ETV Bharat / state

ಕೊಳ್ಳೆಗಾಲದಿಂದ‌ ಔರಾದ್ ವರೆಗೆ ಎಲ್ಲಾ ನೀರಾವರಿ ಯೋಜನೆ ಪೂರ್ಣಗೊಳಿಸಲು ಯತ್ನಿಸುತ್ತೇವೆ: ಸಚಿವ ಕಾರಜೋಳ

author img

By

Published : Mar 28, 2022, 6:59 PM IST

ಚಿವ ಗೋವಿಂದ ಕಾರಜೋಳ
ಚಿವ ಗೋವಿಂದ ಕಾರಜೋಳ

ಕೊಳ್ಳೆಗಾಲದಿಂದ‌ ಔರಾದ್ ವರೆಗೆ ಎಲ್ಲಾ ನೀರಾವರಿ ಯೋಜನೆಗಳನ್ನು ಅನುದಾನದ ಇತಿಮಿತಿಯೊಳಗೆ ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತೇವೆ. ನೀರಾವರಿ ಯೋಜನೆಗಳನ್ನು ಬಂದಾಗ ಪ್ರತಿ ರೈತನಿಗೆ, ಪ್ರತಿ ಹಳ್ಳಿಗಳಿಗೆ ನ್ಯಾಯ ಸಿಗುವ ಕೆಲಸ ಮಾಡುತ್ತೇವೆ ಎಂದು ಸಚಿವ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು..

ಬೆಂಗಳೂರು : ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು. ವಿಧಾನಸಭೆಯಲ್ಲಿ ಬೇಡಿಕೆ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಮಹಾದಾಯಿ, ಮೇಕೆದಾಟು ಯೋಜನೆಗಳನ್ನು ಏನಾದರು ಮಾಡಿ ಜಾರಿ ಮಾಡುವುದು ನಮ್ಮ ಉದ್ದೇಶ. ನಾವು ಯಾವುದೇ ನೀರಾವರಿ ಯೋಜನೆಗಳಿಗೆ ತಾರತಮ್ಯ ಮಾಡುವುದಿಲ್ಲ ಎಂದರು.

ಬೇಡಿಕೆ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ

ಎಲ್ಲಾ ನೀರಾವರಿ ಯೋಜನೆಗಳಿಗೂ ಅನುದಾನ : ಕೊಳ್ಳೇಗಾಲದಿಂದ‌ ಔರಾದ್‌ವರೆಗೆ ಎಲ್ಲಾ ನೀರಾವರಿ ಯೋಜನೆಗಳನ್ನು ಅನುದಾನದ ಇತಿಮಿತಿಯೊಳಗೆ ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತೇವೆ. ನೀರಾವರಿ ಯೋಜನೆಗಳು ಬಂದಾಗ ಪ್ರತಿ ರೈತನಿಗೆ, ಪ್ರತಿ ಹಳ್ಳಿಗಳಿಗೆ ನ್ಯಾಯ ಸಿಗುವ ಕೆಲಸ ಮಾಡುತ್ತೇವೆ. ನಾವು ಬಂದ ಎರಡುವರೆ ವರ್ಷದಲ್ಲಿ ನೀರಾವರಿ ಯೋಜನೆಗಳಿಗೆ 47,140 ಕೋಟಿ ರೂ. ಖರ್ಚು ಮಾಡಿದ್ದೇವೆ. ಸಂಕಷ್ಟದ ಮಧ್ಯೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಖರ್ಚು ಮಾಡಿದ್ದೇವೆ. ಒಂದು ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ನೀರಾವರಿ ಯೋಜನೆಗೆ 50,000 ಕೋಟಿ ರೂ. : ಇದೇ ವೇಳೆ ಕಾಂಗ್ರೆಸ್ ಸರ್ಕಾರದಲ್ಲಿನ ನೀರಾವರಿ ಯೋಜನೆಗಳಿಗೆ ನೀಡಿರುವ ಅನುದಾನದ ಬಗ್ಗೆ ಅಂಕಿಅಂಶ ನೀಡಿದ ಅವರು, ನೀರಾವರಿ ಕಾಮಗಾರಿಗಳಿಗೆ ಪ್ರತಿ ವರ್ಷ 10,000 ಕೋಟಿ ರೂ. ಖರ್ಚು ಮಾಡುತ್ತೇವೆ ಎಂದಿದ್ದರು. ಅವರು ಐದು ವರ್ಷದಲ್ಲಿ ಹಂಚಿಕೆ ಮಾಡಿದ್ದು 50,000 ಕೋಟಿ ರೂ. ಅದರಲ್ಲಿ ಖರ್ಚು ಮಾಡಿದ್ದು 48,660 ಕೋಟಿ ರೂ. 2012ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಮಂಡನೆ ಮಾಡಿದ ಚೊಚ್ಚಲ ಬಜೆಟ್‌ನಲ್ಲಿ ನಾವು ಒಟ್ಟು 50,000 ಕೋಟಿ ಖರ್ಚು ಮಾಡಿ, ಐದು ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ವಾಸ್ತವದಲ್ಲಿ 48,660 ಕೋಟಿ ಖರ್ಚು ಮಾಡಿ ಸುಮಾರು 2.66 ಲಕ್ಷ ಹೆಕ್ಟೇರ್ ಮಾತ್ರ ನೀರಾವರಿ ಪ್ರದೇಶ ಮಾಡಲು ಸಾಧ್ಯವಾಗಿದೆ ಎಂದರು.

2013ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ನೀರಾವರಿ ಯೋಜನೆಗಳಿಗೆ ಐದು ವರ್ಷದಲ್ಲಿ 35,000 ಕೋಟಿ ರೂ‌. ಖರ್ಚು ಮಾಡಿದ್ದೇವೆ ಎಂದು ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದರು. ಆದರೆ, 12,500 ಕೋಟಿ‌ ಮಾತ್ರ ಖರ್ಚು ಮಾಡಿದ್ದಾರೆ. ಒಟ್ಟು ಅವರ ಐದು ವರ್ಷಗಳ ಸರ್ಕಾರದಲ್ಲಿ ಖರ್ಚು ಮಾಡಿದ್ದು 25,500 ಕೋಟಿ ರೂ.‌ ಮಾತ್ರ ಎಂದು ಟೀಕಿಸಿದರು.

ಕೃಷ್ಣಾ ಮೇಲ್ದಂಡೆ ಸಂಬಂಧ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ 2013-14ರಲ್ಲಿ 690 ಕೋಟಿ ರೂ. ಬಾಕಿ ಬಿಲ್ ಇತ್ತು. 2014-15ರಲ್ಲಿ 1,007 ಕೋಟಿ ರೂ., 2015-16ರಲ್ಲಿ 1,288 ಕೋಟಿ ರೂ., 2016-17ರಲ್ಲಿ 1,260 ಕೋಟಿ ರೂ., 2017-18ರಲ್ಲಿ 1,955 ಕೋಟಿ ರೂ. ಬಾಕಿ ಬಿಲ್ ಇತ್ತು. ಕಾಂಗ್ರೆಸ್ ನವರು ಯುಕೆಪಿಗೆ ನಾವೇ ಮಾಡಿದ್ದು ಅಂತಾರೆ, ನೀವು ಏನೂ ಮಾಡಿಲ್ಲ ಅಂತಾರೆ 2013-14ರಿಂದ 2017-18ರವರೆಗೆ ಯುಕೆಪಿಗೆ ಮೂರನೇ ಹಂತಕ್ಕೆ 2,370 ಕೋಟಿ ರೂ. ಮಾತ್ರ ಖರ್ಚು ಮಾಡಿದ್ದಾರೆ. ಅದರಲ್ಲಿ ಆರ್ ಅಂಡ್ ಆರ್ ಹಾಗೂ ಭೂ ಸ್ವಾಧೀನಕ್ಕೆ ಖರ್ಚು ಮಾಡಿದ್ದು ಕೇವಲ 1,900 ಕೋಟಿ ರೂ. ಮಾತ್ರ ಎಂದು ತಿಳಿಸಿದರು.

ಆರ್ ಅಂಡ್ ಆರ್ ಹಾಗೂ ಭೂ ಸ್ವಾಧೀನಕ್ಕೆ 1,400 ಕೋಟಿ ಖರ್ಚು : ನಮ್ಮ ಸರ್ಕಾರ ಬಂದ ಬಳಿಕ ಎರಡು ವರ್ಷ ಒಂಬತ್ತು ತಿಂಗಳಲ್ಲಿ ಆರ್ ಅಂಡ್ ಆರ್ ಹಾಗೂ ಭೂ ಸ್ವಾಧೀನಕ್ಕೆ 1,400 ಕೋಟಿ ಖರ್ಚು ಮಾಡಿದ್ದೇವೆ. ಬಬಲೇಶ್ಚರ ತಾಲೂಕಿನಲ್ಲಿ ಕೃಷ್ಣ ಮೇಲ್ದಂಡೆ ಮೂರನೇ ಹಂತದಲ್ಲಿ ಮಾರ್ಗಸೂಚಿ ದರ ನಿಗದಿ ಆಗದ ಕಾರಣ 14 ಹಳ್ಳಿಗಳಿಗೆ ತೊಂದರೆ ಆಗಿದೆ. ಬೇರೆ ತಾಲೂಕುಗಳಲ್ಲಿ ಮಾರ್ಗಸೂಚಿ ದರ ಪರಿಷ್ಕರಣೆ ಆಗಿರುವುದರಿಂದ ರೈತರಿಗೆ ಸೂಕ್ತ ಪರಿಹಾರ ಸಿಕ್ಕಿದೆ. ಬಬಲೇಶ್ವರ ತಾಲೂಕಿನಲ್ಲಿ ಮಾರ್ಗಸೂಚಿ ದರ ಪರಿಷ್ಕರಿಸಲು ಕಂದಾಯ ಇಲಾಖೆಗೆ ಮನವಿ ಮಾಡಿದ್ದೇವೆ ಎಂದರು.

ಬಾಕಿ ಬಿಲ್ ಹೆಚ್ಚಿದ್ದಿದ್ದು ನಿಜ. ಈ ಬಾರಿ ಅದನ್ನು ಕಡಿಮೆ ಮಾಡಲು ಯತ್ನಸುತ್ತಿದ್ದೇವೆ. ಮಾರ್ಚ್ ಅಂತ್ಯದ ವೇಳೆಗೆ 7,000 ಕೋಟಿ ಬಾಕಿ ಬಿಲ್ ಉಳಿಯಬಹುದು. ಯುಕೆಪಿ ಮೂರನೇ ಹಂತ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅದಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.