ETV Bharat / state

ಭಾರತ - ಆಸೀಸ್​ ಟಿ20 ಪಂದ್ಯ: ಮದ್ಯದ ನಶೆಯಲ್ಲಿ ಪಾಕ್​ ಪರ ಘೋಷಣೆ ಕೂಗಿದ್ದ ಇಬ್ಬರ ಬಂಧನ

author img

By ETV Bharat Karnataka Team

Published : Dec 2, 2023, 7:54 PM IST

Updated : Dec 2, 2023, 8:15 PM IST

Pro-Pakistan announcement arrest of two
ಪಾಕ್​ ಪರ ಘೋಷಣೆ

ಭಾರತ - ಆಸ್ಟ್ರೇಲಿಯಾ ನಡುವಿನ 4ನೇ ಟಿ20 ಪಂದ್ಯದ ವೇಳೆ ಪಬ್​ ಒಂದರಲ್ಲಿ ಪಾಕ್​ ಪರ ಘೋಷಣೆ ಕೂಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟಿ20 ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಇಬ್ಬರು ಆರೋಪಿಗಳನ್ನು ಜೆ.ಪಿ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇನಾಯತ್ ಉಲ್ಲಾ ಖಾನ್ ಹಾಗೂ ಸೈಯ್ಯದ್ ಮುಬಾರಕ್ ಬಂಧಿತ ಆರೋಪಿಗಳು.

ಶುಕ್ರವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ವೇಳೆ ಜೆ.ಪಿ.ನಗರದ ಮೊದಲನೇ ಹಂತದಲ್ಲಿರುವ ಪಬ್​ ಒಂದರಲ್ಲಿ ಕುಳಿತಿದ್ದ ಆರೋಪಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದರು. ಆರೋಪಿಗಳ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಇತರ ಗ್ರಾಹಕರು, ಜೆ.ಪಿ.ನಗರ ಠಾಣಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಜೆ.ಪಿ.ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಚಾರಣೆ ವೇಳೆ 'ಮದ್ಯದ ನಶೆಯಲ್ಲಿ ಕೂಗಿದ್ದಾಗಿ' ಆರೋಪಿಗಳು ಪೊಲೀಸರ ಮುಂದೆ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಗಲಭೆಗೆ ಪ್ರಚೋದನೆ, ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗ ಆರೋಪದಡಿ ಪ್ರಕರಣ ದಾಖಲಾಗಿದೆ.

ವಿಶ್ವಕಪ್​ ಬೆನ್ನಲ್ಲೇ ಟಿ20 ಸರಣಿ: 2023ರ ಏಕದಿನ ವಿಶ್ವಕಪ್​ ಮುಗಿದ ನಾಲ್ಕು ದಿನದಲ್ಲೇ ಆಸ್ಟ್ರೇಲಿಯಾ ವಿರುದ್ಧ 5 ಟಿ20 ಪಂದ್ಯಗಳ ಸರಣಿ ಆರಂಭವಾಯಿತು. ಮೊದಲ ಎರಡು ಟಿ20 ಪಂದ್ಯದಲ್ಲಿ ಭಾರತ ತಂಡ ಗೆದ್ದುಕೊಂಡಿತು. ಮೂರನೇ ಪಂದ್ಯದಲ್ಲಿ ಆಸೀಸ್​ ಗೆದ್ದು ಸರಣಿ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ, ರಾಯಪುರದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಭಾರತ 20 ರನ್​ಗಳ ಗೆಲುವು ದಾಖಲಿಸಿ ಸರಣಿಯನ್ನು 3-1ರಿಂದ ವಶಪಡಿಸಿಕೊಂಡಿತು.

ರಾಯಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡ ರಿಂಕು ಸಿಂಗ್​ (46), ಯಶಸ್ವಿ ಜೈಸ್ವಾಲ್ (37)​, ಜಿತೇಶ್​ ಶರ್ಮಾ (35) ಮತ್ತು ರುತುರಾಜ್​ ಗಾಯಕ್ವಾಡ್​ (32) ಅವರ ಬ್ಯಾಟಿಂಗ್​ ನೆರವಿನಿಂದ ನಿಗದಿತ ಓವರ್​ ಅಂತ್ಯಕ್ಕೆ 9 ವಿಕೆಟ್​ ಕಳೆದುಕೊಂಡು 175 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿತು.

ಈ ಗುರಿಯನ್ನು ಬೆನ್ನತ್ತಿದ ಆಸೀಸ್​ ತಂಡಕ್ಕೆ ಅಕ್ಷರ್​ ಪಟೇಲ್​ ಮತ್ತು ರವಿ ಬಿಷ್ಣೋಯ್ ಕಾಡಿದರು. ಇವರಿಗೆ ಇತರ ಬೌಲರ್​ಗಳು ಸಾಥ್​ ನೀಡಿದರು. ಆಸೀಸ್​ನ ಟ್ರಾವಿಸ್ ಹೆಡ್ (31), ಬೆನ್ ಮೆಕ್‌ಡರ್ಮಾಟ್ (19), ಆರನ್ ಹಾರ್ಡಿ (8), ಟಿಮ್ ಡೇವಿಡ್ (19), ಮ್ಯಾಥ್ಯೂ ಶಾರ್ಟ್ (22) ಮತ್ತು ನಾಯಕ ಮ್ಯಾಥ್ಯೂ ವೇಡ್ (36) ಇನ್ನಿಂಗ್ಸ್​ ಗೆಲುವಿಗೆ ಸಹಕಾರಿ ಆಗಲಿಲ್ಲ. ಆಸ್ಟ್ರೇಲಿಯಾ ನಿಗದಿತ ಓವರ್​ ಅಂತ್ಯಕ್ಕೆ 7 ವಿಕೆಟ್​ ನಷ್ಟಕ್ಕೆ 154 ರನ್​ ಕಲೆಹಾಕಲಷ್ಟೇ ಶಕ್ತವಾಯಿತು.

ನಾಳೆ ಬೆಂಗಳೂರಿನಲ್ಲಿ ಪಂದ್ಯ: ಸರಣಿಯ 5ನೇ ಮತ್ತು ಕೊನೆಯ ಟಿ20 ಪಂದ್ಯ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿ ಗೆದ್ದಿರುವ ಭಾರತಕ್ಕೆ ಇದು ಔಪಚಾರಿಕ ಪಂದ್ಯವಾಗಿರುವುದರಿಂದ ಬೆಂಚ್​ ಆಟಗಾರಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಾಳೆ 5ನೇ ಟಿ-20: ಔಪಚಾರಿಕ ಪಂದ್ಯದಲ್ಲಿ ಸುಂದರ್​, ದುಬೆಗೆ ಅವಕಾಶದ ನಿರೀಕ್ಷೆ

Last Updated :Dec 2, 2023, 8:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.