ETV Bharat / state

ಭೂಮಿ ಪರಿಹಾರಕ್ಕಾಗಿ ಮೆಟ್ರೋ ಪಿಲ್ಲರ್‌ಗಳ ಮೇಲೆ ತಾಜ್ಯ ಸುರಿದು ಅಡ್ಡಿ: ಕಾಮಗಾರಿ ತಾತ್ಕಾಲಿಕ ಸ್ಥಗಿತ

author img

By ETV Bharat Karnataka Team

Published : Dec 24, 2023, 12:35 PM IST

namma metro
ನಮ್ಮ ಮೆಟ್ರೋ

ಹೊರವರ್ತುಲ ರಸ್ತೆಯ ಟಿನ್ ಫ್ಯಾಕ್ಟರಿ ಬಳಿಯ ಮೆಟ್ರೊ ಪಿಲ್ಲರ್‌ಗಳ ಮೇಲೆ ವ್ಯಕ್ತಿಯೊಬ್ಬ ತಾಜ್ಯ ಸುರಿದಿದ್ದು ಸದ್ಯ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬೆಂಗಳೂರು: ಹೊರವರ್ತುಲ ರಸ್ತೆಯ ಟಿನ್​​ ಫ್ಯಾಕ್ಟರಿ ಬಳಿ ನಿರ್ಮಾಣವಾಗುತ್ತಿರುವ ಮೆಟ್ರೋ ಪಿಲ್ಲರ್‌ಗಳ ಮೇಲೆ ವ್ಯಕ್ತಿಯೋರ್ವ ತ್ಯಾಜ್ಯ ತೈಲವನ್ನು ಸುರಿದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕಾಮಗಾರಿಯ ಸಲುವಾಗಿ ನಮ್ಮ ಮೆಟ್ರೋ ಭೂಸ್ವಾಧೀನ ಪ್ರಕ್ರಿಯೆ ನಡೆಸಿದ ವೇಳೆ ಕಾಮಗಾರಿ ನಡೆಯುತ್ತಿರುವ ಸ್ಥಳದ ಪರಿಹಾರವಾಗಿ 1 ಕೋಟಿ ಹಣವನ್ನು ನೀಡಲಾಗಿದೆ. ಆದರೆ ಭೂಮಿಯ ಹಕ್ಕು ಸಾಧಿಸುತ್ತಿರುವ ಮಾಲೀಕನೊಬ್ಬ ಪರಿಹಾರದ ಹಣ ನನಗೆ ಸೇರಬೇಕೆಂದು ಆಗ್ರಹಿಸಿ ನಿರ್ಮಾಣ ಹಂತದ ನಮ್ಮ ಮೆಟ್ರೋ ಪಿಲ್ಲರ್‌ಗಳ ಮೇಲೆ ತ್ಯಾಜ್ಯ ಸುರಿದಿರುವುದರಿಂದ ಕಾಮಗಾರಿಗೆ ಅಡಚಣೆ ಉಂಟಾಗಿದೆ. ಈ ತ್ಯಾಜ್ಯದೊಂದಿಗೆ ಸುರಿಯಲಾಗಿರುವ ಎಣ್ಣೆಯಿಂದಾಗಿ ಬೆನ್ನಿಗಾನಹಳ್ಳಿ ಹಾಗೂ ಕೆ.ಆರ್ ಪುರ ನಡುವಿನ ಪಿಲ್ಲರ್‌ಗಳೂ ನಾಶವಾಗುವ ಭಯದಿಂದ ನಿರ್ಮಾಣ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಫಯಾಜ್​ ಈ ಹಿಂದೆ ಕೂಡ ಮೆಟ್ರೋ ಕಾಮಗಾರಿಗೆ ಅಡ್ಡಿಯುಂಟು ಮಾಡಿದ್ದರು. ಬಳಿಕ ನಮ್ಮ ಮೆಟ್ರೋ ಇವರ ವಿರುದ್ಧ ಎಫ್‌ಐಆರ್​​ ದಾಖಲಿಸಿತ್ತು. ಕೆಲ ದಿನಗಳ ನಂತರ ಕಾಮಗಾರಿ ಕೆಲಸ ಮರಳಿ ಆರಂಭವಾಗಿತ್ತು. ಫಯಾಜ್​​ ಅವರು ಭೂಮಿ ಮಾಲೀಕತ್ವ ಪಡೆದುಕೊಳ್ಳುವ ವಿಚಾರದ ಸಂಬಂಧ ಇನ್ನೂ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ನ್ಯಾಯಾಲಯ ಕಾಮಗಾರಿಗೆ ಯಾವುದೇ ತಡೆಯಾಜ್ಞೆ ನೀಡಿಲ್ಲ. ಭೂಮಿಗೆ ಪರಿಹಾರವಾಗಿ 1 ಕೋಟಿ ರೂಪಾಯಿ ಈಗಾಗಲೇ ನೀಡಲಾಗಿದೆ ಈ ವ್ಯಕ್ತಿ ಪರಿಹಾರ ಹಣಕ್ಕಾಗಿ ಆಗ್ರಹಿಸಿ ನಮ್ಮ ಕೆಲಸಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಇದಲ್ಲದೆ, ಫಯಾಜ್ ನಾಲ್ಕು ಪಿಲ್ಲರ್​ಗಳ ಮೇಲೆ ನ್ಯಾಯಾಲಯದ ಪ್ರಕರಣಗಳ ಸಂಖ್ಯೆಯನ್ನೂ ಕೂಡ ಈ ಹಿಂದೆ ಬರೆದಿದ್ದರು. ರಾತ್ರಿ ವೇಳೆ ತನ್ನ ಸಹಚರರೊಂದಿಗೆ ಸ್ಥಳಕ್ಕೆ ಬರುವ ಫಯಾಜ್, ಕಾಮಗಾರಿ ಕೆಲಸ ಮಾಡುವ ಕಾರ್ಮಿಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಲ್ಲಿನ ಉಸ್ತುವಾರಿ ವಹಿಸಿರುವ ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಮೆಟ್ರೋ ಭೂ ಸ್ವಾಧೀನ ಜನರಲ್ ಮ್ಯಾನೇಜರ್ ಎಂ.ಎಸ್​. ಚನ್ನಪ್ಪ ಗೌಡರ್ ಈ ಕುರಿತು ಮಾತನಾಡಿ, 'ಟಿನ್ ಫ್ಯಾಕ್ಟರಿಯಿಂದ ಸರಿಸುಮಾರು 200 ಮೀಟರ್​ ದೂರದ 3762 ಚ.ಮೀ. ಭೂಮಿ ತನ್ನದೆಂದು ಸೈಯದ್​​ ಫಯಾಜ್​ ಹಕ್ಕು ಸಾಧಿಸುತ್ತಿದ್ದಾನೆ. ಈ ಭೂಮಿಯನ್ನು ಕಾಮಗಾರಿಯ ಸಲುವಾಗಿ ನಮ್ಮ ಮೆಟ್ರೊ ಸ್ವಾಧೀನಪಡಿಸಿಕೊಂಡಿದೆ. 5 ಎಕರೆಯ ಜಾಗದಲ್ಲಿ 1 ಎಕರೆ 20 ಗುಂಟೆ ಮಾತ್ರ ಸ್ವಾಧೀನಪಡಿಸಿಕೊಂಡಿದ್ದು, ಸೈಯದ್ ಅವರು ಹಿಂದಿನ ಮಾಲೀಕರಿಂದ ಭೂಮಿ ಖರೀದಿಸಿದ್ದೇನೆ, ನಿಜವಾದ ಮಾಲೀಕ ನಾನು. ಪರಿಹಾರದ ಹಣ ನನಗೆ ಮಾತ್ರ ಸಿಗಬೇಕು ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಡಿಎ ನಿರ್ಮಾಣದ ಶಿವರಾಮ ಕಾರಂತ ಬಡಾವಣೆ ಸೈಟ್‌ ದರ ನಿಗದಿ: ಸರ್ಕಾರದ ಅನುಮೋದನೆ ಬಾಕಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.