ETV Bharat / state

ನಾಳೆಯಿಂದ ಬಂಕ್​ಗಳಲ್ಲಿ ಪೆಟ್ರೋಲ್ ಡೀಸೆಲ್ ದರಪಟ್ಟಿ ಕನ್ನಡದಲ್ಲಿ ಪ್ರಕಟ: ಹರ್ದೀಪ್ ಸಿಂಗ್ ಪುರಿ

author img

By ETV Bharat Karnataka Team

Published : Jan 9, 2024, 7:37 PM IST

ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್​ ಪುರಿ
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್​ ಪುರಿ

ನಾಳೆಯಿಂದಲೇ ಪೆಟ್ರೋಲ್ ಬಂಕ್​ಗಳಲ್ಲಿ ತೈಲಬೆಲೆ ದರಪಟ್ಟಿ ಕನ್ನಡದಲ್ಲಿ ಇರಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್​ ಪುರಿ ತಿಳಿಸಿದ್ದಾರೆ.

ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್​ ಪುರಿ

ಬೆಂಗಳೂರು : ರಾಜ್ಯದಲ್ಲಿ ಕನ್ನಡ ನಾಮಫಲಕದ ಸದ್ದು ಜೋರಾಗಿರುವ ನಡುವೆಯೇ ಪೆಟ್ರೋಲ್ ಬಂಕ್​ಗಳಲ್ಲಿಯೂ ಕನ್ನಡದಲ್ಲೇ ದರಪಟ್ಟಿ ಪ್ರಕಟಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರಕಟಿಸಿದ್ದಾರೆ. ನಾಳೆಯಿಂದಲೇ ಬಂಕ್​ಗಳಲ್ಲಿ ತೈಲಬೆಲೆ ದರಪಟ್ಟಿ ಕನ್ನಡದಲ್ಲಿ ಇರಲಿದೆ ಎನ್ನುವ ಭರವಸೆ ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪೆಟ್ರೋಲ್ ಬಂಕ್​ಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯ ದರಪಟ್ಟಿ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಮಾತ್ರ ಪ್ರದರ್ಶನ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡದಲ್ಲಿಯೂ ಪೆಟ್ರೋಲ್, ಡೀಸೆಲ್ ಬೆಲೆಗಳ ದರಪಟ್ಟಿ ಪ್ರಕಟಿಸುವಂತೆ ಮನವಿ ಬಂದಿದ್ದು, ತಕ್ಷಣವೇ ಇನ್ಮುಂದೆ ಕನ್ನಡದಲ್ಲಿಯೂ ತೈಲಬೆಲೆ ಪ್ರಕಟಿಸುತ್ತಿದ್ದು, ನಾಳೆಯಿಂದಲೇ ರಾಜ್ಯದ ಎಲ್ಲ ಪೆಟ್ರೋಲ್ ಬಂಕ್​ಗಳಲ್ಲಿಯೂ ಕನ್ನಡದಲ್ಲೂ ದರಪಟ್ಟಿ ಪ್ರಕಟಕ್ಕೆ ಕ್ರಮ ಕೈಗೊಳ್ಳುವಂತೆ ತೈಲಕಂಪನಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.

ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಕೇಂದ್ರ ಸಚಿವರು, ಕಳೆದ ಎರಡು ವರ್ಷಗಳಿಂದ ತೈಲಬೆಲೆ ಹೆಚ್ಚಳವಾಗದ ಜಗತ್ತಿನ ಏಕೈಕ ದೇಶ ಭಾರತವಾಗಿದೆ. ಆದರೂ ಒಬ್ಬ ಸಂಸದ ಹೇಳ್ತಾರೆ ಪೆಟ್ರೋಲಿಯಂ ದರ ಇಳಿದಿಲ್ಲ ಅಂತ. ಆದರೆ, ಜಗತ್ತಿನಲ್ಲಿ ಮೋದಿ ಅವರು ಒಬ್ಬರೇ ನವೆಂಬರ್‌ನಿಂದ ಮೇ ತಿಂಗಳಲ್ಲಿ ಎರಡು ಬಾರಿ ಪೆಟ್ರೋಲಿಯಂ ದರ ಇಳಿಕೆ ಮಾಡಿದ್ದಾರೆ. ತೈಲ ಉತ್ಪಾದನೆ ಕುರಿತು ನಿನ್ನೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದೇವೆ. 45 ಸಾವಿರ ಬ್ಯಾರೆಲ್ ಕಚ್ಚಾತೈಲವನ್ನ ಮೇ ಹಾಗೂ ಜೂನ್​ನಲ್ಲಿ ಹೊರತೆಗೆಯುತ್ತಿದ್ದೇವೆ. ಇದು ನಮ್ಮ ಉತ್ಪಾದನೆಯ ಶೇ. 7% ರಷ್ಟಾಗಲಿದೆ. ಇದರ ಜೊತೆ ಶೇ 7%ರಷ್ಟು ಅನಿಲ ಕೂಡ ಲಭ್ಯವಾಗಲಿದೆ ಎಂದರು.

ವಿಕಸಿತ್ ಭಾರತ್ ಕಾರ್ಯಕ್ರಮ ನಡೆಯುತ್ತಿದೆ. ಕೇರಳ ಕಾರ್ಯಕ್ರಮ ಮುಗಿಸಿ ನಿನ್ನೆಯಿಂದ ಕರ್ನಾಟಕಕ್ಕೆ ಬಂದಿದ್ದೇನೆ. ಹಾಸನ ಭಾಗದಲ್ಲಿ ಓಡಾಡಿ ಬಂದೆ, ಉತ್ತಮ ಚರ್ಚೆ ಕೂಡ ನಡೆದಿದೆ. ಕೇಂದ್ರದ ಯೋಜನೆಗಳನ್ನ ಜನರಿಗೆ ತಿಳಿಸುವ ಕೆಲಸ ಆಗಿದೆ. ಫಲಾನುಭವಿಗಳನ್ನ ತಲುಪುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ದೇಶಾದ್ಯಂತ 11ಕೋಟಿ ಜನ ಫಲಾನುಭವಿಗಳಿದ್ದಾರೆ. ಬಹುತೇಕರನ್ನ ತಲುಪಲಾಗ್ತಿದೆ. 2014ರಲ್ಲಿ ಗ್ಯಾಸ್ ಕನೆಕ್ಷನ್‌ಗೂ, ಈಗಿನ ಲೆಕ್ಕಕ್ಕೂ ಬಹು ಅಂತರ ಇದೆ. ಹತ್ತು ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ. ನಮೋ ಆಪ್‌ನಲ್ಲಿ ಸಂಪೂರ್ಣ ಮಾಹಿತಿ ಇದೆ. ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಲಾಗ್ತಿದೆ. 10.50 ಕೋಟಿ ಉಜ್ವಲ ಯೋಜನೆ ಮೂಲಕ ಗ್ಯಾಸ್ ಸಂಪರ್ಕ ನೀಡಲಾಗಿದೆ. ಕಟ್ಟಿಗೆ ಉರಿಸಿ ಅಡುಗೆ ಮಾಡಿ, ಆರೋಗ್ಯ ಹಾಳು ಮಾಡಿಕೊಳ್ತಿದ್ರು. ಈಗ ಅದು ತಪ್ಪಿದೆ. 11 ಕೋಟಿ ಶೌಚಾಲಯಗಳನ್ನ ನಿರ್ಮಾಣ ಮಾಡಲಾಗಿದೆ. ಸಣ್ಣ ಹುಡುಗಿಯಿಂದ ಈ ಕ್ರಾಂತಿ ಶುರುವಾಗಿದೆ ಎಂದರು.

ಒನ್ ನೇಷನ್ ಒನ್ ಪೋಲಿಂಗ್ : ಮಾಲ್ಡೀವ್ಸ್ ವಿಚಾರದಲ್ಲಿ ಕಾಂಗ್ರೆಸ್ ನಡೆ ಸರಿಯಲ್ಲ. ಕಾಂಗ್ರೆಸ್ ಆರೋಪವನ್ನ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ರಾತ್ರೋರಾತ್ರಿ ಬದಲಾಗಬೇಕು ಅಂದರೆ ಆಗಲ್ಲ. ಲಕ್ಷ ದ್ವೀಪ ಸುಂದರವಾದ ಪ್ರದೇಶ ಎಂದು ಎಲ್ಲರಿಗೂ ಗೊತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಅರ್ಥ ಮಾಡಿಕೊಳ್ಳಲಿ. ಚುನಾವಣೆಗೆ ಅಂತ ಈ ರೀತಿ ಮಾಡ್ತಿದ್ದಾರೆ ಅಂತ ಕೆಲವರು ಹೇಳ್ತಿದ್ದಾರೆ. ಆದರೆ, ಚುನಾವಣೆಗೆ ಇನ್ನೂ ಆರು ತಿಂಗಳಿದೆ. ಒನ್ ನೇಷನ್ ಒನ್ ಪೋಲಿಂಗ್ ಕಲ್ಪನೆ ನಮ್ಮದು. ಕೆಲವೊಮ್ಮೆ ಸನಾತನ ಧರ್ಮದ ಮೇಲೆ ಅಟ್ಯಾಕ್ ಮಾಡುವ ಕೆಲಸ ಮಾಡ್ತಾರೆ. ಇವರನ್ನ ಅರ್ಥ ಮಾಡಿಕೊಳ್ಳುವುದೇ ಕಷ್ಟ. ರಾಮಮಂದಿರ ವಿಚಾರವನ್ನ ನ್ಯೂಯಾರ್ಕ್ ಟೈಮ್ಸ್‌ ಸ್ಕ್ವಯರ್​ ಇದನ್ನ ವಿಶೇಷವಾಗಿ ಸುದ್ದಿ ಮಾಡಿದೆ ಎಂದು ಹೇಳಿದರು.

ಇಂಡಿಯಾ ಅಲೆಯನ್ಸ್ ತನ್ನ ಪ್ರಧಾನಿ ಅಭ್ಯರ್ಥಿ ಯಾರು ಅಂತ ಮೊದಲು ನಿರ್ಧಾರ ಮಾಡಲಿ. ಅವರಲ್ಲೇ ಒಗ್ಗಟ್ಟಿಲ್ಲ. ಅವರಲ್ಲಿ ಸಂಚಾಲಕರೇ ಯಾರೂ ಇಲ್ಲ. ಶರದ್ ಪವರ್ ಸೀಜನ್ ಪೊಲಿಟೀಶಿಯನ್. ಭಾರತದಲ್ಲಿ ಅನೇಕ ಸುಂದರ ಪ್ರವಾಸಿ ತಾಣ ಇದೆ. ಕೇರಳ, ಕರ್ನಾಟಕದಂಥ ಸುಂದರ ಪ್ರದೇಶ ಇದೆ. ಮಾಲ್ಡೀವ್ಸ್ ಅನ್ನೋ ವಿಚಾರವೇ ಯಾಕೆ? ಮೊದಲು ಇಂಡಿಯಾ ಅಲೆಯನ್ಸ್ ಅರ್ಥ ಮಾಡಿಕೊಳ್ಳಲಿ ಎಂದರು.

ಸರ್ಕಾರದ ನಿರ್ಣಯ ಸ್ವಾಗತ ಮಾಡುತ್ತೇನೆ: ರಾಮ ಮಂದಿರ ಪ್ರಾಣಪ್ರತಿಷ್ಠಾಪನೆ ವೇಳೆ ಕರ್ನಾಟಕದಲ್ಲಿ ಮುಜರಾಯಿ ದೇಗುಲದಲ್ಲಿ ಪೂಜೆ ಸಲ್ಲಿಸಲು ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ. ನಾನು ರಾಜ್ಯ ಸರ್ಕಾರದ ನಿರ್ಣಯ ಸ್ವಾಗತ ಮಾಡುತ್ತೇನೆ. ದೇವಸ್ಥಾನದಲ್ಲೇ ಪೂಜೆ ಮಾಡೋದು, ರೈಲ್ವೇ ನಿಲ್ದಾಣದಲ್ಲಿ ಅಲ್ಲ. ಮನೆಯಲ್ಲಿ ಪೂಜೆ ಮಾಡೋದನ್ನ ಸ್ವಾಗತ ಮಾಡ್ತೀನಿ. ಅದನ್ನ ವಿರೋಧ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಭಾರತ್ ನ್ಯಾಯಯಾತ್ರೆ ವಿಚಾರದ ಕುರಿತು ಮಾತನಾಡಿದ ಕೇಂದ್ರ ಸಚಿವರು, ಮೋದಿ ಬಗ್ಗೆ ಟೀಕೆ ಮಾಡುವ ಜಯರಾಂ ರಮೇಶ್ 1984ರ ಸಿಖ್ ಹತ್ಯಾಕಾಂಡದಲ್ಲಿ ನೊಂದವರಿಗೆ ಯಾವಾಗ ನ್ಯಾಯ ಕೊಡ್ತಾರೆ ಅಂತ ಹೇಳಲಿ. ಅದೇ ಮನೆತನದಿಂದಲೇ ಅಲ್ಲವೇ ಹತ್ಯಾಕಾಂಡ ನಡೆದಿದ್ದು. ಮೊದಲು ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿ. ದೀರ್ಘಾವಧಿ ರಜೆಯಿಂದ ಬಂದಿರೋ ರಾಹುಲ್ ಗಾಂಧಿ ಯಾತ್ರೆ ಮೂಲಕ ಭಾರತದಲ್ಲೇ ಇರ್ತಾರೆ ಅಂತ ನ್ಯಾಯಕ್ಕಾಗಿ ನಾವು ಅಭಿಯಾನಕ್ಕೆ ಬೆಂಬಲ ನೀಡ್ತೀವಿ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

ಇದನ್ನೂ ಓದಿ: ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಸದಿದ್ದರೆ ತಿಳುವಳಿಕೆ ಪತ್ರ: ತುಷಾರ್ ಗಿರಿನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.