ETV Bharat / international

ಜರ್ಮನಿಯಲ್ಲಿ ಕನ್ನಡದ ಕಂಪು: ಬ್ರಾ-ವೊ ಕನ್ನಡಿಗರ ಬಳಗದಿಂದ ರಾಜ್ಯೋತ್ಸವಕ್ಕೆ ಭರ್ಜರಿ ತಯಾರಿ

author img

By ETV Bharat Karnataka Team

Published : Oct 18, 2023, 7:08 PM IST

Updated : Oct 18, 2023, 7:41 PM IST

ಬ್ರಾ-ವೊ ಕನ್ನಡಿಗರ ಬಳಗದ ವತಿಯಿಂದ ಜರ್ಮನಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ.

Celebration of Kannada Rajyotsava in Germany
Celebration of Kannada Rajyotsava in Germany

ಜರ್ಮನಿ: ಯೂರೋಪ್‌ನ ದೇಶ ಜರ್ಮನಿಯಲ್ಲಿರುವ ಬ್ರಾ-ವೊ ಕನ್ನಡಿಗರ ಬಳಗವು ಮುಂಬರುವ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಯೋಜನೆ ಹಾಕಿಕೊಂಡಿದೆ. ಕಾರ್ಯಕ್ರಮಗಳ ತಯಾರಿ ಮತ್ತು ಪೂರ್ವಸಿದ್ಧತೆಗಳು ಭರದಿಂದ ಸಾಗಿವೆ. 100ಕ್ಕೂ ಹೆಚ್ಚು ಕುಟುಂಬಗಳು ಕನ್ನಡ ಬಳಗದ ಸದಸ್ಯರ ಪಟ್ಟಿಯಲ್ಲಿವೆ. ಕಳೆದ ನಾಲ್ಕು ವರ್ಷಗಳಿಂದ ಅರ್ಥಗರ್ಭಿತ, ವಿಜ್ರಂಭಣೆಯ ಕನ್ನಡ ರಾಜ್ಯೋತ್ಸವವನ್ನು ಈ ಬಳಗ ಆಚರಿಸಿಕೊಂಡು ಬರುತ್ತಿದೆ.

ಕರ್ನಾಟಕ ಹಾಗೂ ಕನ್ನಡ ಭಾಷೆಮಯ ಕುರಿತು ಅಪಾರ ಒಲವು ಹೊಂದಿರುವ ಜತೆಗೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಕುರಿತೂ ಅರಿತುಕೊಂಡಿರುವ ಬ್ರಾ-ವೊ ಕನ್ನಡ ಬಳಗ, ಪ್ರತಿವರ್ಷ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯೋತ್ಸವವನ್ನು ಅಚ್ಚುಕಟ್ಟಾಗಿ ಆಚರಿಸುತ್ತಿದೆ. ಭಾವಗೀತೆ, ನೃತ್ಯ, ಏಕಪಾತ್ರಾಭಿನಯ, ನಾಟಕ ಸೇರಿದಂತೆ ಕಲೆ ಹಾಗೂ ಸಾಹಿತ್ಯ ಸಂಬಂಧಿತ ಹತ್ತು ಹಲವು ಮನರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದೆ. ಕನ್ನಡದ ಕಂಪನ್ನು ಈ ರೀತಿ ಹರಡುತ್ತಿದೆ.

ಬ್ರಾ-ವೊ ಕನ್ನಡಿಗರ ಬಳಗ
ಬ್ರಾ-ವೊ ಕನ್ನಡಿಗರ ಬಳಗ

ರಾಜ್ಯೋತ್ಸವಕ್ಕೆ ಭರದ ಸಿದ್ಧತೆಯಲ್ಲಿರುವ ಬಳಗ, ಕೇವಲ ಕನ್ನಡಿಗರಷ್ಟೇ ಅಲ್ಲದೇ ಭಾರತದ ಎಲ್ಲ ರಾಜ್ಯಗಳಿಂದ ಪ್ರತಿನಿಧಿಗಳನ್ನು ಆಹ್ವಾನಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪುಟಾಣಿಗಳಿಂದ ಹಿಡಿದು ಎಲ್ಲರೂ ತಮ್ಮ ತಮ್ಮ ಕಲೆಗಳನ್ನು ಪ್ರಸ್ತುತಪಡಿಸಲು ಕುತೂಹಲದಿಂದ ಕಾಯುತ್ತಿದ್ದಾರೆ. ಸಾಂಸ್ಕೃತಿಕ ಘಟಕ, ಕರ್ನಾಟಕದ ತಿನಿಸು ಮತ್ತು ವ್ಯಂಜನದ ಘಟಕ, ಬಾಲವಿಕಾಸ ಘಟಕ, ನೃತ್ಯ ಮತ್ತು ಭಾವಗೀತೆಗಳ ಘಟಕ 4ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾಗಲಿವೆ.

ಇದನ್ನೂ ಓದಿ: ಇಡೀ ವರ್ಷ ಕರ್ನಾಟಕ 50ರ ಸಂಭ್ರಮಾಚರಣೆಗೆ ನಿರ್ಧಾರ : ಡಿಸಿಎಂ ಡಿ.ಕೆ.ಶಿವಕುಮಾರ್

ಮೈಸೂರು ರಾಜ್ಯ 'ಕರ್ನಾಟಕ' ರಾಜ್ಯವೆಂದು ಮರುನಾಮಕರಣಗೊಂಡು ಇದೇ‌ ನವೆಂಬರ್ 1ಕ್ಕೆ 50 ವರ್ಷ ಪೂರ್ಣಗೊಳ್ಳುತ್ತಿದೆ. ರಾಜ್ಯ ಸರ್ಕಾರ ಕೂಡಾ ಇಡೀ ವರ್ಷ 'ಕರ್ನಾಟಕ 50ರ ಸಂಭ್ರಮಾಚರಣೆ' ಮಾಡಲು ತೀರ್ಮಾನಿಸಿದೆ. ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಈ ವಿಷಯ ಪ್ರಸ್ತಾಪಿಸಿದ್ದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​​ನಲ್ಲಿ 'ಕರ್ನಾಟಕ 50ರ ಸಂಭ್ರಮದ ಲಾಂಛನ' ಕೂಡ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕರ್ನಾಟಕ ರಾಜ್ಯದ ಪಾಲಿಗೆ ಇಂದು ಐತಿಹಾಸಿಕ ದಿನ. ದೇವರು ನಮಗೆ ಎರಡು ಆಯ್ಕೆಗಳನ್ನು ನೀಡಿದ್ದಾನೆ. ಒಂದು ಕೊಟ್ಟು ಹೋಗುವುದು, ಮತ್ತೊಂದು ಬಿಟ್ಟು ಹೋಗುವುದು. ಅದೇ ರೀತಿ ದೇವರಾಜ ಅರಸು ಅವರು 50 ವರ್ಷಗಳ ಹಿಂದೆ ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂಬ ಹೆಸರನ್ನು ಕೊಟ್ಟಿದ್ದಾರೆ. ಅವರನ್ನು ಸ್ಮರಿಸಿ ಇಂದು ಈ ಕಾರ್ಯಕ್ರಮದ ಆಚರಣೆ ಮಾಡುತ್ತಿದ್ದೇವೆ. ಅಮ್ಮ ಕೊಟ್ಟಿರುವುದು ಜನ್ಮ. ದೇವರು ಕೊಟ್ಟಿರುವುದು ಬುದ್ಧಿ, ಗುರುಗಳು ಕೊಟ್ಟಿರುವುದು ವಿದ್ಯೆ, ಯಾರು ಕೊಡದೇ ನಮಗೆ ಸಿಕ್ಕಿರುವುದು ಕನ್ನಡ ನಾಡು. ಈ ನಾಡಿನಲ್ಲಿ ನಾವು ಉಸಿರಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

Last Updated :Oct 18, 2023, 7:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.