ETV Bharat / bharat

ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಿ, ಗಣೇಶೋತ್ಸವ ಬೇರೆ ಕಡೆ ಮಾಡಿ: ಸುಪ್ರೀಂ ಕೋರ್ಟ್​​ ಆದೇಶ

author img

By

Published : Aug 30, 2022, 4:13 PM IST

Updated : Aug 30, 2022, 7:22 PM IST

Eidgah Maidan in Chamarajpet
Eidgah Maidan in Chamarajpet

ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಇಂದು ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್​​ ಮಹತ್ವದ ಆದೇಶ ಪ್ರಕಟಿಸಿತು.

ನವದೆಹಲಿ: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ವಿಚಾರವಾಗಿ ವಕ್ಫ್ ಬೋರ್ಡ್ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು. ವಕ್ಫ್‌ ಪರ ಕಪಿಲ್ ಸಿಬಲ್‌ ಹಾಗು ರಾಜ್ಯ ಸರ್ಕಾರದ ಪರವಾಗಿ ಮುಕುಲ್‌ ರೋಹ್ಟಗಿ ಅವರ ವಾದ-ಪ್ರತಿವಾದ ಆಲಿಸಿರುವ ಸುಪ್ರೀಂ ಕೋರ್ಟ್‌ನ ನ್ಯಾ.ಇಂದಿರಾ ಬ್ಯಾನರ್ಜಿ, ನ್ಯಾ.ಎ ಎಸ್ ಓಕಾ ಹಾಗು ನ್ಯಾ. ಎಂ ಎಂ ಸುಂದರೇಶ್ ಅವರಿದ್ದ ತ್ರಿಸದಸ್ಯ ಪೀಠ, ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಿ, ಗಣೇಶೋತ್ಸವ ಬೇರೆ ಕಡೆ ಮಾಡಿ. ಮೈದಾನದಲ್ಲಿ ಮುಂದಿನ 2 ದಿನಗಳ ಕಾಲ ಮಧ್ಯಂತರ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ತದನಂತರ ಕರ್ನಾಟಕ ಹೈಕೋರ್ಟ್​ನಲ್ಲಿ ಮತ್ತೊಮ್ಮೆ ಪ್ರಶ್ನಿಸಬಹುದು ಎಂದು ಆದೇಶಿಸಿದರು.

ಇದಕ್ಕೂ ಮುನ್ನ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಹೇಮಂತ್ ಗುಪ್ತ ಮತ್ತು ನ್ಯಾ.ಸುಧಾಂಶು ಧುಲಿಯಾ ಪೀಠದಲ್ಲಿ ಒಮ್ಮತ ಮೂಡಿರಲಿಲ್ಲ. ಹೀಗಾಗಿ, ಮುಖ್ಯ ನ್ಯಾಯಮೂರ್ತಿ ಪೀಠಕ್ಕೆ ಶಿಫಾರಸು ಮಾಡಿತ್ತು. ಈ ವೇಳೆ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್​ ಅವರು ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಹೊಸ ಪೀಠ ರಚಿಸಿದ್ದರು.

ಮುಸ್ಲಿಂ ವಕ್ಫ್‌ ಬೋರ್ಡ್‌ ಪರ ವಕೀಲ ಕಪಿಲ್‌ ಸಿಬಲ್ ವಾದ:

1. ಈದ್ಗಾ ಮೈದಾನದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗೆ ಅವಕಾಶ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ.

2. ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಈ ರೀತಿಯಾಗಿ ತುಳಿಯಬಹುದು ಎಂಬ ಭಾವನೆಯ ತೀರ್ಪು ನೀಡಬೇಡಿ. ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಬಾರದು.

3. ಈ ಮೈದಾನದಲ್ಲಿ ಬೇರೆ ಯಾವುದೇ ಸಮುದಾಯದ ಧಾರ್ಮಿಕ ಕಾರ್ಯಕ್ರಮಗಳು ಈವರೆಗೆ ನಡೆದಿಲ್ಲ. ಕಾನೂನಿನ ಪ್ರಕಾರ ಇದು ವಕ್ಫ್​ ಆಸ್ತಿ ಎಂದು ಘೋಷಿಸಲಾಗಿದೆ. 2002ರ ನಂತರ ಇಂದು ವಿವಾದಿತ ಭೂಮಿ.

4. ಮುಸ್ಲಿಂ ಮತ್ತು ಹಿಂದೂ ಸಮುದಾಯದ ನಡುವೆ ವಿವಾದವಿದೆ. ಈ ಜಮೀನು ಕಂದಾಯ ಇಲಾಖೆಗೆ ಸೇರಿದೆ ಎಂದು ಹೇಳಲಾಗ್ತಿದೆ. ಈ ವಿಚಾರದಲ್ಲಿ ಬಾಬರಿ ಮಸೀದಿ ಬಗ್ಗೆ ಉಲ್ಲೇಖ ಮಾಡಿರುವುದು ತುಂಬಾ ಗೊಂದಲ ಮೂಡಿಸಿದೆ. ನಮ್ಮನ್ನು ಆಳುವ ಪ್ರಭುಗಳು ಇದನ್ನು ನಿಲ್ಲಿಸಬೇಕು.

5. ಕರ್ನಾಟಕ ಇತ್ತೀಚಿನ ದಿನಗಳಲ್ಲಿ ಅನೇಕ ಕೋಮು ಗಲಭೆಗಳಿಗೆ ಕಾರಣವಾಗಿದೆ. ಈ ಮೈದಾನದಲ್ಲಿ ಆಜಾನ್​, ರಂಜಾನ್​ ಹಾಗೂ ಈದ್​​ ಆಚರಣೆಗೆ ಮಾತ್ರ ಅವಕಾಶವಿದೆ. ಬೇರೆ ಉದ್ದೇಶಗಳಿಗೆ ಮೈದಾನ ಬಳಕೆಗೆ ನಮ್ಮ ಆಕ್ಷೇಪವಿದೆ. ಮೈಸೂರು ರಾಜ್ಯದ ದಾಖಲೆಗಳಲ್ಲಿಯೂ ಇದು ಈದ್ಗಾ ಮೈದಾನ ಎಂದು ಉಲ್ಲೇಖ.

ರಾಜ್ಯ ಸರ್ಕಾರದ ಪರ ವಕೀಲ ಮುಕುಲ್ ರೋಹಟಗಿ ಪ್ರತಿ ವಾದ:

1. ಕಳೆದ 200 ವರ್ಷಗಳಿಂದ ಈ ಭೂಮಿ ಮಕ್ಕಳ ಆಟದ ಮೈದಾನವಾಗಿ ಬಳಕೆ ಮಾಡಲಾಗ್ತಿದೆ. ದೆಹಲಿಯಲ್ಲಿ ದಸರಾ ಪ್ರತಿಕೃತಿಯನ್ನು ಎಲ್ಲೆಂದರಲ್ಲಿ ದಹಿಸುವುದಿಲ್ಲವೇ?. ಹಿಂದೂ ಹಬ್ಬವನ್ನು ಮಾಡಬೇಡಿ ಎಂದು ಜನರು ಹೇಳುತ್ತಾರೆಯೇ?, ನಾವು ಸ್ವಲ್ಪ ವಿಶಾಲ ಮನೋಭಾವದಿಂದ ಪ್ರಕರಣವನ್ನು ನೋಡಬೇಕು.

2. ಈ ಹಿಂದೆ ಯಾವಾಗಲಾದರೂ ಗಣೇಶ ಉತ್ಸವ ಆಚರಣೆಗೆ ಸರಕಾರ ಆದೇಶ ನೀಡಿತ್ತೇ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದ್ದಕ್ಕೆ, ಈ ಹಿಂದೆ ಸರಕಾರವಾಗಲಿ, ಬಿಬಿಎಂಪಿ ಇಂತಹ ಆದೇಶ ನೀಡಿರಲಿಲ್ಲ ಎಂದು ಮುಕುಲ್ ಹೇಳಿದರು.

3. ಕಾನೂನಿನ ಪ್ರಕಾರ, ಈ ಆಸ್ತಿಯನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. 1987 ನಿಂದಲೂ ಪಹಣಿಯಲ್ಲಿ ಸರ್ಕಾರಿ ಆಸ್ತಿ ಎಂದು ದಾಖಲೆಗಳಿದೆ. ಕಂದಾಯ ಮತ್ತು ಬಿಬಿಎಂಪಿ ದಾಖಲೆಗಳಲ್ಲಿ ಜಮೀನು ಆಟದ ಮೈದಾನ ಎಂದು ನಮೂದಿಸಲಾಗಿದೆ. ಇದು ಸರ್ಕಾರಿ ಭೂಮಿ.

ಚಾಮರಾಜಪೇಟೆ ಮೈದಾನಕ್ಕೆ ಬಿಗಿ ಬಂದೋಬಸ್ತ್‌: ಚಾಮರಾಜಪೇಟೆ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್​​ ಮಾಡಲಾಗಿದೆ. 3 ಡಿಸಿಪಿ, 21 ಎಸಿಪಿ, 47 ಇನ್ಸ್​ಪೆಕ್ಟರ್​​ಗಳು, 130 ಪಿಎಸ್​ಐ, 126 ASI, 900 ಕಾನ್ಸ್‌ಟೇಬಲ್​ಗಳು, 120 RAF ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Last Updated :Aug 30, 2022, 7:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.