ರಾಜ್ಯ ರಾಜಕಾರಣದ ವಿಶ್ಲೇಷಣೆ... ಜೆಡಿಎಸ್ ವಿರುದ್ಧ ಬಿಜೆಪಿ  ಧ್ವನಿ ಎತ್ತದಿರುವುದೇಕೆ?.. ಏನಿದು ಪ್ಲಾನ್​?

author img

By

Published : Sep 24, 2022, 6:35 PM IST

why-bjp-not-raised-voice-against-jds

ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ನಾಯಕರು ಕಾಂಗ್ರೆಸ್​ ವಿರುದ್ಧ ಮುಗಿಬಿದ್ದರೇ ಹೊರತು ಜೆಡಿಎಸ್ ಮೇಲೆ ಮಾಡಲಿಲ್ಲ. ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ, ಬಿಜೆಪಿ ಮತ್ತು ಸಂಘ ಪರಿವಾರವನ್ನು ಟೀಕಿಸುತ್ತಾರೆ. ಆದರೆ, ಬಿಜೆಪಿ ಮಾತ್ರ ತಿರುಗಿ ಜೆಡಿಎಸ್ ವಿರುದ್ಧ ಧ್ವನಿ ಎತ್ತುತ್ತಿಲ್ಲ.

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಮುನ್ನುಡಿ ಎಂಬಂತೆ ಇತ್ತೀಚಿಗೆ ದೊಡ್ಡಬಳ್ಳಾಪುರ ಬಳಿ ಬಿಜೆಪಿ ಜನಸ್ಪಂದನ ಸಮಾವೇಶ ಮಾಡಿದ ಸಂಗತಿ ಗೊತ್ತಿರುವ ಸಂಗತಿ. ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ-ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಎಂಬ ಟ್ಯಾಗ್​ ಲೈನ್​ ಬಳಸಿ ಮಾಡಿದ ಕಾರ್ಯಕ್ರಮ ಕಾಂಗ್ರೆಸ್​ ಗೆ ಸಂದೇಶ ನೀಡಿತು.

ರಾಜ್ಯದ ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದ ಕಾಲದಲ್ಲಿ ಲೂಟಿ ಮಾಡಿ ಎಲ್ಲೆಲ್ಲಿ ಹಣ ಇಟ್ಟಿದ್ದಾರೆ?. ಹೇಗೆ ಬಳಕೆ ಮಾಡುತ್ತಿದ್ದಾರೆ? ಎಂಬುದು ನಮಗೆ ಗೊತ್ತು. ಚುನಾವಣೆ ಹತ್ತಿರ ಬರಲಿ. ಅದನ್ನೆಲ್ಲ ಬಹಿರಂಗಪಡಿಸುತ್ತೇವೆ ಎಂದು ಬಿಜೆಪಿ ನಾಯಕರು ಗುಡುಗಿದ್ದರು. ಸಮಾವೇಶದಲ್ಲಿ ಮಾತಮಾಡಿದ ಬಹುತೇಕ ನಾಯಕರು ಕಾಂಗ್ರೆಸ್​ನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು.

ಜೆಡಿಎಸ್ ವಿರುದ್ಧ ಬಿಜೆಪಿ ತಿರುಗಿ ಧ್ವನಿ ಎತ್ತಿಲ್ಲ: ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಜನಸ್ಪಂದನ ಸಮಾವೇಶದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್​ ವಿರುದ್ಧ ಮುಗಿಬಿದ್ದರೇ ಹೊರತು ಜೆಡಿಎಸ್ ಮೇಲೆ ಒಂದೇ ಒಂದು ಮಾತನ್ನೂ ಆಡಲಿಲ್ಲ. ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ, ಬಿಜೆಪಿ ಮತ್ತು ಸಂಘ ಪರಿವಾರವನ್ನು ಟೀಕಿಸುತ್ತಾರೆ. ಆದರೆ, ಬಿಜೆಪಿ ಮಾತ್ರ ತಿರುಗಿ ಜೆಡಿಎಸ್ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಅದು ಸಣ್ಣ-ಪುಟ್ಟ ನಾಯಕರಿಂದ, ಪಕ್ಷದ ಸೋಷಿಯಲ್ ಮೀಡಿಯಾ ಮೂಲಕ ಪ್ರತಿ ಹೇಳಿಕೆ ಕೊಡಿಸಿ ಜಾಣ ಮರೆವಿಗೆ ಜಾರುತ್ತಿದೆ.

ಬಿಜೆಪಿ ನಾಯಕರ ಈ ಮೃದು ಧೋರಣೆಗೂ ಒಂದು ಕಾರಣವಿದೆ. ಏನೆಂದರೆ, ಕುಮಾರಸ್ವಾಮಿ ತಮ್ಮನ್ನು ಎಷ್ಟು ಟೀಕಿಸುತ್ತಾರೋ?. ಕಾಂಗ್ರೆಸ್​ಗೆ ಅಷ್ಟರ ಮಟ್ಟಿಗೆ ಹಾನಿಯಾಗುತ್ತದೆ. ಹೀಗಾಗಿ ಕುಮಾರಸ್ವಾಮಿ ತಮ್ಮನ್ನು ಎಷ್ಟು ಬೇಕಾದರೂ ಟೀಕಿಸಲಿ ಎಂಬುದು ಬಿಜೆಪಿ ನಾಯಕರ ಯೋಚನೆ. ಕುತೂಹಲದ ಸಂಗತಿ ಎಂದರೆ ಜನಸ್ಪಂದನ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಿದ ಮಾತು.

ಇದನ್ನೂ ಓದಿ: ದೊಡ್ಡಬಳ್ಳಾಪುರ ಬಿಜೆಪಿ ಜನಸ್ಪಂದನ: ಪಕ್ಷಕ್ಕೆ ನೆಲೆ ಇಲ್ಲದೆಡೆ ಬಲ ಪ್ರದರ್ಶಿಸಿ ಸೈ ಎನಿಸಿಕೊಂಡ ವಲಸಿಗ ಸಚಿವರು

ಅವರ ಪ್ರಕಾರ 2018ರಲ್ಲಿಯೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ, ಕಾಂಗ್ರೆಸ್ ಪಕ್ಷ ವಾಮಮಾರ್ಗದ ಮೂಲಕ ಜೆಡಿಎಸ್ ಜೊತೆ ಕೈಗೂಡಿಸಿ ಸರ್ಕಾರ ರಚಿಸಿತಂತೆ. ಆದರೆ, ಇದರಲ್ಲಿ ವಾಮ ಮಾರ್ಗದ ಪ್ರಶ್ನೆ ಏನಿದೆ?. ಸಂವಿಧಾನ ಬದ್ಧವಾಗಿಯೇ ಅವತ್ತು ಕಾಂಗ್ರೆಸ್-ಜೆಡಿಎಸ್ ಕೈಗೂಡಿಸಿದವಲ್ಲ?.

ಅತ್ಯಂತ ದೊಡ್ಡ ಶಕ್ತಿಯಾಗಿತ್ತು ಎಂದ ಮಾತ್ರಕ್ಕೆ ಬಹುಮತವಿಲ್ಲದಿದ್ದರೂ ಬಿಜೆಪಿಗೆ ಅಧಿಕಾರ ನೀಡಬೇಕಿತ್ತು ಅಂತ ಇದರರ್ಥವೇ? ಅಥವಾ ಜೆಡಿಎಸ್ ಪಕ್ಷದ ಜೊತೆ ಕೈಗೂಡಿಸಬೇಕಿದ್ದುದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ ಎಂಬುದೇ?, ಈ ಮಾತನ್ನು ಆಳವಾಗಿ ಗಮನಿಸಿದರೆ ಭವಿಷ್ಯದಲ್ಲಿ ಮಿತ್ರ ಪಕ್ಷಗಳಾಗುವುದಿದ್ದರೆ ಅದು ಬಿಜೆಪಿ-ಜೆಡಿಎಸ್ ಹೊರತು ಕಾಂಗ್ರೆಸ್ - ಜೆಡಿಎಸ್ ಅಲ್ಲ ಎಂಬುದು ಬಿಜೆಪಿಯ ಯೋಚನೆ ಇದ್ದಂತೆ ಕಾಣುತ್ತಿದೆ.

ಜೆಡಿಎಸ್‍ ಧರಣಿಯಿಂದ ಕಾಂಗ್ರೆಸ್​ಗೆ ಹಿನ್ನಡೆ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಯಾವ್ಯಾವ‌ ಮೂಲೆಗಳಿಂದ ಕಟ್ಟಿ ಹಾಕಬೇಕು ಎಂಬ ವಿಷಯದಲ್ಲಿ ಬಿಜೆಪಿ ಖಚಿತ ತೀರ್ಮಾನಕ್ಕೆ ಬಂದಿದೆ. ಇನ್ನೊಂದು ತಾಜಾ ಉದಾಹರಣೆ ಎಂದರೆ ಗುರುವಾರ ಸದನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಿಎಂಎಸ್ ಟ್ರಸ್ಟ್ ಅಕ್ರಮದ ಕುರಿತು ದಾಖಲೆ ಸಮೇತ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ವಿರುದ್ಧ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟರು. ಆಗ ಮುಖ್ಯಮಂತ್ರಿ ಆದಿಯಾಗಿ ಯಾರೊಬ್ಬ ಸಚಿವರು ಸಹ ತುಟಿ ಬಿಚ್ಚಲಿಲ್ಲ. ಧರಣಿ ನಡೆಸುವ ಮೂಲಕ ಜೆಡಿಎಸ್‍ ತನಿಖೆಗೆ ಆಗ್ರಹಿಸಿತು.

ಈ ಸಂದರ್ಭದಲ್ಲಿ ಸಚಿವ ಅಶ್ವತ್ಥ ನಾರಾಯಣ ಅವರು ಸ್ಪಷ್ಟೀಕರಣ ಕೊಟ್ಟರೂ ಸಹ ಧರಣಿ ಮುಂದುವರಿಸಿದ ಜೆಡಿಎಸ್‍ ಸದಸ್ಯರು, ಸಚಿವರ ರಾಜೀನಾಮೆಗೆ ಹಾಗೂ ತನಿಖೆಗೆ ಪಟ್ಟುಹಿಡಿದರು. ಆದರೆ, ಇದಕ್ಕೆ ಸರ್ಕಾರ ಮಣಿಯಲಿಲ್ಲ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು, ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಕುರಿತು ಸದನದಲ್ಲಿ ಮಾತನಾಡಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಸಿದ್ದತೆ ಮಾಡಿಕೊಂಡಿದ್ದರು. ಆದರೆ, ಜೆಡಿಎಸ್‍ ಧರಣಿಯಿಂದ ಕಾಂಗ್ರೆಸ್​ಗೆ ಹಿನ್ನಡೆಯಾಯಿತು. ಇದು ಒಂದು ರೀತಿಯಲ್ಲಿ ಬಿಜೆಪಿಗೆ ಅನುಕೂಲವೇ ಆಯಿತು.

ಕರ್ನಾಟಕದಲ್ಲಿ ಐಟಿ ಮತ್ತು ಇಡಿ ಚುರುಕು: ಮುಂದಿನ ದಿನಗಳಲ್ಲಿ ಐಟಿ, ಇಡಿಯಂತಹ ತನಿಖಾ ಸಂಸ್ಥೆಗಳು ಕರ್ನಾಟಕದಲ್ಲಿ ತುಂಬ ಚುರುಕಾಗಲಿವೆ. ಅವುಗಳ ಹಸ್ತ ಕಾಂಗ್ರೆಸ್ ಪಕ್ಷದ ಹಲವು ನಾಯಕರಗೆ ಕಂಟಕವಾಗುತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಹೀಗೆ ಅವು ಚುರುಕಾಗದೇ ಇದ್ದರೆ ಬಸವರಾಜ ಬೊಮ್ಮಾಯಿ ಹೇಳಿದ್ದು ನಿಜವಾಗುವುದು ಹೇಗೆ?. ಹೀಗಾಗಿ ಅವರ ಮಾತು ಮುಂದಿನ ವಿಧಾನಸಭಾ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಸಂಘರ್ಷ ನಡೆಯುವುದು ನಿಶ್ಚಿತ ಎಂಬುದನ್ನು ಸಂಕೇತಿಸುತ್ತಿದೆ.

ಇದನ್ನೇ ಜನಸ್ಪಂದನ ಸಮಾವೇಶದಲ್ಲಿ ಸಿಎಂ ಸೂಚ್ಯವಾಗಿ ಹೇಳಿದರು. ಅಂದರೆ, ಕರ್ನಾಟಕದಲ್ಲಿ ವೇಗವಾಗಿ ಓಡುತ್ತಿರುವ ಕಾಂಗ್ರೆಸ್​ನ ಅಶ್ವಮೇಧದ ಕುದುರೆಯನ್ನು ಹೇಗೆ ತಡೆಯಬೇಕು ಎಂಬ ಬಗ್ಗೆ ಬಿಜೆಪಿ ತಂತ್ರ ರೂಪಿಸುತ್ತಿದೆ. ಇದು ಗೊತ್ತಿರುವುದರಿಂದಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀರಾವೇಶ ಪ್ರದರ್ಶಿಸಿದ್ದಾರೆ.

ಕಾಂಗ್ರೆಸ್​ ಫೈನಾನ್ಸ್ ಕಿಂಗ್​ಗಳ ಮೇಲೆ ಕಣ್ಣು: ಕಾಂಗ್ರೆಸ್​ನವರ ಹಣಕಾಸು ಪಾಳೇಪಟ್ಟುಗಳ ಮೇಲೆ ಕಣ್ಣಿಡುವ ಬಿಜೆಪಿಯ ಪ್ರಯತ್ನ ಹೊಸತೇನಲ್ಲ. 2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇದೇ ತಂತ್ರಗಾರಿಕೆ ಬಳಸಿ ಕಾಂಗ್ರೆಸ್​ನ್ನು ಕಟ್ಟಿ ಹಾಕುವುದರಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.

2018ರಲ್ಲಿ ಚುನಾವಣಾ ರಣಾಂಗಣಕ್ಕಿಳಿದ ಕಾಂಗ್ರೆಸ್ ಮುಂದೆ ಸಿದ್ಧರಾಮಯ್ಯ ಉಪಸ್ಥಿತಿ ಇತ್ತು. ಹಾಗೆ ನೋಡಿದರೆ ಅವತ್ತು ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನ ವಿರೋಧಿ ಅಲೆ ಏನೂ ಇರಲಿಲ್ಲ. ಅನ್ನಭಾಗ್ಯದಿಂದ ಹಿಡಿದು ಹಲವು ಕಾರ್ಯಕ್ರಮಗಳು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಶಕ್ತಿಯನ್ನು ಉಳಿಸಿದ್ದವು.

ಇದನ್ನೂ ಓದಿ: ತಾಕತ್ತಿದ್ದರೆ ನಮ್ಮ ಗೆಲುವು ತಡೆಯಿರಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಕಾಂಗ್ರೆಸ್​​ಗೆ ಸಿಎಂ ಸವಾಲು

ಅದೇ ರೀತಿ ಬಿಜೆಪಿಗೆ ಬಿ.ಎಸ್. ಯಡಿಯೂರಪ್ಪ ಅವರ ಜಾತಿ ಆಧರಿತ ರಣತಂತ್ರವೇ ಮುಖ್ಯ ಆಸರೆಯಾಗಿತ್ತು. ನರೇಂದ್ರ ಮೋದಿ ಅಲೆ ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರಿದ್ದು ನಿಜವಾದರೂ ವಿಧಾನಸಭಾ ಚುನಾವಣೆಗಳಲ್ಲಿ ಆ ಅಲೆ ಬಲೆಯಾಗಿ ಕೆಲಸ ಮಾಡುವುದಿಲ್ಲವೆಂದು ಎಲ್ಲರಿಗೂ ಗೊತ್ತಿತ್ತು. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ತಂಡದ ಹಲವು ಫೈನಾನ್ಸ್ ಕಿಂಗ್​ಗಳನ್ನು ಬಿಜೆಪಿ ಕಟ್ಟಿ ಹಾಕಿತು. ಪರಿಣಾಮ ಚುನಾವಣೆಯ ಸಂದರ್ಭದಲ್ಲಿ ಹಲವು ಕ್ಷೇತ್ರಗಳಿಗೆ ತಾವು ಬಯಸಿದಂತೆ ಹಣಕಾಸಿನ ನೆರವು ನೀಡಲು ಸಿದ್ಧರಾಮಯ್ಯ ಅವರಿಗೆ ಸಾಧ್ಯವಾಗಲಿಲ್ಲ.

ಹೀಗಾಗಿ ಸ್ವಲ್ಪೇ ಸ್ವಲ್ಪ ಶಕ್ತಿ ತುಂಬಿದರೂ ಗೆಲ್ಲಬಹುದಾಗಿದ್ದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮಕಾಡೆ ಮಲಗಿತು. 2018ರ ಚುನಾವಣೆಯಲ್ಲಿ ಪಕ್ಷ ಕನಿಷ್ಠ 120 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎಂಬ ಲೆಕ್ಕಾಚಾರ ಸಿದ್ಧರಾಯಮಯ್ಯ ಅವರಿಗಿತ್ತು. ಆದರೆ, ಅವರ ಲೆಕ್ಕಾಚಾರಕ್ಕೆ ಕೊನೆಯ ಘಳಿಗೆಯಲ್ಲಿ ಅವರ ಜೊತೆಗಿದ್ದ ಫೈನಾನ್ಸ್ ಕಿಂಗ್​​​​​ಗಳು ಸ್ಪಂದಿಸಲಿಲ್ಲ. ಅವರು ಸ್ಪಂದಿಸದಂತೆ ಬಿಜೆಪಿ ವರಿಷ್ಠರು ನೋಡಿಕೊಂಡರು ಎಂಬುದು ರಹಸ್ಯವಾದ ಸಂಗತಿಯಲ್ಲ.

ಲೋಕಾಯುಕ್ತ ಮರು ಜೀವದ ಲೆಕ್ಕಾಚಾರ: ಕೆಲ ದಿನಗಳ ಹಿಂದೆ ನಡೆದ ಬಿಜೆಪಿ ಪ್ರಮುಖರ ಸಭೆ ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದು, ಈಗ ಗುಟ್ಟಾಗಿ ಉಳಿದಿಲ್ಲ. ಅದು ಅರ್ಕಾವತಿ ಬಡಾವಣೆಗೆ ಸಂಬಂಧಿಸಿದ ರೀಡೂ ಇರಬಹುದು. ಸೋಲಾರ್ ಪವರ್ ಡೀಲ್ ಆರೋಪವೇ ಇರಬಹುದು. ಒಟ್ಟಿನಲ್ಲಿ ಸಿದ್ದರಾಮಯ್ಯ ಕಾಲದ ಹಲವು ಮಣ್ಣಾಗಿರುವ ಹಗರಣಗಳು ಮೇಲೇಳಲಿವೆ. ಬಸವರಾಜ ಬೊಮ್ಮಾಯಿ ಸರ್ಕಾರ ಎಸಿಬಿಯನ್ನು ರದ್ದುಗೊಳಿಸಿ ಲೋಕಾಯುಕ್ತವನ್ನು ಎಬ್ಬಿಸಿ ಕೂರಿಸಿರುವುದಕ್ಕೆ ಇಂತಹ ಲೆಕ್ಕಾಚಾರವೇ ಕಾರಣ ಎನ್ನಲಾಗುತ್ತಿದೆ.

ಬಿಜೆಪಿ ನಾಯಕರ ರಣತಂತ್ರದ ನೇರ ಪರಿಣಾಮವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎದುರಿಸಲಿದ್ದಾರೆ. ಯಡಿಯೂರಪ್ಪ ಎಪಿಸೋಡಿನ ನಂತರ ಬಿಜೆಪಿ ವರಿಷ್ಠರಿಗೆ ಮನದಟ್ಟಾಗಿರುವ ಸಂಗತಿ ಎಂದರೆ ಪ್ರಬಲ ಲಿಂಗಾಯತ ಸಮುದಾಯ ತನಗೆ ಶಾಕ್ ನೀಡಲಿದೆ ಎಂಬುದು.

ಒಕ್ಕಲಿಗ ಮತ ಬ್ಯಾಂಕ್​ ಮೇಲೆ ಬಿಜೆಪಿ ದೃಷ್ಟಿ: ಯಡಿಯೂರಪ್ಪ ಅವರಿಗೆ ಕೇಂದ್ರ ಸಂಸದೀಯ ಮಂಡಳಿಯಲ್ಲಿ ನಾವು ಜಾಗ ನೀಡಿರಬಹುದು ಅಥವಾ ಬೇರೆ ವಿಧಾನಗಳಿಂದ ಪಕ್ಷ ತೊರೆಯದಂತೆ ಕಟ್ಟಿ ಹಾಕಿರಬಹುದು. ಅದರಿಂದ ಯಡಿಯೂರಪ್ಪ ಕೂಡಾ ಮೌನವಾಗಿರಬಹುದು. ಆದರೆ ಲಿಂಗಾಯತ ಮತದಾರರು ಮೌನವಾಗಿರಬೇಕೆಂದಿಲ್ಲ ಎಂಬುದು ಬಿಜೆಪಿ ನಾಯಕರಿಗೆ ಗೊತ್ತಾಗಿದೆ. ಪರಿಸ್ಥಿತಿ ಹೀಗಿದ್ದಾಗ ಆ ಮತ ಬ್ಯಾಂಕ್​ನ ಮೂಲಕ ಆಗುವ ಕೊರತೆಯನ್ನು ಬೇರೆ ಮೂಲಗಳಿಂದ ಭರ್ತಿ ಮಾಡಿಕೊಳ್ಳಬೇಕಲ್ಲ?. ಇದಕ್ಕಾಗಿ ಬಿಜೆಪಿ ಒಕ್ಕಲಿಗ ಮತಬ್ಯಾಂಕ್​ನ ಮೇಲೆ ಹೆಚ್ಚು ಗಮನ ಹರಿಸಲು ನಿರ್ಧರಿಸಿದೆ.

ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೇರಲು ಬಿಡಲ್ಲ, 150 + ಸ್ಥಾನದೊಂದಿಗೆ ಮತ್ತೆ ನಮ್ದೆ ಸರ್ಕಾರ: ಯಡಿಯೂರಪ್ಪ

ಒಕ್ಕಲಿಗ ಮತ ಬ್ಯಾಂಕ್​ನ ಮೇಜರ್ ಷೇರು ಜೆಡಿಎಸ್ ಜೊತೆ ಇರಬಹುದು. ಆದರೆ, ಜೆಡಿಎಸ್ ಅನ್ನು ವಿರೋಧಿಸುವ ಒಂದು ಬಣ ಇದ್ದೇ ಇರುತ್ತದಲ್ಲ?. ಅದು ಸದ್ಯಕ್ಕೆ ಡಿಕೆ ಶಿವಕುಮಾರ್ ಬೆನ್ನಿಗೆ ನಿಂತಿದೆ. ಹೀಗೆ ನಿಂತ ಮತ ಬ್ಯಾಂಕ್​ನ್ನು ವಶಪಡಿಸಿಕೊಳ್ಳುವುದು ಬಿಜೆಪಿ ಲೆಕ್ಕಾಚಾರ. ಅದು ಸಾಧ್ಯವಾಗಬೇಕು ಎಂದರೆ ಡಿಕೆಶಿ ಚಕ್ರವ್ಯೂಹಕ್ಕೆ ಸಿಲುಕುವಂತೆ ನೋಡಿಕೊಳ್ಳಬೇಕು. ಅದು ಸಾಧ್ಯವಾದರೆ, ಸಹಜವಾಗಿಯೇ ಡಿಕೆಶಿ ಬಲ ಕುಂದುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರ.

ಇದರ ಪರಿಣಾಮವಾಗಿ ಜೆಡಿಎಸ್ ವಿರುದ್ಧ ಪ್ರಬಲವಾಗಿ ನಿಲ್ಲಬಲ್ಲ ಮತ್ತೊಂದು ಶಕ್ತಿಯ ಕಡೆ ನಿಲ್ಲಲು ಅದು ಸಜ್ಜಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಣೋತ್ಸಾಹ ತೋರಿಸುತ್ತಿರುವುದಕ್ಕೆ ಇಂತಹ ಲೆಕ್ಕಾಚಾರಗಳೇ‌ ಕಾರಣ ಎಂಬುದು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ. ಒಟ್ಟಾರೆ, ಇದೆಲ್ಲವೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಕಾದುನೋಡಬೇಕು.

ಇದನ್ನೂ ಓದಿ: ನಮ್ಮ ಸಂಘಟನೆ ಪ್ರಶ್ನೆ ಮಾಡಿದವರಿಗೆ ಜನಸ್ಪಂದನ ಕಾರ್ಯಕ್ರಮವೇ ಉತ್ತರ: ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.