ETV Bharat / state

ಐಪಿಎಸ್ ಅಧಿಕಾರಿ ಗುಳೇದ್ ವಿರುದ್ಧದ ಲೈಂಗಿಕ ಕಿರುಕುಳ, ಅಕ್ರಮ ಹಣ ವರ್ಗಾವಣೆ ಆರೋಪ.. ಕೇಸ್​ ರದ್ದುಗೊಳಿಸಿದ ಹೈಕೋರ್ಟ್

author img

By

Published : May 15, 2023, 10:59 PM IST

the-high-court-quashed-sexual-harassment-and-money-laundering-case-of-ips-officer-bhimashankar-guled
ಐಪಿಎಸ್ ಅಧಿಕಾರಿ ಗುಳೇದ್ ವಿರುದ್ಧದ ಲೈಂಗಿಕ ಕಿರುಕುಳ, ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಐಪಿಎಸ್ ಅಧಿಕಾರಿ ಭೀಮಾಶಂಕರ್ ಎಸ್. ಗುಳೇದ್ ವಿರುದ್ಧದ ಲೈಂಗಿಕ ಕಿರುಕುಳ, ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣವನ್ನು ಹೈಕೋರ್ಟ್​ ರದ್ದುಗೊಳಿಸಿ ಆದೇಶಿಸಿದೆ.

ಬೆಂಗಳೂರು : ಹಿರಿಯ ಐಪಿಎಸ್ ಅಧಿಕಾರಿ ಭೀಮಾಶಂಕರ್ ಎಸ್. ಗುಳೇದ್ ವಿರುದ್ಧದ ಲೈಂಗಿಕ ಕಿರುಕುಳ ಮತ್ತು ಅಕ್ರಮ ಹಣ ವರ್ಗಾವಣೆ, ಬೇನಾಮಿ ಹಾಗೂ ಭ್ರಷ್ಟಾಚಾರ ಆರೋಪದ ಅಡಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ಎರಡು ಖಾಸಗಿ ದೂರುಗಳನ್ನು ಆಧರಿಸಿ ವಿಚಾರಣಾಧೀನ ನ್ಯಾಯಾಲಯ ಪ್ರಕರಣ ದಾಖಲಿಸಿರುವುದನ್ನು ವಜಾ ಮಾಡುವಂತೆ ಕೋರಿ ಅಪರಾಧ ತನಿಖಾ ದಳದ (ಸಿಐಡಿ) ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಗುಳೇದ್ ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ದೂರುದಾರರ ಪತ್ನಿಯೇ ಅಕ್ರಮ ಸಂಬಂಧದ ಚಿತ್ರ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಿ ಅವುಗಳನ್ನು ಡಿಲೀಟ್ ಮಾಡಿದ್ದಾರೆ. ಹೀಗಿರುವಾಗ ಆರೋಪಿ ಗುಳೇದ್ ಅವರು ಅವುಗಳನ್ನು ನಾಶ ಮಾಡಿದ್ದಾರೆ ಎಂಬುದಾಗಿ ಪರಿಗಣಿಸಲಾಗದು. ಮೊಬೈಲ್‌ನಲ್ಲಿ ಕೆಲವು ಅಹಿತಕರ ಚಿತ್ರಗಳಿಗೆ ಪತಿ-ಪತ್ನಿಯರ ನಡುವೆ ಕಲಹವಾಗಿದ್ದು, ಅದಕ್ಕೆ ಗುಳೇದ್ ಅವರು ಬೆದರಿಕೆ ಹಾಕಿದ್ದಾರೆ ಎನ್ನುವುದನ್ನು ಒಪ್ಪಲಾಗದು. ಸೂಕ್ತ ದಾಖಲೆಗಳ ಕೊರತೆಯ ನಡುವೆ ವಿಚಾರಣಾಧೀನ ನ್ಯಾಯಾಲಯವು ಪ್ರಕರಣವನ್ನು ಪರಿಗಣಿಸಿದೆ. ದೂರುದಾರರ ಪತ್ನಿ ಮತ್ತು ಆರೋಪಿ ಗುಳೇದ್ ಅವರು ದೈಹಿಕ ಸಂಬಂಧ ಹೊಂದಿರುವ ಚಿತ್ರಗಳು ಪತ್ನಿಯ ಮೊಬೈಲ್​​ನಲ್ಲಿ ಪತ್ತೆಯಾಗಿದ್ದು, ಅವುಗಳನ್ನು ತನ್ನ ಮೊಬೈಲ್​ಗೆ ವರ್ಗಾವಣೆ ಮಾಡಿಕೊಂಡಿದ್ದಾಗಿ ದೂರುದಾರ ಪತಿಯೇ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಮಹಿಳೆ ಮೇಲಿನ ಮಾನಭಂಗಕ್ಕೆ ಪ್ರಯತ್ನ ಮಾಡುವ ಆರೋಪ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಹೀಗಾಗಿ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಪಿಎಂಎಲ್ ಕಾಯಿದೆ ಸೆಕ್ಷನ್ 45ರ ಅಡಿ ಪ್ರತಿವಾದಿಯಾಗಿರುವ ದೂರುದಾರ ಸಲ್ಲಿಸಿರುವ ದೂರು ಊರ್ಜಿತವಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ವಿವರ : ದಾವಣಗೆರೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭೀಮಾಶಂಕರ್ ಗುಳೇದ್ ಅವರು ಕಾರ್ಯಕ್ರಮವೊಂದಕ್ಕೆ ಪೋಟೊಗ್ರಾಫರ್ ಸೇವೆ ಕೋರಲು ದೂರುದಾರ ಎಂಜಿನಿಯರ್ ಸ್ಥಾಪಿಸಿದ್ದ ಸ್ಟುಡಿಯೋಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸ್ಟುಡಿಯೋದ ಸಹ ಪಾಲುದಾರೆಯಾದ ದೂರುದಾರರ ಪತ್ನಿಯ ಜೊತೆಗೆ ಗುಳೇದ್ ಅವರ ಸ್ನೇಹ ಬೆಳೆಸಿ, ಅನಂತರ ಇಬ್ಬರು ಲೈಂಗಿಕ ಸಂಬಂಧ ಬೆಳೆಸಿದ್ದರು. ಇದನ್ನು ದೂರುದಾರರ ಪತ್ನಿಯ ಮೊಬೈಲ್​​ನಲ್ಲಿ ಗುಳೇದ್ ಸೆರೆ ಹಿಡಿದಿದ್ದರು. ಇದು ತನಗೆ ಗೊತ್ತಾಗಿತ್ತು ಎಂದು ದೂರುದಾರ ಪತಿ ಆರೋಪಿಸಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಲ್ಲ ಎಂದು ಅವರು ಬೆಂಗಳೂರಿನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಇನ್ನೊಂದು ಪ್ರಕರಣದಲ್ಲಿ, ಗುಳೇದ್ ಮತ್ತು ಇನ್ನಿತರ ಮೂವರು ಕರ್ನಾಟಕ ರಾಜ್ಯ ಹಣಕಾಸು ಆಯೋಗದ (ಕೆಎಸ್‌ಎಫ್ಸಿ) ಇಬ್ಬರು ಅಧಿಕಾರಿಗಳು ಸೇರಿಕೊಂಡು ಪತ್ನಿಗೆ ಸಾಲ ಕೊಡಿಸಿದ್ದರು. ಈ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ್ದು, ಬೇನಾಮಿ ಹೆಸರಿನಲ್ಲಿ ನ್ಯೂ ಪ್ರೊ ಸ್ಟುಡಿಯೊ ಮತ್ತು ಈವೆಂಟ್ಸ್ ಉದ್ಯಮ ಆರಂಭಿಸಿದ್ದರು ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಖಾಸಗಿ ದೂರನ್ನು ಆಧರಿಸಿ ಗುಳೇದ್ ಅವರ ವಿರುದ್ಧ ಖಾಸಗಿ ದೂರು ದಾಖಲಿಸಲಾಗಿತ್ತು.

ಇದನ್ನೂ ಓದಿ : ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಹಿಂಪಡೆದ ಚುನಾವಣಾ ಆಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.