ETV Bharat / entertainment

ಸೆಲೆಬ್ರಿಟಿಗಳಿಗಾಗಿ 'ರಾಘವೇಂದ್ರ ಸ್ಟೋರ್ಸ್​​' ಸ್ಪೆಷಲ್ ಶೋ: ಕನ್ನಡ ತಾರೆಯರಿಂದ ಮೆಚ್ಚುಗೆಯ ಸುರಿ ಮಳೆ

author img

By

Published : Apr 27, 2023, 6:36 PM IST

'ರಾಘವೇಂದ್ರ ಸ್ಟೋರ್ಸ್​​' ಸ್ಪೆಷಲ್ ಶೋಗೆ ಆಗಮಿಸಿದ್ದ ಕನ್ನಡ ತಾರೆಯರು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'Raghavendra Stores' special show
'ರಾಘವೇಂದ್ರ ಸ್ಟೋರ್ಸ್​​' ಸ್ಪೆಷಲ್ ಶೋ

ಸೆಲೆಬ್ರಿಟಿಗಳಿಗಾಗಿ 'ರಾಘವೇಂದ್ರ ಸ್ಟೋರ್ಸ್​​' ಸ್ಪೆಷಲ್ ಶೋ

'ರಾಘವೇಂದ್ರ ಸ್ಟೋರ್ಸ್' ಈ ಹೆಸರು ಕೇಳುತ್ತಿದ್ದಂತೆ ಮಲ್ಲೇಶ್ವಂನಲ್ಲಿರುವ 50 ವರ್ಷಗಳ ಇತಿಹಾಸ ಹೊಂದಿರುವ ಹೋಟೆಲ್​​ ನೆನಪಾಗುತ್ತದೆ. ಈ ಹೆಸರಿನ ಟೈಟಲ್ ಇಟ್ಟುಕೊಂಡು ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣವಾಗಿರೋದು ನಿಮಗೂ ತಿಳಿದಿರುವ ವಿಚಾರ. ನವರಸ ನಾಯಕ ಜಗ್ಗೇಶ್ ಅಭಿನಯದ, ಸಂತೋಷ್ ಆನಂದ್ ರಾಮ್ ನಿರ್ದೇಶನದ 'ರಾಘವೇಂದ್ರ ಸ್ಟೋರ್ಸ್' ಕಾಮಿಡಿ ಜೊತೆ ಜೊತೆಗೆ ಸಮಾಜಿಕ ಮೌಲ್ಯಗಳನ್ನು ಒಳಗೊಂಡಿರುವ ಸಿನಿಮಾ ಎಂಬುದು ಸ್ಯಾಂಡಲ್​ವುಡ್​ ಸಿನಿಗಣ್ಯರ ಮಾತು. ಕುಟುಂಬ ಸಮೇತ ಬಂದು ನೋಡಬಹುದಾದ ಚಿತ್ರವೆಂದು ನಟ ನಟಿಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಳೆ ರಾಜ್ಯಾದ್ಯಂತ ಈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಬಿಡುಗಡೆಗೂ ಮುನ್ನ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕನ್ನಡ ಸಿನಿಮಾ ಸೆಲೆಬ್ರಿಟಿಗಳಿಗಾಗಿ ಸ್ಪೆಷಲ್ ಶೋ ಹಮ್ಮಿಕೊಂಡಿತ್ತು. ಈ ಶೋಗೆ ಸೆಲೆಬ್ರಿಟಿಗಳಾದ ರಿಷಬ್ ಶೆಟ್ಟಿ ದಂಪತಿ, ರಕ್ಷಿತ್ ಶೆಟ್ಟಿ, ಕೋಮಲ್, ಯುವ ರಾಜ್​ಕುಮಾರ್, ಸಪ್ತಮಿ ಗೌಡ, ಅಶ್ವಿನಿ ಪುನೀತ್ ರಾಜ್​ಕುಮಾರ್, ಧೀರೇನ್ ರಾಮ್ ಕುಮಾರ್, ನವೀನ್ ಶಂಕರ್ ಸೇರಿದಂತೆ ಸಾಕಷ್ಟು ಸಿನಿ ತಾರೆಯರು ಆಗಮಿಸಿ ಸಿನಿಮಾ ಮೆಚ್ಚಿಕೊಂಡಿದ್ದಾರೆ.

ರಾಘವೇಂದ್ರ ಸ್ಟೋರ್ಸ್ ಹೋಟೆಲ್ ಮಾಲೀಕನಾಗಿ ಹಿರಿಯ ನಟ ದತ್ತಣ್ಣ ನಡೆಸಿಕೊಂಡು ಹೋಗುತ್ತಿರುತ್ತಾರೆ. ಇವರ ಮಗನಾಗಿ ಜಗ್ಗೇಶ್ ಹಯವದನ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಯವದನನ ವಯಸ್ಸು 40 ದಾಟಿದರೂ ಮದುವೆ ಆಗಿಲ್ಲ. ಸದಾ ಮದುವೆ ಚಿಂತೆಯಲ್ಲೇ ಇರುವ ಹಯವದನ ಮದುವೆ ಆಗಲು ಏನೆಲ್ಲಾ ಕಷ್ಟ ಪಡುತ್ತಾನೆ, ವಯಸ್ಸಾದ ಮೇಲೆ ಹುಡುಗಿ ಏಕೆ ಸಿಗೋಲ್ಲ, ಕೊನೆಗೆ ಹಯವದನನಿಗೆ ಹುಡುಗಿ ಸಿಕ್ತಾಳಾ? ಹಯವದನ ಮದುವೆ ಆಗ್ತಾನಾ? ಮದುವೆ ಆದ್ಮೇಲೆ ಮಕ್ಕಳು ಎಷ್ಟು ಮುಖ್ಯ? ಎಂಬ ವಿಷಯಗಳನ್ನು ಒಳಗೊಂಡಿದೆ. ಫ್ಯಾಮಿಲಿ ಎಮೋಷನ್ ಜೊತೆ ಅನಾಥ ಮಕ್ಕಳ ಬಗ್ಗೆ ಈ ಸಿನಿಮಾ ಸಂದೇಶ ಕೊಡಲಿದೆ.

ನವರಸ ನಾಯಕ ಜಗ್ಗೇಶ್ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಹಿರಿಯ ನಟ ದತ್ತಣ್ಣ ಹಾಗೂ ಅಚ್ಯುತ್ ಕುಮಾರ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಶ್ವೇತಾ ಶ್ರೀವಾತ್ಸವ್ ಅವರು ಸಿಕ್ಕ ಅವಕಾಶದಲ್ಲಿ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಇದರ ಜೊತೆಗೆ ರವಿಶಂಕರ್ ಗೌಡ, ಮಿತ್ರ, ಚಿತ್ಕಾಲ್ ಬಿರಾದರ್ ಕೊಟ್ಟ ಪಾತ್ರಗಳಲ್ಲಿ ಮಿಂಚಿದ್ದಾರೆ. ಶ್ರೀಶು ಕುದುವಳ್ಳಿ ಛಾಯಾಗ್ರಹಣ ಕೆಲಸ ಪ್ರೇಕ್ಷಕರ ಮನಸ್ಸಿಗೆ ಇಷ್ಟ ಆಗಲಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಬಾರಿ ಹೊಸತನದ ಸಂಗೀತ ನೀಡಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಸಿಂಗಲ್ ಸುಂದರ ಹಾಡು ಈಗಾಗಲೇ ಸೂಪರ್ ಹಿಟ್ ಆಗಿದೆ.

ಇದನ್ನೂ ಓದಿ: ’’ಸರಿಯಾದ ಸಮಯದಲ್ಲಿ ಅಲ್ಲ... ಸ್ವಂತ ವಿವೇಚನೆಯಿಂದ ಮದುವೆಯಾಗಿ‘‘: ನಟಿ ಸಮಂತಾ ರುತ್ ಪ್ರಭು ಸಲಹೆ!?

ಕೆಜಿಎಫ್ ಹಾಗು ಕಾಂತಾರ ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಭಾರತೀಯ ಸಿನಿಮಾ ರಂಗದಲ್ಲಿ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ಹೊರ ಹೊಮ್ಮಿರುವ ಹೊಂಬಾಳೆ ಫಿಲ್ಮ್ಸ್​, ಮತ್ತೊಂದು ಸಮಾಜಿಕ ಸಂದೇಶ ನೀಡುವ ಸಿನಿಮಾ ಮಾಡುವ ಮೂಲಕ ಗಮನ ಸೆಳೆದಿದೆ. ನಿರ್ಮಾಪಕ ವಿಜಯ್ ಕಿರಂಗದೂರ್ ಈ ಸಿನಿಮಾವನ್ನು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರಿಗೆ ಅರ್ಪಿಸಿದ್ದಾರೆ. ಏನನ್ನೂ ಬಯಸದೇ ಆತ್ಮತೃಪ್ತಿಗೆ ಸೇವೆ ಮಾಡುವವನು ಪರಮಾತ್ಮನಿಗೆ ಹತ್ತಿರವಾಗುತ್ತಾನೆ, "ಪರಮಾತ್ಮ"ನಾಗುತ್ತಾನೆ. ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಕೊನೆಗೆ ಬರುವ ಈ ಸಂದೇಶ ನಿಜಕ್ಕೂ ಸಿನಿ ಪ್ರೇಮಿಗಳನ್ನು ಭಾವುಕರನ್ನಾಗಿ ಮಾಡಿಸಲಿದೆ. ಒಟ್ಟಾರೆ ರಾಘವೇಂದ್ರ ಸ್ಟೋರ್ಸ್ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ನೋಡಬಹುದಾದ ಚಿತ್ರ.

ಇದನ್ನೂ ಓದಿ: 11 ವರ್ಷಗಳ ಬಳಿಕ ಕಾಶ್ಮೀರಕ್ಕೆ ಶಾರುಖ್​​ ಭೇಟಿ: ಡಂಕಿ ಶೂಟಿಂಗ್​ ಚುರುಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.