ETV Bharat / state

ಸುಡಾನ್​ನಲ್ಲಿ ಸಿಲುಕಿದ ಕನ್ನಡಿಗರು: ಸಿದ್ದರಾಮಯ್ಯ- ಜೈಶಂಕರ್​ ಮಧ್ಯೆ ಟ್ವೀಟ್​​ ವಾರ್​

author img

By

Published : Apr 19, 2023, 7:20 AM IST

Updated : Apr 19, 2023, 6:56 PM IST

ಸುಡಾನ್​ನಲ್ಲಿ ಸಿಲುಕಿದ ಕನ್ನಡಿಗರು
ಸುಡಾನ್​ನಲ್ಲಿ ಸಿಲುಕಿದ ಕನ್ನಡಿಗರು

ಸುಡಾನ್​ ಸಂಘರ್ಷದಲ್ಲಿ ಸಿಲುಕಿರುವ 31 ಕನ್ನಡಿಗರ ರಕ್ಷಣೆಯ ವಿಚಾರವಾಗಿ ವಿದೇಶಾಂಗ ಸಚಿವ ಜೈಶಂಕರ್​ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯೆ ಟ್ವೀಟ್​ ವಾರ್​ ನಡೆದಿದೆ.

ಬೆಂಗಳೂರು: ಸುಡಾನ್​ನಲ್ಲಿ ನಡೆಯುತ್ತಿರುವ ಸೇನಾ ಸಂಘರ್ಷದಲ್ಲಿ ಓರ್ವ ಭಾರತೀಯ ಸೇರಿದಂತೆ 185 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸಿಕ್ಕಿಬಿದ್ದ ಭಾರತೀಯರ ಪೈಕಿ 31 ಮಂದಿ ಕನ್ನಡಿಗರೂ ಇದ್ದಾರೆ. ಅವರನ್ನು ಅಲ್ಲಿಂದ ಕರೆತರುವ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ವಿದೇಶಾಂಗ ಸಚಿವ ಜೈಶಂಕರ್​ ನಡುವೆ ಟ್ವೀಟ್​​ನಲ್ಲಿ ಮಾತಿನ ಚಕಮಕಿ ನಡೆದಿದೆ.

  • Since you are the External Affairs Minister @DrSJaishankar I have appealed you for help.

    If you are busy getting appalled please point us to the person who can help us bring our people back. https://t.co/B21Lndvxit

    — Siddaramaiah (@siddaramaiah) April 18, 2023 " class="align-text-top noRightClick twitterSection" data=" ">

ಮೊದಲು ಸಿದ್ದರಾಮಯ್ಯ ಅವರು, "ಸುಡಾನ್​ನಲ್ಲಿ ಸಿಲುಕಿರುವ ಕರ್ನಾಟಕದ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ 31 ಜನರನ್ನು ಸುರಕ್ಷಿತವಾಗಿ ವಾಪಸ್​ ದೇಶಕ್ಕೆ ಕರೆ ತನ್ನಿ" ಎಂದು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ, ವಿದೇಶಾಂಗ ಸಚಿವ ಜಯಶಂಕರ್​ ಮತ್ತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟ್ಯಾಗ್​ ಮಾಡಿ ಮನವಿ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಜೈಶಂಕರ್, ಈ ವಿಷಯದ ರಾಜಕೀಕರಣದ ಬಗ್ಗೆ ಅಸಹ್ಯ ವ್ಯಕ್ತಪಡಿಸಿದ್ದಾರೆ. "ಸುಡಾನ್​ ರಾಜಧಾನಿ ಖಾರ್ಟೂಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಏಪ್ರಿಲ್ 14 ರಿಂದಲೇ ಭಾರತೀಯರ ರಕ್ಷಣೆಗೆ ಕ್ರಮ ಕೈಗೊಂಡಿದೆ. ಎಲ್ಲ ಭಾರತೀಯರ ಜೊತೆ ಸಂಪರ್ಕ ಸಾಧಿಸಿದೆ. ಸಂಘರ್ಷ ಪ್ರಾರಂಭವಾದಾಗಿನಿಂದ ಸುಡಾನ್‌ನಲ್ಲಿರುವ ಭಾರತೀಯರು ಪಿಐಒಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ನಿಮ್ಮ ಟ್ವೀಟ್​ ನೋಡಿ ನಮಗೆ ಗಾಬರಿಯಾಗಿದೆ. ಇದರಲ್ಲೂ ರಾಜಕಾರಣ ಮಾಡುವುದು ಬೇಡ" ಎಂದು ಟ್ವೀಟ್​ ಮಾಡಿದ್ದರು.

  • Simply appalled at your tweet! There are lives at stake; don’t do politics.

    Since the fighting started on April 14th, the Embassy of India in Khartoum has been continuously in touch with most Indian Nationals and PIOs in Sudan. https://t.co/MawnIwStQp

    — Dr. S. Jaishankar (@DrSJaishankar) April 18, 2023 " class="align-text-top noRightClick twitterSection" data=" ">

ಇದಕ್ಕೆ ಉತ್ತರವಾಗಿ ಮತ್ತೊಂದು ಟ್ವೀಟ್​ ಮಾಡಿರುವ ಸಿದ್ದರಾಮಯ್ಯ, ನೀವೇ ಸಹಾಯ ಮಾಡಿ ಅಥವಾ ಸಾಧ್ಯವಿರುವವರಿಗೆ ಸೂಚಿಸಿ ಎಂದು ಹೇಳಿದ್ದಾರೆ. "ನನ್ನ ಟ್ವೀಟ್​ ನೋಡಿ ನೀವು ಗಾಬರಿಗೊಂಡಿದ್ದರೆ, ದಯವಿಟ್ಟು ನಮ್ಮ ಜನರನ್ನು ಮರಳಿ ಕರೆತರಲು ನಮಗೆ ಸಹಾಯ ಮಾಡುವ ಸೂಕ್ತ ವ್ಯಕ್ತಿಯನ್ನು ಸೂಚಿಸಿ, ಅವರಿಗೆ ನಾವು ಮನವಿ ಮಾಡುತ್ತೇವೆ" ಎಂದಿದ್ದಾರೆ.

ಸುಡಾನ್‌ನಲ್ಲಿ ಏನಾಗುತ್ತಿದೆ?: ಸುಡಾನ್​​ನಲ್ಲಿ ಆಂತರಿಕ ಸಂಘರ್ಷ ನಡೆಯುತ್ತಿದೆ. ದೇಶದ ಸಶಸ್ತ್ರ ಪಡೆಗಳ ಕಮಾಂಡರ್ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್, ಅರೆಸೈನಿಕ ಪಡೆಯ ಮುಖ್ಯಸ್ಥ ಜನರಲ್ ಮೊಹಮ್ಮದ್ ಹಮ್ದಾನ್ ದಗಾಲೊ ನಡುವೆ ತೀವ್ರ ತಿಕ್ಕಾಟ ನಡೆಯುತ್ತಿದೆ. ದೇಶದ ಮೇಲೆ ಹಿಡಿತ ಸಾಧಿಸಲು ಇಬ್ಬರ ನಡುವಿನ ಕಾಳಗದಲ್ಲಿ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈಗಾಗಲೇ ಕನಿಷ್ಠ 185 ಜನರ ಸಾವನ್ನಪ್ಪಿದ್ದು, 1,800 ಜನರು ಗಾಯಗೊಂಡಿದ್ದಾರೆ ಎಂದು ಸುಡಾನ್‌ನ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ತಿಳಿಸಿದ್ದಾರೆ.

ಸುಡಾನ್ ದೇಶದಲ್ಲಿ ಸೇನೆ ಹಾಗೂ ಅರೆಸೇನಾ ಗುಂಪಿನ ನಡುವೆ ನಡೆದ ಗುಂಡಿನ ಚಕಮಕಿಯಿಂದ ಇಡೀ ದೇಶದ ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಜನವಸತಿ ಪ್ರದೇಶಗಳ ಮೇಲೂ ಗುಂಡಿನ ದಾಳಿ ನಡೆಯುತ್ತಿದ್ದು, ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ.

ಕನ್ನಡಿಗರಿಂದ ರಕ್ಷಣೆಗೆ ಮನವಿ: ಸುಡಾನ್ ದೇಶದ ಅಲ್​ಫಷೀರ್ ನಗರದಲ್ಲಿ ಸಿಲುಕಿರುವ 31 ಕನ್ನಡಿಗರು ರಕ್ಷಿಸಲು ಮನವಿ ಮಾಡಿದ್ದರು. ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿರುವ ಅವರು ಅಲ್​ಫಷೀರ್​ನಲ್ಲಿ ತೀವ್ರ ಗುಂಡಿನ ದಾಳಿ ನಡೆಯುತ್ತಿದೆ. ತಮ್ಮನ್ನು ಶೀಘ್ರವೇ ರಕ್ಷಣೆ ಮಾಡಿ ಎಂದು ಕೋರಿದ್ದಾರೆ.

ಭಾರತೀಯರು ನೆಲೆಸಿರುವ ಮನೆಗಳ ಮೇಲೂ ಗುಂಡಿನ ದಾಳಿ ನಡೆದಿದೆ. ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಆಹಾರ, ನೀರಿಗೂ ಪರಿತಪಿಸುವಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ. 31 ಮಂದಿ ಪೈಕಿ ಶಿವಮೊಗ್ಗದ 7, ದಾವಣಗೆರೆ ಜಿಲ್ಲೆ ಚನ್ನಗಿರಿಯ 5, ಮೈಸೂರು ಜಿಲ್ಲೆಯ ಹುಣಸೂರಿನ 19 ಜನರು ಇದ್ದಾರೆ. ಇವರೆಲ್ಲಾ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದವರಾಗಿದ್ದು, ಔಷಧ ಮಾರಾಟಕ್ಕೆಂದು ಸುಡಾನ್​ಗೆ ತೆರಳಿ ಸಿಕ್ಕಿಬಿದ್ದಿದ್ದಾರೆ.

ಓದಿ: ಸುಡಾನ್​​ ಸೇನಾ ಸಂಘರ್ಷ.. ಸಂಕಷ್ಟದಲ್ಲಿ 31 ಕನ್ನಡಿಗರು, ನೆರವಿಗೆ ಮನವಿ

Last Updated :Apr 19, 2023, 6:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.