ETV Bharat / state

ರಾಜ್ಯ ಸಂಪುಟ ವಿಸ್ತರಣೆ ಆಗುತ್ತಾ? ಹೈಕಮಾಂಡ್‌ ಟಾಪ್‌ ಸೀಕ್ರೆಟ್‌ ಏನು?

author img

By

Published : May 11, 2022, 10:41 AM IST

Updated : May 11, 2022, 12:16 PM IST

Karnataka Cabinet expansion, Bjp high command Secretes, no clues to party top leaders of cabinet expansion, Karnataka Cabinet expansion news, ಕರ್ನಾಟಕ ಸಚಿವ ಸಂಪುಟ ವಿಸ್ತರಣೆ, ಸಂಪುಟ ವಿಸ್ತರಣೆಗೆ ಬಗ್ಗೆ ಬಿಜೆಪಿ ಹೈಕಮಾಂಡ್ ರಹಸ್ಯಗಳು, ಸಂಪುಟ ವಿಸ್ತರಣೆ ಬಗ್ಗೆ ಬಿಜೆಪಿ ನಾಯಕರಿಗೆ ಯಾವುದೇ ಸುಳಿವು ಇಲ್ಲ, ಕರ್ನಾಟಕ ಸಂಪುಟ ವಿಸ್ತರಣೆ ಸುದ್ದಿ,
ಸಂಪುಟ ವಿಸ್ತರಣೆ ಯಾವಾಗ

ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆ ಯಾವಾಗ ಮಾಡ್ತಾರೆ?. ಹೈಕಮಾಂಡ್​ ಟಾಪ್ ಸೀಕ್ರೇಟ್ಸ್ ಏನು ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದ ವಿಸ್ತರಣೆ ಯಾವಾಗ, ಈ ಸಂಪುಟದಲ್ಲಿ ಯಾರಿಗೆ ಮಂತ್ರಿಯಾಗುವ ಅದೃಷ್ಟವಿದೆ. ಯಾವ ಸಚಿವರು ಅಧಿಕಾರ ಕಳೆದುಕೊಳ್ಳಲಿದ್ದಾರೆ ಎನ್ನುವುದು ಬಿಜೆಪಿಯಲ್ಲೀಗ ಮಿಲಿಯನ್ ಡಾಲರ್ ಪ್ರಶ್ನೆಯಾಗುಳಿದಿದೆ. ಸಂಪುಟ ವಿಸ್ತರಣೆ/ ಪುನರ್ ರಚನೆ ಬಗ್ಗೆ ಬಿಜೆಪಿ ಹೈಕಮಾಂಡ್ ಯಾರಿಗೂ ಯಾವ ಸುಳಿವನ್ನೂ ನೀಡದೇ ರಹಸ್ಯ ಕಾಪಾಡಿಕೊಳ್ಳುತ್ತಿದೆ. ರಾಜ್ಯದ ಬಿಜೆಪಿ ಯಾವ ನಾಯಕರಿಗೂ ಸ್ಪಷ್ಟವಾದ ಮಾಹಿತಿ ಇಲ್ಲ. ಕೇಂದ್ರ ಸಚಿವರಿಗೂ ಏನೂ ತಿಳಿದಿಲ್ಲ. ಅಷ್ಟೇ ಅಲ್ಲ, ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೂ ಸಂಗತಿ ತಿಳಿಯುತ್ತಿಲ್ಲ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ‘ಈ ಟಿವಿ ಭಾರತಕ್ಕೆ’ ತಿಳಿಸಿದರು.

ಸಂಪುಟ ವಿಸ್ತರಣೆ/ ಪುನರ್ ರಚನೆಯನ್ನು ಬಿಜೆಪಿ ಹೈಕಮಾಂಡ್ ತನ್ನದೇ ಆದ ಲೆಕ್ಕಾಚಾರದಲ್ಲಿ ನಡೆಸಲು ಉದ್ದೇಶಿಸಿದೆ. ಸಚಿವ ಸ್ಥಾನಕ್ಕೆ ಅನುಸರಿಸುವ ಮಾನದಂಡ ಪ್ರಧಾನಿ ನರೇಂದ್ರ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೊರತುಪಡಿಸಿದರೆ ಬೇರೆ ಯಾರಿಗೂ ಗೊತ್ತಿಲ್ಲ ಎಂದೇ ಹೇಳಲಾಗುತ್ತದೆ.

ಬಿಜೆಪಿ ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೊನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಭೇಟಿ ನೀಡಿ ದೆಹಲಿಗೆ ತೆರಳಿದ ನಂತರ ಮೂರ್ನಾಲ್ಕು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ವಿದೇಶ ಪ್ರವಾಸದಲ್ಲಿರುವ ಮೋದಿ ಭಾರತಕ್ಕೆ ವಾಪಸ್ಸಾದ ನಂತರ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಸಿಗಲಿದೆ ಎಂದು ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿತ್ತು. ಮತ್ತೊಬ್ಬ ಹಿರಿಯ ಮುಖಂಡ ಬಸನಗೌಡ ಯತ್ನಾಳ್ ಸಹ ಮೇ.10 ರಂದು ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ತೀರ್ಮಾನ ಆಗಲಿದೆ ಎಂದು ಹೇಳಿದ್ದರು. ಆದರೆ ವಾಸ್ತವ ಬೇರೆಯಾಗಿದೆ!.

ಬಿಜೆಪಿ ಸರಕಾರದ ನಾಯಕತ್ವ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ, ಯಾರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಬೇಕು, ಯಾರನ್ನು ಕ್ಯಾಬಿನೆಟ್​ನಿಂದ ಕೈಬಿಡಬೇಕು, ನಾಯಕತ್ವ ಬದಲಾಯಿಸಿದರೆ ಯಾರಿಗೆ ಅವಕಾಶ ನೀಡಬೇಕು, ಚುನಾವಣೆ ವರ್ಷದಲ್ಲಿ ಬದಲಾವಣೆಯಿಂದಾಗುವ ರಾಜಕೀಯ ಅಡ್ಡ ಪರಿಣಾಮಗಳೇನು ಎನ್ನುವ ಬಗ್ಗೆ ಹೈಕಮಾಂಡ್ ಸುದೀರ್ಘ ಅಧ್ಯಯನ ನಡೆಸತೊಡಗಿದೆ. ತನ್ನದೇ ಆದ ಮೂಲಗಳಿಂದ ಮಾಹಿತಿ ಸಂಗ್ರಹ ಮಾಡತೊಡಗಿದೆ.

ಪ್ರಧಾನಿ ಮೋದಿ ಕೇಂದ್ರ ಗುಪ್ತಚಾರ ಇಲಾಖೆಯಿಂದ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆಂದು ಹೇಳಲಾಗಿದೆ. ಇನ್ನೊಂದೆಡೆ, ಅಮಿತ್ ಶಾ ಕೂಡಾ ತಮ್ಮದೇ ಮೂಲಗಳಿಂದ ರಾಜ್ಯ ರಾಜಕೀಯದ ಮಾಹಿತಿ ಕಲೆ ಹಾಕಿದ್ದಾರೆನ್ನಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.

ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ವಿಘ್ನ?: ರಾಜ್ಯ ಸರಕಾರದ ಮಂತ್ರಿಮಂಡಲ ವಿಸ್ತರಣೆ ಅಥವಾ ಪುನರ್ ರಚೆನೆಗೆ ಕಸರತ್ತು ನಡೆಯುತ್ತಿರುವಾಗಲೇ ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿರುವುದು ಸಂಪುಟ ವಿಸ್ತರಣೆಗೆ ವಿಘ್ನ ತಲೆದೋರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಬೊಮ್ಮಾಯಿ ದೆಹಲಿಯಲ್ಲಿದ್ದು ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ಪಡೆದು ಬರುತ್ತಾರೆ. ಈ ವಾರದಲ್ಲಿಯೇ ಹೊಸ ಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎನ್ನುವುದು ಬಿಜೆಪಿ ಪಡಸಾಲೆಯಲ್ಲಿ ಕೇಳಿಬರುವ ಮಾತು. ಆದರೆ ದಿಢೀರ್ ಕೇಂದ್ರ ಚುನಾವಣಾ ಆಯೋಗ ಮೇಲ್ಮನೆಗೆ ಚುನಾವಣೆ ದಿನಾಂಕ ಘೋಷಿಸಿರುವುದು ಸಂಪುಟ ವಿಸ್ತರಣೆಯನ್ನೂ ಸಹ ಮುಂದೂಡಲು ರಾಜಕೀಯ ಕಾರಣವಾಗಬಹುದೆಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಚುನಾವಣೆಗಳು, ವಿಧಾನಸಭೆ ಅಧಿವೇಶನ, ಬಜೆಟ್ ಮಂಡನೆ, ಹಬ್ಬ ಹರಿದಿನಗಳು, ಶೂನ್ಯಮಾಸ, ಪಿತೃಪಕ್ಷ, ಆಷಾಢ ಮಾಸ ಸಂದರ್ಭಗಳಲ್ಲಿ ಒಂದಿಲ್ಲೊಂದು ಕಾರಣಗಳ ನೆಪವೊಡ್ಡಿ ಸಚಿವ ಸಂಪುಟ ವಿಸ್ತರಣೆ ಮುಂದೂಡಿದ ನಿದರ್ಶನಗಳು ರಾಜಕಾರಣದಲ್ಲಿ ಸಹಜ ಪ್ರಕ್ರಿಯೆಗಳಾಗಿವೆ. ಯಾವುದೇ ಕ್ಷಣದಲ್ಲಾದರೂ ಮಂತ್ರಿಮಂಡಲ ವಿಸ್ತರಣೆ ನಡೆಯಬಹುದೆಂದು ನಿರೀಕ್ಷಿಸಲಾಗುತ್ತಿರುವ ಸಂದರ್ಭದಲ್ಲಿ ಮಂಗಳವಾರ ಪರಿಷತ್ ಚುನಾವಣೆ ದಿನಾಂಕ ಪ್ರಕಟವಾಗಿರುವುದು ಸಚಿವ ಸ್ಥಾನಾಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿದೆ.

ಮೇಲ್ಮನೆ ಚುನಾವಣೆ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ನಡೆಸಿದರೆ ಮಂತ್ರಿಸ್ಥಾನ ವಂಚಿತ ಶಾಸಕರು ಅಸಮಾಧಾನಗೊಂಡು ಅಭ್ಯರ್ಥಿಗಳ ಸೋಲಿಗೆ ಕಾರಣವಾದರೆ ಪಕ್ಷಕ್ಕೆ ಮುಜುಗರ. ಇದನ್ನು ತಪ್ಪಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಕ್ಯಾಬಿನೆಟ್ ವಿಸ್ತರಣೆ ಮುಂದೂಡುವ ಸಾಧ್ಯತೆಗಳೇ ಹೆಚ್ಚಾಗಿವೆ ಎನ್ನಲಾಗುತ್ತದೆ.

ಸಂಪುಟ ವಿಸ್ತರಣೆ/ ಪುನರ್‌ರಚನೆ ಬಗ್ಗೆ ಹೈಕಮಾಂಡ್ ಚರ್ಚಿಸುವ ಅಪೇಕ್ಷೆಯೊಂದಿಗೆ ಬೊಮ್ಮಾಯಿ ದೆಹಲಿಗೆ ತೆರಳಿದ್ದರು. ಆದರೆ ಅಮಿತ್ ಶಾ, ಜೆ.ಪಿ.ನಡ್ಡಾ, ಪ್ರಧಾನಿ ಮೋದಿ ಯಾರೂ ಭೇಟಿಗೆ ಕಾಲಾವಕಾಶವನ್ನು ಇದುವರೆಗೆ ನೀಡಿಲ್ಲ. ಈ ವಿದ್ಯಮಾನವನ್ನು ಗಮನಿಸಿದರೆ ಮೇಲ್ಮನೆ ಚುನಾವಣೆ ನಡೆಯುವ ತನಕ ಸಂಪುಟ ವಿಸ್ತರಣೆ ಅನುಮಾನ.

ಮಂತ್ರಿಮಂಡಲ ವಿಸ್ತರಣೆ ಮಂದೂಡಲ್ಪಟ್ಟರೆ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬೇಸರದ ಸಂಗತಿಯಾದರೆ, ಸಂಪುಟ ಪುನರ್ ರಚನೆ ವೇಳೆ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿದ್ದ ಸಚಿವರಿಗೆ ಮತ್ತೊಂದಿಷ್ಟು ದಿನ ಪವರ್​ನಲ್ಲಿರಲು ಕಾಲಾವಕಾಶ ಸಿಕ್ಕಂತಾಗಿದೆ.

Last Updated :May 11, 2022, 12:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.