ETV Bharat / sports

WFI ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: 72 ಗಂಟೆಯೊಳಗೆ ವಿವರಣೆ ನೀಡಲು SAI ಸೂಚನೆ

author img

By

Published : Jan 19, 2023, 12:52 PM IST

Wrestlers protest at Jantar Mantar
ಜಂತರ್​ ಮಂತರ್​ನಲ್ಲಿ ಕುಸ್ತಿಪಟುಗಳ ಪ್ರತಿಭಟನೆ

ರಾಷ್ಟ್ರೀಯ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಸರ್ವಾಧಿಕಾರಿ ಧೋರಣೆ, ಲೈಂಗಿಕ ಕಿರುಕುಳ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆ ಮತ್ತು ಆರೋಪಗಳ ಬಗ್ಗೆ ವಿವರಣೆ ನೀಡುವಂತೆ ಎಸ್​ಎಐ, ಡಬ್ಲ್ಯುಎಫ್‌ಐಗೆ ನೋಟಿಸ್​ ಜಾರಿ ಮಾಡಿದೆ.

ನವದೆಹಲಿ: ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್​ ಭೂಷಣ್ ಶರಣ್​ ಸಿಂಗ್​ ಹಾಗೂ ಫೆಡರೇಷನ್​ನ ಕೆಲವು ತರಬೇತುದಾರರ ವಿರುದ್ಧ ಕುಸ್ತಿಪಟುಗಳು ಹಾಗೂ ಮಹಿಳಾ ಕೋಚ್​ಗಳು ಮಾಡಿರುವ ಲೈಂಗಿಕ ಕಿರುಕುಳ ಆರೋಪವೂ ಸೇರಿದಂತೆ ಗಂಭೀರ ಆರೋಪಗಳ ಕುರಿತು ಮುಂದಿನ 72 ಗಂಟೆಗಳಲ್ಲಿ ವಿವರಣೆ ಕಳುಹಿಸುವಂತೆ ಕೇಂದ್ರ ಕ್ರೀಡಾ ಸಚಿವಾಲಯವು ಭಾರತೀಯ ಕುಸ್ತಿ ಒಕ್ಕೂಟಕ್ಕೆ (ಡಬ್ಲ್ಯುಎಫ್‌ಐ) ಸೂಚಿಸಿದೆ.

ಭಾರತೀಯ ಕ್ರೀಡಾ ಪ್ರಾಧಿಕಾರ ನೋಟಿಸ್​ ಜಾರಿ ಮಾಡಿದ್ದು, ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು ಮಾಡಿರುವ ಆರೋಪಗಳ ಬಗ್ಗೆ ವಿವರಣೆ ಸಲ್ಲಿಸುವಂತೆ ಭಾರತದ ಉನ್ನತ ರಾಷ್ಟ್ರೀಯ ಕ್ರೀಡಾ ಸಂಸ್ಥೆಯು ನೋಟಿಸ್‌ನಲ್ಲಿ ಫೆಡರೇಶನ್​ಗೆ ತಿಳಿಸಿದೆ. ಫೆಡರೇಶನ್​ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆಯ ವಿರುದ್ಧ ದೆಹಲಿಯ ಜಂತರ್​ ಮಂತರ್​ನಲ್ಲಿ 30 ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ಕಾರಣಗಳು ಮತ್ತು ನಿದರ್ಶನಗಳನ್ನು ಕೇಳಿದೆ.

ಇದರ ಮಧ್ಯೆ ಜ.18 ರಿಂದ 41 ಕುಸ್ತಿಪಟುಗಳು ಮತ್ತು 13 ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಲಖನೌನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ರಾಷ್ಟ್ರೀಯ ಶ್ರೇಷ್ಠ ಕೇಂದ್ರದಲ್ಲಿ (NCOE) ಪ್ರಾರಂಭವಾಗಬೇಕಿದ್ದ ಮಹಿಳಾ ರಾಷ್ಟ್ರೀಯ ಕುಸ್ತಿ ತರಬೇತಿ ಶಿಬಿರವನ್ನು ರದ್ದುಗೊಳಿಸಲಾಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಅಧಿಕಾರಿಗಳು ತಿಳಿಸಿದ್ದಾರೆ.

  • दिल्ली महिला आयोग की चेयरमैन @SwatiJaiHind जी ने जंतर मंतर पर बैठे #Wrestlers से मुलाकात की और उन्हे भरोसा दिलाया कि हम उनके साथ हैं और उन्हें न्याय दिलाएँगे, जिन्होंने हमारे देश की शान बढ़ाई है, आज वो इस कड़ाके की सर्दी में न्याय के लिए सड़क पर बैठना पड़ रहा है। pic.twitter.com/caoLCkdtLA

    — Vinay Kumar (@VinayKu52626748) January 19, 2023 " class="align-text-top noRightClick twitterSection" data=" ">

ದೆಹಲಿಯ ಜಂತರ್​ ಮಂತರ್​ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಬುಧವಾರ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಭೇಟಿ ನೀಡಿದ್ದಾರೆ. ಡಬ್ಲ್ಯುಎಫ್‌ಐ ಮುಖ್ಯಸ್ಥರಿಂದ ಲೈಂಗಿಕ ಕಿರುಕುಳದ ಆರೋಪದ ವಿರುದ್ಧ ಪ್ರತಿಭಟಿಸುವ ಕುಸ್ತಿಪಟುಗಳಿಗೆ ಒಗ್ಗಟ್ಟು ವ್ಯಕ್ತಪಡಿಸಿರುವ ಅವರು, ಒಲಿಂಪಿಕ್​ನಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಭಾರತ ದೇಶವನ್ನು ಎತ್ತರಕ್ಕೆ ಕೊಂಡೊಯ್ದ ಮಹಿಳೆಯರು ನ್ಯಾಯ ಕೇಳಲು ಜಂತರ್​ ಮಂತರ್​ನಲ್ಲಿ ಸಮಾವೇಶಗೊಂಡಿದ್ದಾರೆ ಎಂದರೆ ನನಗೆ ಆಘಾತವಾಗಿದೆ ಎಂದು ಹೇಳಿದ್ದಾರೆ.

ಜಂತರ್ ಮಂತರ್​ಗೆ ಹೋಗಿ ದೇಶದ ಚಾಂಪಿಯನ್​ಗಳನ್ನು ಭೇಟಿ ಮಾಡಿದೆ. ನಮ್ಮ ದೇಶದ ತ್ರಿವರ್ಣ ಧ್ವಜದ ವೈಭವವನ್ನು ಹೆಚ್ಚಿಸಿದವರು ಅವರು. ಆದರೆ ಇಂದು ಈ ಭೀಕರ ಚಳಿಯಲ್ಲಿ ಅವರಿಗೆ ರಸ್ತೆಯಲ್ಲಿ ಕೂರಬೇಕಾರದ ಪರಿಸ್ಥಿತಿ ಬಂದಿರುವುದು ತುಂಬಾ ಬೇಸರ ತಂದಿದೆ. ನಾವು ಅವರ ಜೊತೆಗೆ ಗಟ್ಟಿಯಾಗಿ ನಿಂತು ಅವರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಪ್ರತಿಭಟನೆಯ ವಿಡಿಯೋ ಹಂಚಿಕೊಂಡಿರುವ ಸ್ವಾತಿ ಟ್ವೀಟ್​ ಮಾಡಿದ್ದಾರೆ.

ಬಿಜೆಪಿ ಸಂಸದ ಮತ್ತು ವೈಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಫೋಗಟ್ ಆರೋಪಿಸಿದ ನಂತರ ಡಿಸಿಡಬ್ಲ್ಯು ಬುಧವಾರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ನಗರ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಈ ಬಗ್ಗೆ ಎಫ್‌ಐಆರ್ ದಾಖಲಿಸುವಂತೆ ಸಮಿತಿ ಪೊಲೀಸರನ್ನೂ ಕೇಳಿದೆ.

ಕೋಚ್‌ಗಳು ಮತ್ತು ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಮಹಿಳಾ ಕುಸ್ತಿಪಟುಗಳು ನೀಡಿದ ದೂರುಗಳ ಪ್ರತಿಯನ್ನು ಹಾಗೂ ಅವುಗಳ ಬಗ್ಗೆ ತೆಗೆದುಕೊಂಡ ಕ್ರಮಗಳ ವಿವರಗಳನ್ನು ಜನವರಿ 21 ರೊಳಗೆ ಸಲ್ಲಿಸುವಂತೆ ಕೋರಿದೆ. ಭಾರತೀಯ ಕುಸ್ತಿ ಪ್ರಾಧಿಕಾರ ರಚಿಸಿರುವ ಆಂತರಿಕ ದೂರುಗಳ ಸಮಿತಿಯಿಂದಲೂ ವಿವರಗಳನ್ನು ಕೋರಿದೆ. ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ, 2013 ರ ಪ್ರಕಾರ ಈ ದೂರುಗಳನ್ನು ICC ಮತ್ತು ಸ್ಥಳೀಯ ದೂರು ಸಮಿತಿ (LCC) ಗೆ ರವಾನಿಸಲಾಗಿದೆಯೇ ಎಂಬುದನ್ನೂ ಸಮಿತಿ ಕೇಳಿದೆ.

ಇದನ್ನೂ ಓದಿ: ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ದ ಪ್ರತಿಭಟನೆ ನಡೆಸಿದ ಕುಸ್ತಿಪಟುಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.