ETV Bharat / state

ಕಾಂಗ್ರೆಸ್ ಅಧಿಕಾರಕ್ಕೇರಲು ಬಿಡಲ್ಲ, 150 + ಸ್ಥಾನದೊಂದಿಗೆ ಮತ್ತೆ ನಮ್ದೆ ಸರ್ಕಾರ: ಯಡಿಯೂರಪ್ಪ

author img

By

Published : Sep 10, 2022, 4:20 PM IST

Updated : Sep 10, 2022, 5:08 PM IST

ಯಡಿಯೂರಪ್ಪ
ಯಡಿಯೂರಪ್ಪ

ಜನಸ್ಪಂದನ ಸಮಾವೇಶ: 150 ಶಾಸಕರ ಗೆಲ್ಲಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಗೆಲ್ಲಲು ಬಿಡಲ್ಲ. ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಕಾಂಗ್ರೆಸ್​ಗೆ ಯಡಿಯೂರಪ್ಪ ಟಾಂಗ್ ನೀಡಿದರು.

ಬೆಂಗಳೂರು: ರಾಜ್ಯದಲ್ಲಿ ಯಾವ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೇರಲು ಬಿಡಲ್ಲ, ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತಂದು ಪ್ರಧಾನಿ ಮೋದಿ ಕನಸು ನನಸು ಮಾಡಲಿದ್ದೇವೆ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಬಿಜೆಪಿ ಶಕ್ತಿಯುತವಾಗಿ ಬೆಳೆಯದ ಸಂದರ್ಭದಲ್ಲಿ ಸುಧಾಕರ್ ಮತ್ತು ಇತರ ನಾಯಕರ ಕಾರಣದಿಂದ ಲಕ್ಷಾಂತರ ಜನ ಸೇರಿದ್ದಾರೆ. ಇವರೆಲ್ಲರ ಪರಿಶ್ರಮದಿಂದ ಈ ಭಾಗದಲ್ಲಿ ಹೆಚ್ಚಿನ ಶಾಸಕರು ಗೆದ್ದು,‌ 150 + ಶಾಸಕರ ಗೆದ್ದು ಮತ್ತೆ ಸರ್ಕಾರ ರಚನೆಯ ವಿಶ್ವಾಸ ವ್ಯಕ್ತಪಡಿಸಿದರು.

ನೇಕಾರರು ಮತ್ತು ರೈತರು ನಮ್ಮ ಪಕ್ಷಕ್ಕೆ ಎರಡು ಕಣ್ಣುಗಳಿದ್ದಂತೆ. ನಾನು ಅಧಿಕಾರದಲ್ಲಿದ್ದಾಗ ನೇಕಾರ, ರೈತರ ಸಾಲ ಮನ್ನ ಮಾಡಿದ್ದೆ, ನನ್ನ ಜೀವನದ ಸಾಕಷ್ಟು ಸಮಯ ರೈತರಿಗಾಗಿ ಮೀಸಲಿಟ್ಟಿದ್ದೆ, ನಾವು ರೈತರಿಗೆ ಕೊಟ್ಟಷ್ಟು ಯೋಜನೆ ಬೇರೆ ಯಾವ ರಾಜ್ಯದಲ್ಲಿಯೂ ಕೊಟ್ಟಿಲ್ಲ, ಕಿಸಾನ್ ಸಮ್ಮಾನ್ ಅಡಿ ಕೇಂದ್ರ 6 ನಾವು 4 ಸಾವಿರ ಸೇರಿ ಹತ್ತು ಸಾವಿರ ಕೊಡುತ್ತಿದ್ದೇವೆ ಎಂದರು.

ರಾಹುಲ್ ಗಾಂಧಿ ಇಂದು ಬಡತನದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅವರ ಕುಟುಂಬದ ಮೂವರು ಪ್ರಧಾನಿ ಆದರು. ಆದರೆ, ಬಡತನ ಹೋಯಿತಾ? ಆದರೆ ಮೋದಿ ಬಂದ ನಂತರ ರೈತರು ನೆಮ್ಮದಿಯಾಗಿ ಬದುಕುವಂತೆ ಮಾಡಿದ್ದೇವೆ. ಬೋಟ್​​ನಲ್ಲಿ ಓಡಾಡುವ ಸ್ಥಿತಿ ಬಂತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬೋಟ್​​ನಲ್ಲಿ ಓಡಾಡೋ ಸ್ಥಿತಿ ಎಂದರೆ ಯಾವ ಪರಿ ಮಳೆ ಬಂತು ಎಂದು ಗೊತ್ತಿಲ್ಲವೇ? ಅಧಿವೇಶನದಲ್ಲಿ ಇದಕ್ಕೆಲ್ಲಾ ತಕ್ಕ ಉತ್ತರ ನೀಡಲಿದ್ದೇವೆ ಎಂದು ತಿಳಿಸಿದರು.

ಯಡಿಯೂರಪ್ಪ ಭಾಷಣ

ಹಣ ಹೆಂಡ, ತೋಳ್ಬಲ, ಅಧಿಕಾರ ಬಲದಿಂದ ಜಾತಿಯ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ. ಸ್ವಾಭಿಮಾನದಿಂದ ಬಾಳಿ ಬದುಕುವ ವ್ಯವಸ್ಥೆ ಮೋದಿ ಮಾಡಿದ್ದಾರೆ. ಮೋದಿ ಪ್ರಧಾನಿ ಆಗಿರುವವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದಿದ್ದೆ, ಈಗಲೂ ಹೇಳುತ್ತಿದ್ದೇನೆ. ಕರ್ನಾಟಕದಲ್ಲಿ ನೀವು ಅಧಿಕಾರಕ್ಕೆ ಬರಲು ಬಿಡಲ್ಲ,‌ 150 ಸ್ಥಾನ ಗೆದ್ದು ಮೋದಿ ಕನಸು ನನಸು ಮಾಡಲಿದ್ದೇವೆ ಎಂದರು.

ಕಾಂಗ್ರೆಸ್​ಗೆ ಯಡಿಯೂರಪ್ಪ ಟಾಂಗ್: ನಮಗೆ ಶಕ್ತಿ ಇಲ್ಲದ ಕಡೆಯೇ ಇಂತಹ ಜನಬೆಂಬಲ ಸಿಕ್ಕಿದೆ, ನಮ್ಮ ಶಕ್ತಿ ಇರುವ ಕಡೆ ಸಮಾವೇಶ ಮಾಡಿದರೆ ಅಲ್ಲಿ ಹೇಗೆ ಆಗಬಹುದು, ನಮ್ಮ ಬಲ ಏನು, ಶಕ್ತಿ ಏನು ಎಂದು ಮತ್ತಷ್ಟು ಸಮಾವೇಶದ ಮೂಲಕ ತೋರಿಸಲಿದ್ದೇವೆ ಎಂದು ಕಾಂಗ್ರೆಸ್​​ಗೆ ಟಾಂಗ್ ನೀಡಿದರು.

ನಿಮ್ಮ ನಂಬಿಕೆ ವಿಶ್ವಾಸಕ್ಕೆ ಧಕ್ಕೆ ತರುವ ಕೆಲಸ ಮಾಡಲ್ಲ. ರೈತರು, ನೇಕಾರರ ನೆಮ್ಮದಿ ಬದುಕಿಗಾಗಿ ಬಿಜೆಪಿ ಶಾಸಕರ ಆಯ್ಕೆ ಮಾಡಿ, ನಿಮ್ಮ ಸೇವೆ ಮಾಡುವ ಅವಕಾಶ ಮತ್ತೊಮ್ಮೆ ಕಲ್ಪಿಸಿ, ರಾಜ್ಯದ ಉದ್ದಗಲ ಪ್ರವಾಸ ಮಾಡಲಿದ್ದೇವೆ, ನಮಗೆ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಭಾರತ್ ಜೋಡೋ ಬಗ್ಗೆ ರಾಮುಲು ವ್ಯಂಗ್ಯ.. ದೇಶ ವಿಭಜನೆ ಮಾಡಿದ ಕುಟುಂಬದ ರಾಹುಲ್ ಗಾಂಧಿ ಇದೀಗ ಭಾರತ್ ಜೋಡೋ ಎಂದು ಹೊರಟಿರುವುದು ಹಾಸ್ಯಾಸ್ಪದವಾಗಿದೆ. ಭಾರತ್ ಜೋಡೋಗೂ ಮೊದಲು ಕಾಂಗ್ರೆಸ್ ನಾಯಕರ ಜೋಡೋ ಮಾಡಲಿ ಎಂದು ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ೠ

ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಮೋದಿ ಕಾರ್ಯಕ್ರಮಕ್ಕೆ ಜನ ಸ್ವಯಂ ಪ್ರೇರಣೆಯಿಂದ ಬಂದಿದ್ದರು. ಅದಕ್ಕೂ ಇವರು ಟೀಕೆ ಮಾಡಿದ್ದಾರೆ. ಆದರೆ, ಮೋದಿ ಒಂದೇ ಜಾತಿ, ಧರ್ಮದ ನಾಯಕರಲ್ಲ, ಇಡೀ ದೇಶದ ಜನರಿಗೆ ಮೋದಿ ನಾಯಕರಾಗಿದ್ದಾರೆ. ಹಾಗಾಗಿ ಅವರ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು ಎಂದರು.

ಈಗ ರಾಹುಲ್ ಗಾಂಧಿ ಭಾರತ್ ಜೋಡೋ ಮಾಡುತ್ತಿದ್ದಾರೆ, ಇವರೆಲ್ಲಾ ಅಧಿಕಾರದಲ್ಲಿದ್ದಾಗ ದೇಶ ಇಬ್ಭಾಗ, ಧರ್ಮ ವಿಭಜನೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಈಗ ಭಾರತ್ ಜೋಡೋ ಎನ್ನುತ್ತಿದ್ದಾರೆ. ಸ್ವಾತಂತ್ರ್ಯ ಬಂದ ವೇಳೆ ನೆಹರೂ ಸ್ವಾರ್ಥಕ್ಕಾಗಿ ದೇಶವನ್ನು ಒಡೆದರು. ಇಂದು ಅವರ ಕುಟುಂಬದ ಕುಡಿಯಾಗಿರುವ ರಾಹುಲ್ ಭಾರತ್ ಜೋಡೋ ಮಾಡಲು ಹೊರಟಿದ್ದಾರೆ. ಮೊದಲು ನಿಮ್ಮ ನಾಯಕರ ಜೋಡಿಸುವ ಕೆಲಸ ಮಾಡಿ ಎಂದು ವ್ಯಂಗ್ಯವಾಡಿದರು.

(ಇದನ್ನೂ ಓದಿ: ಬಿಟ್ಟಿ ಹಣದಲ್ಲಿ ಜನಸ್ಪಂದನ ಕಾರ್ಯಕ್ರಮ: ಬಿಜೆಪಿ ವಿರುದ್ದ ಸಿದ್ದರಾಮಯ್ಯ ಕಿಡಿ)

Last Updated :Sep 10, 2022, 5:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.