ETV Bharat / state

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಬೆಂಗಳೂರಿಗೆ ತೆರಳಲಿರುವ ಬೆಳಗಾವಿ ಪೊಲೀಸರು

author img

By

Published : Mar 17, 2021, 10:26 AM IST

ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಎಪಿಎಂಸಿ ಪೊಲೀಸ್ ಇನ್ಸ್​ಪೆಕ್ಟರ್ ಜಾವೀದ್ ಮುಶಾಪುರೆ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಇಂದು 11 ಗಂಟೆ ಈ ತಂಡ ಬೆಂಗಳೂರಿಗೆ ತೆರಳಲಿದ್ದು, ಯುವತಿ ವಾಸವಿದ್ದ ಬೆಂಗಳೂರಿನ ಆರ್.ಟಿ ನಗರದ ಪಿಜಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಯುವತಿಗಾಗಿ ಹುಡುಕಾಟ ನಡೆಸಲಿದೆ.

jarkiholi CD case
jarkiholi CD case

ಬೆಳಗಾವಿ: ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಂದೆ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆ ಬೆಳಗಾವಿ ಪೊಲೀಸರು​ ವಿಶೇಷ ತಂಡ ರಚಿಸಿದ್ದು, ಇಂದು ಯುವತಿಯ ಹುಡುಕಾಟಕ್ಕಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದೆ.

ಬೆಳಗಾವಿ ಎಪಿಎಂಸಿ ಪೊಲೀಸ್ ಇನ್ಸ್​​​​​ಪೆಕ್ಟರ್ ಜಾವೀದ್ ಮುಶಾಪುರೆ ನೇತೃತ್ವದಲ್ಲಿ ಈ ಸಂಬಂಧ ತಂಡ ರಚನೆ ಮಾಡಲಾಗಿದೆ. ಯುವತಿ ವಿಚಾರಣೆ ಹಾಗೂ ಹುಡುಕಾಟಕ್ಕಾಗಿ ಇಂದು 11 ಗಂಟೆ ಸುಮಾರಿಗೆ ಸಿಲಿಕಾನ್​ ಸಿಟಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಸಂಬಂಧ ರಚನೆಯಾದ ತಂಡದಲ್ಲಿ ಇಬ್ಬರು ಸಿಪಿಐಗಳಿದ್ದು, ಸೂಕ್ತ ಸಿಬ್ಬಂದಿಯೊಂದಿಗೆ ಬೆಂಗಳೂರಿಗೆ ಭೇಟಿ ನೀಡಲಿದೆ. ಯುವತಿ ವಾಸವಿದ್ದ ಆರ್.ಟಿ ನಗರದ ಪಿಜಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಯುವತಿಗಾಗಿ ಹುಡುಕಾಟ ನಡೆಸಲಿದ್ದಾರೆ.

ಕಳೆದ 15 ದಿನಗಳಿಂದ ರಾಜ್ಯ ಅಷ್ಟೇ ಅಲ್ಲ ದೇಶಾದ್ಯಂತ ಸದ್ದು ಮಾಡುತ್ತಿರುವ ಸಿಡಿ ಪ್ರಕರಣದಿಂದ ವಿಡಿಯೋದಲ್ಲಿ ಇದ್ದಾರೆ ಎನ್ನಲಾದ ಯುವತಿಯ ಪೋಷಕರು, ನನ್ನ ಪುತ್ರಿಯನ್ನು ಅಪಹರಿಸಲಾಗಿದೆ ಎಂದು ನಿನ್ನೆ ಬೆಳಗಾವಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈಗಾಗಲೇ ಪೊಲೀಸರು ಯುವತಿ ಹಾಗೂ ಆಕೆಯ ಪೋಷಕರ ಮಧ್ಯೆ ನಡೆದ ಕೊನೆಯ ಮೊಬೈಲ್ ಸಂಭಾಷಣೆಯ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅಪಹರಣ ಪ್ರಕರಣದ ಪ್ರಾಥಮಿಕ ತನಿಖೆ‌ ಮುಗಿದ ತಕ್ಷಣವೇ ಈ ಪ್ರಕರಣ ಎಸ್ಐಟಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ.

ಯುವತಿ ಕುಟುಂಬ ಅಜ್ಞಾತ ಸ್ಥಳಕ್ಕೆ:

ಬೆಳಗಾವಿಯ ಹನುಮಾನ ನಗರದಲ್ಲಿ ಯುವತಿಯ ತಂದೆ - ತಾಯಿ ಹಾಗೂ ಇಬ್ಬರು ಸಹೋದರರು ಕಳೆದ ಮೂರು ವರ್ಷಗಳಿಂದ ವಾಸವಿದ್ದರು. ನಿನ್ನೆ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ ಬಳಿಕ ಯುವತಿಯ ಕುಟುಂಬಸ್ಥರು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಇದೀಗ ಹನುಮಾನ ನಗರದ ಮನೆಯಿಂದ ಯುವತಿಯ ಕುಟುಂಬಸ್ಥರು ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಪೊಲೀಸರ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.