ETV Bharat / international

ತೆಹ್ರೀಕ್-ಎ-ತಾಲಿಬಾನ್ ಉಗ್ರರ ಮಾತುಕತೆ ಪ್ರಸ್ತಾಪ ತಿರಸ್ಕರಿಸಿದ ಪಾಕ್ ಸರ್ಕಾರ

author img

By

Published : Jun 6, 2023, 6:24 PM IST

Pakistan rejects TTP's offer to resume talks
ತೆಹ್ರೀಕ್-ಎ-ತಾಲಿಬಾನ್ ಉಗ್ರರ ಮಾತುಕತೆ ಪ್ರಸ್ತಾಪ ತಿರಸ್ಕರಿಸಿದ ಪಾಕ್ ಸರ್ಕಾರ

ಶಾಂತಿ ಮಾತುಕತೆ ನಡೆಸುವ ತೆಹ್ರೀಕ್ ಎ ತಾಲಿಬಾನ್ ಉಗ್ರವಾದಿ ಸಂಘಟನೆಯ ಪ್ರಸ್ತಾಪವನ್ನು ಪಾಕಿಸ್ತಾನ ಸರ್ಕಾರ ತಿರಸ್ಕರಿಸಿದೆ.

ಪೇಶಾವರ್ (ಪಾಕಿಸ್ತಾನ) : ಸರ್ಕಾರದೊಂದಿಗೆ ಮಾತುಕತೆಗಳನ್ನು ಪುನಾರಂಭಿಸುವ ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ (TTP) ಭಯೋತ್ಪಾದಕ ಸಂಘಟನೆಯ ಪ್ರಸ್ತಾವನೆಯನ್ನು ಪಾಕಿಸ್ತಾನ ಸರ್ಕಾರ ತಿರಸ್ಕರಿಸಿದೆ. ಟಿಟಿಪಿಯೊಂದಿಗೆ ಹಿಂದೆ ನಡೆಸಲಾದ ಮಾತುಕತೆಗಳ ಸಮಯದಲ್ಲಿ ಆದ ನಕಾರಾತ್ಮಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಸರ್ಕಾರ ತಿರಸ್ಕರಿಸಿದೆ ಎಂದು ಹೇಳಲಾಗಿದೆ. ಟಿಟಿಪಿ ತನ್ನ ವಿವಿಧ ಮೂಲಗಳು ಮತ್ತು ವೈಯಕ್ತಿಕ ಸಂಪರ್ಕಗಳ ಮೂಲಕ ಇತ್ತೀಚಿನ ದಿನಗಳಲ್ಲಿ ಮಾತುಕತೆಯಲ್ಲಿ ಮರು ತೊಡಗಿಸಿಕೊಳ್ಳಲು ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದೆ. ಆದಾಗ್ಯೂ ಸರ್ಕಾರ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದು, ಉಗ್ರಗಾಮಿಗಳು ಶರಣಾಗುವಂತೆ ಸೂಚಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನದಲ್ಲಿ ಸಕ್ರಿಯವಾಗಿರುವ ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿದೆ.

ಕಾಬೂಲ್‌ನಲ್ಲಿನ ಅಫ್ಘಾನ್ ತಾಲಿಬಾನ್ ಸರ್ಕಾರದ ಒತ್ತಾಯದ ಮೇರೆಗೆ ಪಾಕಿಸ್ತಾನದ ಸರ್ಕಾರವು ಕಳೆದ ವರ್ಷ ನಿಷೇಧಿತ ಟಿಟಿಪಿಯೊಂದಿಗೆ ಮಾತುಕತೆಯಲ್ಲಿ ತೊಡಗಿತ್ತು. ಮಾತುಕತೆಯ ಪರಿಣಾಮವಾಗಿ ಕದನ ವಿರಾಮವನ್ನೂ ಘೋಷಿಸಲಾಯಿತು. ಆದಾಗ್ಯೂ ಪಾಕಿಸ್ತಾನದ ಹೊಸ ಸೇನಾ ಮುಖ್ಯಸ್ಥರಾಗಿ ಜನರಲ್ ಅಸಿಮ್ ಮುನೀರ್ ಅವರನ್ನು ನೇಮಿಸುವ ಕೆಲವೇ ದಿನಗಳ ಮೊದಲು ಟಿಟಿಪಿ ಕಳೆದ ವರ್ಷ ನವೆಂಬರ್‌ನಲ್ಲಿ ಏಕಪಕ್ಷೀಯವಾಗಿ ಕದನ ವಿರಾಮವನ್ನು ಕೊನೆಗೊಳಿಸಿತು.

ಕದನ ವಿರಾಮದ ಅಂತ್ಯದ ನಂತರ ಖೈಬರ್ ಪಖ್ತುನಖ್ವಾದ ದಕ್ಷಿಣ ಜಿಲ್ಲೆಗಳನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡು ಪೊಲೀಸರು, ಭದ್ರತಾ ಸಿಬ್ಬಂದಿ ಮತ್ತು ಸರ್ಕಾರಿ ಕಚೇರಿಗಳ ಮೇಲೆ ಟಿಟಿಪಿ ಬಾಂಬ್ ದಾಳಿಗಳನ್ನು ನಡೆಸಲಾರಂಭಿಸಿತು. ಹಿಂದಿನ ಸುತ್ತಿನ ಮಾತುಕತೆಗಳಲ್ಲಿ ಅಫ್ಘಾನಿಸ್ತಾನದ ಹಂಗಾಮಿ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದರು ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಆದಾಗ್ಯೂ ಆ ಚರ್ಚೆಗಳಲ್ಲಿ ಅವರು ಯಾವುದೇ ಖಚಿತ ಫಲಿತಾಂಶ ಒದಗಿಸುವ ಪಾತ್ರವನ್ನು ಹೊಂದಿರಲಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಶರಣಾಗಲು ಸಿದ್ಧರಿರುವ ವ್ಯಕ್ತಿಗಳು ಶರಣಾಗತರಾಗಲು ಸ್ವಾಗತವಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಟಿಟಿಪಿಗೆ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನವು ಟಿಟಿಪಿಯೊಂದಿಗೆ ಮಾತುಕತೆಯಲ್ಲಿ ತೊಡಗಿದಾಗಲೆಲ್ಲಾ ಹಾನಿಯನ್ನು ಅನುಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಸಮ್ಮಿಶ್ರ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಅಲೆಗೆ ಅಂದಿನ ಆಡಳಿತಾರೂಢ ಪಿಟಿಐ ಸರ್ಕಾರ ಮತ್ತು ಟಿಟಿಪಿ ನಡುವೆ ನಡೆದ ಮಾತುಕತೆಯೇ ಕಾರಣವಾಗಿದೆ ಎಂದು ಆಡಳಿತಾರೂಢ ಸರ್ಕಾರ ಆರೋಪಿಸಿದೆ.

ಈ ವಿಚಾರದ ಬಗ್ಗೆ ತನಿಖೆ ನಡೆಸಲು ರಕ್ಷಣಾ ಸಚಿವ ಖವಾಜಾ ಆಸಿಫ್ ನೇತೃತ್ವದಲ್ಲಿ ಸಮಿತಿಯನ್ನು ಕೂಡ ರಚಿಸಲಾಗಿದೆ. ಆದರೆ, ಇದುವರೆಗೆ ಸಮಿತಿಯ ಯಾವುದೇ ಸಭೆ ನಡೆದಿಲ್ಲ. ಟಿಟಿಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಫ್ಘಾನ್ ತಾಲಿಬಾನ್‌ಗೆ ಪಾಕಿಸ್ತಾನ ಸರ್ಕಾರ ಒತ್ತಾಯಿಸುತ್ತಿದೆ. ಈ ಪ್ರಯತ್ನದ ಭಾಗವಾಗಿ ಕಾಬೂಲ್ ಸರ್ಕಾರವು ಹಲವಾರು ಟಿಟಿಪಿ ನಾಯಕರನ್ನು ಬಂಧಿಸಿದೆ ಅಥವಾ ಗಡಿಪಾರು ಮಾಡಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : ಅಮೆರಿಕದ ದಮನಕಾರಿ ನೀತಿಗೆ ಮಿತ್ರರಾಷ್ಟ್ರಗಳೇ ಬಲಿ: ಚೀನಾ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.