ETV Bharat / state

ಕರ್ನಾಟಕ ಚುನಾವಣೆಯಲ್ಲಿ ಸಂಪೂರ್ಣವಾಗಿ ಹೊಸ‌ ಮತಯಂತ್ರಗಳ ಬಳಕೆ: ಮನೋಜ್ ಕುಮಾರ್ ಮೀನಾ

author img

By

Published : Mar 29, 2023, 4:19 PM IST

use-of-completely-new-voting-machines-in-karnataka-elections
ಕರ್ನಾಟಕ ಚುನಾವಣೆಯಲ್ಲಿ ಸಂಪೂರ್ಣವಾಗಿ ಹೊಸ‌ ಮತಯಂತ್ರಗಳ ಬಳಕೆ: ಮನೋಜ್ ಕುಮಾರ್ ಮೀನಾ

ರಾಜಕೀಯ ಪಕ್ಷಗಳು ಬಿಜೆಪಿ ಪಕ್ಷ ಗೆದ್ದ ರಾಜ್ಯಗಳಲ್ಲಿ ಬಳಸಿದ ಇವಿಎಂಗಳನ್ನು ರಾಜ್ಯದಲ್ಲಿ ಬಳಸದಂತೆ ಮನವಿ ಮಾಡಿದ್ದರು. ಅದರಂತೆ ರಾಜ್ಯದ ಚುನಾವಣೆಯಲ್ಲಿ ಹೊಸದಾಗಿ ಉತ್ಪಾದಿಸಲ್ಪಟ್ಟ ಮತಯಂತ್ರಗಳನ್ನೇ ಬಳಸಲು ಚುನಾವಣಾ ಆಯೋಗ ನಿರ್ಧರಿಸಿದೆ ಎಂದು ಹೇಳಿದರು.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ರಾಜ್ಯದಲ್ಲಿ ಹೊಸ ಮತಯಂತ್ರಗಳನ್ನು ಬಳಕೆ ಮಾಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದರು.

ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ‘‘ಹೈದರಾಬಾದ್ ಮೂಲದ ಸಂಸ್ಥೆ ಹೊಸದಾಗಿ ತಯಾರು ಮಾಡಿದ ಮತಯಂತ್ರಗಳನ್ನು ಮೇ 10ರಂದು ನಡೆಯಲಿರುವ ಮತದಾನದಲ್ಲಿ ಬಳಸಲಾಗುವುದು. ಎಲ್ಲಾ ಮತಯಂತ್ರಗಳು ಹೊಸದಾಗಿರಲಿದೆ. ಒಟ್ಟು ಬ್ಯಾಲೆಟ್ ಯನಿಟ್ 1,15,709, ಕಂಟ್ರೋಲ್ ಯುನಿಟ್ 82,543, ವಿವಿಪ್ಯಾಟ್ 89,379 ಬಳಸಲಾಗುವುದು ಎಂದು ವಿವರಿಸಿದರು.

ರಾಜಕೀಯ ಪಕ್ಷಗಳು ಇತರ ರಾಜ್ಯಗಳಲ್ಲಿ ಬಳಸಿದ ಮತಯಂತ್ರಗಳನ್ನು ರಾಜ್ಯ ಚುನಾವಣೆಯಲ್ಲಿ ಉಪಯೋಗಿಸದಂತೆ ಚುನಾವಣಾ ಆಯೋಗ ಆಯುಕ್ತರಿಗೆ ಮನವಿ ಮಾಡಿದ್ದರು. ಅದರಲ್ಲೂ ಬಿಜೆಪಿ ಗೆದ್ದ ರಾಜ್ಯಗಳಲ್ಲಿ ಬಳಸಿದ ಇವಿಎಂಗಳನ್ನು ರಾಜ್ಯದಲ್ಲಿ ಬಳಸದಂತೆ ಮನವಿ ಮಾಡಿದ್ದರು. ಅದರಂತೆ ಇದೀಗ ರಾಜ್ಯದ ಚುನಾವಣೆಯಲ್ಲಿ ಹೊಸದಾಗಿ ಉತ್ಪಾದಿಸಲ್ಪಟ್ಟ ಮತಯಂತ್ರಗಳನ್ನೇ ಬಳಸಲು ಚುನಾವಣಾ ಆಯೋಗ ನಿರ್ಧರಿಸಿದೆ.

ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿ: ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು. ಈ ಸಂಬಂಧ 2,040 ಫ್ಲೈಯಿಂಗ್ ಸ್ಕ್ವೇಡ್, 2605 ಸ್ಟಾಟಿಕ್ ಪರಿವೀಕ್ಷಣಾ ತಂಡ, 266 ವಿಡಿಯೋ ವೀಕ್ಷಣಾ ತಂಡ, 631 ವಿಡಿಯೋ ಪರಿವೀಕ್ಷಣಾ ತಂಡ ರಚಿಸಲಾಗಿದೆ ಎಂದರು. ಒಟ್ಟು 942 ಚೆಕ್​ ಪೋಸ್ಟ್ ಸ್ಥಾಪಿಸಲಾಗಿದೆ. ಈ ಪೈಕಿ 171 ಅಂತರ ರಾಜ್ಯ ಗಡಿ ಚೆಕ್ ಪೋಸ್ಟ್​ಗಳು ಸ್ಥಾಪನೆಯಾಗಿವೆ ಎಂದು ಇದೇ ವೇಳೆ ವಿವರಿಸಿದರು.

ಅಕ್ರಮ ಮದ್ಯ, ನಗದು ಜಪ್ತಿ ಎಷ್ಟು?: ಒಟ್ಟು ಒಂದು ವಾರದಲ್ಲಿ 57.72 ಕೋಟಿ ರೂ. ಮೌಲ್ಯದ ಮದ್ಯ, ನಗದು, ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು. ಪೊಲೀಸ್ ಇಲಾಖೆ ವಶಪಡಿಸಿದ ಅಕ್ರಮ ನಗದು, ಮದ್ಯ, ಇತರೆ ವಸ್ತುಗಳ ಮೌಲ್ಯ 34.36 ಕೋಟಿ ರೂ., ಈ ಪೈಕಿ ನಗದು 14.24 ಕೋಟಿ, ಡ್ರಗ್ಸ್ ಮೌಲ್ಯ 530 ಗ್ರಾಂ, 15 ಕೆಜಿ ಚಿನ್ನ, 135 ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ ಎಂದರು.

ಅಬಕಾರಿ ಇಲಾಖೆ ಒಟ್ಟು 1.16 ಕೋಟಿ ಮೌಲ್ಯದ ಮದ್ಯ ವಶಕ್ಕೆ ಪಡೆದಿದೆ. ವಾಣಿಜ್ಯ ಇಲಾಖೆಯಿಂದ 5.2 ಕೋಟಿ ರೂ. ಒಟ್ಟು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಒಟ್ಟು ದಾಖಲಾದ ಎಫ್ಐಆರ್ 1,985. ಈ ಪೈಕಿ ಅಕ್ರಮ ನಗದು ವಹಿವಾಟು ಸಂಬಂಧ 196 ಎಫ್​ಐಆರ್ ದಾಖಲು ಮಾಡಲಾಗಿದೆ. ಮದ್ಯ ಸರಬರಾಜು ಸಂಬಂಧ 406 ಎಫ್ಐಆರ್ ದಾಖಲಾಗಿದ್ದರೆ, ಡ್ರಗ್ಸ್ ಸಂಬಂಧ 179 ಎಫ್ಐಆರ್ ದಾಖಲಾಗಿದೆ. ಅಭ್ಯರ್ಥಿಗಳ ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಲು ಒಟ್ಟು 234 ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

ಪತ್ರಕರ್ತರಿಗೆ ಅಂಚೆ ಮತದಾನದ ಅವಕಾಶ: ಮೊದಲ ಬಾರಿಗೆ ಮಾನ್ಯತೆ ಪಡೆದ ಪತ್ರಕರ್ತರಿಗೆ ಅಂಚೆ ಮತದಾನ ಮಾಡಲು ಅವಕಾಶ ನೀಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ವಾರ್ತಾ ಇಲಾಖೆಯಿಂದ ಈ ಕುರಿತಾದ ಪಟ್ಟಿಯನ್ನು ಚುನಾವಣಾ ಆಯೋಗ ಪಡೆಯಲಿದೆ. ಪಟ್ಟಿಯಲ್ಲಿ ಹೆಸರು ಇರುವ ಪತ್ರಕರ್ತರಿಗೆ ಚುನಾವಣಾ ದಿನಾಂಕದ ಮೊದಲು ಅಂಚೆ ಮತದಾನ ಮಾಡಲು ಅವಕಾಶ ಇದೆ ಎಂದರು.

80 ಮೇಲ್ಪಟ್ಟ ಹಾಗೂ ದಿವ್ಯಾಂಗರಿಗೆ ಅಂಚೆ ಮತದಾನ: 80 ವರ್ಷ ಮೇಲ್ಪಟ್ಟ ವೃದ್ಧರು ಹಾಗೂ ದಿವ್ಯಾಂಗರಿಗೆ ಮನೆಯಿಂದಲೇ ಮತ ಹಾಕಲು ಅವಕಾಶ ಕಲ್ಪಿಸಲಾಗಿದೆ. ಅಂತವರು 12ಡಿ ಅಡಿ ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿಲ್ 13ರ ಅಧಿಸೂಚನೆ ಹೊರಡಸಿದ ಬಳಿಕ ಚುನಾವಣಾ ದಿನಾಂಕದ ಐದು ದಿನಗಳ ಒಳಗೆ 12ಡಿಯಲ್ಲಿ ಅಸಮಾರ್ಥ್ಯದ ಪ್ರಮಾಣ ಪತ್ರದೊಂದಿಗೆ ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.

ಚುನಾವಣಾ ಅಧಿಕಾರಿಗಳ ತಂಡ ಅರ್ಜಿ ಪರಿಶೀಲಿಸಲಿದ್ದಾರೆ.‌ ಮನೆಗೆ ಹೋಗಿ ಅವರು ಅರ್ಹರೇ ಪರಿಶೀಲಿಸುತ್ತಾರೆ. ತದ ನಂತರ ಮತದಾನಕ್ಕೆ ಅವಕಾಶ ಕಲ್ಪಿಸುತ್ತೇವೆ. ಇಬ್ಬರು ಮತಗಟ್ಡೆ ಅಧಿಕಾರಿಗಳು, ವಿಡಿಯೋ ಗ್ರಾಫರ್, ಭದ್ರತಾ ಸಿಬ್ಬಂದಿ ಮತದಾರನ‌ ಮನೆಗೆ ತೆರಳಿ ಮತವನ್ನ ಗೌಪ್ಯವಾಗಿ ಅಂಚೆ ಮತಪತ್ರದಲ್ಲಿ ಸಂಗ್ರಹಿಸಲಾಗುವುದು ಎಂದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ಕ್ಕೆ ಮತದಾನ, 13ಕ್ಕೆ ಫಲಿತಾಂಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.