ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಪದವಿ ಸ್ವೀಕಾರದ ವೇಳೆಯೂ ಕೋವಿಡ್ ನಿಯಮ ಉಲ್ಲಂಘಿಸಿದ್ದ ಡಿ.ಕೆ ಶಿವಕುಮಾರ್ ಇದೀಗ ಮತ್ತೆ ಕೋವಿಡ್ ನಿಯಮ ಉಲ್ಲಂಘಿಸಲು ಹೊರಟಿದ್ದಾರೆ. ಇವರಿಗೆ ಜನತೆಯ ಬಗ್ಗೆ ಕಾಳಜಿ ಇಲ್ಲ, ಕಾಂಗ್ರೆಸ್ ನಡೆಸುತ್ತಿರುವುದು ಮೇಕೆದಾಟು ಪಾದಯಾತ್ರೆಯಲ್ಲ, ಸುಳ್ಳಿನಜಾತ್ರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕೆಪಿಸಿಸಿ ಅಧ್ಯಕ್ಷ ಪದವಿ ಸ್ವೀಕರಿಸುವ ಸಂದರ್ಭದಲ್ಲೂ ಡಿ.ಕೆ.ಶಿವಕುಮಾರ್ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಪ್ರತಿಜ್ಞಾ ಕಾರ್ಯಕ್ರಮ ನಡೆಸಿದರು. ಈಗ ಕೋವಿಡ್ ನಿಯಂತ್ರಣ ನಿರ್ಬಂಧಗಳ ನಡುವೆಯೂ ಮೇಕೆದಾಟು ಪಾದಯಾತ್ರೆ ಮಾಡಿಯೇ ಸಿದ್ಧ ಎಂದು ತೊಡೆ ತಟ್ಟುತ್ತಿದ್ದಾರೆ. ನಿಮಗೆ ಜನತೆಯ ಬಗ್ಗೆ ನಿಜಕ್ಕೂ ಕಾಳಜಿಯಿದೆಯೇ? ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಸಿದ್ದರಾಮಯ್ಯನವರೇ, ಡಿ.ಕೆ.ಶಿವಕುಮಾರ್ ಅವರ ಜತೆ ಹೆಜ್ಜೆ ಹಾಕುವಾಗ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿ. ಡಿಕೆಶಿ ನಡಿಗೆ ಜೈಲಿನ ಕಡೆಗೆ ಎಂಬ ವಿಚಾರ ನಿಮಗೆ ತಿಳಿಯದ ವಿಚಾರವೇನಲ್ಲ. ನಿಮ್ಮನ್ನು ಹಾಗೆ ತಿಹಾರ್ ಜೈಲಿನ ಕಡೆಗೆ ಕರೆದೊಯ್ದು ಬಿಟ್ಟಾರು ಜೋಕೆ ಎಂದು ವ್ಯಂಗ್ಯವಾಡಿದೆ.
ಕಾನೂನು ಪಾಲನೆ ಮಾಡುತ್ತೇವೆ ಎನ್ನುತ್ತಲೇ ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಬೆಂಬಲಿಗರು ಮರಗಳ ಮಾರಣ ಹೋಮ ನಡೆಸಿದ್ದಾರೆ. ಮೇಕೆದಾಟು ಪಾದಯಾತ್ರೆ ಹೆಸರಿನಲ್ಲಿ ಅರಣ್ಯ ಅತಿಕ್ರಮಣ ನಡೆಸುತ್ತಿದ್ದೀರಾ? ಕೋವಿಡ್ ನಿಯಮ ಪಾಲನೆ ನಿಮ್ಮಿಂದ ಹೇಗೆ ಸಾಧ್ಯ? ಎಂದು ಬಿಜೆಪಿ ಟಾಂಗ್ ನೀಡಿದೆ.
ನಕಲಿ ಗಾಂಧಿ ಕುಟುಂಬದ ಗುಲಾಮಗಿರಿಗೆ ಇಳಿಯಬೇಡಿ:
ಮಲ್ಲಿಕಾರ್ಜುನ ಖರ್ಗೆ ಅವರೇ ರಾಜಕೀಯ ಮಾಡುವುದಕ್ಕೆ ಬೇರೆ ಅಖಾಡ ನಿರ್ಮಿಸೋಣ. ಭದ್ರತಾ ಲೋಪದ ವಿಚಾರದಲ್ಲೂ ರಾಜಕಾರಣ ಮಾಡುವಷ್ಟು ನಕಲಿ ಗಾಂಧಿ ಕುಟುಂಬದ ಗುಲಾಮಗಿರಿಗೆ ಇಳಿಯಬೇಡಿ. ಇಂದಿರಾ, ನೆಹರೂ, ರಾಜೀವ್ ಅವರಿಗಿಂತ ಹತ್ತುಪಟ್ಟು ಹೆಚ್ಚು ಭದ್ರತೆ ಮೋದಿಗೆ ಇದೆ ಎಂಬ ನಿಮ್ಮ ಹೇಳಿಕೆಯಲ್ಲೇ ಅಸೂಯೆ ಮೊಳಗುತ್ತಿದೆ ಎಂದು ಬಿಜೆಪಿ ಖರ್ಗೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಮನನೊಂದು ಮಠ ತೊರೆದ ಸ್ವಾಮೀಜಿ.. ಶ್ರೀಗಳ ಮನವೊಲಿಸಲು ಬಂದ ಭಕ್ತರ ದಂಡು
ಕಾಂಗ್ರೆಸ್ ಹೈಕಮಾಂಡ್ಗೆ ನಿಜಕ್ಕೂ ದಲಿತರ ಮೇಲೆ ಕಾಳಜಿ ಇದ್ದಿದ್ದರೆ ಈ ದೇಶದ ಮೊದಲ ದಲಿತ ಮುಖ್ಯಮಂತ್ರಿ ನೀವೇ ಆಗಬೇಕಿತ್ತು. ಆದರೆ, ನೀವು ಏನೇ ಆದರೂ ನಕಲಿ ಗಾಂಧಿ ಕುಟುಂಬದ ಮನೆ ಬಾಗಿಲು ಕಾಯುವುದನ್ನು ನಿಲ್ಲಿಸುವುದಿಲ್ಲ ಎಂದರಿತು ಹುದ್ದೆ ದಯ ಪಾಲಿಸಲಿಲ್ಲ. ಸ್ವಲ್ಪವಾದರೂ ಸ್ವಾಭಿಮಾನ ರೂಢಿಸಿಕೊಳ್ಳಿ ಎಂದು ಖರ್ಗೆಗೆ ಟಾಂಗ್ ನೀಡಿದೆ.