ETV Bharat / city

ಬೆಳೆ ಪರಿಹಾರ ಕೃಷ್ಣ ಬೈರೇಗೌಡ, ಸಿದ್ದರಾಮಯ್ಯಗೆ ತಲುಪಿಸಬೇಕಾ?: ಸಚಿವ ಬಿ.ಸಿ.ಪಾಟೀಲ್

author img

By

Published : Nov 25, 2021, 5:24 PM IST

minister bc patil reaction to opposition leaders allegations
ಸಚಿವ ಬಿ.ಸಿ.ಪಾಟೀಲ್

ನಾವು ಕೃಷ್ಣ ಬೈರೇಗೌಡರಿಗೆ ಅಥವಾ ಸಿದ್ದರಾಮಯ್ಯ ಅವರಿಗೆ ಪರಿಹಾರ ತಲುಪಿಸಬೇಕಾ?, ಬೆಳೆ ಹಾನಿ ಆಗಿರುವ ರೈತರಿಗೆ ಪರಿಹಾರ ತಲುಪುತ್ತದೆ ಎಂದು ಹೇಳುವ ಮೂಲಕ ಸಚಿವ ಬಿ.ಸಿ.ಪಾಟೀಲ್​ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಬೆಂಗಳೂರು:ಬೆಳೆ ಹಾನಿ ವಿಚಾರವನ್ನು ಮುಚ್ಚಿಡಲಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.


ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವು ಬೆಳೆ ಹಾನಿ ವಿಚಾರವನ್ನು ಮುಚ್ಚಿಡುವಂತಹ ಪ್ರಶ್ನೆಯೇ ಇಲ್ಲ. ಪರಿಹಾರ ತಲುಪಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. ನಾವು ಕೃಷ್ಣ ಬೈರೇಗೌಡರಿಗೆ ಅಥವಾ ಸಿದ್ದರಾಮಯ್ಯ ಅವರಿಗೆ ಪರಿಹಾರ ತಲುಪಿಸಬೇಕಾ?, ಬೆಳೆ ಹಾನಿ ಆಗಿರುವ ರೈತರಿಗೆ ಪರಿಹಾರ ತಲುಪುತ್ತದೆ. ಇದರ ಬಗ್ಗೆ ವಿಪಕ್ಷಗಳಿಗೆ ಆತಂಕ ಬೇಡ. ಬೆಳೆ ನಷ್ಟ ಪರಿಹಾರ ಹೆಚ್ಚು ಮಾಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ಹೇಳಿದರು.

ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿ ಸಮೀಕ್ಷೆ ಮಾಡಲಾಗಿದೆ. ತಕ್ಷಣವೇ ಎನ್​​ಡಿಆರ್​​ಎಫ್​​, ಎಸ್​​ಡಿಆರ್​​ಎಫ್ ಮಾರ್ಗಸೂಚಿ ಅಡಿ ಕೂಡಲೇ ಪರಿಹಾರ ಒದಗಿಸಲು ಸೂಚನೆ ನೀಡಲಾಗಿದೆ. ನವೆಂಬರ್ ತಿಂಗಳಲ್ಲಿ 5 ಲಕ್ಷದ 562 ಹೆಕ್ಟೇರ್ ಭೂಮಿ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಫಸಲ್ ಭೀಮಾ ಯೋಜನೆಯಡಿ ಬೆಳೆ ಹಾನಿ ಸಮೀಕ್ಷೆ ಮಾಡಲಾಗಿದೆ. ವಿಮಾ ಕಂಪನಿಗಳ ಜೊತೆ ಸಭೆ ಮಾಡಿ ಪರಿಹಾರದ ನೀಡುವ ಬಗ್ಗೆ‌‌ ಸೂಚನೆ ನೀಡಲಾಗಿದೆ. 11,32,505 ಹೆಕ್ಟೇರ್ ಪ್ರದೇಶದಲ್ಲಿ ಜುಲೈ ತಿಂಗಳಲ್ಲಿ ಬೆಳೆ ನಾಶ ಆಗಿದೆ. ಬೆಳೆ ಹಾನಿ ಬಚ್ಚಿಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿದೆ ಎಂದರು.

ಬೆಳೆ ಪರಿಹಾರದ ಪ್ರಮಾಣ ಜಾಸ್ತಿ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎನ್​​ಡಿಆರ್​​ಎಫ್ ಅಡಿಯಲ್ಲಿ ಪರಿಹಾರ ಪ್ರಮಾಣದ ಹೆಚ್ಚಳ ರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನ ಮಾಡಬೇಕು‌. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ‌. ಹಾವೇರಿ, ದಾವಣಗೆರೆ ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ನಾಳೆ ಮತ್ತೆ ಹೋಗುತ್ತೇನೆ, ಡಿಸಿಗಳು ನೀತಿ ಸಂಹಿತೆ ಕಾರಣಕ್ಕಾಗಿ ಬರಲು ಸಾಧ್ಯವಿಲ್ಲ ಎನ್ನುತ್ತಾರೆ. ಈಗ ಮತ್ತೆ ಇತರ ಜಿಲ್ಲೆಗಳಿಗೆ ಪ್ರವಾಸ ಮಾಡುತ್ತೇನೆ. ಮಳೆ ಹಾನಿ ವಿಚಾರವಾಗಿ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿದೆ. ಸಚಿವರು, ಉಸ್ತುವಾರಿ ಸಚಿವರು ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.