ETV Bharat / state

ಚುನಾವಣಾ ಪ್ರಚಾರದ ಕಣಕ್ಕೆ ಧುಮುಕಿದ ಬಿಜೆಪಿ: ಪ್ರಗತಿ ರಥಯಾತ್ರೆಗೆ ಚಾಲನೆ

author img

By

Published : Feb 24, 2023, 2:00 PM IST

ಇಂದು ಬಿಜೆಪಿಯವರ ಪ್ರಗತಿ ರಥಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

BJP Pragathi Rath Yatra
ಪ್ರಗತಿ ರಥಯಾತ್ರೆಗೆ ಚಾಲನೆ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿರುವ ಬಿಜೆಪಿ ಇಂದು ಪ್ರಗತಿ ರಥಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. 135 ಪ್ರಗತಿ ರಥ ವಾಹನಗಳು 224 ವಿಧಾನಸಭೆ ಕ್ಷೇತ್ರಗಳಿಗೆ ತೆರಳಲಿದ್ದು, ಎಲ್ಇಡಿ ಪರದೆಗಳನ್ನು ಒಳಗೊಂಡ ಪ್ರಗತಿ ರಥ ವಾಹನಗಳು ಡಬಲ್ ಇಂಜಿನ್ ಸರ್ಕಾರಗಳ ಸಾಧನೆಗಳನ್ನು ವಿಡಿಯೋ, ಆಡಿಯೋ ಮೂಲಕ ಪ್ರಚಾರ ಮಾಡಲಿವೆ.

BJP Pragathi Rath Yatra
ಪ್ರಗತಿ ರಥಯಾತ್ರೆಗೆ ಚಾಲನೆ

ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಗತಿ ರಥ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಗತಿ ಯಾತ್ರೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಜನರಿಂದ ಜನರಿಗಾಗಿ ಮಾಡಿರೋ ಕಾರ್ಯಕ್ರಮ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ‘ಸಂಕಲ್ಪದಿಂದ ಸಿದ್ದಿ’ ಅಂತ ಕೆಲಸವನ್ನು ಈ ರಥ ಮಾಡಲಿದೆ. ನಾವೆಲ್ಲರೂ ಸೇರಿ ಅತ್ಯಂತ ಸಂತೋಷದಿಂದ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇವೆ‌. ಬೆಂಗಳೂರಿನ ಎಲ್ಲ ವಾರ್ಡ್, ಎಲ್ಲಾ ಗಲ್ಲಿಗಳಿಗೆ ಪ್ರಗತಿ ರಥ ಹೋಗಲಿದೆ. ಈ ರಥಗಳು ವಾಪಸ್ ಬರುವಾಗ ಸಿದ್ದಿಯಾಗಲಿ ಎಂದು ಅಪೇಕ್ಷಿಸುತ್ತೇವೆ ಎಂದರು.

BJP Pragathi Rath Yatra
ಪ್ರಗತಿ ರಥಯಾತ್ರೆಗೆ ಚಾಲನೆ

ರಾಜ್ಯದ ಆರ್ಥಿಕ ಸ್ಥಿತಿ ಕುಸಿತ ಬಳಿಕ ಸುಧಾರಿಸುವ ಕೆಲಸ ಮಾಡಿದ್ದೇವೆ. ಕೋವಿಡ್ ಕಾಲದಲ್ಲೂ ಅಮೃತ ಕಾಲ ಮಾಡಿದ್ದೇವೆ. ಎಲ್ಲ ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್ ಮಾಡಿದ್ದೇವೆ. ಬೆಂಗಳೂರಿನ ರಾಜಕಾಲುವೆಗೆ 2 ಸಾವಿರ ಕೋಟಿ ನೀಡಿದ್ದೇವೆ. ಯಾವ ಸರ್ಕಾರವು ಇಷ್ಟು ಹಣ ನೀಡಿರಲಿಲ್ಲ. ಸ್ಯಾಟಲೈಟ್ ಟೌನ್, ರಿಂಗ್ ರಸ್ತೆಗೆ ಕೇಂದ್ರ ಸರ್ಕಾರ ಹಣ ನೀಡಿದೆ. ರಾಜ್ಯ ಮತ್ತು ಕೇಂದ್ರ ಹಣ ನೀಡಿದ್ದರಿಂದ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಬಜೆಟ್‌ನಲ್ಲಿ 7,500 ಕೋಟಿಗಳನ್ನು ಕ್ರಿಯಾ ಯೋಜನೆಗೆ ನ್ಯಾಷನಲ್ ಹೈವೆಗೆ, ಬೆಂಗಳೂರಿಗೆ, ಸಬ್ ಅರ್ಬನ್‌ಗೆ ಮೀಸಲಿಡಲಾಗಿದೆ. ರಾಜ್ಯ ಸರ್ಕಾರದಿಂದ ಇಂದು ರೈತ ವಿದ್ಯಾನಿಧಿ ರೈತರಿಗೆ ಮಾತ್ರವಲ್ಲ, ಅನೇಕ ಕಾರ್ಮಿಕ ಮಕ್ಕಳಿಗೆ ನೀಡಿದ್ದೇವೆ. ಸ್ವನಿಧಿ ಯೋಜನೆ ಮೂಲಕ ಒಂದು ಲಕ್ಷ ಯುವಕರಿಗೆ ಬ್ಯಾಂಕ್ ಗ್ಯಾರಂಟಿ ಇಲ್ಲದೇ ಸಾಲ ಸಿಕ್ಕಿದೆ ಎಂದು ಸಿಎಂ ಹೇಳಿದರು.

ಪಿಯುಸಿ ಮತ್ತು ಬೇರೆ ವಿದ್ಯಾರ್ಥಿಗಳ ಶುಲ್ಕ ಮನ್ನ ಮಾಡಲಾಗಿದೆ. ಹೆಣ್ಣು ಮಕ್ಕಳಿಗೆ ಉಚಿತ ಪಾಸ್ ನೀಡುವ ಕೆಲಸ ಮಾಡಿದ್ದೇವೆ‌. ಪಿಯುಸಿ ಫೇಲ್ ಆದರೂ ಸ್ಟೈ ಫಂಡ್ ನೀಡುವ ಕೆಲಸ ಮಾಡಲಾಗಿದೆ. ಬಡವರ ಕಲ್ಯಾಣಕ್ಕಾಗಿ, ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇವೆ. ಸಮರ್ಥ ನಾಯಕತ್ವಕ್ಕೆ ಮೋದಿ ಇದ್ದಾರೆ. ಜನರ ಪರವಾಗಿ ಬಿಜೆಪಿ ಪಕ್ಷ ಇದೆ. ಜನ ಬಿಜೆಪಿಯೇ ಭರವಸೆ ಅಂತ ಹೇಳುತ್ತಿದ್ದಾರೆ. ರಥದೊಂದಿಗೆ ಹೋಗಿ ಬನ್ನಿ, ಬಿಜೆಪಿ ಪರವಾದ ಅಲೆ ರಾಜ್ಯದಲ್ಲಿ ಬರಲಿದೆ ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಟಿಎಂ ಲೇಔಟ್ ನಲ್ಲಿ ಈ ಬಾರಿ ಬದಲಾವಣೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕೇಂದ್ರದಲ್ಲಿ ತಾಯಿ ಮಕ್ಕಳ ಪಕ್ಷ ಇದೆ ಬಿಟಿಎಂ ಲೇಔಟ್ ನಲ್ಲಿ ಅಪ್ಪ ಮಗಳ ಆಡಳಿತ ಇದೆ. ಈ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕೀಯ ಹೋಗಲಾಡಿಸುತ್ತೇವೆ. ಅದಕ್ಕಾಗಿಯೇ ಬಿ ಟಿ ಎಂ ನಿ‌ಂದ ಪ್ರಗತಿ ರಥ ಯಾತ್ರೆಗೆ ಚಾಲನೆ ಮಾಡಿದ್ದೇವೆ. ಈ ಬಾರಿ ಈ ಕ್ಷೇತ್ರ ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಿಂದೂಗಳ ಕೊಲೆ ಆಯಿತು. ಡಿಕೆ ರವಿ, ಗಣಪತಿ ಸಾವು ಆಯಿತು. ನಿಮ್ಮ ಕಾಲದಲ್ಲಿ ಭ್ರಷ್ಟಾಚಾರ ಹಗರಣ, ಹಾಸಿಗೆ ತಲೆ ದಿಂಬು ಹಗರಣ ಇದೆಲ್ಲವನ್ನೂ ಈ ರಥ ಯಾತ್ರೆಯಲ್ಲಿ ತೋರಿಸುತ್ತೇವೆ ಎಂದರು.

ನಮ್ಮ ಸರ್ಕಾರ ರಾಜ್ಯದಲ್ಲಿ ನಾಲ್ಕು ವರ್ಷ ಸಾಧನೆ. ಕೇಂದ್ರದಲ್ಲಿ 9 ವರ್ಷಗಳ ಸಾಧನೆ. ನಾವು ಮಾಡಿರೋ ಯೋಜನೆ, ಸಾಧನೆ ಜನರಿಗೆ ತಲುಪಿಸೋ ಕೆಲಸ ಪ್ರಗತಿ ರಥ ಮಾಡಲಿದೆ. ಎಲ್ಲ ಬೂತ್, ಕ್ಷೇತ್ರದಲ್ಲಿ ಸಂಚರಿಸಲಿದೆ. ಅಮಿತ್ ಶಾ ನಮಗೆ ಪ್ರೇರಣೆ ನೀಡಿದ್ದಾರೆ. ಈ ರಾಜ್ಯದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಸಾಧನೆ ಮಾಡಿದೆ. ಬಡವರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಮೂಲಕ ಉಚಿತ ಶಿಕ್ಷಣ ನೀಡಿ ಲಕ್ಷಾಂತರ ಮಕ್ಕಳನ್ನು ಡಾಕ್ಟರ್ ಮಾಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಎಷ್ಟು ವಿಮಾನ ನಿಲ್ದಾಣ ಇತ್ತು. ಈಗ ಜಿಲ್ಲೆಗೊಂದು ವಿಮಾನ ನಿಲ್ದಾಣ ಮಾಡುತ್ತಿದ್ದೇವೆ. 27 ರಂದು ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರು ಮೈಸೂರು ರಸ್ತೆ ಎಕ್ಸ್ ಪ್ರೆಸ್ ವೇ ಮಾಡಿ ಒಂದೂವರೆ ಗಂಟೆಯಲ್ಲಿ ಬೆಂಗಳೂರಿನಿಂದ ಮೈಸೂರು ತಲುಪಲಿದ್ದೇವೆ ಎಂದು ಸರ್ಕಾರದ ಸಾಧನೆಯನ್ನು ಕಟೀಲು ವಿವರಿಸಿದರು.

ನಿಮ್ಮ ವೈಫಲ್ಯಗಳನ್ನು ಜನರ ಮುಂದೆ ಇಡುತ್ತೇವೆ. ರಥಯಾತ್ರೆಯನ್ನು ಹಳ್ಳಿ ಹಳ್ಳಿಗೆ ತೆಗೆದುಕೊಂಡು ಹೋಗುವ ಕೆಲಸ ಯುವ ಮೋರ್ಚಾ ಕಾರ್ಯಕರ್ತರು ಮಾಡಲಿದ್ದಾರೆ. ಪ್ರಗತಿ ರಥದ ಮೂಲಕ ನಮ್ಮ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಜನರ ಮುಂದೆ ಹೋಗಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಮನವಿ ಮಾಡುತ್ತೇವೆ ಎಂದರು. ಸಂಸದ ತೇಜಸ್ವಿ ಸೂರ್ಯ, ಯುವಮೋರ್ಚಾ ಅಧ್ಯಕ್ಷ ಸಂದೀಪ್, ಬೆಂಗಳೂರು ನಗರ ವಿಭಾಗ ಅಧ್ಯಕ್ಷರಾದ ಎನ್.ಆರ್ ರಮೇಶ್, ಮಂಜುನಾಥ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ: ಬಿಎಸ್​ವೈ ಭಾಷಣಕ್ಕೆ ಮೋದಿ ಫಿದಾ: ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.