ETV Bharat / state

ಸುಪ್ರೀಂ ಕೋರ್ಟ್ ಆದೇಶ ಪಾಲನೆ ಜೊತೆಗೆ ರೈತರ ಹಿತರಕ್ಷಣೆಗೆ ಸಂಪುಟ ಸಭೆ ತೀರ್ಮಾನ: ಡಿಸಿಎಂ ಡಿಕೆಶಿ

author img

By ETV Bharat Karnataka Team

Published : Sep 23, 2023, 6:44 AM IST

ಡಿಸಿಎಂ ಡಿಕೆ ಶಿವಕುಮಾರ್​
ಡಿಸಿಎಂ ಡಿಕೆ ಶಿವಕುಮಾರ್​

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್​ ನೀಡಿರುವ ಆದೇಶವನ್ನು ಪಾಲಿಸಲಾಗುತ್ತದೆ ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಡಿಸಿಎಂ ಹೇಳಿದ್ದಾರೆ.

ಬೆಂಗಳೂರು: ಕಾವೇರಿ ನದಿ ನೀರು ಬಿಡುಗಡೆ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ರೈತರ ಹಿತ ರಕ್ಷಣೆಯನ್ನೂ ಮಾಡಲಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಕಾವೇರಿ ನದಿ ನೀರು ಸಂಬಂಧ ಸುಪ್ರೀಂ ಕೋರ್ಟ್​ನಲ್ಲಿ ಆಗಿರುವ ವಿಚಾರಣೆಯನ್ನು ಎಎಜಿ ಸಂಪುಟ ಸಭೆಯಲ್ಲಿ ವಿವರಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲಾಗುವುದು. ಸೆ.26ರವರೆಗೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗುವುದು. 8000 ಕ್ಯುಸೆಕ್ಸ್ ಒಳಹರಿವು ಇದೆ. ಈಗಾಗಲೇ 3,000-3,500 ಕ್ಯುಸೆಕ್ಸ್ ನೀರು ಹರಿದು ಹೋಗುತ್ತಿದೆ. ಸೆ.26 ತನಕ ನೀರು ಬಿಡಲಾಗುತ್ತದೆ. ನಾವು ರೈತರ ಹಿತರಕ್ಷಣೆಯನ್ನೂ ಮಾಡುತ್ತೇವೆ. ಕುಡಿಯುವ ನೀರಿನ ರಕ್ಷಣೆಯನ್ನು ಮಾಡುತ್ತೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಮೇಕೆದಾಟು ಯೋಜನೆ ಜಾರಿಗೆ ಕ್ರಮ: ಮೇಕೆದಾಟು ಯೋಜನೆಯನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್​ನಲ್ಲಿ ತಮಿಳುನಾಡು ಆಕ್ಷೇಪ ಹಾಕಿತ್ತು. ಆದರೆ ಗುರುವಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮೌಖಿಕವಾಗಿ ಮೇಕೆದಾಟಿಗೆ ಏಕೆ ಅಡ್ಡ ಬರುತ್ತೀರ. ಕರ್ನಾಟಕ ಅವರ ಭೂಮಿಯಲ್ಲಿ ಯೋಜನೆಯನ್ನು ಮಾಡುತ್ತಿದೆ ಎಂದು ತಮಿಳುನಾಡಿಗೆ ತಾಕೀತು ಮಾಡಿದ್ದಾರೆ. ಹೀಗಾಗಿ ಮೇಕೆದಾಟು ಯೋಜನೆ ಮುಂದುವರಿಸಲು ತೀರ್ಮಾನಿಸಿದ್ದೇವೆ. ಈ ಸಂಬಂಧ ಕೇಂದ್ರ ಪರಿಸರ ಇಲಾಖೆಯ ಅನುಮೋದನೆ ಪಡೆಯುವುದು ಸೇರಿ ಬೇಕಾದ ಇತರೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.

ಸಂಪುಟ ಸಭೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧ ಸುದೀರ್ಘ ಚರ್ಚೆ ನಡೆಯಿತು‌. ಸುಪ್ರೀಂ ಕೋರ್ಟ್ ತಮಿಳುನಾಡಿಗೆ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ನಿರ್ದೇಶನ ನೀಡಿದೆ. ಇತ್ತ ಕೆಆರ್​ಎಸ್ ಜಲಾಶಯ ಬತ್ತಿ ಹೋಗಿದ್ದು, ಕುಡಿಯುವ ನೀರಿಗೂ ಸಂಚಕಾರ ಬರುವ ಆತಂಕ ಎದುರಾಗಿದೆ. ಇನ್ನು ಸುಪ್ರೀಂ ಕೋರ್ಟ್ ಆದೇಶದಿಂದ ರೊಚ್ಚಿಗೆದ್ದಿರುವ ರೈತರು, ಕನ್ನಡ ಪರ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದಾರೆ. ಈ ಹಿನ್ನೆಲೆ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಆದರೆ ಏನೆಲ್ಲಾ ಚರ್ಚೆ ನಡೆಯಿತು ಎಂಬ ಬಗ್ಗೆ ಮಾಹಿತಿ ನೀಡಲು ಡಿಸಿಎಂ ಡಿಕೆಶಿ ನಿರಾಕರಿಸಿದರು.

ಮುಂದಿನ ಕಾನೂನು ಹೋರಾಟ, ಮುಂದಿರುವ ಆಯ್ಕೆಗಳು, ಸುಪ್ರೀಂ ಆದೇಶ ಪಾಲಿಸುವ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗಿದೆ. ಇನ್ನು ರೈತರು ಬೀದಿಗಿಳಿದು ಹೋರಾಟ ತೀವ್ರ ಗೊಳಿಸಿದ್ದಾರೆ. ಯಾವ ರೀತಿ ರೈತರನ್ನು ಸಮಾಧಾನ ಪಡಿಸುವುದು ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡದೇ ಹೋದರೆ ಆಗುವ ಸಂವಿಧಾನಿಕ ಬಿಕ್ಕಟ್ಟು, ನ್ಯಾಯಾಂಗ ನಿಂದನೆ ಅಪಾಯವನ್ನು ಮನಗಂಡು ನೀರು ಬಿಡಲು ತೀರ್ಮಾನಿಸಲಾಗಿದೆ‌.

ಇದನ್ನೂ ಓದಿ: ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಸೂಚಿಸಿ: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.