ETV Bharat / state

ವಿಧಾನಸಭೆಯಲ್ಲಿ ಎಸ್ಟಿ ಮೀಸಲಾತಿ ವಿಚಾರ ಚರ್ಚೆ ಸಂಬಂಧ ಗದ್ದಲ: ಸಿಟ್ಟಾದ ಸ್ಪೀಕರ್ ಕಾಗೇರಿ

author img

By

Published : Sep 14, 2022, 6:26 PM IST

ವಿಧಾನಸಭೆ ಪ್ರಶ್ನೋತ್ತರ ಅವಧಿ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್‌ ಸದಸ್ಯ ಗಣೇಶ್ ಅವರು ಎದ್ದು ನಿಂತು ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ಚರ್ಚೆಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದರು. ಇದರಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೋಪಗೊಂಡರು.

uproar-in-assembly-over-st-reservation-issue
ವಿಧಾನಸಭೆಯಲ್ಲಿ ಎಸ್ಟಿ ಮೀಸಲಾತಿ ವಿಚಾರ ಚರ್ಚೆ ಸಂಬಂಧ ಗದ್ದಲ: ಸಿಟ್ಟಾದ ಸ್ಪೀಕರ್ ಕಾಗೇರಿ

ಬೆಂಗಳೂರು: ಪರಿಶಿಷ್ಟ ಪಂಗಡದ ಮೀಸಲು ಸಂಬಂಧ ಸದನದಲ್ಲಿ ಚರ್ಚೆಗೆ ಅವಕಾಶ ಕೊಡಬೇಕು ಎಂದು ಕಾಂಗ್ರೆಸ್‌ ಸದಸ್ಯ ಕಂಪ್ಲಿ ಗಣೇಶ್ ಸೇರಿದಂತೆ ಕೆಲವು ಸದಸ್ಯರು ಏಕಾಏಕಿ ಎದ್ದು ನಿಂತು ಪ್ರಸ್ತಾಪಿಸಿದ ಪರಿಣಾಮ ವಿಧಾನಸಭೆಯಲ್ಲಿ ಗದ್ದಲ, ವಾಗ್ವಾದಕ್ಕೆ ಕಾರಣವಾಯಿತು.

ವಿಧಾನಸಭೆ ಪ್ರಶ್ನೋತ್ತರ ಅವಧಿ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್‌ ಸದಸ್ಯ ಗಣೇಶ್ ಅವರು ಎದ್ದು ನಿಂತು ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ಚರ್ಚೆಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದರು. ಇದರಿಂದ ಸಿಟ್ಟಿಗೆದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಏನಿದು ಯಾವುದೇ ನೋಟಿಸ್ ನೀಡದೆ ಏಕಾಏಕಿ ಎದ್ದು ನಿಂತು ಚರ್ಚೆಗೆ ಅವಕಾಶ ಕೊಡಿ ಎಂದರೆ ಹೇಗೆ ಎಂದು ಸಿಟ್ಟಿನಿಂದ ಹೇಳಿದರು.

ಇದಕ್ಕೆ ಜಗ್ಗದ ಗಣೇಶ್, ಮೀಸಲಾತಿ ಹೆಚ್ಚಳ ಸಂಬಂಧ ನಾಯಕ ಸಮುದಾಯದ ಸ್ವಾಮೀಜಿ ಅವರು 200ಕ್ಕೂ ಹೆಚ್ಚು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕೂಡಲೇ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ಬಾವಿಗಿಳಿದು ಧರಣಿಗೆ ಮುಂದಾದರು. ಆಗ ಕೆಲ ಸದಸ್ಯರು ಸಾಥ್ ನೀಡಿದರು.

ಈ ವೇಳೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಮಾತನಾಡಿ, ಹೀಗೆ ನೋಟಿಸ್ ನೀಡದೇ ಸ್ಪೀಕರ್ ಅವರಿಗೆ ಅವಕಾಶ ಕೊಡಿ ಎಂದು ಕೇಳುವುದು ಸರಿಯಲ್ಲ. ಸದನದ ನಿಯಮಾವಳಿಗಳಂತೆ ನಡೆದುಕೊಳ್ಳಿ ಎಂದು ಏರು ಧ್ವನಿಯಲ್ಲಿ ಹೇಳಿದರು. ಈ ಹಂತದಲ್ಲಿ ಸದನದಲ್ಲಿ ಗದ್ದಲದ ವಾತಾವರಣ ರೂಪುಗೊಂಡಿತು.

ಇದೇನು ಹುಚ್ಚಾಸ್ಪತ್ರೆಯೇ?: ಸದನವನ್ನು ಹುಂಬತನದಿಂದ ನಡೆಸಲು ಆಗುವುದಿಲ್ರೀ.. ವಿಧಾನಸಭೆಯೇನು ಹುಚ್ಚಾಸ್ಪತ್ರೆಯೇ? ನಿಯಮಾವಳಿಗಳ ಪ್ರಕಾರ ಮಾತನಾಡಿ. ಮನಸ್ಸಿಗೆ ಬಂದಂತೆ ಎದ್ದು ನಿಂತು ಎಲ್ಲರೂ ಮಾತನಾಡಲು ಆರಂಭಿಸಿದರೆ ಹೇಗೆ ? ಎಂದು ಸ್ಪೀಕರ್ ಕಾಗೇರಿ ಸಿಟ್ಟಾದರು.

ಗದಲ್ಲದ ನಡುವೆಯೇ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸಭಾಧ್ಯಕ್ಷರೇ ತಾಳ್ಮೆ ಕಳೆದುಕೊಳ್ಳಬೇಡಿ. ಸ್ವಾಮೀಜಿಗಳು 208 ದಿನಗಳಿಂದ ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ಮೀಸಲಾತಿ ಹೆಚ್ಚಳ ಸಂಬಂಧ ನಿವೃತ್ತ ನ್ಯಾ. ನಾಗಮೋಹನ್ ದಾಸ್ ಅವರು ವರದಿ ಅವಕಾಶ ಕೊಟ್ಟಿದ್ದೇವೆ. ಚರ್ಚೆಗೆ ಅವಕಾಶ ಕೊಡಿ ಎಂದರು.

ಹಾಗೆಯೇ ಕಾನೂನು ಸಚಿವ ಮಾಧುಸ್ವಾಮಿ ಅವರಿಗೂ ತಾಳ್ಮೆಯಿಂದ ಇರುವಂತೆ ಸಮಾಧಾನ ಹೇಳಿದರು. ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಮಾತನ್ನು ಬೆಂಬಲಿಸಿದ ಮುಖ್ಯಮಂತ್ರಿಗಳು ಚರ್ಚೆಗೆ ಅವಕಾಶ ಕೊಡಲಿ, ನಾನು ಸೂಕ್ತ ಉತ್ತರ ಕೊಡುತ್ತೇನೆ ಎಂದರು. ನಂತರ ಸಭಾಧ್ಯಕ್ಷರು ಚರ್ಚೆಗೆ ಅವಕಾಶ ಕೊಡುವುದಾಗಿ ಹೇಳಿ ಎಲ್ಲ ಗದ್ದಲ ಮಾತುಗಳಿಗೆ ವಿರಾಮ ಹೇಳಿದರು.

ಇದನ್ನೂ ಓದಿ: ಕರ್ನಾಟಕ ಭೂ ಕಬಳಿಕೆ ನಿಷೇಧ ತಿದ್ದುಪಡಿ ವಿಧೇಯಕ ಮಂಡನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.