ETV Bharat / sports

ಬ್ರಜ್‌ ಭೂಷಣ್ ವಿರುದ್ಧ 'ಕುಸ್ತಿ'; ಪಂದ್ಯಗಳಿಂದ ದೂರ ಉಳಿದ ಕ್ರೀಡಾಪಟುಗಳ ವಿರುದ್ಧ ಕೇಂದ್ರ ಅತೃಪ್ತಿ

author img

By

Published : Feb 24, 2023, 4:48 PM IST

sports-ministry-unhappy-with-top-wrestlers-for-skipping-international-meets
ಖ್ಯಾತ ಕುಸ್ತಿಪಟುಗಳ ಬಗ್ಗೆ ಸಚಿವಾಲಯದ ಅತೃಪ್ತಿ

ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದ್ದ ಖ್ಯಾತ ಕುಸ್ತಿಪಟುಗಳು ಮಹತ್ವದ ಪಂದ್ಯಗಳಿಂದ ದೂರ ಉಳಿದಿದ್ದಾರೆ.

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಹಾಗೂ ಅದರ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್​ ಜೊತೆಗೆ ಸಂಘರ್ಷಕ್ಕಿಳಿದಿರುವ ದೇಶದ ಅಗ್ರಮಾನ್ಯ ಕುಸ್ತಿಪಟುಗಳು ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಂದ ಹೊರಗುಳಿದಿದ್ದಾರೆ. ಕುಸ್ತಿಪಟುಗಳ ನಿಲುವಿನ ಬಗ್ಗೆ ಕ್ರೀಡಾ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ವಿವಾದವೇನು?: ಬ್ರಿಜ್ ಭೂಷಣ್ ಶರಣ್ ಸಿಂಗ್​ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಅನೇಕ ಕುಸ್ತಿಪಟುಗಳು ನವದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಿ, ಡಬ್ಲ್ಯುಎಫ್‌ಐ ವಿಸರ್ಜನೆ ಮಾಡಬೇಕು. ಬ್ರಿಜ್ ಭೂಷಣ್ ಶರಣ್ ಸಿಂಗ್​ ಅವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದ್ದರು. ಈ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿ, ಸಮಿತಿಯನ್ನು ನಂತರ ಕುಸ್ತಿಪಟುಗಳು ತಮ್ಮ ಧರಣಿ ಕೈಬಿಟ್ಟಿದ್ದರು.

ಇದರ ನಡುವೆ ಝಾಗ್ರೆಬ್ ಮತ್ತು ಅಲೆಕ್ಸಾಂಡ್ರಿಯಾದಲ್ಲಿ ನಡೆದ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (United World Wrestling) ಶ್ರೇಯಾಂಕ ಸರಣಿಗಳಿಂದ ಖ್ಯಾತ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ, ದೀಪಕ್ ಪುನಿಯಾ, ರವಿ ದಹಿಯಾ, ಅಂಶು ಮಲಿಕ್ ಹಾಗೂ ಸಂಗೀತಾ ಮೋರ್ ಸೇರಿದಂತೆ ಉನ್ನತ ಕುಸ್ತಿಪಟುಗಳು ದೂರು ಉಳಿದಿದ್ದಾರೆ.

ಇದನ್ನೂ ಓದಿ: ಮೇಲ್ವಿಚಾರಣಾ ಸಮಿತಿ ಬಗ್ಗೆ ಕುಸ್ತಿಪಟುಗಳ ಅಸಮಾಧಾನ : ಸಮಾಲೊಚನೆ ಮಾಡದೇ ನಿರ್ಧಾರ ಎಂದು ಪ್ರತಿಭಟನಾ ನಿರತರು

ಖ್ಯಾತ ಕುಸ್ತಿ ಪಟುಗಳ ನಡೆ ಸರ್ಕಾರವನ್ನು ಕೆರಳಿಸುವಂತೆ ಮಾಡಿದೆ. ಯಾಕೆಂದರೆ, ಕುಸ್ತಿಪಟುಗಳಿಗೆ ತರಬೇತಿ ಮತ್ತು ಕ್ರೀಡೆಗಳಿಗೆ ತಯಾರಿ ನಡೆಸಲು ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್ (Target Olympics Podium Scheme - TOPS) ಅಡಿಯಲ್ಲಿ ಸರ್ಕಾರ ಹಣಕಾಸು ನೆರವು ನೀಡುತ್ತದೆ.

'ಕ್ರೀಡಾಕೂಟ ತಪ್ಪಿಸಬಾರದು': ಈ ಬಗ್ಗೆ ಕ್ರೀಡಾ ಸಚಿವಾಲಯದ ಅಧಿಕಾರಿಯೊಬ್ಬರು ಮಾತನಾಡಿ, ''ಅವರ (ಕುಸ್ತಿ ಪಟುಗಳು) ಬೇಡಿಕೆಗಳು ಈಡೇರಿದ ಮೇಲೂ ಏಕೆ ಪಂದ್ಯಾವಳಿಗಳಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಇದು ಕುಸ್ತಿಪಟುಗಳ ನಿರ್ಧಾರ ಹಾಗೂ ನಾವು ಯಾರನ್ನೂ ಒತ್ತಾಯಿಸಲು ಸಾಧ್ಯವಿಲ್ಲ. ಆದರೆ, ಕ್ರೀಡಾಕೂಟಗಳನ್ನು ಅವರು ತಪ್ಪಿಸಿಕೊಳ್ಳಬಾರದು. ನಾವು ಸಮಿತಿಗೆ ತನಿಖೆ ಪೂರ್ಣಗೊಳಿಸಲು ಸಮಯ ನೀಡಬೇಕು'' ಎಂದು ತಿಳಿಸಿದ್ದಾರೆ.

2 ವಾರ ಹೆಚ್ಚುವರಿ ಗಡುವು: ತನಿಖಾ ಸಮಿತಿಗೆ ನೀಡಿದ ಹಿಂದಿನ ಗಡುವಿನ ಪ್ರಕಾರ, ಸಮಿತಿಯು ತನ್ನ ವರದಿಯನ್ನು ಫೆಬ್ರವರಿ 23ರಂದು ಸಲ್ಲಿಸಬೇಕಿತ್ತು. ಆದರೆ, ಸಮಿತಿಯು ಇನ್ನೂ ಸಮಯಾವಕಾಶ ಕೇಳಿದ್ದ ಹಿನ್ನೆಲೆ, ಕ್ರೀಡಾ ಸಚಿವಾಲಯವು ಎರಡು ವಾರಗಳ ಹೆಚ್ಚುವರಿ ಸಮಯವನ್ನು ನೀಡಿದೆ. ಈ ಎರಡು ವಾರಗಳ ವಿಸ್ತರಣೆಯ ಹಿಂದಿನ ಕಾರಣದ ಬಗ್ಗೆಯೂ ಪ್ರತಿಕ್ರಿಯಿಸಿದ ಅಧಿಕಾರಿ, ''ಜನವರಿ 21ರಂದು ರಾತ್ರಿ ಸಮಿತಿ ರಚನೆ ಕುರಿತು ಸಚಿವರು ಘೋಷಿಸಿದ್ದರು. ಜನವರಿ 23ರಂದು ಸಮಿತಿ ರಚಿಸಲಾಯಿತು. ಆದರೆ, ಸಮಿತಿಯ ಪ್ರಮುಖರು ಹೊಸ ಸದಸ್ಯರ ಸೇರ್ಪಡೆಯ ನಂತರವೇ ತನಿಖೆ ಆರಂಭಿಸಲು ಸಾಧ್ಯ. ಆದ್ದರಿಂದ ಸ್ವಲ್ಪ ಸಮಯ ನೀಡುವಂತೆ ಇಲಾಖೆಗೆ ಮಾಡಿದ್ದರು'' ಎಂದು ಮಾಹಿತಿ ನೀಡಿದರು.

ತನಿಖಾ ಸಮಿತಿ ರಚನೆ: ಖ್ಯಾತ ಬಾಕ್ಸರ್ ಎಂ.ಸಿ.ಮೇರಿ ಕೋಮ್ ನೇತೃತ್ವದ ಆರು ಸದಸ್ಯರ ಮೇಲುಸ್ತುವಾರಿ ಸಮಿತಿ ರಚಿಸಲಾಗಿದೆ. ಮಾಜಿ ಕುಸ್ತಿಪಟು ಯೋಗೇಶ್ವರ್ ದತ್, ಮಾಜಿ ಶಟ್ಲರ್ ತೃಪ್ತಿ ಮುರಗುಂಡೆ, ಭಾರತೀಯ ಕ್ರೀಡಾ ಪ್ರಾಧಿಕಾರದ ಸದಸ್ಯೆ ರಾಧಿಕಾ ಶ್ರೀಮನ್ ಮತ್ತು ಟಾಪ್ಸ್​​ ಮಾಜಿ ಸಿಇಒ ರಾಜೇಶ್ ರಾಜಗೋಪಾಲನ್​ ಅವರನನ್ನು ಸಮಿತಿ ಒಳಗೊಂಡಿದೆ.

ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಹಲವಾರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಹಾಗೂ ಕ್ರೀಡಾಪಟುಗಳನ್ನು ಬೆದರಿಸಿದ್ದಾರೆ ಎಂಬ ಆರೋಪಗಳ ಬಗ್ಗೆ ಸಮಿತಿಯು ತನಿಖೆ ನಡೆಸುತ್ತಿದೆ. ಇದೇ ವೇಳೆ ತನಿಖೆ ಪೂರ್ಣಗೊಳ್ಳುವವರೆಗೆ ಬ್ರಿಜ್ ಭೂಷಣ್ ಅವರನ್ನು ಫೆಡರೇಶನ್​ನಿಂದ ದೂರು ಇರುವಂತೆ ಕೂಡ ಸಚಿವಾಲಯ ಸೂಚಿಸಿದೆ.

ಇದನ್ನೂ ಓದಿ: ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ದ ಪ್ರತಿಭಟನೆ ನಡೆಸಿದ ಕುಸ್ತಿಪಟುಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.