ETV Bharat / state

ಶೇಕಡಾ 69 ರಷ್ಟು ಮಹಿಳೆಯರಿಂದ ಮುದ್ರಾ ಯೋಜನೆ ಸದ್ಬಳಕೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

author img

By

Published : May 7, 2023, 6:21 PM IST

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಮುದ್ರಾ ಯೋಜನೆಯ ಪ್ರಮಾಣ ಸಣ್ಣದಾಗಿದ್ದರೂ ಮಹಿಳಾ ಉದ್ಯಮಿಗಳು ಇದರಿಂದ ಲಾಭ ಪಡೆದಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಬೆಂಗಳೂರು : ಪುರುಷರು ಮತ್ತು ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ವಿಶೇಷವಾಗಿ ಮುದ್ರಾ ಯೋಜನೆಯನ್ನು ಮಹಿಳೆಯರೇ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಅಂಕಿಅಂಶ ಮತ್ತು ವರದಿಗಳ ಪ್ರಕಾರ ಶೇ. 69% ಮಹಿಳೆಯರು ಇದರ ಲಾಭ ಪಡೆದಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ರು.

ಥಿಂಕರ್ಸ್ ಫೋರಮ್ ವತಿಯಿಂದ ನಗರದ ಬಸವನಗುಡಿಯಲ್ಲಿರುವ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಹಿಳಾ ಉದ್ಯಮಿಗಳ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮುದ್ರಾ ಯೋಜನೆಯ ಪ್ರಮಾಣ ಸಣ್ಣದಾಗಿದ್ದರೂ ಮಹಿಳಾ ಉದ್ಯಮಿಗಳು ಇದರಿಂದ ಹೆಚ್ಚು ಲಾಭ ಪಡೆದಿದ್ದಾರೆ. ಇದರ ಬಗ್ಗೆ ಸ್ಪಷ್ಟವಾಗಿ ವರದಿ ತೋರಿಸುತ್ತದೆ ಎಂದರು.

ಪ್ರಧಾನಿಯವರು ಸ್ಟಾರ್ಟ್‌ಅಪ್‌ಗಳಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದರು. ಆದರೆ ಇದು ನಗರವಾಸಿಗಳಿಗೆ ಮಾತ್ರ ಸೀಮಿತ ಎನ್ನಲಾಗುತ್ತಿತ್ತು. ಹಾಗಾಗಿ ನಾವು ಎಸ್‌ಸಿ ಎಸ್‌ಟಿ ಮತ್ತು ಮಹಿಳೆಯರನ್ನು ಬೆಂಬಲಿಸಲು ಬ್ಯಾಂಕ್ ಗಳಿಗೆ ತಿಳಿಸಿದೆವು. ವಿಶೇಷವಾಗಿ ನಾವು ವಿಶಿಷ್ಟ ಮತ್ತು ನವೀನ ಆಲೋಚನೆಗಳನ್ನು ಹೊಂದಿರುವ ಪ್ರತಿ ಪ್ರದೇಶದ ಒಬ್ಬ ಮಹಿಳೆಯರನ್ನು ಬೆಂಬಲಿಸಲು ಸೂಚನೆಗಳನ್ನು ನೀಡಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.

ಸಿಲಿಕಾನ್ ಸಿಟಿಯಲ್ಲಿ ಸಶಕ್ತ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. ಜಾಗತಿಕ ಮನ್ನಣೆಯನ್ನು ಸಹ ಇಲ್ಲಿನ ಮಹಿಳೆಯರು ಸಾಧಿಸಿದ್ದಾರೆ. ಅವರುಗಳು ಇನ್ನಷ್ಟು ಬೆಳೆಯಲು ಸಬಲರಾಗಲು ಕರ್ನಾಟಕದ ಜೊತೆ ಜೊತೆಗೆ ಭಾರತವನ್ನು ಸದೃಢಗೊಳಿಸಲು ಕೇಂದ್ರ ಸರ್ಕಾರ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಕರ್ನಾಟಕದಲ್ಲಿ ಈಗ ಚುನಾವಣೆಯ ಸಮಯವಾಗಿದೆ. ಶೇಕಡಾ 48 ರಿಂದ 50 ರಷ್ಟು ಮಹಿಳಾ ಮಾತದಾರರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ವಾಸವಿದ್ದಾರೆ. ಕರ್ನಾಟಕದಲ್ಲಿ ಬಿಪಿ ಎಲ್, ಎಪಿಎಲ್ ಮತ್ತು ಶ್ರೀಮಂತ ಮಹಿಳೆಯರು ವಾಸಿಸುತ್ತಿದ್ದಾರೆ. ಸರ್ಕಾರಗಳು ಆರ್ಥಿಕ ತೊಂದರೆಗಳನ್ನು ಅಡೆತಡೆಗಳನ್ನು ನಿವಾರಿಸುವುದಾಗಿ ವಿಶೇಷವಾಗಿ ಸೌಲಭ್ಯಗಳನ್ನು ಘೋಷಿಸುತ್ತವೆ. ವ್ಯಾಪಾರ ಮತ್ತು ಶಿಕ್ಷಣದ ಅವಕಾಶಗಳಿಂದ ವಂಚಿತರಾದವರಿಗೆ ರಾಜಕೀಯ-ಆರ್ಥಿಕ ಸಂದೇಶ ನೀಡುವುದು ಸುಲಭ. ಆದರೆ ಈಗಾಗಲೇ ಸಾಧನೆಗೈದ ಮಹಿಳೆಯರಿಗೆ ಸಂದೇಶವನ್ನು ರವಾನಿಸುವುದು ಕಷ್ಟ ಸಾಧ್ಯ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.

ಸರ್ಕಾರದೊಂದಿಗೆ ಫಲಾನುಭವಿಗಳ ಸಂಬಂಧವು ಅರ್ಥಿಕವಾಗಿ ಹಿಂದುಳಿದ ಮಹಿಳೆಯರೊಂದಿಗೆ ಸಾಧಿಸುವುದು ಸುಲಭವಾಗಿದೆ. ಆದರೆ ಸಬಲರಾಗಿರುವ ಮಹಿಳೆಯರಿಗೆ ಭವಿಷ್ಯದಲ್ಲಿನ ಯೋಜನೆಗಳು ಮತ್ತು ಪ್ಯಾಕೇಜ್‌ಗಳ ಕುರಿತು ಯವುದೇ ಆಸಕ್ತಿ ಇರುವುದಿಲ್ಲ. ಆದ್ದರಿಂದ ಈಗಾಗಲೇ ಸಬಲರಾದ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳ ಸೃಷ್ಟಿ ಮತ್ತಷ್ಟು ಸಶಕ್ತರಾಗಲು ಪ್ರೇರೇಪಣೆ ನೀಡುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ. ಮುಖ್ಯವಾಗಿ ಸ್ಟಾರ್ಟ್‌ ಅಪ್‌ನಲ್ಲಿ ಮಹಿಳೆಯರ ಭಾಗವಹಿಸುವಿಕೆ ಕುರಿತು ಸಾಕಷ್ಟು ಮಾತುಕತೆ, ಕೆಲಸಗಳನ್ನು ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಸಿಎ ಐ.ಎಸ್ ಪ್ರಸಾದ್ ಸ್ವಾಗತ ಕೋರಿ ಮಾತನಾಡಿ ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲಿ ಭಾರತವನ್ನು ಐದನೇ ಅತಿದೊಡ್ಡ ಆರ್ಥಿಕತೆಯ ಹಂತಕ್ಕೆ ಕೊಂಡೊಯ್ದ ಹಣಕಾಸು ಸಚಿವರನ್ನು ಕಾಣುತ್ತಿರುವುದು ಭಾರತದ ಅದೃಷ್ಟ. ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ಪ್ರಧಾನಿ ಜಿ 20 ಅಧ್ಯಕ್ಷರಾಗಿದ್ದಾರೆ. ನಿರ್ಮಲಾ ಸೀತಾರಾಮನ್ ಕೂಡ ಅದರ ಭಾಗವಾಗಿರುವುದು ಹೆಮ್ಮೆಯ ವಿಷಯ. ಜಿ 20 ಕೂಡ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಪರಿಕಲ್ಪನೆಯನ್ನು ಮುಂದಿಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ನಿರ್ಮಲಾ ಸೀತಾರಾಮನ್ ಅನೇಕ ಸುಧಾರಣಾ ಕ್ರಮಗಳನ್ನು ತಂದು ವ್ಯವಹಾರ ಮಾಡುವುದನ್ನು ಸುಲಭಗೊಳಿಸಿದ್ದಾರೆ. ಆದ್ದರಿಂದಲೇ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿಯಲ್ಲಿ ಕರ್ನಾಟಕ ಎರಡನೇ ದೊಡ್ಡ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಅವರು ಶ್ಲಾಘಿಸಿದರು.

ಇದನ್ನೂ ಓದಿ : ಪ್ರಧಾನಿ ಬೆಂಗಳೂರು ರೋಡ್ ಶೋಗೆ ತೆರೆ; ಎರಡು ದಿನ ಒಟ್ಟು 32.5 ಕಿ.ಮೀ. ಮೋದಿ ಮೋಡಿ ಮೂಲಕ ಮತಬೇಟೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.