ETV Bharat / state

ಜನವರಿ 22ರಂದು ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ; ಸರ್ಕಾರದ ಆದೇಶ ಸ್ವಾಗತಿಸಿದ ಬಿಜೆಪಿ

author img

By ETV Bharat Karnataka Team

Published : Jan 7, 2024, 9:50 PM IST

ಪ್ರತಿಪಕ್ಷದ ನಾಯಕ ಆರ್ ಅಶೋಕ್
ಪ್ರತಿಪಕ್ಷದ ನಾಯಕ ಆರ್ ಅಶೋಕ್

ಜನವರಿ 22ರಂದು ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಇದು ರಾಮಭಕ್ತರ, ಹಿಂದೂ ಕಾರ್ಯಕರ್ತರ ಹೋರಾಟಕ್ಕೆ ಸಿಕ್ಕ ಜಯ ಎಂದು ಪ್ರತಿಪಕ್ಷದ ನಾಯಕ ಆರ್ ಅಶೋಕ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ಕಾಂಗ್ರೆಸ್​ ಶಾಸಕ ಬಿ ಕೆ ಹರಿಪ್ರಸಾದ್​ ವಿರುದ್ಧ ಕಿಡಿಕಾರಿದ್ದಾರೆ.

ಪ್ರತಿಪಕ್ಷದ ನಾಯಕ ಆರ್ ಅಶೋಕ್

ಬೆಂಗಳೂರು: ಜನವರಿ 22ರಂದು ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ರಾಜ್ಯ ಬಿಜೆಪಿ ಸ್ವಾಗತಿಸಿದ್ದು, ಹಿಂದೂ ಕಾರ್ಯಕರ್ತರ ಹೋರಾಟಕ್ಕೆ ಸಿಕ್ಕ ಜಯ ಎಂದು ಬಣ್ಣಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರತಿಪಕ್ಷ ನಾಯಕ ಆರ್​ ಅಶೋಕ್, ಅಯೋಧ್ಯೆಯ ನವ್ಯ, ಭವ್ಯ ಶ್ರೀರಾಮ ಮಂದಿರದಲ್ಲಿ ಬಾಲರಾಮನಿಗೆ ಪ್ರಾಣ ಪ್ರತಿಷ್ಠಾಪನೆ ನಡೆಯುವ ಸುದಿನ. ಜನವರಿ 22ರಂದು ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಆಯೋಜಿಸಲು ರಾಜ್ಯ ಸರ್ಕಾರ ಆದೇಶಿಸಿದೆ. ಇದು ರಾಮಭಕ್ತರ, ಹಿಂದೂ ಕಾರ್ಯಕರ್ತರ ಹೋರಾಟಕ್ಕೆ ಸಿಕ್ಕ ಜಯ. ತುಷ್ಟೀಕರಣದ ವಿರುದ್ಧ ಹಿಂದುತ್ವದ ದಿಗ್ವಿಜಯ ಎಂದು ಬಣ್ಣಿಸಿದ್ದಾರೆ.

ಕಾಂಗ್ರೆಸ್ಸಿಗರ ರಾಮ ನಿಂದನೆ ಹಾಗೂ ಸರ್ಕಾರದ ರಾಮಭಕ್ತರ ಮೇಲಿನ ಸೇಡಿನ ಕ್ರಮಗಳ ನಡುವೆಯೂ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ದೇವಾಲಯಗಳಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಜನವರಿ 22 ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ದಿನದಂದು, ವಿಶೇಷ ಪೂಜೆ ಸಲ್ಲಿಸುವ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, "ತಡವಾಗಿಯಾದರೂ ಕೆಟ್ಟ ಮೇಲೆ ಬುದ್ಧಿ ಬಂದಿತು" ಎನ್ನುವಂತೆ ಶ್ರೀ ರಾಮನ ಪ್ರೇರಣೆಯಿಂದ ಜ್ಞಾನೋದಯವಾದಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ. ಈ ಸಂಬಂಧ ವಿವೇಕಯುತ ನಡವಳಿಕೆ ಪ್ರದರ್ಶಿಸಿದ ಸಚಿವ ರಾಮಲಿಂಗಾ ರೆಡ್ಡಿ ಅವರ ನಿಲುವು ಅತ್ಯಂತ ಸಮಂಜಸವಾಗಿದೆ ಎಂದಿದ್ದಾರೆ.

ಬಿ ಕೆ ಹರಿಪ್ರಸಾದ್​ಗೆ ಕಾಮನ್ ಸೆನ್ಸ್ ಇಲ್ಲ: ಕಾಂಗ್ರೆಸ್​ ಶಾಸಕ ಬಿ ಕೆ ಹರಿಪ್ರಸಾದ್​ಗೆ ಕಾಮನ್ ಸೆನ್ಸ್ ಇಲ್ಲ. ಗೋಧ್ರಾ ರೀತಿಯ ಘಟನೆಯಾಗುತ್ತೆ ಅಂತ ಹೇಳ್ತಾರೆ. ಅವರೊಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ. ಎಂಎಲ್​ಸಿಯಾಗಿದ್ದವರು. ಇವರಿಗೆ ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಇಷ್ಟ ಇಲ್ಲವೆಂದು ವಿಪಕ್ಷ ನಾಯಕ್ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ‌ ಮಾತನಾಡಿದ ಅವರು, ಅಂದು ಅಯೋಧ್ಯೆ ಕೇಸ್​ಗೆ ವಿರುದ್ಧವಾಗಿ ಅಫಿಡ್​ವಿಟ್​ ಹಾಕಿದರು. ಕಾಂಗ್ರೆಸ್ ಪ್ರೇರಿತ ಲಾಯರ್ ವಾದ ಮಾಡಿ ರಾಮನ ಅಸ್ತಿತ್ವವನ್ನ ಪ್ರಶ್ನೆ ಮಾಡಿದರು. ಈಗ ಎಲ್ಲಾ ಕಡೆ ರಾಮ ನನ್ನ ನೋಡಿ ನಮ್ಮ ಸರ್ಕಾರ ಬಿದ್ದು ಹೋಗುತ್ತೆ ಎಂಬ ಭಯ ಆವರಿಸಿದೆ. ಹಾಗಾಗಿ ಹರಿಪ್ರಸಾದ್, ಸಿದ್ದರಾಮಯ್ಯ ಹಾಗು ಯತೀಂದ್ರ ಸಿದ್ದರಾಮಯ್ಯ ಈ ಹೇಳಿಕೆ ಕೊಡುತ್ತಿದ್ದಾರೆ ಎಂದರು.

ಹರಿಪ್ರಸಾದ್​ಗೆ ನೋಟಿಸ್ ಕೊಟ್ಟು ಒಂದೆರಡು ದಿನ ಜೈಲಲ್ಲಿ ಕೂರಿಸಿ ವಿಚಾರಣೆ ಮಾಡಲಿ. ಯಾವ ಟ್ರೈನ್​ನಲ್ಲಿ ಬಾಂಬ್ ಇಟ್ಟಿದ್ದಾರೆ ಅಂತ ಹೇಳಲಿ. ಅದನ್ನು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆಯೋದು ಅಲ್ಲ. ಕಾಂಗ್ರೆಸ್ ಗೆ ರಾಮ ಮಂದಿರದ ಭೀತಿ, ಅದರೊಂದಿಗೆ ಮುಸ್ಲಿಂರನ್ನು ಓಲೈಸುವ ಕಾರ್ಯಕ್ರಮನೂ ನಡೀತಿದೆ. ಮುಸ್ಲಿಂರನ್ನ ಓಲೈಸುವ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದಾರೆ.

ಡಿ ಕೆ ಶಿವಕುಮಾರ್ ಕೆಜಿ ಹಳ್ಳಿ, ಡಿಜೆ ಹಳ್ಳಿ ಕೇಸ್ ಹಿಂಪಡಿತೀನಿ ಅಂತಾ ಹೇಳಿದ್ದಾರೆ. ಸಿದ್ದರಾಮಯ್ಯ ಮುಲ್ಲಾಗಳಿಗೆ 10 ಸಾವಿರ ಕೋಟಿ ಕೊಡ್ತೀನಿ ಅಂತಾ ಹೇಳಿದ್ದಾರೆ. ಹಿಂದು ಮುಸ್ಲಿಂರನ್ನು ಒಡೆದಾಳುವ ಪ್ರವೃತ್ತಿ ಕಾಂಗ್ರೆಸ್ ಡಿಎನ್​ಎ ಯಲ್ಲಿ ಬಂದಿದೆ. ಕಾಂಗ್ರೆಸ್​ನವರಿಗೆ ಪಾರ್ಲಿಮೆಂಟ್ ಚುನಾವಣೆಯ ಭಯ ಆವರಿಸಿದೆ. ಅವರ ಮೊದಲ ಅಧ್ಯಕ್ಷ ಬ್ರಿಟಿಷರು. ಹಾಗಾಗಿ ಈ ಬುದ್ಧಿ ಬಂದಿದೆ ಎಂದು ಟೀಕಿಸಿದರು.

ರಾಮ ಮಂದಿರ ಪ್ರಾಣ ಪ್ರತಿಷ್ಠೆಯಂದು ಎಲ್ಲಾ ಮುಜರಾಯಿ ದೇವಸ್ಥಾನದಲ್ಲೂ ಪೂಜೆಗೆ ಸರ್ಕಾರದಿಂದ ಆದೇಶ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಮಲಿಂಗ ರೆಡ್ಡಿ ಕೊಟ್ರುನೂ ಈಗಲೇ ನಾವು ಪೂಜೆ ಮಾಡೋಕೆ ನಿರ್ಧಾರ ಮಾಡಿದ್ದೇವೆ. ಅವರು ಮುಜರಾಯಿ ದೇವಸ್ಥಾನದಲ್ಲಿ ಕೊಟ್ಟಿರಬಹುದು. ಎಲ್ಲಾ ದೇವಸ್ಥಾನದಲ್ಲೂ ಮಾಡಲು ನಾವು ತೀರ್ಮಾನ ಮಾಡಿದ್ದೇವೆ. ಕರ್ನಾಟಕದಲ್ಲಿರುವ ಸಣ್ಣ ದೇವಸ್ಥಾನದಿಂದ ಹಿಡಿದು ಎಲ್ಲಾ ದೇವಸ್ಥಾನದಲ್ಲೂ ನಡೆಯುತ್ತೆ. ಕಾಂಗ್ರೆಸ್ ನವರು ಕಾಟಾಚಾರಕ್ಕೆ ಹೇಳಿರಬಹುದು. ಇವರಿಗೆ ನಿಜವಾಗಲೂ ರಾಮನ ಮೇಲೆ ಭಕ್ತಿ ಇದ್ದಿದ್ರೆ ಸಿದ್ದರಾಮಯ್ಯ ರಾಮ ಮಂದಿರಕ್ಕೆ ದೇಣಿಗೆ ನೀಡುವ ಸಂದರ್ಭ ರಾಮ ಮಂದಿರಕ್ಕೆ ನಾನು ಹಣ ಕೊಡಲ್ಲ ಅಂತಾ ಹೇಳಿದ್ದಾರೆ. ಅದು ವಿವಾದಿತ ಸ್ಥಳ ಅಂತಾ ಹೇಳಿದ್ದಾರೆ. ನನಗಿಷ್ಟ ಇಲ್ಲ ಅದು DISPUTED ಲ್ಯಾಂಡ್ ಎಂದಿದ್ರು. ಈಗ ಏಕಾಏಕಿ ರಾಮನ ಪೂಜೆ ಮಾಡಬೇಕು ಎಂಬ ಒಳ್ಳೆ ಬುದ್ಧಿ ಹೇಗೆ ಬಂತು ಗೊತ್ತಿಲ್ಲ ಎಂದು ಅಶೋಕ್​ ಕಾಲೆಳೆದಿದ್ದಾರೆ.

ಲೋಕಸಭೆಯ ಸರ್ವೇಯಲ್ಲಿ ಕಾಂಗ್ರೆಸ್​ಗೆ 4-5 ಸ್ಥಾನ ತೋರಿದೆ. 28ಕ್ಕೆ 28 ಸ್ಥಾನವನ್ನೂ ಬಿಜೆಪಿ ಗೆಲ್ಲುತ್ತೆ ಅನ್ನೋ ಭಯ ಕಾಂಗ್ರೆಸ್​ಗೆ ಆವರಿಸಿದೆ ಎಂದು ಹೇಳಿದರು. ನಾನು ಹಿಂದೂ, ನಾನು ರಾಮ ಭಕ್ತ, ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ನನಗೆ ಆಹ್ವಾನ ನೀಡಿಲ್ಲ ಡಿಕೆಶಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಅಶೋಕ್​, ಯಾರು ಪ್ರಾಣ ಪ್ರತಿಷ್ಠಾಪನೆಗೆ ಹೋಗಬೇಕು ಎನ್ನುವುದು ತೀರ್ಮಾನವಾಗಿ ಆಹ್ವಾನ ಪತ್ರಿಕೆ ನೀಡಲಾಗಿದೆ. ಉತ್ತರ ಪ್ರದೇಶದ ಸಿಎಂ ರಾಜ್ಯಪಾಲರು ಅಲ್ಲಿಗೆ ಸಂಬಂಧಪಟ್ಟವರಿಗೆ ಆಹ್ವಾನ ನೀಡಲಾಗಿದೆ. ಬೇರೆ ಮುಖ್ಯಮಂತ್ರಿಗಳಿಗೆ ಆಹ್ವಾನ ಕೊಟ್ಟಿಲ್ಲ. ಮುಖ್ಯಮಂತ್ರಿಗೆ ಕೊಡಲಿಲ್ಲ ಎಂದ ಮೇಲೆ ಉಪಮುಖ್ಯಮಂತ್ರಿಗೆ ಕೊಡುವುದು ಎಲ್ಲಿಂದ ಬಂತು. ಡಿಸಿಎಂಗೆ ಕೊಡುವ ಪ್ರಶ್ನೆಯೇ ಬರುವುದಿಲ್ಲ. ಯಾರಿಗೆ ಆಹ್ವಾನ ನೀಡಿದೆ ಅವರು ಹೋಗುವಂತದ್ದು. ಸೋನಿಯಾ ಗಾಂಧಿ, ಖರ್ಗೆಯವರನ್ನು ಕರೆದಿದ್ದಾರೆ. ಅವರೇ ಹೋಗಲು ಮೀನಮೇಷ ಎಣಿಸುತ್ತಿದ್ದಾರೆ. ಮೊದಲು ಅವರ ಮೀನಮೇಷ ಏನಾಗುತ್ತದೆ ನೋಡೋಣ. ಆಮೇಲೆ ಡಿಕೆಶಿ ಅರ್ಜಿ ಹಾಕಿಕೊಳ್ಳಲಿ ಎಂದು ಟೀಕಿಸಿದರು.

ವಾಟ್ಸ್ ಅಪ್​ನಲ್ಲಿ ಗಲಭೆ ನಡೆಸುವ ಬಗ್ಗೆ ಪುನೀತ್ ಕೆರೆಹಳ್ಳಿ ಸಂದೇಶ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.‌ ಅವರಿಗೆ ಮಾಹಿತಿ ಇದ್ರೆ ಪೊಲೀಸ್ ಕಂಪ್ಲೇಂಟ್ ಕೊಡಲಿ. ಅವರದೇ ಸರ್ಕಾರ ಇದೆ. ಯಾರು ಮಾಡಿದರು ಅವರ ವಿರುದ್ಧ ಕ್ರಮ ತಗೊಳ್ಳಿ ಎಂದು ಹೇಳಿದರು.

ನಾಳೆ ಬೆಂಗಳೂರಲ್ಲಿ ಬಿಜೆಪಿ ಚಿಂತನ ಮಂಥನ ಸಭೆ ವಿಚಾರ ನಡೆಯಲಿದೆ. ಪಾರ್ಲಿಮೆಂಟ್ ಚುನಾವಣೆಗಾಗಿ ಚಿಂತನ ಮಂಥನ ಸಭೆ ಹಮ್ಮಿಕೊಂಡಿದ್ದೇವೆ. ಪಕ್ಷದ ಜವಾಬ್ದಾರಿ ಇರುವಂತವರನ್ನು ಮಾತ್ರ ಕರೆದಿದ್ದೇವೆ. ಯತ್ನಾಳ್ ಅವರನ್ನು ಕರೆದಿದ್ದೇವೆ. ಯಾರು ಬರಬೇಕು ಅನ್ನೋದನ್ನು ಪಕ್ಷದ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಸೋಮಣ್ಣ ಅವರನ್ನು ಭೇಟಿ ಮಾಡಿದ್ದೇವೆ. ಯತ್ನಾಳ್ ಅವರನ್ನೂ ಕೂಡ ಕೇಂದ್ರ ನಾಯಕರು ಕೂರಿಸಿ ಮಾತನಾಡಿದ್ದಾರೆ. ಇನ್ನೊಂದು ಸುತ್ತಿನ ಮಾತುಕತೆಯಾದರೆ ಎಲ್ಲವೂ ಸರಿ ಹೋಗುತ್ತೆ ಎಂದು ಅಶೋಕ್​ ತಿಳಿಸಿದರು.

ಕಾಂಗ್ರೆಸ್​ನಲ್ಲೂ ಅಸಮಾಧಾನ ಇದೆ. ಪರಮೇಶ್ವರ್ ದಲಿತ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈಗ ಹೊಸದಾಗಿ ಮೂರು ಉಪಮುಖ್ಯಮಂತ್ರಿ ಶುರುವಾಗಿದೆ. 6 ಬಾಗಿಲೋ 3 ಬಾಗಿಲಿದೆಯೋ ಅವರೇ ನಿರ್ಧಾರ ಮಾಡಬೇಕು. ಕೇಂದ್ರದ ಸರ್ವೇಯಾದ ಮೇಲೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಾಗುತ್ತೆ ಎಂದು ಹೇಳಿದರು.

ಇದನ್ನೂ ಓದಿ : ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್, ಕಾಂಗ್ರೆಸ್ ಪಕ್ಷಕ್ಕೆ ವಿನಾಶಕಾಲೇ ವಿಪರೀತ ಬುದ್ಧಿ: ವಿಜಯೇಂದ್ರ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.