ETV Bharat / state

ಬೆಂಗಳೂರಿಗೆ ಬಂದಿಳಿದ ರಾಜ್ಯ ಬಿಜೆಪಿ ಉಸ್ತುವಾರಿ: ಬಿಜೆಪಿಯಿಂದ ಲೋಕಸಭಾ ಚುನಾವಣಾ ಯೋಜನಾ ಸಭೆ

author img

By ETV Bharat Karnataka Team

Published : Jan 7, 2024, 10:36 PM IST

Etv Bharatlokasabha-election-planning-meeting-from-bjp-will-held-tomorrow
ಬೆಂಗಳೂರಿಗೆ ಬಂದಿಳಿದ ರಾಜ್ಯ ಬಿಜೆಪಿ ಉಸ್ತುವಾರಿ: ನಾಳೆ ಬಿಜೆಪಿಯಿಂದ ಲೋಕಸಭಾ ಚುನಾವಣಾ ಯೋಜನಾ ಸಭೆ

ಸೋಮವಾರ ರಾಜ್ಯ ಬಿಜೆಪಿಯ ಲೋಕಸಭಾ ಚುನಾವಣಾ ಯೋಜನಾ ಸಭೆಯು ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಹೋಟೆಲ್ ರಮಾಡದಲ್ಲಿ ನಡೆಯಲಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮ್ಮುಖದಲ್ಲಿ ನಡೆಯಲಿರುವ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಬಿ ವೈ ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್​. ಅಶೋಕ್​, ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ ಸೇರಿದಂತೆ ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರು: ಲೋಕಸಭಾ ಚುನಾವಣಾ ಸಿದ್ಧತೆಗೆ ರಾಜ್ಯ ಬಿಜೆಪಿ ಅಧಿಕೃತ ಚಾಲನೆ ನೀಡುತ್ತಿದ್ದು, ಸೋಮವಾರ ಲೋಕಸಭಾ ಚುನಾವಣಾ ಯೋಜನಾ ಸಭೆ ಆಯೋಜನೆ ಮಾಡಿದೆ. ಹೈಕಮಾಂಡ್ ಸಂದೇಶ ಹೊತ್ತ ರಾಜ್ಯ ಬಿಜೆಪಿ ಉಸ್ತುವಾರಿ ನಗರಕ್ಕೆ ಆಗಮಿಸಿದ್ದು, ರಾಜ್ಯ ನಾಯಕರ ಸಮ್ಮುಖದಲ್ಲಿ ಸಭೆ ನಡೆಸಲಿದ್ದಾರೆ. ರಾಜ್ಯ ಬಿಜೆಪಿಯ ಲೋಕಸಭಾ ಚುನಾವಣಾ ಯೋಜನಾ ಸಭೆಯು ಸೋಮವಾರ ಬೆಳಗ್ಗೆ 10 ಗಂಟೆಗೆ ಯಲಹಂಕ ಬಳಿಯ ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಹೋಟೆಲ್ ರಮಾಡದಲ್ಲಿ ನಡೆಯಲಿದೆ.

ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮ್ಮುಖದಲ್ಲಿ ನಡೆಯಲಿರುವ ಹೊಸ ನಾಯಕತ್ವದ ನೇತೃತ್ವದ ಮೊದಲ ಸಭೆಯಲ್ಲಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆ. ರಾಜ್ಯದಲ್ಲಿ ಪಕ್ಷ 25 ಸಂಸದರನ್ನು ಹೊಂದಿದ್ದು, ಈ ಬಾರಿ ಹಲವರು ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದಾರೆ. ಹಾಗಾಗಿ ಅಂತಹ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿ ಹುಡುಕಾಟ ನಡೆಸಬೇಕಿದೆ. ಕೆಲವು ಕಡೆ ಅಭ್ಯರ್ಥಿ ಬದಲಾವಣೆ ಮಾಡುವ ಆಲೋಚನೆಯೂ ಪಕ್ಷಕ್ಕಿದೆ. ಆ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಯಲಿದೆ. ಇರುವ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಾಗುತ್ತದೆ.

ಇನ್ನು ಈ ಬಾರಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಎನ್​ಡಿಎ ಮೈತ್ರಿಕೂಟ ಸೇರಿದ್ದು, ಚುನಾವಣಾ ಪೂರ್ವ ಹೊಂದಾಣಿಕೆಯಂತೆ ಸೀಟು ಹಂಚಿಕೆಯಾಗಬೇಕಾಗಿದೆ. ಈ ಸಂಬಂಧ ದೆಹಲಿ ಮಟ್ಟದಲ್ಲಿ ಮಾತುಕತೆ ನಡೆಯಲಿದ್ದರೂ ರಾಜ್ಯದ ನಾಯಕರ ಅಭಿಪ್ರಾಯ, ಎಷ್ಟು ಸ್ಥಾನ ಜೆಡಿಎಸ್​ಗೆ ಕೊಡಬಹುದು, ಯಾವ ಕ್ಷೇತ್ರ ಕೊಡಬಹುದು ಎನ್ನುವ ಕುರಿತು ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಅದರ ವರದಿಯನ್ನು ಹೈಕಮಾಂಡ್​ಗೆ ಸಲ್ಲಿಕೆ ಮಾಡಲಾಗುತ್ತದೆ. ಆಡಳಿತಾರೂಢ ಕಾಂಗ್ರೆಸ್ ಗ್ಯಾರಂಟಿಗಳನ್ನೇ ಜನರ ಮುಂದಿಡಲು ಸಜ್ಜಾಗಿದೆ. ಹಾಗಾಗಿ ಅದಕ್ಕೆ ತಕ್ಕ ಪ್ರತಿತಂತ್ರ ರೂಪಿಸಬೇಕು, ವಿಧಾನಸಭಾ ಚುನಾವಣೆಯಲ್ಲಿ ಕಡೆಗಣಿಸಿದಂತೆ ಲೋಕಸಭಾ ಚುನಾವಣೆಯಲ್ಲಿ ಮೈಮರೆಯದೆ ಸಮರ್ಥ ಕಾರ್ಯತಂತ್ರ ರೂಪಿಸುವ ಕುರಿತು ಚರ್ಚೆ ನಡೆಯಲಿದೆ.

ನಾಯಕರ ರಾಜ್ಯ ಪ್ರವಾಸ, ಕೇಂದ್ರದ ಸಾಧನೆ ಜನರ ಮುಂದಿಡುವುದು, ಗ್ಯಾರಂಟಿ ಕಾರಣದಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಆಗದೆ ಉದ್ಭವಿಸಿರುವ ಸಮಸ್ಯೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಕಾಂಗ್ರೆಸ್ ವಿರುದ್ಧ ನಡೆಸಬೇಕಾದ ಹೋರಾಟದ ಕುರಿತು ಮಾತುಕತೆ ನಡೆಸಲಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: ಜನವರಿ 22ರಂದು ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ; ಸರ್ಕಾರದ ಆದೇಶ ಸ್ವಾಗತಿಸಿದ ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.