ಬೆಂಗಳೂರು : ಇಸ್ಕಾನ್ ದೇಗುಲದಲ್ಲಿ ಇಂದು ಹರೇಕೃಷ್ಣ ಗಿರಿಯಲ್ಲಿ ಕೊರೊನಾ ಸಾಂಕ್ರಾಮಿಕದ ನಿರ್ಬಂಧಗಳ ನಡುವೆಯೂ, ಶ್ರದ್ಧಾಭಕ್ತಿಯಿಂದ ವಿಜಯದಶಮಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಬಲರಾಮ ದೇವರಿಗೆ ರಾಮ-ಲಕ್ಷ್ಮಣರ ಅಲಂಕಾರ ಮಾಡಲಾಗಿತ್ತು ಮತ್ತು ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಇಂದು ಸಂಜೆ ಶ್ರೀ ರಾಮ ತಾರಕ ಯಜ್ಞ ಹಾಗೂ ಶ್ರೀ ರಾಮ ಕೀರ್ತನೆಗಳನ್ನು ಮಾಡಲಾಯಿತು. ಇಸ್ಕಾನ್ ಉಪಾಧ್ಯಕ್ಷರಾದ ಶ್ರೀ ಚಂಚಲಾಪತಿ ದಾಸರು ವಿಜಯದಶಮಿ ಹಬ್ಬದ ಕುರಿತು ಪ್ರವಚನ ಮಾಡಿದರು. ಹಬ್ಬದ ಸಂಭ್ರಮಾಚರಣೆಗಳ ಅಂತ್ಯದ ವೇಳೆಗೆ ರಾವಣ ಹಾಗೂ ಕುಂಭಕರ್ಣರ 9 ಅಡಿ ಉದ್ದದ ಪ್ರತಿಕೃತಿಗಳನ್ನು ದಹಿಸುವ ಮೂಲಕ ಈ ದಿನದಂದು ಶ್ರೀರಾಮಚಂದ್ರ ವಿಜಯವನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸರ್ಕಾರ ಸೂಚಿಸಿರುವ ಮುನ್ನೆಚ್ಚರಿಕೆಗಳು ಹಾಗೂ ಮಾರ್ಗಸೂಚಿಗಳನ್ನು ಹಬ್ಬದ ಆಚರಣೆ ವೇಳೆ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಯಿತು. ಇಡೀ ಕಾರ್ಯಕ್ರಮವನ್ನು ಯೂಟ್ಯೂಬ್ನಲ್ಲಿರುವ ದೇವಸ್ಥಾನದ ಅಧಿಕೃತ ಚಾನೆಲ್ ಹಾಗೂ ಫೇಸ್ಬುಕ್ನಲ್ಲಿ ನೇರ ಪ್ರಸಾರ ಮಾಡಲಾಯಿತು.