ETV Bharat / bharat

ಬಾರಾಮುಲ್ಲಾದಲ್ಲಿ ಮತ್ತೊಬ್ಬ ಉಗ್ರ ಖತಂ: ಗಡಿ ನುಸುಳುವ ಯತ್ನ ವಿಫಲಗೊಳಿಸಿದ ಭದ್ರತಾ ಪಡೆಗಳು

author img

By ETV Bharat Karnataka Team

Published : Nov 15, 2023, 3:51 PM IST

ಬಾರಾಮುಲ್ಲಾದಲ್ಲಿ ಮತ್ತೊಬ್ಬ ಉಗ್ರ ಖತಂ
ಬಾರಾಮುಲ್ಲಾದಲ್ಲಿ ಮತ್ತೊಬ್ಬ ಉಗ್ರ ಖತಂ

ಬಾರಾಮುಲ್ಲಾದ ಉರಿ ಸೆಕ್ಟರ್​ನ ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಯತ್ನ ಮುಂದುವರಿದಿದೆ. ಇಂದು ಒಬ್ಬ ಅಪರಿಚಿತ ಉಗ್ರನನ್ನು ಬಲಿ ಪಡೆಯಲಾಗಿದೆ.

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಇಲ್ಲಿನ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಪಾಕಿಸ್ತಾನದಿಂದ ಭಾರತದ ಗಡಿ ಉದ್ದಕ್ಕೂ ಉಗ್ರರ ಒಳನುಸುಳುವಿಕೆ ನಿರಂತರವಾಗಿ ಸಾಗಿದ್ದು, ಇಂದು (ಬುಧವಾರ) ನಡೆದ ಗುಂಡಿನ ದಾಳಿಯಲ್ಲಿ ಓರ್ವ ಅಪರಿಚಿತ ಭಯೋತ್ಪಾದಕನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ಉರಿ ಸೆಕ್ಟರ್​ನ ಎಲ್​ಒಸಿಯಲ್ಲಿ ಉಗ್ರರು ಒಳನುಸುಳುವಿಕೆ ವಿರುದ್ಧ ನಿತ್ಯ ಕಾರ್ಯಾಚರಣೆ ನಡೆಸುತ್ತಿರುವ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸೇನಾ ಪಡೆಗಳು ಗಡಿಯಲ್ಲಿ ಈಗಾಗಲೇ ಹಲವು ಉಗ್ರರನ್ನು ಬಲಿ ತೆಗೆದುಕೊಂಡಿದ್ದಾರೆ. ಇಂದು ಕೂಡ ಗಡಿಯಲ್ಲಿ ನುಸುಳುವಿಕೆ ಪತ್ತೆ ಮಾಡಿ ದಾಳಿ ನಡೆಸಲಾಗಿದೆ.

ಉರಿ ಸೆಕ್ಟರ್‌ನ ಎಲ್‌ಒಸಿ ಉದ್ದಕ್ಕೂ ಉಗ್ರರ ಗುಂಪು ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿತ್ತು. ಪ್ರತಿಕೂಲ ಹವಾಮಾನ ಮತ್ತು ಮಬ್ಬುಗತ್ತಲನ್ನು ಬಳಸಿಕೊಂಡು ಗಡಿ ದಾಟಲು ಯತ್ನಿಸುತ್ತಿದ್ದಾಗ ನಮ್ಮ ಪಡೆಗಳು ದಾಳಿ ನಡೆಸಿದವು. ಇದರಿಂದ ಓರ್ವ ಅಪರಿಚಿತ ಉಗ್ರ ಗುಂಡೇಟಿಗೆ ಬಲಿಯಾಗಿದ್ದಾನೆ. ಉಗ್ರರ ಯತ್ನವನ್ನು ವಿಫಲಗೊಳಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಭಯೋತ್ಪಾದಕರ ಗುಂಪು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಕೂಡ ನಡೆಯಿತು. ಉಗ್ರರ ಉಪಟಳವನ್ನು ಹತ್ತಿಕ್ಕಲು ಗಡಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದರು.

ಅಕ್ಟೋಬರ್​ 22 ರಂದು ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಒಳನುಸುಳಲು ಯತ್ನಿಸಿದ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿದ್ದವು. ಸ್ಥಳದಲ್ಲಿ ಎರಡು ಎಕೆ- 47 ಸರಣಿಯ ರೈಫಲ್‌ಗಳು, 6 ಪಿಸ್ತೂಲ್‌ಗಳು ಮತ್ತು 4 ಚೈನೀಸ್ ಗ್ರೆನೇಡ್‌ಗಳು ಸಿಕ್ಕಿದ್ದವು.

ಭಾರತಕ್ಕೆ ಕಾಲಿಟ್ಟಿರುವ 70 ಶಂಕಿತ ಉಗ್ರರು: ದೇಶದಲ್ಲಿ ಅಶಾಂತಿ ಸೃಷ್ಟಿಸಲು ನಕಲಿ ಪಾಸ್‌ಪೋರ್ಟ್‌ನೊಂದಿಗೆ 70 ಉಗ್ರರು ಅಕ್ರಮವಾಗಿ ದೇಶ ಪ್ರವೇಶಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ. ಭಯೋತ್ಪಾದಕರು ನೇಪಾಳದ ಗಡಿಯಿಂದ ಭಾರತವನ್ನು ಪ್ರವೇಶಿಸಿದ್ದಾರೆ. ಇವರೆಲ್ಲರೂ ಐಎಸ್‌ಐ (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ಅಥವಾ ಜಮ್ಮತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶಕ್ಕೆ ಸೇರಿದವರು ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಾಂಗ್ಲಾದೇಶದ ಗಡಿಯಲ್ಲಿ ಎಚ್ಚರಿಕೆ ನೀಡಿತ್ತು.

ಪ್ರಸ್ತುತ ಎಲ್ಲಾ ಗಡಿಗಳಲ್ಲಿ ಬಿಗಿ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿದೆ. ಆದರೆ, ಕೆಲವೆಡೆ ಮಾತ್ರ ಅಕ್ರಮವಾಗಿ ಉಗ್ರರು ನುಗ್ಗುತ್ತಲೇ ಇದ್ದಾರೆ. ಅದರಲ್ಲೂ ಪಾಕಿಸ್ತಾನದ ಕಡೆಯಿಂದ ಭಾರತದೊಳಗೆ ನುಸುಳುವುದು ಅಸಾಧ್ಯ. ಅದಕ್ಕಾಗಿಯೇ ನೇಪಾಳದ ಗಡಿಯಿಂದ ಭಯೋತ್ಪಾದಕರು ಭಾರತಕ್ಕೆ ಬರುತ್ತಿದ್ದಾರೆ. ಭಯೋತ್ಪಾದಕರ ಹೊರತಾಗಿ ಕೆಲವು ವಿದೇಶಿಯರೂ ದೇಶಕ್ಕೆ ಪ್ರವೇಶಿಸಿದ್ದಾರೆ ಎಂದು ಕೇಂದ್ರ ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ: ಗಡಿದಾಟಿ ಬಂದ ಇಬ್ಬರು ಉಗ್ರರ ಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.