ETV Bharat / international

ಪಾಕಿಸ್ತಾನದ ಕರಾಚಿಯ ಅರ್ಶಿ ಮಾಲ್‌ನಲ್ಲಿ ಅಗ್ನಿ ಅವಘಡ, ಮೂವರ ಧಾರುಣ ಸಾವು

author img

By ETV Bharat Karnataka Team

Published : Dec 7, 2023, 7:23 AM IST

Three people died
ಪಾಕಿಸ್ತಾನ: ಕರಾಚಿಯ ಅರ್ಶಿ ಮಾಲ್‌ನಲ್ಲಿ ಅಗ್ನಿ ಅವಘಡ, ಮೂವರು ಸಾವು

Karachi's Arshi Mall caught fire: ಪಾಕಿಸ್ತಾನದ ಕರಾಚಿಯ ಅರ್ಶಿ ಮಾಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.

ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಕರಾಚಿ ಫೆಡರಲ್ ಬಿ ಏರಿಯಾದ ಆಯೇಶಾ ಮಂಜಿಲ್ ಬಳಿ ಬುಧವಾರ ಅಗ್ನಿ ಅವಘಡ ಸಂಭವಿಸಿದ್ದರಿಂದ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಉಲ್ಲೇಖಿಸಿ ಡಾನ್ ವರದಿ ಮಾಡಿದೆ. ಕರಾಚಿಯ ಫೆಡರಲ್ ಬಿ ಏರಿಯಾದ ಆಯೇಶಾ ಮಂಜಿಲ್ ಬಳಿ ಇರುವ ಆರ್ಶಿ ಶಾಪಿಂಗ್ ಸೆಂಟರ್‌ನಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡು ಮೂವರು ಸಾವನ್ನಪ್ಪಿದ್ದಾರೆ.

ಕರಾಚಿಯ ಅರ್ಶಿ ಶಾಪಿಂಗ್ ಸೆಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಬಳಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿದೆ. ಈ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಕೂಡ ಇತ್ತು ಎಂದು ವರದಿಯಾಗಿದೆ. ದೂರದರ್ಶನದಲ್ಲಿ ಪ್ರಸಾರವಾದ ದೃಶ್ಯಾವಳಿಗಳು ಬೆಂಕಿ ಹೊತ್ತಿಕೊಂಡಿದ್ದರಿಂದ ಆಕಾಶದಲ್ಲಿ ಕಪ್ಪು ಹೊಗೆ ಆವರಿಸಿರುವುದು ಕಂಡು ಬಂದಿದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.

"ಈಗಾಗಲೇ ಮೂವರ ಮೃತದೇಹ ಪತ್ತೆಯಾಗಿದೆ. ಜೊತೆಗೆ ಕಟ್ಟಡದಿಂದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾನು ಸ್ಥಳದಲ್ಲಿ ಹಾಜರಿದ್ದೇನೆ. ಆಯೆಶಾ ಮಂಜಿಲ್‌ನಲ್ಲಿ ಹೊತ್ತಿಕೊಂಡಿರುವ ಬೆಂಕಿಯನ್ನು ಹತೋಟಿಗೆ ತರಲು ಕಾರ್ಯದಲ್ಲಿ ಅಗ್ನಿಶಾಮಕ ದಳದ ತಂಡ ಮುಂದಾಗಿದೆ. ಅಗತ್ಯ ಇದ್ದರೆ ಛಾವಣಿಯಿಂದ ಜನರನ್ನು ಸ್ಥಳಾಂತರಿಸಲು ಪ್ರಯತ್ನಿಸಲಾಗುವುದು. ಎಲ್ಲರ ರಕ್ಷಣೆಗಾಗಿ ಕ್ರಮ ವಹಿಸಲಾಗಿದೆ" ಎಂದು ಕರಾಚಿ ಮೇಯರ್ ಮುರ್ತಾಜಾ ವಹಾಬ್ ಸಾಮಾಜಿಕ ಜಾಲತಾಣವಾದ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸ್ವಲ್ಪ ಮಟ್ಟಿಗೆ ಬೆಂಕಿ ನಿಯಂತ್ರಣ: ''ಬೆಂಕಿ ಇಡೀ ಕಟ್ಟಡವನ್ನು ಆವರಿಸಿದೆ. ನೆಲ ಮಹಡಿ ಸೇರಿದಂತೆ ನಾಲ್ಕು ಮಹಡಿಗಳವರೆಗೆ ಬೆಂಕಿ ಕಾಣಿಸಿಕೊಂಡಿದೆ. ಎಂಟು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಸ್ವಲ್ಪ ಮಟ್ಟಿಗೆ ಬೆಂಕಿಯನ್ನು ನಿಯಂತ್ರಿಸಲಾಗಿದೆ'' ಎಂದು ಜೌಹರಾಬಾದ್ ಸ್ಟೇಷನ್ ಹೌಸ್ ಆಫೀಸರ್ ಸುದೀರ್ ಭಯೋ ತಿಳಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.

''ಈ ಅಗ್ನಿ ಅವಘಡದಿಂದ ಲಕ್ಷಾಂತರ ಮೌಲ್ಯದ ನಷ್ಟ ಉಂಟಾಗಲಿದ್ದು, ಇದರಿಂದ ಜನರು ತುಂಬಾ ತೊಂದರೆ ಅನುಭವಿಸಿದ್ದಾರೆ. ಕರಾಚಿ ಮೇಯರ್‌ ಈ ಘಟನೆಯ ಜವಾಬ್ದಾರಿ ತೆಗೆದುಕೊಂಡು ಬೆಂಕಿಯ ಹಿಂದಿನ ಅಪರಾಧಿಯನ್ನು ಕಂಡುಹಿಡಿಯಬೇಕು ಎಂದು ಸಿಂಧ್ ರಾಜ್ಯಪಾಲ ಕಮ್ರಾನ್ ಟೆಸ್ಸೋರಿ ತಿಳಿಸಿದ್ದಾರೆ.

ಅಗ್ನಿ ಅವಘಡ, ತನಿಖೆಗೆ ಆದೇಶ: ಸಿಂಧ್ ಹಂಗಾಮಿ ನ್ಯಾಯಮೂರ್ತಿ (ನಿವೃತ್ತ) ಮಕ್ಬೂಲ್ ಬಕರ್ ಅವರು, ಅಗ್ನಿ ಅವಘಡ ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಕರಾಚಿ ಕಮಿಷನರ್ ನೇತೃತ್ವದಲ್ಲಿ ತನಿಖಾ ಸಮಿತಿ ಕೂಡಾ ರಚಿಸಲಾಗುವುದು. ಈ ಸಮಿತಿಯು ಈ ಘಟನೆಗೆ ಕಾರಣ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ತನಿಖೆ ಮಾಡಲಿದೆ. ಸಮಿತಿಯು ತನ್ನ ವರದಿ ಮತ್ತು ಶಿಫಾರಸುಗಳನ್ನು ಮೂರು ದಿನಗಳಲ್ಲಿ ಮಕ್ಬೂಲ್ ಬಕರ್ ಅವರಿಗೆ ಸಲ್ಲಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ ಎಂದು ಡಾನ್ ವರದಿ ಹೇಳಿದೆ.

ಜೊತೆಗೆ ನಗರದ ಗುಲಿಸ್ತಾನ್-ಐ-ಜೌಹರ್ ಪ್ರದೇಶದಲ್ಲಿ ಆರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಬೃಹತ್ ಬೆಂಕಿಯಲ್ಲಿ 11 ಜನರು ಸಾವನ್ನಪ್ಪಿದ ಘಟನೆ ಇತ್ತೀಚೆಗೆ ನಡೆದಿತ್ತು.

ಇದನ್ನೂ ಓದಿ: ಟೆಕ್ಸಾಸ್‌ನ 2 ನಗರಗಳಲ್ಲಿ ಗುಂಡಿನ ದಾಳಿ: 6 ಮಂದಿ ಸಾವು, ಮೂವರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.