಿಂದ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.

500 ಮೀಟರ್​ನಿಂದ ಆಚೆ ಇರುವ ಪಂಪ್​ಸೆಟ್‍ಗಳಿಗೆ ಕೇಂದ್ರ ಸರ್ಕಾರದ ಶೇ. 30 ಹಾಗೂ ರಾಜ್ಯ ಸರ್ಕಾರ ಶೇ. 50 ರಷ್ಟು ಸಬ್ಸಿಡಿ ನೀಡಿ, ಸೋಲಾರ್ ಪಂಪ್​ಸೆಟ್ ಅಳವಡಿಸಲು ಕ್ರಮವಹಿಸಲಾಗಿದೆ. ಸೆ. 22ರ ನಂತರ ನೋಂದಾಯಿಸಲ್ಪಡುವ ಐಪಿ ಸೆಟ್‍ಗಳಿಗೆ ಮೂಲಸೌಕರ್ಯಗಳನ್ನು ರೈತರು ಸ್ವಯಂ - ಕಾರ್ಯನಿರ್ವಹಣೆಯಡಿ ತಾವೇ ಮಾಡಿಕೊಳ್ಳಬೇಕು ಎಂಬ ನಿಯಮವಿತ್ತು. ಇದನ್ನು ಮಾರ್ಪಡಿಸಿ, ಸರ್ಕಾರವೇ ಮೂಲ ಸೌಕರ್ಯ ಒದಗಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೃಷಿಗೆ 7 ಗಂಟೆ ವಿದ್ಯುತ್ ನೀಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಮಳೆ ಕೊರತೆಯಿಂದಾಗಿ ಜಲಮೂಲದಿಂದ ಉತ್ಪತ್ತಿಯಾಗುತ್ತಿದ್ದ ವಿದ್ಯುತ್ ಪ್ರಮಾಣ ಕಡಿಮೆಯಾಗಿದೆ. ಇದರೊಂದಿಗೆ ರಾಜ್ಯದ ವಿದ್ಯುತ್ ಬೇಡಿಕೆ 8000 ಮೆಗಾ ವ್ಯಾಟ್ ನಿಂದ 16500 ಮೆಗಾ ವ್ಯಾಟ್‍ಗೆ ಏರಿಕೆಯಾಗಿ, ವಿದ್ಯುತ್ ಅಭಾವ ಉಂಟಾಗಿತ್ತು. ಹೊರ ರಾಜ್ಯಗಳಿಂದ ಒಪ್ಪಂದ ಮಾಡಿಕೊಂಡು ವಿದ್ಯುತ್ ಖರೀದಿಸಲಾಗಿದೆ. ಇದರೊಂದಿಗೆ ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿಯೂ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಸದ್ಯ ರಾಜ್ಯದಲ್ಲಿ ಯಾವುದೇ ವಿದ್ಯುತ್ ಕೊರತೆ ಇಲ್ಲ. ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಲಭ್ಯವಿದೆ ಎಂದು ಸಚಿವ ಕೆ ಜೆ ಜಾರ್ಜ್ ಸ್ಪಷ್ಟಪಡಿಸಿದರು.

2004ರಲ್ಲಿ ಹೆಚ್ ಡಿ ರೇವಣ್ಣ ಅವರು ಇಂಧನ ಸಚಿವರಿದ್ದಾಗ 60 ಸಾವಿರ ಹಾಗೂ 2008ರಲ್ಲಿ ಶೋಭಾ ಕರಂದ್ಲಾಜೆ ಅವರು ಇಂಧನ ಸಚಿವರಿದ್ದಾಗ 1.50 ಲಕ್ಷ ಕೃಷಿ ಪಂಪ್ ಸೆಟ್‍ಗಳನ್ನು ಅಕ್ರಮ - ಸಕ್ರಮದಡಿ ಕ್ರಮ ಬದ್ದಗೊಳಿಸಲು ತೀರ್ಮಾನಿಸಲಾಗಿತ್ತು. ಅಂದಿನಿಂದಲೂ ಸರ್ಕಾರಗಳು ಅನಧಿಕೃತ ಕೃಷಿ ಪಂಪ್ ಸೆಟ್‍ಗಳನ್ನು ಸಕ್ರಮಗೊಳಿಸುವುದನ್ನು ಮುಂದುವರಿಸಿಕೊಂಡು ಬಂದಿವೆ. ರಾಜ್ಯದಲ್ಲಿ ವಿದ್ಯುತ್ ಪರಿವರ್ತಕಗಳ ಕೊರತೆ ಇಲ್ಲ. ಹಾನಿಯಾದ ವಿದ್ಯುತ್ ಪರಿವರ್ತಕಗಳನ್ನು ನಿಗದಿತ ಸಮಯದಲ್ಲಿ ಬದಲಾವಣೆ ಮಾಡಿಕೊಡಲಾಗುತ್ತಿದೆ. ಆದರೂ ಕೆಲವು ಕಡೆ ಪರಿವರ್ತಕದ ಸಾಮರ್ಥ್ಯಕ್ಕಿಂತ ಹೆಚ್ಚಿನ ಒತ್ತಡ ಬೀಳುವುದರಿಂದ ಪದೇ ಪದೆ ಪರಿವರ್ತಕಗಳು ಹಾನಿಗೆ ಒಳಗಾಗುತ್ತಿವೆ ಎಂದರು.

ರೈತರು ತಮ್ಮ ಕೃಷಿ ಪಂಪ್​ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಲು ವಿದ್ಯುತ್ ಕಂಬ, ಪರಿವರ್ತಕ, ವಿದ್ಯುತ್ ತಂತಿ ಹಾಗೂ ಸೇವಾ ಶುಲ್ಕಗಳನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ನೀಡಬೇಕು. ಇದಕ್ಕೆ ಸುಮಾರು 2 ರಿಂದ 3 ಲಕ್ಷ ರೂಪಾಯಿಗಳು ಖರ್ಚಾಗುತ್ತವೆ. ಇದು ರೈತರಿಗೆ ಹೊರೆಯಾಗುವುದರಿಂದ ಸರ್ಕಾರವೇ ಈ ಎಲ್ಲ ವೆಚ್ಚಗಳನ್ನು ಭರಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು ಎಂದು ಕಾಗವಾಡ ಶಾಸಕ ಭರಮಗೌಡ ಅಲಗೌಡ ಕಾಗೆ, ಇಂಧನ ಸಚಿವರಲ್ಲಿ ಕೋರಿದರು.

ಇದನ್ನೂ ಓದಿ : ಆನೆ ಮತ್ತಿತರ ಕ್ರೂರ ಮೃಗಗಳ ಸಂಘರ್ಷ ತಪ್ಪಿಸಲು ಶಾಶ್ವತ ಕ್ರಮಕ್ಕೆ ಶಾಸಕರ ಆಗ್ರಹ

Last Updated :Dec 14, 2023, 5:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.