ETV Bharat / state

ಮುಸ್ಲಿಮರ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ಪಂಚಮಸಾಲಿ ವಿಚಾರಣೆ

author img

By

Published : May 29, 2023, 1:31 PM IST

ಹೈಕೋರ್ಟ್
ಹೈಕೋರ್ಟ್

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿ ಪ್ರತಿಯನ್ನು ಹೈಕೋರ್ಟ್​ ಪರಿಶೀಲಿಸಿದ್ದು, ಮುಸ್ಲಿಂ ಮೀಸಲಾತಿ ಸಂಬಂಧ ಸುಪ್ರೀಂಕೋರ್ಟ್​ನಲ್ಲಿರುವ ಅರ್ಜಿ ಆದೇಶದ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಬೆಂಗಳೂರು : ಪಂಚಮಸಾಲಿ ಮೀಸಲಾತಿ ನೀಡುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿ ಪ್ರತಿಯನ್ನು ಹೈಕೋರ್ಟ್ ಸೋಮವಾರ ಪರಿಶೀಲನೆ ನಡೆಸಿತು. ಅಲ್ಲದೆ, ಕನ್ನಡ ಭಾಷೆಯಲ್ಲಿರುವ ವರದಿಯನ್ನು ಸರ್ಕಾರ ಮತ್ತು ಅರ್ಜಿದಾರರರಿಗೆ ನೀಡಲು ನ್ಯಾಯಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿತು. ಆಂಗ್ಲ‌ಭಾಷೆಗೆ ತರ್ಜುಮೆ ಮಾಡಿ ಸಲ್ಲಿಸಲು ಅಡ್ವೊಕೇಟ್​ ಜನರಲ್ ಅವರಿಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ಪಂಚಮಸಾಲಿ ಉಪ ಪಂಗಡಕ್ಕೆ ಮೀಸಲಾತಿ ನೀಡುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಲ್ಲಿಸಿದ್ದ ಮಧ್ಯಂತರ ವರದಿ ಕಾನೂನು ಬಾಹಿರ ಎಂದು ಘೊಷಣೆ ಮಾಡಲು ಕೋರಿ ಬೆಂಗಳೂರಿನ ಡಿ. ಜಿ ರಾಘವೇಂದ್ರ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿತು. ರಾಜ್ಯ ಸರ್ಕಾರ 2ಬಿ ರಲ್ಲಿದ್ದ ಮುಸ್ಲಿಂ ಸಮುದಾಯಕ್ಕೆ ಮೀಸಲು ರದ್ದು ಮಾಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣಾ ಹಂತದಲ್ಲಿದೆ. ಈ ಅರ್ಜಿ ವಿಚಾರಣೆ ತೀರ್ಮಾನ ಪರಿಗಣಿಸಿ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ವಿಚಾರಣೆಯನ್ನು ಜುಲೈ 20 ಕ್ಕೆ ಮುಂದೂಡಿತು.

ಇದನ್ನೂ ಓದಿ: ಸೇವೆಯಿಂದ ವಜಾಗೊಂಡ ನೌಕರ ಮರು ನೇಮಕವಾದಲ್ಲಿ ಗಳಿಕೆ ರಜೆಗೆ ಅರ್ಹ: ಹೈಕೋರ್ಟ್

ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು, ಸರ್ಕಾರ ಸಲ್ಲಿಸಿರುವ ಮಧ್ಯಂತರ ವರದಿ ಲಭ್ಯವಾಗಿಲ್ಲ. ಈ ಸಂಬಂಧ ಮಾಹಿತಿ ಹಕ್ಕು ಕಾಯಿದೆ ಅಡಿ ಕೇಳಲಾಗಿದೆ. ಈ ವರೆಗೂ ವರದಿ ಲಭ್ಯವಾಗಿಲ್ಲ. ವರದಿಯಲ್ಲಿನ ಅಂಶಗಳನ್ನು ಪರಿಗಣಿಸಿ ಮುಂದಿನ ವಾದ ಮಂಡಿಸಬೇಕಿದೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ತೆಗೆಯುವುದಕ್ಕೆ ನ್ಯಾಯಾಲಯದ ಅಧಿಕಾರಿಗೆ ಸೂಚನೆ ನೀಡಿತು.

ಇದನ್ನೂ ಓದಿ: ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ಕೋರಿ ಅರ್ಜಿ ಸಲ್ಲಿಸುವವರ ವಿವಾಹ ಸಿಂಧುತ್ವ ಪ್ರಶ್ನಿಸುವಂತಿಲ್ಲ: ಹೈಕೋರ್ಟ್

ವರದಿಯನ್ನ ಪರಿಶೀಲಿಸಿದ ನ್ಯಾಯಪೀಠ, ವರದಿಯನ್ನು ಅಡ್ವೋಕೇಟ್ ಜನರಲ್ ಹಾಗೂ ಅರ್ಜಿದಾರರು ವಕೀಲರಿಗೆ ನೀಡಲು ಸೂಚನೆ ನೀಡಿತು. ಜತೆಗೆ, ಮುಂದಿನ ಒಂದು ವಾರದಲ್ಲಿ ವರದಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿ ಸಲ್ಲಿಸಲು ಅಡ್ವೋಕೇಟ್ ಜನರಲ್ ಅವರಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಅರ್ಜಿ ತಿದ್ದುಪಡಿಗೆ ಅವಕಾಶ: ಸರ್ಕಾರ ಸಲ್ಲಿಸಿದ ವರದಿಯನ್ನು ಪರಿಶೀಲಿಸಿ ಅರ್ಜಿಯಲ್ಲಿ ಅಗತ್ಯ ಮುಂದಿನ ಎರಡು ವಾರಗಳಲ್ಲಿ ಅಗತ್ಯ ತಿದ್ದುಪಡಿ ಮಾಡುವುದಕ್ಕೆ ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠ ಇದೇ ವೇಳೆ ಅವಕಾಶ ನೀಡಿತು. ಅದಾದ ಬಳಿಕ ಎರಡು ವಾರಗಳಲ್ಲಿ ಸರ್ಕಾರ ಅದಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.

ಇದನ್ನೂ ಓದಿ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.