ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೈದ್ಯರ ಸಲಹೆ ಮೇರೆಗೆ ಇಂದಿನಿಂದ ನಾಲ್ಕು ದಿನ ವಿಶ್ರಾಂತಿಗಾಗಿ ಬೆಂಗಳೂರಿನಿಂದ ಹೊರಗಡೆ ತೆರಳಲಿದ್ದಾರೆ. ಈ ಕಾರಣದಿಂದ ಈ ನಾಲ್ಕು ದಿನ ಸಾರ್ವಜನಿಕರು, ಗಣ್ಯರ ಭೇಟಿಗೆ ಅವಕಾಶ ಇರುವುದಿಲ್ಲ. ನಾಲ್ಕು ದಿನದ ನಂತರ ಎಂದಿನಂತೆ ಎಲ್ಲರ ಭೇಟಿ ಮಾಡಲಿದ್ದಾರೆ.
ಕ್ಷುಲ್ಲಕ ರಾಜಕಾರಣ ಕೈಬಿಡಲಿ:
ಇಂದಿರಾ ಕ್ಯಾಂಟೀನ್ ಹೆಸರು ಬದಲು ನಿರ್ಧಾರಕ್ಕೆ ಸಿದ್ದರಾಮಯ್ಯ ತಮ್ಮ ಪ್ರತಿಕ್ರಿಯೆ ನೀಡಿದ್ದು, ಇಂದಿರಾ ಕ್ಯಾಂಟೀನ್ಗಳ ಹೆಸರನ್ನು ಬದಲಾಯಿಸಲು ಹೊರಟಿರುವ ರಾಜ್ಯದ ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸುತ್ತೇನೆ ಮತ್ತು ಇಂತಹ ಕ್ಷುಲ್ಲಕ ರಾಜಕಾರಣವನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಪಡಿಸುತ್ತೇನೆ. ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಗರೀಬಿ ಹಟಾವೋ ಘೋಷಣೆಯ ಮೂಲಕ ಬಡತನದ ವಿರುದ್ಧ ಯುದ್ಧ ಸಾರಿ ಗೆದ್ದವರು. ಅವರು ಕೇವಲ ಕಾಂಗ್ರೆಸ್ ಪಕ್ಷದ ನಾಯಕರಾಗಿರಲಿಲ್ಲ, ದೇಶದ ನಾಯಕಿಯಾಗಿದ್ದರು, ಬಡವರ ಪಾಲಿನ ಆಪತ್ಪಾಂಧವರಾಗಿದ್ದರು. ಈ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್ ಎಂದು ನಾಮಕರಣ ಮಾಡಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕ್ಯಾಂಟೀನ್ಗಳಿಗೆ ನಮ್ಮೆಲ್ಲರ ಹೆಮ್ಮೆಯ ಕವಿ ಮಹರ್ಷಿ ವಾಲ್ಮೀಕಿಯವರ ಹೆಸರು ಇಡುವ ಯೋಚನೆ ಇದೆಯಂತೆ. ಮಹರ್ಷಿ ವಾಲ್ಮೀಕಿಯವರ ಬಗ್ಗೆ ನಮಗೆಲ್ಲ ಅಪಾರವಾದ ಗೌರವ ಇದೆ. ಅವರ ಹೆಸರನ್ನು ಬಿಜೆಪಿ ತನ್ನ ಕ್ಷುಲ್ಲಕ ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಂಡು ಮಹಾಕವಿಗೆ ಅವಮಾನ ಮಾಡಲು ಮುಂದಾಗಿದೆ. ಮಹರ್ಷಿ ವಾಲ್ಮೀಕಿಯವರು ಒಬ್ಬ ಮಹಾಕವಿ, ಅವರ ಸಾಧನೆಗೆ ಹೊಂದುವಂತಹ ಯೋಜನೆಯನ್ನು ಬಿಜೆಪಿ ಸರ್ಕಾರ ಪ್ರಾರಂಭಿಸಲಿ, ಒಬ್ಬರಿಗೆ ಅಗೌರವ ಸಲ್ಲಿಸುವ ಮೂಲಕ ಇನ್ನೊಬ್ಬರಿಗೆ ಗೌರವ ಸಲ್ಲಿಸುವುದು ಇಬ್ಬರಿಗೂ ಮಾಡುವ ಅವಮಾನವಾಗಿದೆ ಎಂದಿದ್ದಾರೆ.
ರಾಜ್ಯ ಬಿಜೆಪಿ ಬದಲಾಯಿಸಬೇಕಾಗಿರುವುದು ಇಂದಿರಾ ಕ್ಯಾಂಟೀನ್ ಹೆಸರಲ್ಲ, ತನ್ನೊಳಗಿನ ಸಣ್ಣ ಬುದ್ದಿಯನ್ನು ಬದಲಾಯಿಸಬೇಕು. ನಮ್ಮ ಸರ್ಕಾರ ಜಾರಿಗೆ ತಂದಿರುವ ಪ್ರತಿಯೊಂದು ಬಡವರ ಪರ ಯೋಜನೆಗಳನ್ನು ರದ್ದುಮಾಡಲು ಹೊರಟಿರುವ ರಾಜ್ಯದ ಬಿಜೆಪಿ ಸರ್ಕಾರ ಜನಾಕ್ರೋಶಕ್ಕೆ ಹೆದರಿ ಯೋಜನೆಗಳ ಹೆಸರು ಬದಲಾಯಿಸಲು ಹೊರಟಿದೆ. ಬಡವರ ಪರವಾದ ಹೊಸ ಯೋಜನೆಗಳನ್ನು ರೂಪಿಸುವ ಶಕ್ತಿಯೂ ಇಲ್ಲ, ಮನಸ್ಸೂ ಇಲ್ಲ ಎಂದು ವಿವರಿಸಿದ್ದಾರೆ.