ETV Bharat / state

ಬೆಂಗಳೂರಲ್ಲಿ ಭದ್ರ, ರಾಜ್ಯದಲ್ಲಿ ಛಿದ್ರ: ಬಿಜೆಪಿ ಎಡವಿದ್ದು ಎಲ್ಲಿ ಗೊತ್ತಾ..?

author img

By

Published : May 14, 2023, 6:15 PM IST

ಬಿಜೆಪಿ
ಬಿಜೆಪಿ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವುದಕ್ಕೆ ಸ್ವಯಂಕೃತ ಅಪರಾಧಗಳೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ಬೆಂಗಳೂರು : ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ ಆರೋಪಗಳನ್ನು ಲಘುವಾಗಿ ಪರಿಗಣಿಸಿದ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಕಡೆಗಣಿಸಿದ್ದು ಹಾಗು ಟಿಕೆಟ್ ಹಂಚಿಕೆಯಲ್ಲಿನ ಹೊಸ ಪ್ರಯೋಗಗಳು, ಕನ್ನಡ ಅಸ್ಮಿತೆ ಕಡೆಗಣನೆಯಂತಹ ಆರೋಪಗಳು, ಮೀಸಲಾತಿ ವಿಚಾರದಲ್ಲಿ ಮಾಡಿಕೊಂಡ ಎಡವಟ್ಟಿನ ಕಾರಣದಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿತು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಅಗತ್ಯ ವಸ್ತುಗಳ ಬೆಲೆ ಹೆಚ್ಚಳ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಸ್ವಯಂಕೃತ ಅಪರಾಧಗಳೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಜನತೆ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿಬಿದ್ದರೂ ಬಿಜೆಪಿ ಅದನ್ನು ಕಡೆಗಣಿಸಿದ್ದೇ ದೊಡ್ಡ ಹಿನ್ನಡೆಗೆ ಕಾರಣವಾಗಿದೆ. ನಾಯಕರೆಲ್ಲರೂ ಕೇವಲ ಡಬಲ್ ಇಂಜಿನ್ ಸರ್ಕಾರ ಎನ್ನುವ ಘೋಷವಾಕ್ಯವನ್ನು ಹೇಳುತ್ತ ರಾಜ್ಯದಲ್ಲಿದ್ದ ಆಡಳಿತ ವಿರೋಧಿ ಅಲೆಯನ್ನು ನೋಡದೆ ಕಣ್ಮುಚ್ಚಿ ಕುಳಿತರು. ಈ ಹಿಂದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ಹೋರಾಟ ನಡೆಸಿದ್ದ ಬಿಜೆಪಿ ಈಗ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಪರಿಣಾಮ ಅಧಿಕಾರವನ್ನು ಕಳೆದುಕೊಳ್ಳಬೇಕಾಯಿತು ಎನ್ನಲಾಗಿದೆ.

ಬಿಜೆಪಿ ಭರವಸೆಗೆ ಮನ್ನಣೆ ನೀಡದ ಜನ: ಬಹುಮುಖ್ಯವಾಗಿ ಹಿಂದಿ ಹೇರಿಕೆ ಆರೋಪ ವಿಚಾರದಲ್ಲಿ ಬಿಜೆಪಿ ಸಂಪೂರ್ಣವಾಗಿ ಎಡವಿದೆ. ಸಾಕಷ್ಟು ಬಾರಿ ಹಿಂದಿ ಹೇರಿಕೆ ಆರೋಪಗಳು ಬಂದರೂ ಅದನ್ನು ಕಡೆಗಣಿಸಿದ್ದ ಬಿಜೆಪಿ ಅಪವಾದ ನಿರ್ವಹಣೆಯಲ್ಲಿ ವಿಫಲವಾಯಿತು. ಕನ್ನಡ ನಾಡು ನುಡಿಯ ಅಸ್ಮಿತೆಗೆ ಧಕ್ಕೆ ತರಬಹುದು ಎನ್ನುವ ಭೀತಿ ಹುಟ್ಟಿಸಿದ ಹಿಂದಿ ಹೇರಿಕೆ ವಿವಾದಕ್ಕೆ ಬಿಜೆಪಿ ಈಗ ಬೆಲೆ ತೆತ್ತಿದೆ. ಇದು ಸಾಲದು ಎನ್ನುವಂತೆ ಅಮೂಲ್ ಜೊತೆ ನಂದಿನಿ ವಿಲೀನ ಮಾಡುವ ಚರ್ಚೆಯನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಅಂತಹ ಪ್ರಸ್ತಾಪವಿಲ್ಲ ಎನ್ನುವ ಹೇಳಿಕೆ ಬಿಟ್ಟರೆ ಸರಿಯಾದ ಸಮರ್ಥನೆ ಮಾಡುವ ಗೋಜಿಗೆ ಹೋಗಲಿಲ್ಲ. ಆದರೆ ಚುನಾವಣೆ ವೇಳೆ ಅದರ ಗಂಭೀರತೆ ಅರ್ಥವಾದಾಗ ಪ್ರಣಾಳಿಕೆಯಲ್ಲಿ ಪ್ರತಿ ಬಿಪಿಎಲ್ ಕುಟುಂಬಕ್ಕೆ ಅರ್ಧ ಲೀಟರ್ ನಂದಿನಿ ಹಾಲು ಪೂರೈಕೆ ಮಾಡುವ ಭರವಸೆ ನೀಡಿತು. ಆದರೆ ಈ ಭರವಸೆಗೆ ರಾಜ್ಯದ ಜನ ಮನ್ನಣೆ ನೀಡಲಿಲ್ಲ. ಅದರಲ್ಲಿಯೂ ಹಳೆ ಮೈಸೂರು ಭಾಗದ ಮತದಾರರು ಬಿಜೆಪಿಯನ್ನು ಬಹುತೇಕವಾಗಿ ಗುಡಿಸಿ ಹಾಕಿದರು ಎನ್ನಲಾಗುತ್ತಿದೆ.

ಬಂಡಾಯ ಅಭ್ಯರ್ಥಿಗಳ ಮನವೊಲಿಕೆ ಕಡೆಗಣನೆ: ಇನ್ನು ಟಿಕೆಟ್ ಹಂಚಿಕೆಯಲ್ಲಿ ಹೊಸ ಪ್ರಯೋಗ ನಡೆಸುವ ಹೆಸರಿನಲ್ಲಿ ಗೆಲ್ಲುವ ಸಾಮರ್ಥ್ಯವಿದ್ದವರನ್ನೂ ಕಣದಿಂದ ದೂರ ಉಳಿಯುವಂತೆ ಮಾಡಿ ಒತ್ತಾಯವಾಗಿ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸುವಂತೆ ಮಾಡಲಾಯಿತು. ಹೊಸಬರಿಗೆ ಟಿಕೆಟ್ ನೀಡಿ ಹಿರಿಯರಿಗೆ ಟಿಕೆಟ್ ನಿರಾಕರಿಸಿ ಗೊಂದಲ ಸೃಷ್ಟಿಸಿತು. ದೊಡ್ಡಮಟ್ಟದ ಅಸಮಾಧಾನ ಭುಗಿಲೆದ್ದರೂ ಅದನ್ನು ಪಕ್ಷ ಕಡೆಗಣಿಸಿತು. ಹಲವು ಕಡೆ ಬಂಡಾಯ ಅಭ್ಯರ್ಥಿಗಳು ನಿಂತರೂ ಮನವೊಲಿಕೆ ಕಾರ್ಯ ಕಡೆಗಣಿಸಲಾಯಿತು. ಶೆಟ್ಟರ್, ಸವದಿ ಪಕ್ಷ ತೊರೆಯಲು ಮುಂದಾದಾಗ ಸರಿಯಾಗಿ ಮನವೊಲಿಕೆ ಮಾಡದೆ ಮರಳಿ ಅಧಿಕಾರಕ್ಕೆ ಬರುವ ಅತಿಯಾದ ಆತ್ಮವಿಶ್ವಾಸದಿಂದ ಇಬ್ಬರು ನಾಯಕರನ್ನು ಕಡೆಗಣಿಸಲಾಯಿತು. ಇದು ಬಿಜೆಪಿಗೆ ಮುಳುವಾಯಿತು ಎನ್ನಲಾಗುತ್ತಿದೆ.

ಬಿ ಎಸ್​ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು, ಲಿಂಗಾಯತ ಸಮುದಾಯಕ್ಕೆ ನಕಾರಾತ್ಮಕ ಸಂದೇಶ ರವಾನಿಸಿತ್ತು. ಈವರೆಗೂ ಯಡಿಯೂರಪ್ಪರನ್ನು ಕೆಳಗಿಳಿಸಿದ್ದು ಯಾಕೆ? ಎನ್ನುವ ಉತ್ತರವನ್ನು ಯಾವ ನಾಯಕರೂ ನೀಡಿಲ್ಲ. ಇದು ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಇದರಿಂದ ಲಿಂಗಾಯತ ಸಮುದಾಯ ಅಸಮಧಾನಗೊಂಡು ಕಾಂಗ್ರೆಸ್ ಪರ ವಾಲಿರುವುದು ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿದೆ.

ಮುಸ್ಲಿಂ ಮೀಸಲಾತಿ ರದ್ದು ಬಿಜೆಪಿಗೆ ಹೊಡೆತ : ಹಲಾಲ್ ಕಟ್, ಹಿಜಾಬ್ ನಂತಹ ಧಾರ್ಮಿಕ ಸೂಕ್ಷ್ಮ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ಆರಂಭಿಸಿದ ಹಿಂದೂ ಪರ ಸಂಘಟನೆಗಳ ಬೆಂಬಲಕ್ಕೆ ಬಿಜೆಪಿ ನಿಂತಿದ್ದು ಫಲ ನೀಡಲಿಲ್ಲ. ನಾಲ್ಕು ವರ್ಷ ಸುಮ್ಮನಿದ್ದು ಚುನಾವಣೆ ವೇಳೆ ಮೀಸಲಾತಿ ಪರಿಷ್ಕರಣೆ, ಲಿಂಗಾಯತ, ಒಕ್ಕಲಿಗ ಮೀಸಲಾತಿ ಹೆಚ್ಚಳ ಮಾಡಿದ್ದನ್ನು ಆ ಸಮುದಾಯದ ಜನ ಒಪ್ಪಿಲ್ಲ. ಚುನಾವಣೆಗೋಸ್ಕರ ಇದನ್ನು ಮಾಡಿದ್ದಾರೆ ಎಂದುಕೊಂಡರು. ಮುಸ್ಲಿಂ ಮೀಸಲಾತಿ ರದ್ದು ಮಾಡಿದ ಪರಿಣಾಮ ಬೀರಿದೆ. ಇದರ ಜೊತೆ ಚುನಾವಣೆ ವೇಳೆ ಬಜರಂಗದಳ ನಿಷೇಧ ವಿಷಯವನ್ನೇ ಅಸ್ತ್ರ ಮಾಡಿಕೊಳ್ಳುವ ಪ್ರಯತ್ನವೂ ಕೈ ಹಿಡಿಯಲಿಲ್ಲ.

ಪ್ರಣಾಳಿಕೆಯಲ್ಲಿಯೂ ಎಡವಿದ ಬಿಜೆಪಿ: ಇನ್ನು ಪ್ರಣಾಳಿಕೆ ವಿಷಯಕ್ಕೆ ಬಂದಾಗಲೂ ಬಿಜೆಪಿ ಎಡವಿದೆ. ಕಾಂಗ್ರೆಸ್​ನ ಗ್ಯಾರಂಟಿ ಘೋಷಣೆಗಳ ನಡುವೆ ಬಿಜೆಪಿಯ ಪ್ರಣಾಳಿಕೆ ಗಣನೆಗೆ ಬರಲಿಲ್ಲ. ಉಚಿತ ಭರವಸೆಗಳಿಗೆ ಜನರು ಮನಸೋತಿದ್ದು ಸತ್ಯ. ಈ ಉಚಿತ ಭರವಸೆಗಳು ಬಿಜೆಪಿ ಪ್ರಣಾಳಿಕೆ ಬಿಡುಗಡೆಗೂ ಮೊದಲೇ ಘೋಷಣೆ ಮಾಡಿದ್ದರೂ ಅದಕ್ಕೆ ಸರಿಸಾಟಿಯಾಗುವ ಘೋಷಣೆ ಮಾಡದ ಬಿಜೆಪಿ ಅಧಿಕಾರದಿಂದ ದೂರ ಉಳಿಯಬೇಕಾಯಿತು. ಅಡುಗೆ ಅನಿಲ ಬೆಲೆ ಇಳಿಕೆ ಬದಲು ಹಬ್ಬಕ್ಕೆ ಉಚಿತ ಸಿಲಿಂಡರ್ ಎಂದಿದ್ದು, ಬಿಪಿಎಲ್ ಕುಟುಂಬಕ್ಕೆ ನಂದಿನಿ ಹಾಲು ವಿತರಣೆಯಂತಹ ಭರವಸೆಗಳಿಗೆ ಜನ ಮನ್ನಣೆ ನೀಡಲಿಲ್ಲ. ಹಾಗಾಗಿ ಪ್ರಣಾಳಿಕೆಯಲ್ಲಿಯೂ ಬಿಜೆಪಿ ಎಡವಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಬೆಂಗಳೂರು ನಗರದಲ್ಲಿ ಮಾತ್ರ ಬಿಜೆಪಿ ತಮ್ಮ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಹಾಗಾಗಿ ಈ ಹಿಂದೆ 15 ಕ್ಷೇತ್ರ ಗೆದ್ದಿದ್ದ ಬಿಜೆಪಿ ಈ ಬಾರಿ 16 ಕ್ಷೇತ್ರ ಗೆದ್ದಿದೆ. ಪ್ರಧಾನಿ ಮೋದಿ ನಡೆಸಿದ ರೋಡ್ ಶೋ ಕೂಡ ಬಿಜೆಪಿಗೆ ಪ್ಲಸ್ ಆಗಿದೆ. ಆದರೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಹಳೆ ಮೈಸೂರು ವಲಯ ಬಿಜೆಪಿಗೆ ಕೈಕೊಟ್ಟಿದೆ. 61 ಕ್ಷೇತ್ರಗಳಲ್ಲಿ ಗೆದ್ದಿದ್ದು ಕೇವಲ 6 ಸ್ಥಾನ ಮಾತ್ರ. ಮಧ್ಯ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ ವಲಯಗಳಲ್ಲಿ ಬಿಜೆಪಿ ಕಡೆಗಣಿಸಲ್ಪಟ್ಟಿದೆ. ಕೇವಲ ಬೆಂಗಳೂರು ನಗರ ಮತ್ತು ಕರಾವಳಿ ಭಾಗ ಮಾತ್ರ ಬಿಜೆಪಿ ಕೈ ಹಿಡಿದಿದ್ದು, ಇತರ ಭದ್ರಕೋಟೆಗಳೆಲ್ಲಾ ಛಿದ್ರವಾಗಿವೆ.

ಇದನ್ನೂ ಓದಿ: ಕಮಲ ಬಿಟ್ಟು, ಕಾಂಗ್ರೆಸ್ ಕೈ ಹಿಡಿದ ಲಿಂಗಾಯತರು: ಶಾಸಕರ ಗೆಲುವಿನ ಸಂಖ್ಯೆ ದುಪ್ಪಟ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.