ETV Bharat / state

ಭಾರತದ ಜಿಡಿಪಿ ಏರಿಕೆಯಲ್ಲಿ ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಕೊಡುಗೆ ದೊಡ್ಡದು: ಹೆಚ್.ಡಿ. ಕುಮಾರಸ್ವಾಮಿ

author img

By ETV Bharat Karnataka Team

Published : Oct 30, 2023, 8:50 AM IST

H.D. Kumaraswamy
ಭಾರತದ ಜಿಡಿಪಿ ಏರಿಕೆಯಲ್ಲಿ ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಕೊಡುಗೆ ದೊಡ್ಡದು: ಹೆಚ್.ಡಿ. ಕುಮಾರಸ್ವಾಮಿ

ಇವತ್ತು ತಾಂತ್ರಿಕವಾಗಿ ನಾವು ಬಹಳಷ್ಟು ಸಾಧಿಸಿದ್ದೇವೆ. ಚಂದ್ರಯಾನ, ಸೂರ್ಯಯಾನ ಎಂದು ಸಾಧನೆ ಮಾಡುತ್ತಿದ್ದೇವೆ. ಆದರೆ, ಬೆಂಗಳೂರಿನಂಥ ಐತಿಹಾಸಿಕ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸಲು ಸೋತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾತು

ಬೆಂಗಳೂರು/ದುಬೈ: ''ದೇಶದ ಜಿಡಿಪಿ ಸದಾ ಏರುಮುಖವಾಗಿ ಚಲಿಸುತ್ತಿದೆ ಎಂದರೆ, ಕೆಂಪೇಗೌಡರು ಕಟ್ಟಿದ್ದ ಬೆಂಗಳೂರು ನಗರದ ಕಾಣಿಕೆ ಹಿರಿದು'' ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಯುಎಇ ಒಕ್ಕಲಿಗರ ಸಂಘ ಇಂದು ಹಮ್ಮಿಕೊಂಡಿದ್ದ ದುಬೈನ ಶೇಕ್ ರಶೀದ್ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ''ಉತ್ತಮ ಬದುಕು ರೂಪಿಸಿಕೊಳ್ಳಲು ಹೊರನಾಡಿಗೆ ಬಂದಿರುವ ಕನ್ನಡಿಗರು ನಮ್ಮ ಸಂಸ್ಕೃತಿ, ಭಾಷೆ, ನೆಲ ಜಲದ ಮೇಲೆ ಇರಿಸಿರುವ ಪ್ರೀತಿ, ಬದ್ಧತೆ ಕಂಡು ನನ್ನ ಹೃದಯ ಉಕ್ಕಿ ಬಂದಿದೆ. ಹೊರನಾಡಿನಲ್ಲಿ ನೆಲೆಸಿದ್ದರೂ ತಾಯ್ನಾಡಿನ ಪ್ರೇಮ ಉಳಿಸಿಕೊಂಡು, ಕನ್ನಡ ಸೊಗಡನ್ನು ಬದುಕಿನಲ್ಲಿ ಹಾಸುಹೊಕ್ಕಾಗಿಸಿಕೊಂಡು ಬಾಳ್ವೆ ನಡೆಸುತ್ತಿರುವ ಕನ್ನಡಿಗರಿಗೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸಿದರೂ ಸಾಲದು. ಈ ದಿನ ನಡೆದ ಕೆಂಪೇಗೌಡರ ಉತ್ಸವದಲ್ಲಿ ಕನ್ನಡ ಸಂಸ್ಕೃತಿಯ ಸೊಗಡು ಸಾಕ್ಷಾತ್ಕಾರವಾಗಿದೆ'' ಎಂದು ಅವರು ಸಂತಸ ವ್ಯಕ್ತಪಡಿಸಿದರು.

''ನಾಡಪ್ರಭು ಕೆಂಪೇಗೌಡ ಅವರ ಆಡಳಿತ, ದೂರದೃಷ್ಟಿ ಎಲ್ಲೆ, ಸೀಮೆಗಳು ಇಲ್ಲ. ಅವರ ಆದರ್ಶ ಆಡಳಿತ ಎಲ್ಲರೂ ಅನುಕರಣೀಯ ಮಾಡಬೇಕು. ಸರ್ವರನ್ನು ಸಮನಾಗಿ ಕಂಡು ಆಳ್ವಿಕೆ ನಡೆಸಿದವರು. ಅಂತಹವರನ್ನು ದುಬೈನಲ್ಲಿ ಸ್ಮರಿಸಿಕೊಳ್ಳುತ್ತಿರುವುದು ಅರ್ಥಪೂರ್ಣವಾಗಿದೆ'' ಎಂದು ಕುಮಾರಸ್ವಾಮಿ ಹೇಳಿದ್ದಾರೆ.

''ಅದಾವ ಶುಭ ಮುಹೂರ್ತದಲ್ಲಿ ನಾಡಪ್ರಭುಗಳು ಬೆಂಗಳೂರು ಮಹಾನಗರಕ್ಕೆ ಅಡಿಪಾಯ ಹಾಕಿದ್ದರು. ಇಂದು ಜಾಗತಿಕ ನಗರವಾಗಿ ಬೆಳೆದಿದ್ದು, ಕರ್ನಾಟಕ ಹಾಗೂ ಭಾರತದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡುತ್ತಿದೆ. ಜಾಗತಿಕ ಪೈಪೋಟಿ ನೀಡುತ್ತಾ ಜಗತ್ತಿನ ಅತ್ಯುತ್ತಮ ನಗರಗಳಲ್ಲಿ ಒಂದಾಗಿ ಬೆಳೆದಿದೆ ಎಂದಿದ್ದಾರೆ.

''ಕೆಂಪೇಗೌಡರ ಆದರ್ಶದೊಂದಿಗೆ ಶ್ರಮಿಸಿದ ನಮ್ಮ ಪೂರ್ವಿಕ ರೈತ ಬಂಧುಗಳು ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. ಅದರ ಪರಿಣಾಮವಾಗಿಯೇ ಬೆಂಗಳೂರಿನಲ್ಲಿ ಇವತ್ತಿನ ದಿನ ಆಗುತ್ತಿರುವ ಆರ್ಥಿಕ ಉತ್ಪಾದನೆ ನಾಡಿಗೆ, ದೇಶಕ್ಕೆ ಬೆನ್ನುಲುಬಾಗಿ ನಿಂತಿದೆ. ಇವತ್ತು ದೇಶದ ಜಿಡಿಪಿ ಸದಾ ಏರುಮುಖವಾಗಿ ಚಲಿಸುತ್ತಿದೆ. ಎಂದರೆ ಕೆಂಪೇಗೌಡರು ಕಟ್ಟಿದ್ದ ಬೆಂಗಳೂರು ನಗರದ ಕಾಣಿಕೆ ಹಿರಿದು'' ಎಂದು ತಿಳಿಸಿದ್ದಾರೆ.

ಕೆಂಪೇಗೌಡರು ಕಟ್ಟಿದ ಕೆರೆಗಳು ಏನಾದವು?: ''ಇವತ್ತು ನಾವು ಕೆಂಪೇಗೌಡರನ್ನು ಸ್ಮರಣೆ ಮಾಡುತ್ತಿದ್ದೇವೆ. ಆದರೆ, ಅವರು ಬೆಂಗಳೂರಿನಲ್ಲಿ ನಿರ್ಮಿಸಿದ ಕೆರೆಗಳು ಏನಾದವು? ನಮ್ಮ ಸ್ವಾರ್ಥ, ಸಂಕುಚಿತ ಮನಸ್ಥಿತಿಯ ಕಾರಣಕ್ಕೆ ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಅನೇಕ ಕೆರೆಗಳನ್ನು ನಾಶ ಮಾಡಲಾಗಿದೆ. ಒಂದು ಕಾಲದಲ್ಲಿ ಬೆಂಗಳೂರನ್ನು ಗಾರ್ಡನ್ ಸಿಟಿ ಎಂದು ನಾವೆಲ್ಲರೂ ಹೆಮ್ಮೆಯಿಂದ ಕರೆಯುತ್ತಿದ್ದೆವು. ಈಗ ಗಾರ್ಬೇಜ್ ಸಿಟಿ ಎಂದು ಕರೆಯಲಾಗುತ್ತಿದೆ. ಇದಕ್ಕೆ ಹೊಣೆ ಯಾರು?'' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

''ಇವತ್ತು ತಾಂತ್ರಿಕವಾಗಿ ನಾವು ಬಹಳಷ್ಟು ಸಾಧಿಸಿದ್ದೇವೆ. ಚಂದ್ರಯಾನ, ಸೂರ್ಯಯಾನ ಎಂದು ಸಾಧನೆ ಮಾಡುತ್ತಿದ್ದೇವೆ. ಆದರೆ, ಬೆಂಗಳೂರಿನಂಥ ಐತಿಹಾಸಿಕ ನಗರಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ಸೋತಿದ್ದೇವೆ. ಇದು ವಿಷಾದನೀಯ. ರಾಜಕಾರಣಿಗಳಾಗಿ ನಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ನಾವೆಲ್ಲೊ ಸೋತಿದ್ದೇವೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾಡಪ್ರಭು ಕೆಂಪೇಗೌಡರ ಉತ್ಸವದಲ್ಲಿ ಆದಿಚುಂಚನಗಿರಿ ಮಹಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದ ನಾಥ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಸಚಿವರಾದ ಸಿ.ಪಿ. ಯೋಗೇಶ್ವರ್, ಶಾಸಕರಾದ ಸಮೃದ್ಧಿ ಮಂಜುನಾಥ್, ಸ್ವರೂಪ್ ಪ್ರಕಾಶ್, ಕೆ.ಆರ್. ಪೇಟೆ ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಯುಎಇ ಒಕ್ಕಲಿಗರ ಸಂಘದ ಅಧ್ಯಕ್ಷೆ ರಶ್ಮಿ ನಂದಕಿಶೋರ್, ಉಪಾಧ್ಯಕ್ಷ ಹರೀಶ್ ಕೋಡಿ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು, ಕನ್ನಡ ಬಂಧುಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ದುಬೈ ಕನ್ನಡಿಗರು, ಅದರಲ್ಲಿಯೂ ಮಕ್ಕಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಮಾಂಡ್ ಸೆಂಟರ್ ನಿರ್ಮಾಣ: ಗೃಹ ಸಚಿವ ಜಿ ಪರಮೇಶ್ವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.