ETV Bharat / state

ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್ - ಬಿಜೆಪಿ ಒಳ ಒಪ್ಪಂದ: ಕುಮಾರಸ್ವಾಮಿ ಆರೋಪ

author img

By

Published : Dec 14, 2021, 9:49 PM IST

ಕುಮಾರಸ್ವಾಮಿ ಆರೋಪ
ಕುಮಾರಸ್ವಾಮಿ ಆರೋಪ

ಇಷ್ಟೂ ಕ್ಷೇತ್ರಗಳಲ್ಲೂ ನಮ್ಮ ನೈಜ ಮತದಾರರು ನಮಗೇ ಮತ ನೀಡಿದ್ದಾರೆ. ಆದರೆ, ಬಿಜೆಪಿ-ಕಾಂಗ್ರೆಸ್ ಒಳ ಒಪ್ಪಂದದಿಂದ ನಮಗೆ ಹಿನ್ನಡೆಯಾಗಿದೆ. ರಾಜ್ಯದ ಜನತೆ ಮುಂದೆ ಎರಡೂ ರಾಷ್ಟ್ರೀಯ ಪಕ್ಷಗಳ ಬಣ್ಣ ಬಟಾ ಬಯಲಾಗಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಬೆಂಗಳೂರು/ ನವದೆಹಲಿ : ವಿಧಾನ ಪರಿಷತ್‌ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಜೆಡಿಎಸ್‌ ಪಕ್ಷಕ್ಕೆ ಹಿನ್ನಡೆ ಆಗಿಲ್ಲ. ನಮ್ಮ ಪಕ್ಷ ವಿರೋಚಿತ ಸೋಲು ಕಂಡಿದೆ ನಿಜ, ಆದರೆ, ರಾಜ್ಯದಲ್ಲಿನ ಎರಡು ರಾಷ್ಟ್ರೀಯ ಪಕ್ಷಗಳ ಅಪವಿತ್ರ ಮೈತ್ರಿ, ಒಳ ಸಂಚು ಏನೆಂಬುದು ಬಟಾ ಬಯಲಾಗಿದೆ. ಎರಡೂ ಪಕ್ಷಗಳ ಬಣ್ಣ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.

ನವದೆಹಲಿಯಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ, ಕೋಲಾರ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವೆ ಸ್ಥಳೀಯ ಮಟ್ಟದಲ್ಲಿ ಒಳ ಒಪ್ಪಂದ ಏರ್ಪಟ್ಟಿದೆ. ಅದಕ್ಕೆ ಕಾಂಗ್ರೆಸ್‌ ಪಕ್ಷದ ಸಿದ್ದಹಸ್ತರೇ ಕಾರಣ ಎಂದು ದೂರಿದರು.

ಹೆಚ್​​​ಡಿಕೆ ಹೇಳಿದಿಷ್ಟು :

ಜೆಡಿಎಸ್‌ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಣೆ ಮಾಡುವುದು ಸರಿಯಲ್ಲ. ಪಕ್ಷ ಬೆಂಬಲಿತ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಪಕ್ಷದ ಗೌರವ ಉಳಿಸುವ ಕೆಲಸ ಮಾಡಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು. ಕಾಂಗ್ರೆಸ್‌ ನಾಯಕರು ಪದೇ ಪದೆ ಜೆಡಿಎಸ್‌ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರ ಮಾಡುತ್ತಿದ್ದದ್ದೇ ನಮಗೆ ಮಂಡ್ಯ ಮತ್ತು ಕೋಲಾರದಲ್ಲಿ ಹಿನ್ನಡೆ ಆಗಲು ಕಾರಣ. ಇಂಥ ಅಪಪ್ರಚಾರವನ್ನು ನಿರಂತರವಾಗಿ ಕಾಂಗ್ರೆಸ್‌ ನಾಯಕರು ನಡೆಸಿದರು.

ಕುಮಾರಸ್ವಾಮಿ ಆರೋಪ

ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳೆರಡಕ್ಕೂ ಇರುವ ಗುರಿ ಒಂದೇ. ಮುಂದಿನ ಸಾರ್ವತ್ರಿಕ ಚುನಾವಣೆ ಒಳಗೆ ಜೆಡಿಎಸ್‌ ಪಕ್ಷವನ್ನು ಸಂಪೂರ್ಣವಾಗಿ ಮುಗಿಸುವುದು. ರಾಜಕೀಯದಿಂದ ನಮ್ಮನ್ನು ಮರೆ ಮಾಡಬೇಕು ಎನ್ನುವುದು ಅವುಗಳ ದುರಾಲೋಚನೆ ಹಾಗೂ ನಮ್ಮ ಪಕ್ಷವನ್ನು ನಾಶ ಮಾಡುವುದೇ ಅವರ ಆದ್ಯತೆ.

ಉದಾಹರಣೆಗೆ, ಮಂಡ್ಯದ ಇಂದಿನ ಫಲಿತಾಂಶವನ್ನು ವಿಶ್ಲೇಷಣೆ ಮಾಡುವುದಾದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ರೈತಸಂಘಗಳು ಯಾವ ರೀತಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಚಕ್ರವ್ಯೂಹ ಸೃಷ್ಟಿಸಿ ಕುತಂತ್ರದ ರಾಜಕಾರಣ ನಡೆಸಿದ್ದವೋ. ಈಗ ಅದನ್ನೇ ಪುನರಾವರ್ತನೆ ಮಾಡಿರುವುದನ್ನು ಎಲ್ಲರೂ ಗಮನಿಸಬಹುದು ಎಂದರು.

ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಬಿಜೆಪಿ ಮತ :

ಮಂಡ್ಯದಲ್ಲಿ ನಮ್ಮ ಮತದಾರರ ಸಂಖ್ಯೆ 1,900. ಬಿಜೆಪಿಗೆ 450 ರಿಂದ 500 ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ 1,450 ರಿಂದ 1,500 ಮತಗಳು ಮಾತ್ರ ಇದ್ದವು. ಆದರೆ, ಕಾಂಗ್ರೆಸ್‌ ಅಭ್ಯರ್ಥಿ 2,000 ಮತ ಪಡೆಯಲು ಕಾರಣ ಕೊನೆಯ ಎರಡು ದಿನಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಒಳ ಒಪ್ಪಂದದಿಂದ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ.

ಅಲ್ಲದೇ, ಬಿಜೆಪಿ ಅಭ್ಯರ್ಥಿ ಬಹಿರಂಗವಾಗಿ ಕಣ್ಣೀರು ಹಾಕಿದ್ದೇ ಎರಡೂ ಪಕ್ಷಗಳ ಸ್ಥಳೀಯ ನಾಯಕರ ಕುತಂತ್ರ ರಾಜಕಾರಣಕ್ಕೆ ಹಿಡಿದ ಕನ್ನಡಿ. ಇಲ್ಲಿ ಕಾಂಗ್ರೆಸ್ - ಬಿಜೆಪಿ ಸೇರಿ ಜೆಡಿಎಸ್‌ ಪಕ್ಷಕ್ಕೆ ಮುಖಭಂಗ ಮಾಡಬೇಕು ಎಂದು ಷಡ್ಯಂತ್ರ ಹೂಡಿದ್ದು ಯಾರಿಗಾದರೂ ಅರ್ಥವಾಗುತ್ತದೆ ಎಂದು ದೂರಿದರು.

ಮಂಡ್ಯದಲ್ಲಿ ನಮಗೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದಿಂದ ಮುಖಭಂಗ ಆಗಿಲ್ಲ. ನಮ್ಮ ಮತದಾರರು ನಮ್ಮ ಅಭ್ಯರ್ಥಿಗೇ ಮತ ಕೊಟ್ಟಿದ್ದಾರೆ. ಅಲ್ಲೇನು ಬದಲಾವಣೆಗಳೇನಾಗಿಲ್ಲ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿ ಮತಗಳನ್ನು ಪಡೆಯುವ ಮೂಲಕ ಕಳೆದ ಲೋಕಸಭೆ ಚುನಾವಣೆಯ ಫಲಿತಾಂಶವನ್ನು ಪುನರಾವರ್ತನೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಕೋಲಾರದಲ್ಲಿ ಬಿಜೆಪಿ - ಕಾಂಗ್ರೆಸ್‌ ಒಳಸಂಚು:

ಕೋಲಾರ ಕ್ಷೇತ್ರದ ಬಗ್ಗೆ ಹೇಳುವುದಾದರೆ, ಬಿಜೆಪಿಗೆ ಅಲ್ಲಿದ್ದದ್ದು ಕೇವಲ 500 ಮತ ಮಾತ್ರ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಸ್ವತಃ ಕಾಂಗ್ರೆಸ್ ನಾಯಕರು ಏನೆಲ್ಲ ಷಡ್ಯಂತ್ರ ಮಾಡಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ.

ಅದೇ ಕಾಂಗ್ರೆಸ್ ನಾಯಕರು ಮತ್ತು ಬಿಜೆಪಿ ಪಕ್ಷದ ಲೋಕಸಭೆ ಸದಸ್ಯರು ಕುಮ್ಮಕ್ಕಾಗಿ ಬಿಜೆಪಿಯಿಂದ ಅಭ್ಯರ್ಥಿಯನ್ನೂ ಹಾಕಿಸಿ ಕಾಂಗ್ರೆಸ್ ನಿಂದ ಅಸಮಧಾನಿತಗೊಂಡ ಮತದಾರರು ಎಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ಹಾಕುತ್ತಾರೋ ಎಂದು ಬಿಜೆಪಿಯಿಂದಲೇ ಮತಗಳನ್ನು ಬೇರ್ಪಡಿಸಿ ಜೆಡಿಎಸ್ ಪಕ್ಷವನ್ನು ಸೋಲುವಂತೆ ಮಾಡಿದರು ಎಂದು ಆರೋಪಿಸಿದರು.

ಕೋಲಾರ ಕ್ಷೇತ್ರದಲ್ಲಿ ನಮಗೆ 1,400 ಮತಗಳು ಇದ್ದವು. ಅಷ್ಟೂ ಮತಗಳು ನಮಗೇ ಬಂದಿವೆ. ಅಲ್ಲಿ ಕಾಂಗ್ರೆಸ್ ಅಸಮಾಧಾನಿತ ಮತಗಳು ಜೆಡಿಎಸ್ʼಗೆ ಹೋಗಬಾರದು ಎಂದು ಸಂಚು ರೂಪಿಸಿ ಅಲ್ಲಿನ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮಾಡಿಕೊಂಡ ಒಳ ಒಪ್ಪಂದದಿಂದ ನಮ್ಮ ಅಭ್ಯರ್ಥಿಗೆ ಸೋಲಾಗಿದೆ. ಇದು ಸರಳವಾಗಿ ಎಲ್ಲರಿಗೂ ಅರ್ಥವಾಗುತ್ತದೆ.

ಕಾಂಗ್ರೆಸ್ ಪಕ್ಷದ ಸಿದ್ದಹಸ್ತ ಕೈಚಳಕ ಕೋಲಾರದಲ್ಲೂ ಕೆಲಸ ಮಾಡಿದೆ. ಆ ಹೆಸರನ್ನು ನಾನು ಪದೇ ಪದೆ ಹೇಳುತ್ತೇನೆ. ತಮ್ಮ ʼಸಿದ್ದಹಸ್ತʼದ ಕಲೆಯ ಮೂಲಕ ಮೈತ್ರಿ ಸರಕಾರ ಕೆಡವಿದ ವ್ಯಕ್ತಿ ಆಗ ಬಿಜೆಪಿ ಜತೆ ಒಳಸಂಚು ಮಾಡಿಕೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಕಾರಣರಾಗಿದ್ದರು. ಈಗ ಅದೇ ʼಸಿದ್ದಹಸ್ತʼರು ಸ್ಥಳೀಯ ಬಿಜೆಪಿ ನಾಯಕರ ಜತೆ ಒಳ ಒಪ್ಪಂದ ಮಾಡಿಕೊಂಡು ಇಂತಹ ಫಲಿತಾಂಶಕ್ಕೆ ಕಾರಣರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಷ್ಟ್ರೀಯ ಪಕ್ಷಗಳ ಬಣ್ಣ ಬಯಲಾಗಿದೆ :

ಜೆಡಿಎಸ್ ಪಕ್ಷಕ್ಕೆ ಮುಖಭಂಗ ಮಾಡಿದ್ದೇವೆ ಎಂದು ಅವರು ಹೇಳಿಕೊಳ್ಳಬಹುದು. ಆದರೆ, ಈ ಆರೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷಕ್ಕೆ ಬರಬೇಕಾದ ಮತಗಳು ಎಲ್ಲೂ ತಪ್ಪಿಲ್ಲ. ಇಷ್ಟೂ ಕ್ಷೇತ್ರಗಳಲ್ಲೂ ನಮ್ಮ ನೈಜ ಮತದಾರರು ನಮಗೇ ಮತ ನೀಡಿದ್ದಾರೆ. ಆದರೆ, ಬಿಜೆಪಿ-ಕಾಂಗ್ರೆಸ್ ಒಳ ಒಪ್ಪಂದದಿಂದ ನಮಗೆ ಹಿನ್ನಡೆಯಾಗಿದೆ. ರಾಜ್ಯದ ಜನತೆ ಮುಂದೆ ಎರಡೂ ರಾಷ್ಟ್ರೀಯ ಪಕ್ಷಗಳ ಬಣ್ಣ ಬಟಾ ಬಯಲಾಗಿದೆ ಎಂದರು.

ನಾವು ಸೋತಿರುವ ಯಾವ ಕ್ಷೇತ್ರದಲ್ಲೂ ನಮ್ಮ ಮತಗಳು ನಮಗೆ ತಪ್ಪಿಲ್ಲ. ಆದರೆ, ಬಿಜೆಪಿಯ 400 - 500 ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೋದ ಕಾರಣಕ್ಕೆ ನಾವು ಸೋತಿದ್ದೇವೆ. ಕಾಂಗ್ರೆಸ್ ತಾನೊಂದು ಪಕ್ಷ ಎಂದು ಉದ್ದುದ್ದ ಭಾಷಣ ಮಾಡುತ್ತಿದೆ. ಆದರೆ, ಬಿಜೆಪಿಯ ಸಹಕಾರ, ಸ್ಥಳೀಯ ನಾಯಕರ ಒಳ ಸಂಚಿನ ಲಾಭ ಪಡೆದು ಮಂಡ್ಯದಲ್ಲಿ ಗೆಲುವು ಸಾಧಿಸಿದೆ ಎಂದರು.

ಜೆಡಿಎಸ್‌ ಗುರಿ 2023 ಚುನಾವಣೆ :

ನಮ್ಮ ಗುರಿ 2023ರ ಚುನಾವಣೆ ಮೇಲೆ ನೆಟ್ಟಿದೆ. ಅದಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಸಂಘಟನೆಗೆ ಒತ್ತು ಕೊಡುತ್ತಿದ್ದೇವೆ. ಈಗಾಗಲೇ ಹಲವಾರು ಬಾರಿ ಈ ವಿಷಯ ಹೇಳಿದ್ದೇನೆ, ಈಗಲೂ ಅದೇ ಮಾತನ್ನೇ ಪುನರುಚ್ಛಾರ ಮಾಡುತ್ತಿದ್ದೇನೆ. ಕೇವಲ ಈ ಚುನಾವಣೆಯಿಂದ ನಮ್ಮ ಪಕ್ಷವನ್ನು ಮುಳುಗಿಸಿಬಿಡುತ್ತೇವೆ ಎನ್ನುವುದು ಕೇವಲ ಭ್ರಮೆಯಷ್ಟೇ. ಎರಡೂ ರಾಷ್ಟ್ರೀಯ ಪಕ್ಷಗಳು ಇದನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದು ಹೇಳಿದರು.

ನಮ್ಮದು ಜೆಡಿಎಫ್‌, ಕಾಂಗ್ರೆಸ್‌ ಪಕ್ಷದ್ದು ಯಾವ ಎಫ್?‌:

ವಿರೋಧ ಪಕ್ಷದ ನಾಯಕರು ಜೆಡಿಎಸ್ ಪಕ್ಷವನ್ನು ಜೆಡಿಎಫ್ ಎಂದು ಕರೆಯುತ್ತಿದ್ದಾರಲ್ಲ, ಅದಕ್ಕೆ ಇಂಬು ನೀಡುವಂತಿದೆ ಇಂದಿನ ಫಲಿತಾಂಶ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು, ಜೆಡಿಎಸ್ ಪಕ್ಷದ ಶಕ್ತಿ ಅಡಗಿರುವುದೇ ದೇವೇಗೌಡರ ಕುಟುಂಬದಲ್ಲಿ ಎಂಬುದನ್ನು ಈ ಫಲಿತಾಂಶ ಸಾಬೀತು ಮಾಡಿದೆ. ಇದರಲ್ಲಿ ಯಾವುದೇ ಸಂಶಯ ಇಲ್ಲ. ನಮ್ಮ ಕುಟುಂಬ ಈ ಪಕ್ಷವನ್ನು ಉಳಿಸಿಕೊಳ್ಳಲಿಕ್ಕೆ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಇದೇ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಹಾಸನದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲು ಕಾರಣ ಅಲ್ಲಿ ನಮ್ಮ ಮತಗಳನ್ನು ಭದ್ರ ಮಾಡಿಕೊಂಡಿದ್ದು. ಹಾಸನದಲ್ಲಿ ಬಿಜೆಪಿ - ಕಾಂಗ್ರೆಸ್‌ ಒಳ ಸಂಚು ನಡೆದಿಲ್ಲ. ಕಾಂಗ್ರೆಸ್‌ ಪಕ್ಷದ ಸಿದ್ದಹಸ್ತರು ಪದೇ ಪದೇ ಹೇಳುತ್ತಿದ್ದಾರಲ್ಲ, ಜೆಡಿಎಫ್‌ ಎಂದು. ಅವರ ಪಕ್ಷದಲ್ಲಿ ಕುಟುಂಬ ರಾಜಕಾರಣ ಮೀರಿ ಎಷ್ಟು ಅಭ್ಯರ್ಥಿಗಳಿಗೆ ಟಿಕೆಟ್‌ ಕೊಟ್ಟಿದ್ದಾರೆ ಎನ್ನುವುದು ಗೊತ್ತಾ? ಕುಟುಂಬ ರಾಜಕಾರಣದ ಹಿನ್ನೆಲೆಯುಳ್ಳ ಎಂಟು ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿದೆ.

ಅದೇ ರೀತಿ, ಬಿಜೆಪಿ ಅಂಥ ಎಷ್ಟು ಜನರಿಗೆ ಟಿಕೆಟ್‌ ನೀಡಿದೆ ಎನ್ನುವುದು ಗೊತ್ತಿದೆ. ಇದು ಯಾವುದೇ ಪಕ್ಷಕ್ಕೆ ಸೀಮಿತವಾದ ವಿಚಾರವಲ್ಲ. ಎಲ್ಲ ಪಕ್ಷಗಳಲ್ಲೂ ಇದೆ. ಹೀಗಾಗಿ ಜೆಡಿಎಸ್‌ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರಿಗಿಲ್ಲ. ನಮ್ಮದು ಜೆಡಿಎಫ್‌ ಆದರೆ ಕಾಂಗ್ರೆಸ್‌ ಪಕ್ಷದ್ದು ಯಾವ ʼಎಫ್‌ʼ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.