ದೊಡ್ಡಬಳ್ಳಾಪುರ: ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದ ಘಾಟಿ ಸುಬ್ರಮಣ್ಯ ಬಳಿಯ ವಿಶ್ವೇಶ್ವರಯ್ಯ ಪಿಕ್ಅಪ್ ಡ್ಯಾಮ್ ತುಂಬಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಘಾಟಿ ಕ್ಷೇತ್ರದ ಸಂಪರ್ಕ ಸೇತುವೆ ಕೊಚ್ಚಿ ಹೋಗಿದೆ.
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಮ್ಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇನ್ನು ಘಾಟಿ ಸುಬ್ರಮಣ್ಯ ಕ್ಷೇತ್ರಕ್ಕೆ ಬರುವ ಭಕ್ತರು ಡ್ಯಾಮ್ಗೆ ಭೇಟಿ ನೀಡದಂತೆ ಎಚ್ಚರಿಕೆ ನೀಡಲಾಗಿದೆ.
ಕೊಚ್ಚಿ ಹೋದ ಸೇತುವೆ: ಡ್ಯಾಮ್ ನಿಂದ ಹೊರ ಬರುವ ನೀರು ಉತ್ತರ ಪಿನಾಕಿನಿ ನದಿ ಸೇರುತ್ತೆ. ಇದರ ಮಧ್ಯದಲ್ಲಿ ಘಾಟಿ ಕ್ಷೇತ್ರಕ್ಕೆ ಸಂಪರ್ಕಿಸುವ ಸೇತುವೆ ಇದ್ದು, ಡ್ಯಾಮ್ನಿಂದ ಹರಿದು ಬಂದ ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದೆ, ಇದರಿಂದ ಗೌರಿಬಿದನೂರು ಮತ್ತು ಘಾಟಿ ಸಂಪರ್ಕ ಕಡಿತಗೊಂಡಿದೆ. ಭಾರಿ ಮಳೆಯಾದಾಗ ಸೇತುವೆ ಕೊಚ್ಚಿ ಹೋಗುವುದು ಸಾಮಾನ್ಯವಾಗಿದೆ
ಕಲ್ಯಾಣ ಮಂಟಪಕ್ಕೆ ನುಗ್ಗಿದ ನೀರು: ಘಾಟಿ ಕ್ಷೇತ್ರ ಸುಬ್ರಮಣ್ಯ ದೇವಸ್ಥಾನ ಮುಂಭಾಗದಲ್ಲಿದ ವಿಎಸ್ವಿಎಸ್ವಿ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದ್ದು, ನೆಲ ಮಹಡಿಯಲ್ಲಿ ಇರುವ ಊಟದ ಕೋಣೆ ಸಂಪೂರ್ಣ ಜಲಾವೃತವಾಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ಮಂಟಪಕ್ಕೆ ನುಗ್ಗಿವೆ. ನೀರನ್ನು ಮೋಟರ್ ಪಂಪ್ ಅಳವಡಿಸಿ ಹೊರ ಹಾಕಲಾಗಿದೆ.
ಇದನ್ನೂ ಓದಿ: ಮಳೆಯ ಆರ್ಭಟಕ್ಕೆ ಸಾಲು ಸಾಲು ಅವಾಂತರ.. ಬೆಂಗಳೂರಲ್ಲಿ ಅಪಾರ್ಟ್ಮೆಂಟ್ಗಳು ಜಲಾವೃತ