ETV Bharat / state

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಬಿ ಎನ್ ಚಂದ್ರಪ್ಪ ನೇಮಕ

author img

By

Published : Apr 9, 2023, 10:48 AM IST

Updated : Apr 9, 2023, 12:14 PM IST

ಆರ್ ಧ್ರುವನಾರಾಯಣ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಬಿ ಎನ್ ಚಂದ್ರಪ್ಪ ಅವರನ್ನು ನೇಮಿಸಿ ಕಾಂಗ್ರೆಸ್ ಪ್ರಕಟಣೆ ಹೊರಡಿಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಬಿ ಎನ್ ಚಂದ್ರಪ್ಪ ನೇಮಕ
ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಬಿ ಎನ್ ಚಂದ್ರಪ್ಪ ನೇಮಕ

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ರಂಗೇರಿದೆ. ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಈ ಮಧ್ಯೆ ಚಿತ್ರದುರ್ಗದ ಮಾಜಿ ಸಂಸದ ಬಿ ಎನ್​ ಚಂದ್ರಪ್ಪ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಕಾಂಗ್ರೆಸ್​ ನೇಮಿಸಿದೆ. ಧ್ರುವನಾರಾಯಣ್ ಅಗಲಿಕೆ ಬಳಿಕ ಅವರ ಸ್ಥಾನ ತುಂಬಲು ಹಲವು ಸಮುದಾಯದ ನಾಯಕರ ಪೈಪೋಟಿ ಏರ್ಪಟ್ಟಿತ್ತು. ಆದ್ರೆ ಅಂತಿಮವಾಗಿ ಚಂದ್ರಪ್ಪರನ್ನು ಹೈಕಮಾಂಡ್ ನೇಮಿಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ಚಂದ್ರಪ್ಪರನ್ನು ನೇಮಿಸಿ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್ ಧ್ರುವನಾರಾಯಣ ಅವರು ಹೃದಯಾಘಾತದಿಂದ ಮಾರ್ಚ್ 11 ರಂದು ನಿಧನರಾದ ಹಿನ್ನೆಲೆ ತೆರವಾದ ಸ್ಥಾನಕ್ಕೆ ಚಿತ್ರದುರ್ಗದ ಮಾಜಿ ಸಂಸದ ಬಿ ಎನ್ ಚಂದ್ರಪ್ಪ ಅವರನ್ನು ನೇಮಕ ಮಾಡಲಾಗಿದೆ. ಚಿತ್ರದುರ್ಗದಿಂದ ವಿಧಾನಸಭೆ ಟಿಕೆಟ್​ ಆಕಾಂಕ್ಷಿಯಾಗಿದ್ದ ಚಂದ್ರಪ್ಪಗೆ ಈ ಸಾರಿ ಟಿಕೆಟ್​ ಸಿಕ್ಕಿಲ್ಲ. ಬದಲಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಲಾಗಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಬಿ ಎನ್ ಚಂದ್ರಪ್ಪ ನೇಮಕ
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಬಿ ಎನ್ ಚಂದ್ರಪ್ಪ ನೇಮಕ

ಚಂದ್ರಪ್ಪ ಬೆಳವಣಿಗೆ: 2001 - 2003 ಕರ್ನಾಟಕ ರಾಜ್ಯ ಲಿಡ್ಕರ್ ಬೋರ್ಡ್ ಚೇರಮನ್‌ರಾಗಿ ಸೇವೆ ಸಲ್ಲಿಸಿದ್ದ ಚಂದ್ರಪ್ಪ, 1991 - 1992 ಚಿಕ್ಕಮಗಳೂರು ಜಿಲ್ಲಾ ಪರಿಷದ್ ಉಪಾಧ್ಯಕ್ಷರಾಗಿ (ರಾಜ್ಯ ಸಚಿವ ದರ್ಜೆ) ಕಾರ್ಯ ನಿರ್ವಹಿಸಿದ್ದಾರೆ. 1986 - 1991 ಈ ಅವಧಿಯಲ್ಲಿ ಬಿ.ಎನ್. ಚಂದ್ರಪ್ಪನವರು ಚಿಕ್ಕಮಗಳೂರು ಜಿಲ್ಲಾ ಪರಿಷದ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 2014ರ ಸೆ.1 ರಂದು ಕೃಷಿ ಸಚಿವಾಲಯದ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು 2014 ರಾಸಾಯನಿಕ ಹಾಗೂ ಗೊಬ್ಬರಗಳ ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಅದೇ ವರ್ಷ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಚಿತ್ರದುರ್ಗದಿಂದ ಸ್ಪರ್ಧಿಸಿ ಬಿಜೆಪಿಯ ಜನಾರ್ದನ ಸ್ವಾಮಿ ಅವರನ್ನು ಸೋಲಿಸಿ 16ನೇ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ನಾರಾಯಣಸ್ವಾಮಿ ವಿರುದ್ಧ ಸೋಲನುಭವಿಸಿದ್ದರು.

ಕಾರ್ಯಾಧ್ಯಕ್ಷರಾಗಿ ನೇಮಕವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬಿ ಎನ್ ಚಂದ್ರಪ್ಪ ಅವರು ಹೀಗೆ ಬರೆದುಕೊಂಡಿದ್ದಾರೆ: 'ಮಾತೇ ಬಾರದ ಸಂದರ್ಭ ಅನ್ನಿಸುತ್ತಿದೆ ! ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಳಹಂತದಿಂದ ಇಲ್ಲಿಯವರೆಗೂ ಬರೋದೆ ಒಂದು ಅದೃಷ್ಟ ಅಂದುಕೊಂಡಿದ್ದ ನನಗೆ, ಇನ್ನೂ ಹೆಚ್ಚಿನ ಜವಾಬ್ದಾರಿ ಸಿಕ್ಕಿರುವ ವಿಷಯ. ಇದಕ್ಕೆ ಕಾರಣ - ಪಕ್ಷ ನಿಷ್ಠೆ ಅನ್ನೋದೇ ಒಂದು ಗಟ್ಟಿಯ ವಿಷಯ. ಅಖಿಲ ಭಾರತ ಕಾಂಗ್ರೆಸ್ ಪಕ್ಷವು ಇಂದು ನನ್ನನ್ನು ಗುರುತಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವ ಆದೇಶ ನನ್ನ ಕೈ ಸೇರಿದೆ. ಅತ್ಯಂತ ಜಾವಾಬ್ದಾರಿಯ ವಿಷಯ ಅನ್ನೋದ್ರಲ್ಲಿ ಎರಡು ಮಾತಿಲ್ಲಾ.

ಅದೇನೋ ಗೊತ್ತಿಲ್ಲ ಟಿಕೆಟ್ ಬೇಕು, ಉನ್ನತ ಹುದ್ದೆ ಬೇಕು ಅಂತ ಯಾವತ್ತೂ ಯಾರನ್ನು ಕೇಳಿ ಲಾಬಿ ಮಾಡದ ನನಗೆ, ತನ್ನಂತಾನೇ ಕಾಂಗ್ರೆಸ್ ಪಕ್ಷ ನೀಡಿದೆ ಎನ್ನುವುದೇ ಅಕ್ಷರಶಃ ಖುಷಿ ವಿಷಯನೇ ಸರಿ. ನನ್ನ ಅಲ್ಪ ಸೇವೆಯನ್ನು ಗುರುತಿಸಿ ಈ ಮಹತ್ವದ ಜಾವಾಬ್ದಾರಿಯನ್ನು ನೀಡಿದ ಎಐಸಿಸಿ‌ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ, ನಮ್ಮ ಭರವಸೆಯ ನಾಯಕರಾದ ರಾಹುಲ್ ಗಾಂಧಿ ಅವರಿಗೆ, ಎಐಸಿಸಿ ಪ್ರದಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ. ಹರಿಪ್ರಸಾದ್, ಎಐಸಿಸಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೆ.ಎಚ್. ಮುನಿಯಪ್ಪ, ಎಐಸಿಸಿ ಕಾರ್ಯಕಾರಿ ಸಮಿತಿಯ ಖಾಯಂ ಆಹ್ವಾನಿತರಾದ ಹೆಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್, ಸಂಸದರಾದ ಡಿ.ಕೆ. ಸುರೇಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯ ನಾಯಕರಿಗೆ ಹೃದಯಪೂರ್ವಕ ಧನ್ಯವಾದಗಳು' ಎಂದು ಬಿ ಎನ್ ಚಂದ್ರಪ್ಪ ಬರೆದುಕೊಂಡಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ಕಾವು ಏರುತ್ತಲೇ ಇದೆ. ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದೆ. ಸದ್ಯ 142 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿದ್ದು, ಇನ್ನುಳಿದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಇನ್ನು ಎರಡು ಪಟ್ಟಿ ಬಿಡುಗಡೆ ಬಳಿಕ ಕೆಲ ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಕೂಡ ಪಕ್ಷಕ್ಕೆ ತಟ್ಟಿದೆ. ಮೇ 10 ರಂದು ಮತದಾನ ನಡೆಯಲಿದ್ದು, 13 ರಂದು ಫಲಿತಾಂಶ ಹೊರಬೀಳಲಿದೆ.

ಇದನ್ನೂ ಓದಿ: ಕಾಂಗ್ರೆಸ್​ನಿಂದ​ 42​ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ.. ಯಾವ ಕ್ಷೇತ್ರಕ್ಕೆ ಯಾರು ನೋಡಿ

ಇದನ್ನೂ ಓದಿ: ಕೈ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ; ವಲಸಿಗರಿಗೆ ಮಣೆ ಹಾಕಿದ ಕಾಂಗ್ರೆಸ್​.. ದತ್ತಾಗಿಲ್ಲ ಟಿಕೆಟ್​

Last Updated :Apr 9, 2023, 12:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.