ETV Bharat / state

'ರಾಜ್ಯದ ಸಾರಿಗೆ ನಿಗಮಗಳಿಗೆ 3,604 ಹೊಸ ಬಸ್​ಗಳ ಖರೀದಿ'

author img

By

Published : Feb 22, 2023, 6:02 PM IST

purchase-of-3604-new-buses-for-state-transport-corporations
ರಾಜ್ಯದ ಸಾರಿಗೆ ನಿಗಮಗಳಿಗೆ 3,604 ಹೊಸ ಬಸ್​ಗಳ ಖರೀದಿ

ವಿಧಾನಸಭೆಯಲ್ಲಿಂದು ಕಾಂಗ್ರೆಸ್​ ಸದಸ್ಯರ ಪ್ರಶ್ನೆಗೆ ಸಾರಿಗೆ ಸಚಿವ ಶ್ರೀರಾಮುಲು ಅವರ ಪರವಾಗಿ ಇಂಧನ ಸಚಿವ ವಿ.ಸುನೀಲ್​ ಕುಮಾರ್​ ಉತ್ತರ ನೀಡಿದರು.

ಬೆಂಗಳೂರು: ರಾಜ್ಯದಲ್ಲಿನ ವಿವಿಧ ಸಾರಿಗೆ ನಿಗಮಗಳಿಗೆ 3604 ಹೊಸ ಬಸ್​ಗಳನ್ನು ಖರೀದಿ ಮಾಡಲಾಗುತ್ತಿದ್ದು, ಈ ಪೈಕಿ ಕಲ್ಯಾಣ ಕರ್ನಾಟಕ ಭಾಗಕ್ಕೆ 800 ಬಸ್​ಗಳನ್ನು ನೀಡಲಾಗುವುದು ಎಂದು ಇಂಧನ ಸಚಿವ ವಿ.ಸುನಿಲ್‍ ಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು. ಇಂದು ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‍ ಸದಸ್ಯ ಇ.ತುಕಾರಾಂ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸ ಬಸ್‍ ಖರೀದಿಸುತ್ತಿರುವುದರಿಂದ ಅಗತ್ಯವಿರುವ ಕಡೆ ಆದ್ಯತೆ ಮೇಲೆ ಬಸ್​ಗಳನ್ನು ಒದಗಿಸಲಾಗುವುದು. ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ಯಾವುದೇ ರೀತಿ ತೊಂದರೆ ಆಗದಂತೆ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ವ್ಯಾಪ್ತಿಯ 41 ವಿಧಾನಸಭಾ ಕ್ಷೇತ್ರಗಳಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಒಟ್ಟು 45 ಘಟಕಗಳಿದ್ದು, ಈ ಪೈಕಿ ರಾಯಚೂರಿನಲ್ಲಿ ಹೊಸದಾಗಿ ಘಟಕ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. ಇನ್ನು ಕಾಂಗ್ರೆಸ್​ ಸದಸ್ಯ ಡಾ.ರಂಗನಾಥ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಕುಣಿಗಲ್‍ ಕ್ಷೇತ್ರದಲ್ಲಿ ಸಾರಿಗೆ ಬಸ್​ಗಳ ಸಮಸ್ಯೆ ನಿವಾರಣೆ ಸಂಬಂಧ ಮಧ್ಯಾಹ್ನ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಆಡಳಿತ ಪಕ್ಷದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಸುನೀಲ್ ಕುಮಾರ್, ಕುಂದಾಪುರದ ಪ್ರಾದೇಶಿಕ ಸಾರಿಗೆ ಕಚೇರಿ ತೆರೆಯಲಯ ನಿಗದಿಪಡಿಸಲಾದ ಮಾನದಂಡಗಳ ಪ್ರಕಾರ ಅವಕಾಶವಿಲ್ಲ. ಕುಂದಾಪುರ ಮತ್ತು ಬೈಂದೂರು ತಾಲ್ಲೂಕಿನ ಸುತ್ತಮುತ್ತ ತಾಲ್ಲೂಕಿನ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿ ಮಂಗಳವಾರ ಕುಂದಾಪುರದಲ್ಲಿ ಸಾರಿಗೆ ಶಿಬಿರ ನಡೆಸಲಾಗುತ್ತಿದ್ದೆ. 60 ಕಿ.ಮೀ. ದೂರವಿದ್ದು, ಕುಂದಾಪುರದಲ್ಲಿ ಪ್ರಾದೇಶಿಕ ಕಚೇರಿ ತೆರೆಯಬೇಕು ಎಂಬ ಶಾಸಕರ ಬೇಡಿಕೆ ಬಗ್ಗೆ ಸಾರಿಗೆ ಸಚಿವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಭವನ ನಿರ್ಮಾಣಕ್ಕೆ ಮಂಜೂರಾತಿ: ಅರಸೀಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2009-10ರಿಂದ ಇದುವರೆಗೂ 92 ಡಾ.ಬಿ.ಆರ್​.ಅಂಬೇಡ್ಕರ್​ ಭವನ ಹಾಗೂ ಡಾ.ಬಾಬು ಜಗಜೀವನ್‍ ರಾಂ ಭವನಗಳ ನಿರ್ಮಾಣ ಮಾಡಲು ಮಂಜೂರಾತಿ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಧಾನಸಭೆಯಲ್ಲಿ ಜೆಡಿಎಸ್‍ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿದರು. ಈ ಪೈಕಿ 72 ಭವನಗಳ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಹಸ್ತಾಂತರ ಮಾಡಲಾಗುವುದು. 17 ಭವನಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ ಮೂರು ಭವನಗಳ ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿದೆ ಎಂದು ಹೇಳಿದರು.

ಕೃಷಿ ಹೊಂಡಗಳ ನಿರ್ಮಾಣ: ತುಮಕೂರು ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 1854 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದ್ದು, 754.22 ಲಕ್ಷ ಕೋಟಿ ರೂ. ವೆಚ್ಚ ಭರಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು, ಬಿಜೆಪಿ ಸದಸ್ಯ ಜಯರಾಮ್ ಅವರ ಪ್ರಶ್ನೆಗೆ ಉತ್ತರಿಸಿದರು. 2020-21ನೇ ಸಾಲಿನಲ್ಲಿ ಕೃಷಿ ಭಾಗ್ಯದ ಯೋಜನೆಯಡಿ ನೂತನ ಕೃಷಿ ಹೊಂಡಗಳ ಅನುಷ್ಠಾನಕ್ಕೆ ಅನುದಾನ ಒದಗಿಸಿಲ್ಲ.

2021-22ನೇ ಸಾಲಿನಿಂದ ಕೃಷಿ ಭಾಗ್ಯ ಯೋಜನೆಯನ್ನು ಮುಂದುವರೆಸಿಲ್ಲ. ಜಲಾನಯನ ಅಭಿವೃದ್ಧಿ ಇಲಾಖೆಯಡಿಯಲ್ಲಿ 3688 ಕೃಷಿ ಹೊಂಡಗಳನ್ನು ನಿರ್ಮಿಸಿದ್ದು, ಒಟ್ಟು 2618.49 ಲಕ್ಷ ರೂ. ವೆಚ್ಚ ಭರಿಸಲಾಗಿದೆ. ಕಳೆದ ಮೂರು ವರ್ಷದಲ್ಲಿ ತುಮಕೂರು ಜಿಲ್ಲೆಯಲ್ಲಿ ಕೃಷಿ ಹೊಂಡಕ್ಕಾಗಿ ಕೃಷಿ ಇಲಾಖೆಯು 1854 ಫಲಾನುಭವಿಗಳ ಮಾಹಿತಿಯನ್ನು ಸಿಡಿ ರೂಪದಲ್ಲಿ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಯ ಒಟ್ಟು 3688 ಫಲಾನುಭವಿಗಳ ವಿವರವನ್ನು ಅನುಬಂಧ ರೂಪದಲ್ಲಿ ಒದಗಿಸಿರುವುದಾಗಿ ಹೇಳಿದರು.

ಇದನ್ನೂ ಓದಿ: ಅಧಿಕಾರಿಯಿಂದ ಕಮಿಷನ್​ ಬೇಡಿಕೆ: ರಾಜೀನಾಮೆ ಸಲ್ಲಿಸಿದ ಗ್ರಾ.ಪಂ ಸದಸ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.