ಬೆಂಗಳೂರು : ಗಣೇಶ ಹಬ್ಬದ ಪರಿಣಾಮ ನಗರದಲ್ಲಿ ಸುಮಾರು 500 ಟನ್ ಹಸಿ ತ್ಯಾಜ್ಯ ಹೆಚ್ಚುವರಿಯಾಗಿ ಉತ್ಪತ್ತಿಯಾಗಿದೆ. ಒಣ ತ್ಯಾಜ್ಯ ಸೇರಿದಂತೆ ಒಟ್ಟು 6 ಸಾವಿರ ಟನ್ ತ್ಯಾಜ್ಯ ಸಂಗ್ರಹಣೆಯಾಗಿದ್ದು, ವಿಲೇವಾರಿ ಪ್ರಕ್ರಿಯೆ ಪಾಲಿಕೆಗೆ ದೊಡ್ದ ತಲೆನೋವಾಗಿ ಪರಿಣಮಿಸಿದೆ.
ಸಾಮಾನ್ಯ ದಿನಗಳಲ್ಲಿ 3,500 ಟನ್ಗೂ ಹೆಚ್ಚಿನ ಹಸಿ ತ್ಯಾಜ್ಯ ನಿತ್ಯ ಉತ್ಪತ್ತಿಯಾಗುತ್ತದೆ. ಆದರೆ, ಗೌರಿ, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆ ಸೇರಿ ಮನೆಗಳಲ್ಲಿ ಹೆಚ್ಚುವರಿಯಾಗಿ 500 ಟನ್ ತ್ಯಾಜ್ಯ ಉತ್ಪತ್ತಿಯಾಗಿದ್ದು, ಒಟ್ಟು 4 ಸಾವಿರ ಟನ್ ಹಸಿ ತ್ಯಾಜ್ಯ ಸಂಗ್ರಹಣೆಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಣೇಶ ನಿಮಜ್ಜನ ಸ್ಥಳ, ಕಲ್ಯಾಣಿ, ಸಂಚಾರಿ ಟ್ಯಾಂಕ್ಗಳ ಬಳಿ ಗಣೇಶ ಪೂಜೆಗೆಂದು ಬಳಸಿದ ಹೂವು, ಬಾಳೆ ದಿಂಡು, ಮಾವಿನ ಎಲೆ ಮತ್ತಿತರ ಸಾಮಗ್ರಿಗಳನ್ನು ಎಲ್ಲೆಂದರಲ್ಲಿ ಬಿಸಾಡಿರುವುದರಿಂದ ಹೆಚ್ಚಿನ ತ್ಯಾಜ್ಯ ಉತ್ಪಾದನೆಯಾಗಿದೆ. ನಗರದಲ್ಲಿ ಮಳೆಯ ಪ್ರಮಾಣ ಹೆಚ್ಚಿರುವ ಕಾರಣ ತ್ಯಾಜ್ಯ ಸಂಗ್ರಹ ಕಾರ್ಯಕ್ಕೆ ವ್ಯತ್ಯಯವಾಗಿದೆ. ಬಹುತೇಕರು ಪೌರ ಕಾರ್ಮಿಕರು ಹಬ್ಬಕ್ಕಾಗಿ ರಜೆಯಲ್ಲಿದ್ದ ಕಾರಣ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯಲ್ಲಿ ಏರುಪೇರು ಕಂಡು ಬಂದಿದೆ ಎಂದಿದ್ದಾರೆ.
ಪೌರಕಾರ್ಮಿಕರ ಮೇಲೆ ಹೆಚ್ಚಿದ ಒತ್ತಡ: ಕೆಲ ದಿನಗಳ ಅಂತರದಲ್ಲಿ 6 ಸಾವಿರ ಟನ್ಗೂ ಹೆಚ್ಚಿನ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಬೇಕಾಗಿದೆ. ಇದರಿಂದ ಬಿಬಿಎಂಪಿ ಪೌರಕಾರ್ಮಿಕರ ಮೇಲೂ ಹೆಚ್ಚಿನ ಒತ್ತಡ ಬಿದ್ದಿದೆ ಎಂದು ಪಾಲಿಕೆಯ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ : ರಾಜಧಾನಿಯಲ್ಲಿ ಸೆಪ್ಟೆಂಬರ್ 1 ರಂದು 45 ಸಾವಿರ ಗಣೇಶ ಮೂರ್ತಿಗಳ ನಿಮಜ್ಜನ: ಬಿಬಿಎಂಪಿ