ETV Bharat / sports

ಬೆಂಗಳೂರಿನಲ್ಲಿ ನಾಳೆ 5ನೇ ಟಿ-20: ಔಪಚಾರಿಕ ಪಂದ್ಯದಲ್ಲಿ ಸುಂದರ್​, ದುಬೆಗೆ ಅವಕಾಶದ ನಿರೀಕ್ಷೆ

author img

By ETV Bharat Karnataka Team

Published : Dec 2, 2023, 7:20 PM IST

ರಾಯ್‌ಪುರದಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯ ಗೆದ್ದ ಭಾರತ 3-1ರಿಂದ ಸರಣಿ ವಶಪಡಿಸಿಕೊಂಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5ನೇ ಪಂದ್ಯ ನಡೆಯಲಿದ್ದು, ಬೆಂಚ್​​ ಆಟಗಾರರು ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಸುಂದರ್​, ದುಬೆ
washington-sundar-and-shivam-dubey-

ಬೆಂಗಳೂರು: ವಿಶ್ವಕಪ್​ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ಧ ಆರಂಭವಾದ 5 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದ್ದಲ್ಲದೇ, 3-1ರ ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಭಾನುವಾರ ಅಂತಿಮ 5ನೇ ಟಿ20 ಪಂದ್ಯ ನಡೆಯಲಿದ್ದು, ಸೂರ್ಯಕುಮಾರ್​ ಯಾದವ್​ ನಾಯಕತ್ವದ ಪಡೆ ಜಯದ ಅಂತರ ಹೆಚ್ಚಿಸಿಕೊಂಡು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ವಿಶ್ವಾಸ ವೃದ್ಧಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಇದರ ಜೊತೆಗೆ ನಾಲ್ಕು ಪಂದ್ಯದಲ್ಲಿ ಅವಕಾಶ ಸಿಗದೇ ಬೆಂಚ್​ ಕಾದಿದ್ದ ಆಟಗಾರರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಔಪಚಾರಿಕ ಪಂದ್ಯದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಸತತ ನಾಲ್ಕು ಪಂದ್ಯಗಳನ್ನು ಆಡಿದ ಆಟಗಾರರಿಗೆ ಕೋಚ್​ ವಿವಿಎಸ್​ ಲಕ್ಷ್ಮಣ್ ಮತ್ತು ನಾಯಕ ಸೂರ್ಯಕುಮಾರ್​ ಯಾದವ್​ ಕೋಕ್​ ಕೊಡುವ ಸಾಧ್ಯತೆ ಇದೆ. ಐಪಿಎಲ್​ ಮತ್ತು ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಮಿಂಚಿದ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮತ್ತು ಆಲ್ ರೌಂಡರ್ ಶಿವಂ ದುಬೆಗೆ ಅವಕಾಶ ಕೊಡುವ ಸಾಧ್ಯತೆ ಹೆಚ್ಚಿದೆ.

ರಾಯ್​ಪುರದ ನಾಲ್ಕನೇ ಪಂದ್ಯಕ್ಕೆ ನಾಲ್ಕು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿತ್ತು. ಅಲ್ಲದೇ ಕೊನೆಯ ಎರಡು ಟಿ20 ಪಂದ್ಯಕ್ಕೆ ಶ್ರೇಯಸ್​ ಅಯ್ಯರ್​ ಉಪನಾಯಕನಾಗಿ ತಂಡಕ್ಕೆ ಸೇರಿದ್ದರು. ವಿಶ್ವಕಪ್​​ ತಂಡದಲ್ಲಿ ಆಡಿದ್ದ ಇಶಾನ್​ ಕಿಶನ್​ ಅವರನ್ನು ಕಳೆದ ಪಂದ್ಯದಲ್ಲಿ ಕೈಬಿಟ್ಟು ವಿಕೆಟ್​ ಕೀಪಿಂಗ್​ ಜವಾಬ್ದಾರಿಯನ್ನು ಜಿತೇಶ್​ ಶರ್ಮಾಗೆ ವಹಿಸಲಾಗಿತ್ತು.

ಸುಂದರ್ ಮತ್ತು ಶಿವಂ ಪ್ರದರ್ಶನ: ಭಾರತದ ಪರ ವಾಷಿಂಗ್ಟನ್ ಸುಂದರ್ , 40 ಟಿ20 ಪಂದ್ಯಗಳ 38 ಇನ್ನಿಂಗ್ಸ್‌ಗಳಲ್ಲಿ 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 1 ಅರ್ಧಶತಕದೊಂದಿಗೆ 107 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ 10 ಬೌಂಡರಿ ಹಾಗೂ 6 ಸಿಕ್ಸರ್‌ಗಳು ಕೂಡ ಬಂದಿವೆ. ಶಿವಂ ದುಬೆ ಭಾರತ ತಂಡದಲ್ಲಿ 18 ಟಿ20 ಪಂದ್ಯದಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 1 ಅರ್ಧಶತಕದೊಂದಿಗೆ 152 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ 9 ಬೌಂಡರಿ, 9 ಸಿಕ್ಸ ಗಳಿಸಿದ್ದಾರೆ. ಬೌಲಿಂಗ್​ನಲ್ಲಿ 6 ವಿಕೆಟ್ ಕಿತ್ತಿದ್ದಾರೆ.

ವಿಶ್ವಕಪ್​ ಹಿನ್ನೆಲೆ ಯುವಕರಿಗೆ ಮಣೆ: 2024ರ ವಿಶ್ವಕಪ್​ ದೃಷ್ಟಿಕೋನದಲ್ಲಿ ಇಟ್ಟುಕೊಂಡು ಬಿಸಿಸಿಐ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುತ್ತಾ ಬರುತ್ತಿದೆ. ಕಳೆದ ವರ್ಷ ಐಪಿಎಲ್​ನಲ್ಲಿ ಮಿಂಚಿದ ಯುವ ಪ್ರತಿಭೆಗಳಿಗೆ ತಂಡದಲ್ಲಿ ಅವಕಾಶ ನೀಡಿ, ಮುಂದಿನ ವಿಶ್ವಕಪ್​ಗೆ ಹೊಸ ತಂಡವನ್ನು ರಚಿಸಲು ಚಿಂತನೆ ನಡೆಸಲಾಗಿದೆ.

ವೇಡ್​ ಪಡೆಗೆ ಮರ್ಯಾದೆ ಪ್ರಶ್ನೆ: ವಿಶ್ವಕಪ್​ ಗೆದ್ದ ಆಸೀಸ್​ ಪಡೆ ಅದರ ಬೆನ್ನಲ್ಲೇ ನಡೆದ ಟಿ-20 ಸರಣಿಯನ್ನು ಗೆಲ್ಲುವಲ್ಲಿ ಎಡವಿತು. ಕೇವಲ 1 ಪಂದ್ಯವನ್ನು ಮಾತ್ರ ಗೆದ್ದು ಮರಳುತ್ತಿದೆ ಎಂಬ ಅಪಖ್ಯಾತಿ ಕಳೆದುಕೊಳ್ಳಲು ಕೊನೆಯ ಮತ್ತು ಐದನೇ ಟಿ20 ಗೆಲುವಿನ ಲೆಕ್ಕಾಚಾರ ಮಾಡಲಾಗುತ್ತಿದೆ.

ಸಂಭಾವ್ಯ ತಂಡಗಳು ಇಂತಿವೆ.. ಭಾರತ: ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್/ ಶಿವಂ ದುಬೆ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ (ಸಿ), ಜಿತೇಶ್ ಶರ್ಮಾ (ಡಬ್ಲ್ಯೂ), ರಿಂಕು ಸಿಂಗ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್/ವಾಷಿಂಗ್ಟನ್ ಸುಂದರ್, ದೀಪಕ್ ಚಾಹರ್, ಅವೇಶ್ ಖಾನ್, ಮುಖೇಶ್ ಕುಮಾರ್.

ಆಸ್ಟ್ರೇಲಿಯಾ: ಜೋಶ್ ಫಿಲಿಪ್, ಟ್ರಾವಿಸ್ ಹೆಡ್, ಬೆನ್ ಮೆಕ್‌ಡರ್ಮಾಟ್, ಆರನ್ ಹಾರ್ಡಿ, ಟಿಮ್ ಡೇವಿಡ್, ಮ್ಯಾಥ್ಯೂ ಶಾರ್ಟ್, ಮ್ಯಾಥ್ಯೂ ವೇಡ್ (w/c), ಬೆನ್ ದ್ವಾರ್ಶುಯಿಸ್, ಕ್ರಿಸ್ ಗ್ರೀನ್, ಜೇಸನ್ ಬೆಹ್ರೆನ್‌ಡಾರ್ಫ್, ತನ್ವೀರ್ ಸಂಘ

ಇದನ್ನೂ ಓದಿ: ಅತಿ ಹೆಚ್ಚು ಟಿ-20 ಪಂದ್ಯ ಗೆದ್ದು ದಾಖಲೆ: ಪಾಕಿಸ್ತಾನ ಹಿಂದಿಕ್ಕಿ ಅಗ್ರಸ್ಥಾನಕ್ಕೆರಿದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.