ETV Bharat / state

ಇಂದು 40-50 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಿ ಎಂ ಇಬ್ರಾಹಿಂ

author img

By

Published : Apr 3, 2023, 3:25 PM IST

ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ
ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ

ಇಂದು ಸಂಜೆ ಜೆಡಿಎಸ್​ ಕಚೇರಿಯಲ್ಲಿ ಸಭೆ ಇದೆ. ಇವತ್ತು ಒಂದು ಪಟ್ಟಿಯನ್ನು ಅಂತಿಮಗೊಳಿಸುತ್ತೇವೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.

ಬೆಂಗಳೂರು : ಇಂದು 40 ರಿಂದ 50 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ತಿಳಿಸಿದ್ದಾರೆ. ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದು ಸಂಜೆ ಜೆಡಿಎಸ್ ಕಚೇರಿಯಲ್ಲಿ ಸಭೆ ಇದೆ, ಪಟ್ಟಿ ಅಂತಿಮಗೊಳಿಸುತ್ತೇವೆ ಎಂದರು. ಹಾಸನ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಹೈವೋಲ್ಟೇಜ್ ಸಭೆ ಅಂತ ಏನಿಲ್ಲ. ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಮತ್ತು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಜೊತೆ ಸಭೆ ಆಗಿದೆ‌.

ದೇವೇಗೌಡರು ಏನು ಹೇಳುತ್ತಾರೋ ಅದಕ್ಕೆ ಸ್ವರೂಪ್ ಕೂಡ ಬದ್ಧರಾಗಿರುತ್ತಾರೆ. ಹೆಚ್ ಡಿ ರೇವಣ್ಣ ಕೂಡ ಬದ್ಧರಾಗಿದ್ದಾರೆ ಎಂದು ಹೇಳಿದರು. ಹಾಸನ ಜಿಲ್ಲೆಯ ಟಿಕೆಟ್ ಇಂದೇ ಘೋಷಣೆ ಆಗುತ್ತಾ ಎಂಬ ಪ್ರಶ್ನೆಗೆ ವೇಟ್ ಅಂಡ್ ಸೀ ಎಂದ ಅವರು, ವಿಡಿಯೋ ಕಾನ್ಫರೆನ್ಸ್​ನಲ್ಲಿ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕ್ಲಾಸ್ ವಿಚಾರದಲ್ಲಿ ಸರಿಯಾಗಿ‌‌ ಕೆಲಸ ಮಾಡುತ್ತಿಲ್ಲ ಎಂದು ತಿಳಿ ಹೇಳಿದ್ದಾರೆ ಅಷ್ಟೇ. ಬೇರೆ ಏನಿಲ್ಲ ಎಂದರು.

ದೇವೇಗೌಡರ ಮನೆಯಲ್ಲಿ ತಡರಾತ್ರಿ ಸಭೆ- ಬಗೆಹರಿಯದ ಹಾಸನ ಟಿಕೆಟ್​ ಬಿಕ್ಕಟ್ಟು: ಹಾಸನ‌ ವಿಧಾನಸಭೆ ಕ್ಷೇತ್ರದ ಟಿಕೆಟ್ ಬಿಕ್ಕಟ್ಟು ಸಂಬಂಧ ಭಾನುವಾರ(ನಿನ್ನೆ) ತಡರಾತ್ರಿ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಮಹತ್ವದ ಸಭೆ ನಡೆದಿದೆ. ಆದರೆ, ಗೊಂದಲ ನಿವಾರಣೆ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಹೆಚ್.ಡಿ.ರೇವಣ್ಣ, ಭವಾನಿ ರೇವಣ್ಣ ಹಾಗೂ ಕುಮಾರಸ್ವಾಮಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಆರಂಭವಾದ 15 ನಿಮಿಷದಲ್ಲೇ ಭವಾನಿ ರೇವಣ್ಣ ನಿರ್ಗಮಿಸಿದರು ಎನ್ನಲಾಗಿದೆ.

ಅಸಮಾಧಾನ ವ್ಯಕ್ತಪಡಿಸಿ ಭವಾನಿ ಹೊರ ನಡೆದರು ಎಂದು ಹೇಳಲಾಗಿದೆ. ಇದಾದ ಕೆಲವೇ ಹೊತ್ತಿನಲ್ಲೇ ಹೆಚ್.ಡಿ.ರೇವಣ್ಣ ಕೂಡ ಸಭೆಯಿಂದ ಹೋಗಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಇಬ್ಬರೂ ನಿರಾಕರಿಸಿದ್ದಾರೆ. ಮೇಲ್ನೋಟಕ್ಕೆ ಹಾಸನ‌ ಟಿಕೆಟ್ ವಿಚಾರದಲ್ಲಿ ಒಮ್ಮತ ಮೂಡಿಲ್ಲ ಎಂದು ಹೇಳಲಾಗುತ್ತಿದೆ. ಭವಾನಿ ರೇವಣ್ಣ ಹಾಸನ ಕ್ಷೇತ್ರದ ಟಿಕೆಟ್​​ಗಾಗಿ ಪಟ್ಟು ಹಿಡಿದಿದ್ದಾರೆ. ಹೆಚ್.ಡಿ ರೇವಣ್ಣ ಕೂಡ ಪತ್ನಿ ಬೆಂಬಲಕ್ಕೆ ನಿಂತಿದ್ದಾರೆ. ಆದರೆ, ಹೆಚ್.ಡಿ.ಕುಮಾರಸ್ವಾಮಿ ಅವರು ಸ್ವರೂಪ್ ಅವರನ್ನು ಕಣಕ್ಕಿಳಿಸಲು ಒಲವು ತೋರಿದ್ದಾರೆ. ಈ ನಿಟ್ಟಿನಲ್ಲಿ ಸಹೋದರರಾದ ಕುಮಾರಸ್ವಾಮಿ ಹಾಗೂ ರೇವಣ್ಣ ನಡುವೆ ಜಟಾಪಟಿಯೂ ನಡೆದಿತ್ತು. ಟಿಕೆಟ್ ಬಿಕ್ಕಟ್ಟು ಬಗೆಹರಿಯದ ಕಾರಣ ದೊಡ್ಡಗೌಡರು ಮಧ್ಯಪ್ರವೇಶ ಮಾಡಿದ್ದಾರೆ.

ಇಂದು(ಸೋಮವಾರ) ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದರು. ಹಾಸನ ಅಭ್ಯರ್ಥಿಯನ್ನೂ ಸೇರಿಸಿ ಟಿಕೆಟ್ ಬಿಡುಗಡೆಯಾಗಲಿದೆ ಎಂದಿದ್ದರು. ಆದರೆ, ಭಾನುವಾರ ರಾತ್ರಿ ದೇವೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಹಾಸನ‌ ಟಿಕೆಟ್ ಸಂಬಂಧ ಒಮ್ಮತ ಮೂಡಿಲ್ಲ ಎನ್ನಲಾಗಿದೆ.

ಇಂದು ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗುತ್ತಾ ಅಥವಾ ಹಾಸನ ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತೋ ಎಂಬ ಕುತೂಹಲವಿದೆ. ಹೆಚ್.ಡಿ.ರೇವಣ್ಣ - ಭವಾನಿ ದಂಪತಿ ಸಭೆಯಿಂದ ತೆರಳಿದ ಬಳಿಕವೂ ದೇವೇಗೌಡರು ಹೆಚ್.ಡಿ.ಕುಮಾರಸ್ವಾಮಿ ಜತೆ ಸಭೆ ಮುಂದುವರಿಸಿದರು. ಸಭೆಯಲ್ಲಿ ಭವಾನಿ ಹಾಸನ ಟಿಕೆಟ್ ಪಟ್ಟು ಸಡಿಲಿಸಿಲ್ಲ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ : ದೇವೇಗೌಡರ ನಿವಾಸದಲ್ಲಿ ತಡರಾತ್ರಿ ನಡೆದ ಸಭೆ; ಬಗೆಹರಿಯದ ಹಾಸನ ಟಿಕೆಟ್‌ ಬಿಕ್ಕಟ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.