ETV Bharat / entertainment

ಲೂಸಿಯಾ ಬಳಿಕ ಅಶೋಕ ಬ್ಲೇಡ್ ಸಿನಿಮಾ ಹೊಸ ಇತಿಹಾಸ ಸೃಷ್ಟಿಸುತ್ತೆ: ನಿನಾಸಂ ಸತೀಶ ವಿಶ್ವಾಸ

author img

By

Published : May 22, 2023, 6:21 PM IST

Actor Neenasam Sathish
ನಟ ನೀನಾಸಂ ಸತೀಶ್​

ಅಶೋಕ ಬ್ಲೇಡ್ ಸಿನಿಮಾದ ಮೂಲಕ ಮಲಯಾಳಂ ನಟ ಹರೀಶ್​ ಪೆರಾಡಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ.

ನಟ ನೀನಾಸಂ ಸತೀಶ್​

ಬೆಳಗಾವಿ: 10 ವರ್ಷಗಳ ನನ್ನ ಸಿನಿ ಬದುಕಿನಲ್ಲಿ ಲೂಸಿಯಾ ಸಿನಿಮಾದ ಬಳಿಕ, ಒಂದು ಕ್ರಾಂತಿಕಾರಿ ಕಥೆ ಹೊಂದಿರುವ ಅಶೋಕ ಬ್ಲೇಡ್ ಸಿನಿಮಾ ಮತ್ತೊಂದು ಇತಿಹಾಸ ಸೃಷ್ಟಿಸಲಿದೆ ಎಂದು ಚಿತ್ರನಟ ನಿನಾಸಂ ಸತೀಶ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಶೋಕ ಬ್ಲೇಡ್ ಸಿನಿಮಾದ ಶೇ. 90ರಷ್ಟು ಚಿತ್ರೀಕರಣ ಮುಗಿದಿದೆ. ಈಗಾಗಲೇ ನೂರು ದಿನ ಶೂಟಿಂಗ್ ಮುಗಿದಿದ್ದು, ಇನ್ನು 20 ದಿನದ ಕೆಲವಷ್ಟೇ ಬಾಕಿಯಿದೆ. ಕ್ಲೈಮ್ಯಾಕ್ಸ್ ಫೈಟಿಂಗ್ ಅನ್ನೇ 20 ದಿನ ಶೂಟ್ ಮಾಡಿದ್ದೇವೆ. ಅಶೋಕ ಬ್ಲೇಡ್ ಚಿತ್ರದಲ್ಲಿ ಪಿರಿಯಾಡಿಕ್ ಬರುತ್ತದೆ. 100-200 ವರ್ಷದ ಘಟನೆ ಬರುತ್ತದೆ. ಅದೊಂದು ಕಥೆಗೆ ಬೇರೆ ಭಾಷೆಯ ಸೂಪರ್ ಸ್ಟಾರ್ ಒಬ್ಬರು ಎಂಟ್ರಿ ಕೊಡುತ್ತಾರೆ. ಅದು ಇನ್ನು ಅಂತಿಮವಾಗಬೇಕಿದೆ. ಈಗಾಗಲೇ ಮಲೆಯಾಳಂ ಮತ್ತು ತಮಿಳಿನಲ್ಲಿ ನಟಿಸಿರುವ ಹರೀಶ ಪೆರಾಡಿ ಅವರನ್ನು ಕನ್ನಡಕ್ಕೆ ಈ ಸಿನಿಮಾದ ಮೂಲಕ ಪರಿಚಯಿಸುತ್ತಿದ್ದು, ಒಂದು ಹಾಡಿನಲ್ಲಿ ಅವರು ಬಂದಿದ್ದಾರೆ. ದೊಡ್ಡ ಬಜೆಟ್ ಸಿನಿಮಾ ಇದಾಗಿದ್ದು, ಮೊದಲಿಗೆ ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಈ ಚಿತ್ರ ಮಾಡುತ್ತಿದ್ದೇವೆ. ಇಲ್ಲಿ ಸಕ್ಸಸ್ ಕಂಡರೆ ಇನ್ನುಳಿದ ಭಾಷೆಗಳಲ್ಲೂ ಚಿತ್ರ ಮಾಡುತ್ತೇವೆ. ಈ ಹಿಂದಿನ ಚಿತ್ರಗಳಿಗೆ ಪ್ರೋತ್ಸಾಹಿಸಿದಂತೆ ಈ ಸಿನಿಮಾಗೂ ತಾವು ಸಹಕಾರ ನೀಡಬೇಕು ಎಂದು ಕೇಳಿಕೊಂಡರು.

ನಾನು ಚಿತ್ರರಂಗಕ್ಕೆ ಕಾಲಿಟ್ಟು ಹತ್ತು ವರ್ಷವಾಗಿದೆ. ನನ್ನ ಸಿನಿ ಜೀವನದಲ್ಲಿ ಗೆದ್ದಿರುವ ಎಲ್ಲ ಸಿನಿಮಾಗಳನ್ನು ಗೆಲ್ಲಿಸಿದ್ದು, ಇಲ್ಲಿಯ ಜನರೇ. ಮಹದಾಯಿ ಹೋರಾಟ, ಪ್ರವಾಹ ಸಂದರ್ಭದಲ್ಲೂ ಇಲ್ಲಿಗೆ ಬಂದಿದ್ದೆ. ಲೂಸಿಯಾ ಚಿತ್ರದಿಂದ ಬೇರೆ ಭಾಷೆ ನಟರು ಕೂಡ ನನ್ನ ಗುರುತಿಸುವಂತಾಯಿತು. ಲೂಸಿಯಾ ಚಿತ್ರ ಎಲ್ಲರಿಗೂ ಇಷ್ಟವಾಗಿ, ದೇಶ ವಿದೇಶಗಳಲ್ಲೂ ಪ್ರದರ್ಶನಗೊಂಡಿತ್ತು.‌ ಇದೀಗ ಅಯೋಗ್ಯ ಸಿನಿಮಾ ಬಳಿಕ ರಚಿತಾ ರಾಮ್ ಜೊತೆಗೆ ಮ್ಯಾಟನಿ ಎಂಬ ಹೊಸ ಚಿತ್ರ ಮಾಡುತ್ತಿದ್ದೇನೆ. ಇದೊಂದು ಕಮರ್ಷಿಯಲ್ ಸಿನಿಮಾ ಆಗಿದ್ದು, ರಚಿತಾ ರಾಮ್ ಜೊತೆ ಅದಿತಿ ಪ್ರಭುದೇವ ಕೂಡ ಇದರಲ್ಲಿ ನಟಿಸುತ್ತಿದ್ದಾರೆ ಎಂದರು.

ಪರಿಪೂರ್ಣ ಅಥವಾ ಒಳ್ಳೆಯ ನಟನಾಗಬೇಕಾದರೆ ಎಲ್ಲ ರೀತಿ ಪಾತ್ರಗಳನ್ನು ಮಾಡಬೇಕು. ಹೀಗಾಗಿ ಹುಲಿಯಾ ಚಿತ್ರ ನನಗೆ ಆದರ್ಶವಾಗಿದೆ. ಉತ್ತರ ಕರ್ನಾಟಕ ಭಾಷೆ ಸಿನಿಮಾದಲ್ಲಿ ಊಟಕ್ಕೆ ಉಪ್ಪಿನ ಕಾಯಿ ರೀತಿ ಇರಬಾರದು. ಯಾವುದೋ ಕಾಮಿಡಿ ದೃಶ್ಯದಲ್ಲೋ, ಗೇಲಿ ಮಾಡೋ ರೀತಿ ಸೃಷ್ಟಿ ಮಾಡಲು ನನಗೆ ಇಷ್ಟವಿಲ್ಲ. ನಾನು ಮಾಡಿದರೆ ಹುಲಿಯಾ ಸಿನಿಮಾ ನನಗೆ ಯಾವಾಗಲೂ ಮಾದರಿ. ಇಲ್ಲಿನ ಭಾಷೆಯನ್ನು ಆ ಸಿನಿಮಾ ಹಿಡಿದಿಟ್ಟುಕೊಂಡಿತ್ತು. ಹೀಗಾಗಿ ಇಲ್ಲಿನ ಭಾಷೆ, ಶೈಲಿಯನ್ನು ಅಧ್ಯಯನ, ಸಂಶೋಧನೆ ಮಾಡಿ, ಉತ್ತರ ಕರ್ನಾಟಕ ಜನರು‌ ವಾವ್ಹ್ ಎನ್ನುವ ರೀತಿಯ ಸಿನಿಮಾ ಶೀಘ್ರವೇ ಮಾಡುತ್ತೇನೆ ಎಂದರು. ಇನ್ನು ಉತ್ತರ ಕರ್ನಾಟಕ ಭಾಷೆಯಲ್ಲಿ ತಯಾರಿಸುವ ಸಿನಿಮಾದಲ್ಲಿ ನೂರಕ್ಕೆ ನೂರು ಇಲ್ಲಿನ ಕಲಾವಿದರನ್ನೇ ಆಯ್ಕೆ ಮಾಡುತ್ತೇನೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಮುಚ್ಚುವ ಹಂತದಲ್ಲಿರುವ ಸಿಂಗಲ್ ಸ್ಕ್ರೀನ್​ಗಳನ್ನು ಉಳಿಸುವ ಕೆಲಸ ಹೊಸ ಸರ್ಕಾರ ಮಾಡಬೇಕು. ಪ್ರತಿ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಒಂದು ಸಿಂಗಲ್ ಸ್ಕ್ರೀನ್ ಕಟ್ಟಬೇಕು. ರಿಯಾಯಿತಿ ದರದಲ್ಲಿ ಪ್ರೇಕ್ಷಕರಿಗೆ ಟಿಕೆಟ್ ಮಾರಾಟ ಮಾಡಬೇಕು. ಈ ರೀತಿ ಸಬ್ಸಿಡಿ ಕೊಡುವುದರ ಜೊತೆಗೆ ಸಿನಿಮಾ ಮಂದಿರ ಕಟ್ಟುವುದರಿಂದ, 150-200 ರೂ. ಕೊಟ್ಟು ಟಿಕೆಟ್ ಖರೀದಿಸುವಷ್ಟು ಶಕ್ತಿ ಇಲ್ಲದ ಜನರಿಗೆ ಮತ್ತು ಚಿತ್ರಮಂದಿರಕ್ಕೂ ಅನುಕೂಲ ಆಗುತ್ತದೆ. ಕನ್ನಡ ಸಿನಿಮಾಗಳೂ ಉಳಿಯುತ್ತವೆ ಎಂದರು. ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ನಂದೀಶ, ಶಿವಾನಂದ ಮುತ್ತಣ್ಣವರ ಇದ್ದರು.

ಇದನ್ನೂ ಓದಿ: ಮೊನಾಕೊ, ಪ್ಯಾರಿಸ್ ಪ್ರವಾಸದಲ್ಲಿ ನಟಿ ಮಿಲನಾ ನಾಗರಾಜ್: ಇಲ್ಲಿವೆ ಚಿತ್ರಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.