ಬೆಂಗಳೂರು: ಪ್ರಬಲ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಲು, ಹಿಂದುಳಿದ ವರ್ಗದ ಮೀಸಲಾತಿ ತೆಗೆಯಬೇಡಿ ಎಂದು ಸಿಎಂಗೆ ಮನವಿ ಮಾಡಿದ್ದೇವೆ ಎಂಬುದಾಗಿ ಅತೀ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನಂತರ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಬಹಳ ದಿನಗಳಿಂದ ಹೋರಾಟ ಮಾಡ್ತಿದೆ. ನಾಲ್ಕೈದು ಬೇಡಿಕೆಗಳನ್ನ ಸಿಎಂ ಮುಂದಿಟ್ಟಿದ್ದೇವೆ. ಜಾತಿ ಜನಗಣತಿ ವರದಿ ಮಂಡನೆ ಬಿಡುಗಡೆ ಮಾಡಲು ಮನವಿ ಮಾಡಿದ್ದೇವೆ. ಅತಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ವರ್ಗೀಕರಣ ಹಾಗೂ 2ಎ ಯಿಂದ ತೆಗೆಯದಂತೆ ಮನವಿ ಮಾಡಿದ್ದೇವೆ ಎಂದರು.
2 ಎಗೆ ಪ್ರಬಲ ಸಮುದಾಯವನ್ನು ಅವೈಜ್ಞಾನಿಕವಾಗಿ ಸೇರಿಸದಂತೆ ಮನವಿ ಮಾಡಿದೀವಿ. ಪಂಚಮಸಾಲಿ ಸಮುದಾಯದವರಿಗೆ ಹತ್ತಾರು ಮಠಗಳಿವೆ, ಪ್ರಭಾವಿಗಳಿದ್ದಾರೆ. ಅನೇಕ ಶಿಕ್ಷಣ ಸಂಸ್ಥೆಗಳು ಇವೆ ಎಂದರು.
ಕೇಂದ್ರ ಸರ್ಕಾರ ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ ಹಿಂದುಳಿದ ವರ್ಗಗಳ ಮಸೂದೆ ಹಾಗೂ ರಾಜ್ಯದ ಅತಿ ಹಿಂದುಳಿದ ಸಮುದಾಯಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಜಾಗೃತ ವೇದಿಕೆಯ ಸಲಹೆಗಾರ ಡಾ. ಸಿ. ಎಸ್ ದ್ವಾರಕಾನಾಥ್, ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಅಧ್ಯಕ್ಷ ಎಂ ಸಿ ವೇಣುಗೋಪಾಲ್, ವಿಧಾನ ಪರಿಷತ್ ಸದಸ್ಯ ಪಿ ಆರ್ ರಮೇಶ್, ಮಾಜಿ ಶಾಸಕರಾದ ನರೇಂದ್ರ ಬಾಬು, ಸೇರಿದಂತೆ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಓದಿ: ಕೋವಿಡ್ ಬಗ್ಗೆ ಸರ್ವೇ ಮಾಡಿದ ಬಳಿಕವೇ ಪ್ರಾಥಮಿಕ ಶಾಲೆಗಳ ಆರಂಭ: ಸಚಿವ ಬಿ ಸಿ ನಾಗೇಶ್