ETV Bharat / state

ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ: ಸಿಎಂ ಅಭ್ಯರ್ಥಿ ಇಂದೇ ಫೈನಲ್‌; ನಾಳೆ ಹೊಸ ಸಿಎಂ ಪ್ರಮಾಣ ಸಾಧ್ಯತೆ

author img

By

Published : May 14, 2023, 10:48 AM IST

Congress Legislative Party to meet
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಬೆಂಗಳೂರಿನಲ್ಲಿ ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದು ಅಂತಿಮವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು: ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ. ಸಂಜೆ ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರನ್ನು ಒಳಗೊಂಡು ನಗರದ ಖಾಸಗಿ ಹೋಟೆಲ್​​ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. 6 ಗಂಟೆಗೆ ನಡೆಯುವ ಸಭೆಯಲ್ಲಿ ಎಲ್ಲ 135 ಶಾಸಕರು ಪಾಲ್ಗೊಳ್ಳಲಿದ್ದಾರೆ.

ಮುಖ್ಯಮಂತ್ರಿ ರೇಸ್​​ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಹಿರಿಯ ಶಾಸಕರಾದ ಆರ್.ವಿ.ದೇಶಪಾಂಡೆ , ಹೆಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರ ಹೆಸರುಗಳು ಕೇಳಿ ಬರುತ್ತಿವೆ. ಅಂತಿಮವಾಗಿ ಸಿದ್ದರಾಮಯ್ಯ ಇಲ್ಲವೇ ಡಿ.ಕೆ.ಶಿವಕುಮಾರ್ ಇಬ್ಬರಲ್ಲಿ ಒಬ್ಬರು ಮುಖ್ಯಮಂತ್ರಿ ಗಾದಿಗೇರುವುದು ಬಹುತೇಕ ಖಚಿತ.

ಮೂಲಗಳ ಪ್ರಕಾರ, "ಮೊದಲ ಎರಡು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ನಂತರದ ಮೂರು ವರ್ಷದ ಅವಧಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗಿ ಕಾರ್ಯನಿರ್ವಹಿಸಲಿದ್ದಾರೆ. 2028ರ ವಿಧಾನಸಭೆ ಚುನಾವಣೆ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯಲಿದೆ ಎಂಬ ಮಾಹಿತಿ ಇದೆ. ಇಂದು ಕಾಂಗ್ರೆಸ್ ಪಕ್ಷದ ಶಾಸಕರ ಒಲವು ಯಾರ ಮೇಲೆ ಇದೆ ಎನ್ನುವುದನ್ನು ಆಧರಿಸಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಆಗಲಿದೆ. ನೂತನ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗುತ್ತಾರೋ ಅವರೇ ನಾಳೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.

ಗುಪ್ತ ಮತದಾನದ ಮೂಲಕ ಆಯ್ಕೆ: ಮುಖ್ಯಮಂತ್ರಿ ಸ್ಥಾನಕ್ಕೇರಲು ಕಾಂಗ್ರೆಸ್ ನಾಯಕರಲ್ಲಿ ತೀವ್ರ ಪೈಪೋಟಿ ಇದ್ದು ರಾಷ್ಟ್ರೀಯ ನಾಯಕರು ಒಬ್ಬರ ಮನವೊಲಿಸಿ ಇನ್ನೊಬ್ಬರನ್ನು ಮುಖ್ಯಮಂತ್ರಿ ಪಟ್ಟಕ್ಕೆ ಏರಿಸುವ ಪ್ರಯತ್ನದಲ್ಲಿ ಇದ್ದಾರೆ. ಒಂದೊಮ್ಮೆ ಈ ಕಾರ್ಯದಲ್ಲಿ ಯಶಸ್ಸು ಸಿಗದಿದ್ದರೆ ಗುಪ್ತ ಮತದಾನದ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವಕಾಶ ಕಾಂಗ್ರೆಸ್ ಮುಂದಿದೆ.

ಈ ಹಂತದವರೆಗೆ ಪಕ್ಷದ ಪರಿಸ್ಥಿತಿಯನ್ನು ಕೊಂಡೊಯ್ಯದಿರಲು ತೀರ್ಮಾನಿಸಿರುವ ರಾಷ್ಟ್ರೀಯ ನಾಯಕರು ನಿನ್ನೆಯೇ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಒಂದೆರಡು ಸುತ್ತಿನ ಸಮಾಲೋಚನೆ ನಡೆಸಿದ್ದಾರೆ. ಇಂದು ಸಂಜೆಯೊಳಗೆ ಇನ್ನೂ ಕೆಲ ಹಂತದ ಸಭೆಗಳು ನಡೆಯುವ ಸಾಧ್ಯತೆ ಇದೆ. ಅಂತಿಮವಾಗಿ ಶಾಸಕರ ವಿಶ್ವಾಸ ಹೊಂದಿರುವ ನಾಯಕರು ಮುಂದಿನ ಮುಖ್ಯಮಂತ್ರಿ ಆಗಿ ಪದಗ್ರಹಣ ಮಾಡಲಿದ್ದಾರೆ. ಒಂದೊಮ್ಮೆ ಬದಲಾವಣೆ ಅನಿವಾರ್ಯವಾದರೆ ಶಾಸಕರ ಮನವೊಲಿಸಿ ಪ್ರಬಲ ನಾಯಕನನ್ನು ಮುಖ್ಯಮಂತ್ರಿ ಪಟ್ಟಕ್ಕೆ ಏರಿಸುವ ಪ್ರಯತ್ನವನ್ನು ಹೈಕಮಾಂಡ್ ನಾಯಕರು ಮಾಡಲಿದ್ದಾರೆ.

ಶಾಸಕಾಂಗ ಸಭೆಯಲ್ಲಿಯೇ ಮುಂದಿನ ಮುಖ್ಯಮಂತ್ರಿ ಯಾರು ಎಂಬ ನಿರ್ಧಾರ ಆಗಲಿದ್ದು, ನಾಳೆಯೇ ನೂತನ ಮುಖ್ಯಮಂತ್ರಿ ಪದಗ್ರಹಣ ಮಾಡಲಿದ್ದಾರೆ. ನಂತರ ಸಚಿವ ಸಂಪುಟ ರಚನೆ ಆಗಲಿದೆ. ಮತದಾನಕ್ಕೂ ಮುನ್ನವೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ಮೇ 15ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯಾರ ನೇತೃತ್ವದಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ ಎಂಬುದನ್ನು ಘೋಷಿಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದಿದ್ದರು.

ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರ ಕೈಗೊಂಡು ನಾಳೆ ಅಧಿಕೃತ ಘೋಷಣೆಯನ್ನು ಖರ್ಗೆ ಮಾಡುವ ಸಾಧ್ಯತೆ ಹೆಚ್ಚಿದೆ. ಸಾಕಷ್ಟು ಗ್ಯಾರಂಟಿಗಳನ್ನು ಘೋಷಿಸಿ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಅನುಮೋದನೆಗೆ ತರುವುದಾಗಿ ಕಾಂಗ್ರೆಸ್ ಭರವಸೆ ನೀಡಿದ್ದು ಇದಕ್ಕೆ ಜನ ಬೆಂಬಲ ಸಹ ಲಭಿಸಿದೆ. ಇದೀಗ ಆದಷ್ಟು ಬೇಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದ್ದು, ಸಚಿವ ಸಂಪುಟ ರಚನೆಯಾಗಿ ಮೊದಲ ಸಂಪುಟ ಸಭೆ ನಡೆಯಬೇಕಿದೆ.

ನಾಳೆಯೇ ನೂತನ ಸಿಎಂ ಪ್ರಮಾಣ ವಚನ?: ಜನರು ಸಹ ತೀವ್ರ ಕುತೂಹಲದಿಂದ ಕಾಂಗ್ರೆಸ್ ಘೋಷಣೆಯ ಬಗ್ಗೆ ಕಾಯುತ್ತಿದ್ದು ಪಕ್ಷದ ಶಾಸಕರಲ್ಲಿಯೂ ಸಹ ಈ ವಿಚಾರದಲ್ಲಿ ಆಸಕ್ತಿ ಗರಿಗೆದರಿದೆ. ಆದಷ್ಟು ಶೀಘ್ರ ಕಾಂಗ್ರೆಸ್ ಸರ್ಕಾರ ಸಂಪುಟ ರಚಿಸಿ ಒಂದು ಜಂಟಿ ಅಧಿವೇಶನವನ್ನು ಸಹ ಕರೆಯಲಿದ್ದು ನೂತನ ಬಜೆಟ್ ಮಂಡಿಸಿ ಅನುಮೋದನೆ ಪಡೆಯಲು ಚಿಂತನೆ ನಡೆಸಿದೆ. ನಿರೀಕ್ಷೆಗೂ ಮೀರಿದ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ರಾಜ್ಯ ನಾಯಕರ ಹಾಗೂ ಹೈಕಮಾಂಡ್ ನಾಯಕರ ನಡುವಿನ ಮಾತುಕತೆ ಫಲಪ್ರದವಾದರೆ ನಾಳೆಯೇ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: ಕರುನಾಡಿಗೆ ಯಾರಾಗ್ತಾರೆ ಸಿಎಂ? ಸಿದ್ದರಾಮಯ್ಯ-ಡಿಕೆಶಿ ನಡುವೆ ಪೈಪೋಟಿ; ಹೈಕಮಾಂಡ್‌ ಅಂಗಳದಲ್ಲಿ ಚೆಂಡು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.