ETV Bharat / entertainment

ತಾಳಿ ಅಡವಿಟ್ಟು ಬದುಕು ಬೆಳಗಿಸಿದ 'ಜ್ಯೋತಿ': ಸಾಧಕರ ಕುರ್ಚಿಯಲ್ಲಿ ಪ್ರೇಮ್‌ ಕಹಾನಿ!

author img

By

Published : May 7, 2023, 10:33 AM IST

ವೀಕೆಂಡ್​ ವಿತ್​ ರಮೇಶ್ ಕಾರ್ಯಕ್ರಮಕ್ಕೆ ಆಗಮಿಸಿದ ನೆನಪಿರಲಿ ಪ್ರೇಮ್​ ತಮ್ಮ ಜೀವನದ ಸಿಹಿ ಕಹಿ ನೆನಪುಗಳನ್ನು ಮೆಲುಕು ಹಾಕಿದರು.

Actor nenapirali prem
ಸಾಧಕರ ಕುರ್ಚಿಯಲ್ಲಿ ಕಣ್ಣೀರಿಟ್ಟ ಪ್ರೇಮ್​

ನಟ ರಮೇಶ್​ ಅರವಿಂದ್​ ನಡೆಸಿಕೊಡುವ ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್​ ವಿತ್​ ರಮೇಶ್'​ ಶೋ ಅಪಾರ ವೀಕ್ಷಕರನ್ನು ಸಂಪಾದಿಸಿದೆ. ಈಗಾಗಲೇ ಸೀಸನ್​ 5 ರಲ್ಲಿ 9 ಸಾಧಕರು ಬಂದಿದ್ದು, 10ನೆಯ ಅತಿಥಿಯಾಗಿ ಸ್ಯಾಂಡಲ್​ವುಡ್​ ಲವ್ಲೀ ಸ್ಟಾರ್​ ಎಂದೇ ಖ್ಯಾತರಾದ ನಟ ನೆನಪಿರಲಿ ಪ್ರೇಮ್​ ಆಗಮಿಸಿದ್ದಾರೆ. ಸಾಧಕರ ಸೀಟ್​ನಲ್ಲಿ ಕುಳಿತು ಬಾಲ್ಯ, ಶಿಕ್ಷಣ, ಉದ್ಯೋಗ, ಸಿನಿಮಾ, ಕುಟುಂಬ, ಸ್ನೇಹಿತರು ಹೀಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಿರಿತೆರೆಯಲ್ಲಿ ವಿಶೇಷ ಸಾಧನೆಗೈದ ಪ್ರೇಮ್​ ತಮ್ಮ ಜೀವನದ ಕಥೆಯನ್ನು ತೆರೆದಿಟ್ಟರು.

ಲವ್ಲೀ ಪ್ರೇಮ್​ ಲವ್​ ಸ್ಟೋರಿ: ನಟ ಪ್ರೇಮ್​ ಅವರದ್ದು ತುಂಬಾ ಬಡತನ ಕುಟುಂಬ. ಹೀಗಾಗಿ ಅವರು ತಂಗಿಯರ ಓದು, ಅವರ ಮದುವೆಗಾಗಿ ಹತ್ತನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ ತಮ್ಮ ಕುಲ ಕಸುಬಾದ ನೇಕಾರಿಕೆ ಮಾಡಲು ತೊಡಗಿದ್ದರು. ಹೀಗೆ ಒಂದು ದಿನ ಅಕಸ್ಮಾತ್​ ಆಗಿ ಜ್ಯೋತಿ ಅವರನ್ನು ಭೇಟಿಯಾದರು. ಅವರನ್ನೇ ಮದುವೆಯಾಗಲು ನಿರ್ಧರಿಸಿದರು. ಅದಕ್ಕೂ ಮೊದಲು ಮದುವೆ ಕಾರ್ಯಕ್ರಮವೊಂದರಲ್ಲಿ ಪ್ರೇಮ್​ ಅವರನ್ನು ಜ್ಯೋತಿ ನೋಡಿದ್ದರು. ಹೀಗೆ ಅವರಿಬ್ಬರ ಪರಿಚಯ ಸ್ನೇಹದಿಂದ ಶುರುವಾಗಿ ಪ್ರೇಮಕ್ಕೆ ಚಿಗುರೊಡೆಯಿತು.

ಒಂದು ದಿನ ಪ್ರೇಮ್​ ಅವರು ಜ್ಯೋತಿಗೆ ಪತ್ರವೊಂದನ್ನು ಬರೆದು, ನನಗೆ ಜೀವನದಲ್ಲಿ ಬಹಳಷ್ಟು ಜವಾಬ್ದಾರಿಗಳಿವೆ. ನಾನು ತಂಗಿಯರ ಮದುವೆ ಮಾಡಬೇಕು. ಈಗಲೇ ಪ್ರೀತಿ- ಗೀತಿ ಅಂತೆಲ್ಲಾ ಬೇಡ. ಇನ್ನೆರಡು ವರ್ಷ ಹೀಗೆ ಸ್ನೇಹಿತರಾಗಿಯೇ ಇರೋಣ. ಆಮೇಲೆ ಪ್ರೀತಿ ಉಳಿದಿದ್ದರೆ ಮದುವೆಯಾಗೋಣ ಎಂದು ನಿರ್ಧಾರ ಮಾಡಿದ್ದರಂತೆ. ಆದರೆ ಪ್ರೇಮ್​ ಮತ್ತು ಜ್ಯೋತಿ ಪ್ರೀತಿ ವಿಷಯ ಮನೆಯವರಿಗೆ ಗೊತ್ತಾಗಿ ಜ್ಯೋತಿ ಅವ್ರಿಗೆ ಗಂಡು ಹುಡುಕಲು ಆರಂಭಿಸಿದ್ದರಂತೆ. ಇದರಿಂದ ಆತಂಕಗೊಂಡ ಅವರಿಬ್ಬರು ಮನೆಯವರ ವಿರೋಧದ ನಡುವೆಯೂ ಮದುವೆಯಾಗಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: 'ಅಹಂ, ಭಯ ನಮ್ಮನ್ನು ಬೇರ್ಪಡಿಸುತ್ತವೆ': ಮಾಜಿ ಪತಿಯ ಮೆಚ್ಚುಗೆಗೆ ಸಮಂತಾ ಪರೋಕ್ಷ ಪ್ರತಿಕ್ರಿಯೆ

ಜ್ಯೋತಿ ತಮ್ಮ ವಸ್ತುಗಳನ್ನು ತೆಗೆದುಕೊಂಡು ಮನೆ ಬಿಟ್ಟು ಬಂದಿದ್ದರಂತೆ. ಪ್ರೇಮ್​ ಸಹ ಗೆಳೆಯರ ಸಹಾಯದಿಂದ ಜ್ಯೋತಿಯವರನ್ನೂ ಮದುವೆಯೂ ಆಗಿಬಿಟ್ಟರಂತೆ. ಅದಾಗಿ ಎರಡು ಕುಟುಂಬದವರ ಜೊತೆ ಮಾತನಾಡಿ ರಾಜಿ ಮಾಡಿಸಿದ್ದಾರೆ. ಜ್ಯೋತಿಯನ್ನು ಮದುವೆಯಾದ ಪ್ರೇಮ್​ಗೆ ​ಸರಿಯಾದ ಮನೆ ಇಲ್ಲದ ಕಾರಣ ಅವರ ಗೆಳೆಯ ತಮ್ಮ ಮನೆಯನ್ನು ಬಿಟ್ಟು ಕೊಟ್ಟಿದ್ದರಂತೆ. ಅದಾಗಿ ಅಳಿಯನ ಕಷ್ಟ ನೋಡಿದ ಜ್ಯೋತಿ ತಾಯಿ ಅವರ ಮನೆಯಲ್ಲೇ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಎರಡು ವರ್ಷ ಅತ್ತೆ ಮನೆಯಲ್ಲೇ ವಾಸವಿದ್ರಂತೆ ಪ್ರೇಮ್​.

ಆದರೆ ಅವರು ಉದ್ದಿಮೆಯಲ್ಲಿ ಬಹಳಷ್ಟು ನಷ್ಟ ಅನುಭವಿಸಿ ಸಾಲ ಮಾಡಿದ್ದರಂತೆ. ಅದನ್ನು ತೀರಿಸಲು ಬಹಳಷ್ಟು ಕಷ್ಟ ಪಟ್ಟಿದ್ರಂತೆ. ಸಾಲ ಕೊಟ್ಟವರ ಕಿರಿ ಕಿರಿ ಹೆಚ್ಚಾದಂತೆ ಪ್ರೇಮ್​ ಅವರಿಗೆ ಮಾನಸಿಕವಾಗಿ ಒತ್ತಡ ಬೀರಿದೆ. ಆಗ ಜ್ಯೋತಿ ಅವರು ತಮ್ಮ ಚಿನ್ನದ ತಾಳಿಯನ್ನು ಬಿಚ್ಚಿಕೊಟ್ಟಿದ್ದರಂತೆ. ಅವಳು ನನಗೆ ಎರಡನೇ ತಾಯಿಯಂತೆ, ಆ ದಿನ ನನ್ನ ಜೀವನದ ಅತ್ಯಂತ ಕೆಟ್ಟ ದಿನ ಎಂದು ಪ್ರೇಮ್​ ಕಣ್ಣೀರು ಹಾಕಿದ್ದಾರೆ. ಅದರ ನಂತರ ಪ್ರೇಮ್​ ಅವರಿಗೆ ಅಂತಹ ಕಷ್ಟ ಬಂದಿಲ್ಲವಂತೆ. ನಟನೆ ಕೈ ಹಿಡಿದ ಮೇಲೆ ಪರಿಸ್ಥಿತಿ ಸುಧಾರಿಸಿತು ಎಂದಿದ್ದಾರೆ ಪ್ರೇಮ್​.

ಜ್ಯೋತಿ ಅವರಿಗೆ ಪ್ರೇಮ್​ ಯಾವಾಗಲೂ ನೂರು ಜನ್ಮಕ್ಕೂ ಹಾಡನ್ನು ಹೇಳುತ್ತಲೇ ಇರುತ್ತಾರಂತೆ. ಇದನ್ನು ಕೇಳಿದ ರಮೇಶ್​ ಅವರಿಬ್ಬರನ್ನು ಡ್ಯಾನ್ಸ್​ ಮಾಡುವಂತೆ ಒತ್ತಾಯಿಸಿದ್ದಾರೆ. ಅದೇ ಹಾಡಿಗೆ ಅವರಿಬ್ಬರು ಡ್ಯಾನ್ಸ್​ ಮಾಡಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. ಇನ್ನೂ ಕಾರ್ಯಕ್ರಮಕ್ಕೆ ಪ್ರೇಮ್​ ಗೆಳೆಯರು ಆಗಮಿಸಿ ಅವರಿಗೆ ಸರ್​ಪ್ರೈಸ್​ ನೀಡಿದ್ದಾರೆ. ತಮ್ಮ ಬಾಲ್ಯದ ದಿನಗಳು, ಪ್ರೇಮ್​ ತರ್ಲೆ ತುಂಟಾಟಗಳನ್ನು ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಪ್ರೇಮ್​ ಅವರೊಳಗಿದ್ದ ಮುಗ್ಧ ಮನಸ್ಸಿನ ಪರಿಚಯ ಕನ್ನಡದ ಜನತೆಗಾಗಿದೆ.

ಇದನ್ನೂ ಓದಿ: ವೀಕೆಂಡ್​​ ವಿತ್​ ರಮೇಶ್: ಸಾಧಕರ ಸೀಟ್​ನಲ್ಲಿ ಸಿಹಿಕಹಿ ಚಂದ್ರು, ಶಿಕ್ಷಣ ತಜ್ಞ ಗುರುರಾಜ ಕರಜಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.